ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Friday 30 December 2011

ಓ ಮನಸೆ....

ಓ ಮನಸೆ, ನನ್ನ ಕನಸೆ
ಒಮ್ಮೆ ನೀ ನಗು
ಹಡೆ ನೆಮ್ಮದಿಯೆಂಬ ಮಗು
ಹೋದದ್ದು ಹೋಗಲಿ
ಆಗುವುದೆಲ್ಲ ಆಗಲಿ
ಮಳೆ ಹನಿಗಳೊಂದಿಗೆ ಬೆರೆತು
ಕುಣಿ ಕುಣಿದು ಅತ್ತುಬಿಡು

ನೀನೆ ನನ್ನ ನಗು ಎಂದವರು
ಹೃದಯದಲ್ಲಲೆಯೆಬ್ಬಿಸಿಬಿಟ್ಟರು
ಅದನ್ನು ಬಲ್ಲೆ, ಆದರೂ
ಯಾರೋ ಮುಡಿದ ಹೂ
ನಿನಗೇತಕೆ?
ದಿಗಂತದಾಚೆಗೆ ತೇಲಿಹೋಗಿ
ಒಬ್ಬನೇ ಕುಳಿತೊಮ್ಮೆ ನಕ್ಕುಬಿಡು

ಬಾಳು ಬದುಕಲು ಬಿಡುತ್ತಿಲ್ಲ
ಎಂಬ ನಿನ್ನ ದೂರು
ಒಪ್ಪದ ತಕರಾರು
ಮುಂದಿನ ದಾರಿಯಲ್ಲಿ
ಸಾವಿರ ಮುಳ್ಳಿದ್ದರೇನು
ಕಬ್ಬಿಣದ ಚಪ್ಪಲಿ ಹಾಕಿಕೊಂಡು
ಹಾಗೆ ಹೊಸಕಿಬಿಡು

ನಿನ್ನ ಸುತ್ತ ಹೂ ಚೆಲ್ಲುತ್ತಿದೆ
ಹಸಿರ ರಾಶಿ, ಮೇಘವರ್ಷ
ಕೈ ಹಿಡಿಯಲು
ಎದೆ ಚುಚ್ಚಲು ಯಾರೂ ಇಲ್ಲ
ನಿನ್ನದೇ ಲೋಕ
ನಿನ್ನವರು, ದೂರದಲ್ಲಿ
ನಗುತಿರುವರು
ಅವರ ಪಾಡಿಗವರಿರಲಿ
ನಿನ್ನ ಪಾಡಿಗೆ ನೀನೊಮ್ಮೆ ನಕ್ಕುಬಿಡು
ಪ್ಲೀಸ್....

ಹೊಸ ವರ್ಷ...

ಹೊಸತೇನಿದೆ?
ಎಲ್ಲಾ ಹಳತೆ
ಬಟ್ಟೆ ಬದಲಿಸಿದಂತೆ
ಜನವರಿ ಒಂದರಂತೆ

ಪೊರೆ ಕಳಚಿಟ್ಟ ಸರ್ಪ
ಎದೆಗೂಡಿದ ದರ್ಪ
ಒಣನೆಲ ನುಂಗಿದ ಜಲ
ಮರದ ಮೇಲಿನ ಫಲ
ಎಲ್ಲೋ ಬತ್ತಿ, ಅಲ್ಲೆಲ್ಲೋ ಸುತ್ತಿ
ಮತ್ತೆ ಬಂದು ಸಿಕ್ಕಿಕೊಂಡವೆ

ಹಿತ್ತಾಳೆಗೆ ಚಿನ್ನದ ನೀರು
ಮುಖಕ್ಕೆ ಸ್ನೋ ಪೌಡರು
ಮದುವಣಗಿತ್ತಿಗೆ ರೇಷ್ಮೆ ಸೀರೆ
ಕತ್ತಲೆಗೆ ಚಂದ್ರನಾಸರೆ
ಬಣ್ಣ ಬದಲಾವಣೆಗಷ್ಟೆ
ಮತ್ತೆ ಮೊದಲಿನಂತಾಗಲಷ್ಟೆ

ಹೊಸ ವರ್ಷಕ್ಕೆ ಹೊಸತೇನಿಲ್ಲ
ಹಳೆಗೋಡೆಗೆ ಬಣ್ಣ ಮೆತ್ತೋಣ
ದ್ವೇಷಿಗಳೊಂದಿಗೆ ಕೂಡೋಣ
ಅಲ್ಲಲ್ಲಿರುವ ಕಸವ ಗುಡಿಸೋಣ

ಕ್ಯಾಲ್ಕ್ಯುಲೇಟರ್... (ಅವಧಿಯಲ್ಲಿ ಪ್ರಕಟವಾಗಿದ್ದ ಕವಿತೆ)

ತಲೆಮೇಲೆ ನಾಲ್ಕು ಬಿಟ್ಟರೂ
ಸರಿಯಾದ ಉತ್ತರ ಹೇಳುತ್ತದೆ
ನನ್ನ ಮುದ್ದು ಕ್ಯಾಲ್ಕ್ಯುಲೇಟರ್
ಇದ್ದರೆ ಸಾಕು ಬ್ಯಾಟರಿ ಪವರ್!

ಮೊನ್ನೆ ಒಂದು ತಂದಿದ್ದೆ
ಕೇವಲ ಇಪ್ಪತ್ತು ರೂಗಳು
ಬಿಳಿ ಬಣ್ಣದ ಅಟಿಕೆ
ಪ್ರಶ್ನಿಗಳಿಗೆ ಉತ್ತರ ಮುದ್ರಿಕೆ
ನಾಲಗೆ ತುಂಬಾನೆ ಜೋರು
ತಟ್ಟನೆ ಉತ್ತರ ಹೇಳುವ ಖಬರು!

ಹೀಗೆ ಒಂದು ಘಂಟೆ ಹಿಂದೆ
ಗಣಿತಸೂತ್ರದ್ದೊಂದು ಲೆಕ್ಕ
ಮೆದುಳಿನಲ್ಲಿ ಕಲೆಸಿದ್ದೆ
ಕೊನೆಯ ಹಂತ ಮಾತ್ರ
ಕ್ಯಾಲ್ಕ್ಯುಲೇಟರ್ ಗೆಂದು ಇರಿಸಿದ್ದೆ!

ಕೊನೆಗೂ ಕೈ ಕೊಟ್ಟಿತು
ಸರಿಯಾದ ಉತ್ತರ ಬರಲಿಲ್ಲ
ಪುಸ್ತಕದುತ್ತರಕ್ಕೆ ಹೊಂದಲಿಲ್ಲ
ಅದೆಲ್ಲಿತ್ತೋ ಕೋಪ, ನೆಲಕ್ಕೆಸೆದು
ಎರಡು ಹೋಳು ಮಾಡಿಬಿಟ್ಟೆ!

ಬುದ್ಧಿವಂತ ಕ್ಯಾಲ್ಕ್ಯುಲೇಟರ್
ಒಬ್ಬ ದಡ್ಡನ ಕೈಗೆ ಸಿಕ್ಕಿ ಓಳಾಗಿಹೋಯಿತು!

Wednesday 28 December 2011

ಆಣತಿ

ಪ್ರಾಣಿ ಕೊಲ್ಲದ ಜನರು
ಸಸ್ಯಾಹಾರಿಗಳಿವರು
ಜೀವವಿರುವ ಸಸ್ಯ ತಿಂದರು
ಸೊಪ್ಪಿನ ಸಾರು
ಜೊತೆಗೆ ಕೆನೆಮೊಸರು
ಕೆಚ್ಚಲ ಹಾಲು ಕರೆದರು

ತತ್ತಿಗರ್ಭ
ನಾಲಗೆ ಮೇಲಿನ ರುಚಿ
ಹೋದದ್ದು ಒಂದು ಕೋಳಿ
ಒಂದು ಶೇಂಗಾ ಪೊರಟೆಯೊಳಗೆ
ಎರಡು ಬೀಜ
ಅವಳಿ ಜವಳಿ ಸಾವು
ಎಲ್ಲರೂ ಕೊಲೆಗಡುಕರೇ
ಪಕ್ಷಪಾತಿಗಳಷ್ಟೇ!

ಜಿಂಕೆ ತಿಂದ ಹುಲಿ
ಹಿಕ್ಕೆ ಹಿಕ್ಕಿತು
ಜಿಂಕೆ ತಿನ್ನುವ ಹುಲ್ಲು
ಬೆಳೆಯಲು
ಮತ್ತೊಂದು ಕೊಬ್ಬಬೇಕಲ್ಲ!
ಆವಿಯಾದ ನೀರು
ಮಳೆಯಾಗಿ ಸುರಿಯಿತು
ಲೋಕಕ್ಕೆಲ್ಲ
ಹರಡಬೇಕಲ್ಲ

ಬದುಕೊಂದು ವೃತ್ತದೊಳಗಿನ
ವೃತ್ತಾಂತ
ಸರಿ ಎಂದದ್ದಷ್ಟು
ಅದಕ್ಕೆ ಎದೆಗೊಟ್ಟು ನಿಂತ
ಮತ್ತಷ್ಟು ತಪ್ಪುಗಳಾದವು
ಸರಿ ತಪ್ಪುಗಳ ಸರಮಾಲೆ
ಮಾನವ ನಿರ್ಮಿತ ಬಲೆ
ಜೀವನವೆಂಬುದೊಂದು ಅಣತಿ

Tuesday 27 December 2011

ನನ್ನ ಗೆಳತಿಗೊಂದು ಗಂಡು ಬೇಕು... (ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿತ)

ಬಿಳಿ ಆಗಸದ ಸೀರೆಸೆರಗಿನಲ್ಲಿ
ಕೋಟಿ ನಕ್ಷತ್ರದುಂಗುರಗಳು
ಸೆರಗ ಹಾಸಿ ಕಣ್ಣರಳಿಸಿ ನಿಂತರೆ
ಹಸಿರ ರಾಶಿ, ಬೆಟ್ಟ ಗುಡ್ಡ
ಭೋರ್ಗರೆದ ನೀರ
ಬೆಣ್ಣೆ ನೊರೆಯು ನಿನ್ನ ಹಣೆಯಲ್ಲಿ

ನಿನ್ನೆ ಸಂಜೆ ಬಿಡದೇ ಸುರಿದ
ಬಿರು ಬಿರು ಬಿರುಗಾಳಿ ಮಳೆಗೆ
ಅಳಿಸಿಹೋಗಿದೆ ನೊಸಲ ಬಿಂದಿಗೆ
ಹೊಡೆದ ಕೈಗಾಜುಗಳು ರಕ್ತ ಹೀರಿ
ಲೋಕರೂಢಿ ದಾರ್ಷ್ಯ ಮೀರಿ
ತಾಳಿ ಕಿತ್ತಿದ್ದಾರೆ, ಮೊನ್ನೆಯಷ್ಟೇ ಇತ್ತು

ಆದರೂ ಅವಳ ಮೊಗದಂಚಿನ
ರವಿಕಿರಣ ಮೈಬಟ್ಟೆ ಕಳಚಿಲ್ಲ
ಮರಳು ಗಾಡಿನ ಓಯಸಿಸ್ ಅವಳು
ಒಮ್ಮೊಮ್ಮೆ ಸಮುದ್ರವಾಗುವಳು
ಕುಡಿಯಲು ಮಾತ್ರ ತೊಟ್ಟು ನೀರಿಲ್ಲ
ಬಿಳಿ ಸೀರೆಯುಟ್ಟರೆ ಲಕ್ಷಣವಲ್ಲ

ಕಾಮದ ವಾಸನೆಗೆ ದುಂಬಿ ಬಂತು
ಅವಳಿಗೆ ಹಳೆ ಗಂಡನ ವಾಸನೆ
ಮೊನ್ನೆ ಮೊನ್ನೆ ಗಿಳಿ ಕಚ್ಚಿದ್ದ ಹಣ್ಣು
ಸ್ವಲ್ಪ ಎಂಜಲಾಗಿ ಹೊಳೆವ ಕಣ್ಣು
ಮುರುಟಿರುವ ಹೂವಾಗಿದ್ದಾಳೆ, ಮುದುಡಿಲ್ಲ
ನನ್ನ ಗೆಳತಿಗೊಂದು ಗಂಡು ಬೇಕು

ಶ್ವೇತ ಸೀರೆಯಂಚಿನಲ್ಲಿ
ಬದುಕಿನ ಕಪ್ಪು ಮಸಿ ಮೆತ್ತಿದೆ
ಬೋಳು ಕೈ ಜೊತೆ ಬರಿದು ಹಣೆ
ಸಾವಿನವಸರಕ್ಕೆ ಯಾರು ಹೊಣೆ?
ಶುದ್ಧ ಮನಸ್ಕ ಹೆಣ್ಣುಮಗಳಿಗೆ
ಗಂಡು ಬೇಕು ಗಂಡನಾಗಲು

Sunday 25 December 2011

ಐ ಹೇಟ್ ಯೂ...

ಬಂದರು ಸೈನಿಕರು
ಅನಾಸಿನ್, ಡೋಲೋಪರ್
ವಿಕ್ಷ್ ಆಕ್ಷನ್ 500
ಆಂಕ್ಸಿಟ್ ನಿದ್ದೆ ಮಾತ್ರೆಯೊಂದಿಗೆ
ಅಮೃತಾಂಜನ್ ಡಬ್ಬ
ಹಿಡಿದು ಬಂದ ಒಬ್ಬ
ಬೀದಿಯಲ್ಲೀಗ ಕರ್ಪ್ಯೂ ಜಾರಿಯಾಗಿದೆ
ಅಲ್ಲ್ಲಲ್ಲಿ ಗುಂಡಿನ ಸದ್ದು
ನನ್ನೆದೆಯಲ್ಲೀಗ ಉದ್ವಿಗ್ನ ಪರಿಸ್ಥಿತಿ

ತಾಲಿಬಾನ್ ಎದೆ ನನ್ನದು
ಹೆಣಗಳೂಳುವ ಮಸಣವಿದು
ಅವಳಿಗಾಗಿ ಅಳುತ್ತಿರುವೆ
ಅವಳಿಲ್ಲದೆ ಸಾವಿಗೆ ಕಾದಿರುವೆ

ಏನೇ ಆಗಲಿ

ನನ್ನನ್ನೊಂಟಿ ಮಾಡಿ ಹೋಗಬಾರದಿತ್ತು ನೀನು..

Monday 19 December 2011

ಸಕ್ಕರೆ ಹರಳು...

ದನದ ಕೊಬ್ಬಲ್ಲೇ ಉಳಿಸಿ
ಸಕ್ಕರೆ ಕರಗಿಸಿತಿರುವೆ
ಮತ್ತೆ ಬರದದು
ಸಿಕ್ಕಿದೆ ಮತ್ತೊಂದು ಹರಳು
ಕರಗುವ ಸಕ್ಕರೆಗೋ
ಮೈ ಕರಗಿಸಿಕೊಳ್ಳುವ ತವಕ

ಪಾರ್ಕ್ ಅರಗಿನ ಬೆಂಚಿನಲ್ಲಿ
ತಡಿ ಪೊದೆ ನೆರಳಲ್ಲಿ
ದೂರದೂರಿನ ಲಾಡ್ಜ್ ಗಳಲ್ಲಿ
ಅಲ್ಲಲ್ಲಿ ಉಚಿತವಾಗಿ ಸಿಕ್ಕ
ಸರ್ಕಾರಿ ಸೇವೆಗಳಲ್ಲಿ
ಸಿಕ್ಕಿ ನರಳಿದೆ ಇಳೆಯನ್ನು
ಸೂರ್ಯನೆಡೆಗೆಳೆದ ಪ್ರೀತಿ

ಆಗ್ರಾದ ತಾಜ್ ಮಹಳಲೊಳಗೆ
ಷಹಜಹಾನ್ ಅಳುತ್ತಿದ್ದಾನೆ
ಮಮ್ತಾಜ್ ಳ ಪುಪ್ಪುಸ ಹಿಡಿದು
ಆಗಷ್ಟೇ ಕೊಯ್ದ ಚೆಂಗುಲಾಬಿಗಳಿಗೆ
ಭಗ್ಗನೆ ಬುಗಿಲೆದ್ದ ಅಗ್ನಿ
ಕೆಂಡದೊಳಗಣ ಹಸಿ ಹಸಿ ಬಿಸಿ

ಅಲ್ಲೊಬ್ಬ ದೇವದಾಸ್
ಕುಡಿದೇ ಸತ್ತ ಪಾರ್ವತಿಗೆ
ವ್ಯರ್ಥ ಸಮಯಕ್ಕಳುತ್ತಿದ್ದಾನೆ
ದೃಷ್ಟಿ ಬದಲಿಸಿ
ಅರೆಕ್ಷಣ ದಂಗಾದರೂ
ಕೊಡವಿಕೊಂಡುಗಿದು ಹೋದ

ಒಂದರೆಗಳಿಗೆಯ ವಿಷಯ
ವಿಷಹೂಡಿ ಹಾವಾಡಿಸಿತು
ಕಕ್ಕಿದ ಕಣ್ಮಂಜು ಮೈಏರೇ
ಬಾಳೇ ಕೆಸರೆರೆಚಿದ ತೊರೆ
ರವಿಯ ನುಂಗುವ ತವಕದಿ
ಕೆರೆ ನೀರು ಖಾಲಿ ಖಾಲಿ

ಕಣ್ಣೇ ಕಾಮಕ್ಕೆ ಮೂಲವೇ
ಹೆಣ್ಣೇ ನೀ ಕರಗದ ಒಲವೇ?
ನಾಲಗೆ ಮೇಲಿಟ್ಟ ಸಕ್ಕರೆ
ನಾಚಿ ನೀರಾದರೂ ತಿಂದ
ಜಿಹ್ವೆಗೆ ಸ್ಮರಿಸುವ ಸ್ಮೃತಿಯಿರಲಿ
ಅದನಾಯುವ ತಾಳ್ಮೆ ನಿನಗಿರಲಿ

Sunday 18 December 2011

ಐಶ್ವರ್ಯ ರೈ ಕರೆ ಮಾಡಿದ್ದಳು..


ಕೆನ್ನೆ ಮೇಲೆ ಕೆಸರು
ಮುಸುರೆ ತೊಳೆದಳು ಪುಟ್ಟಿ
ಹೊಸತು ಕನಸು ಕಾಣುವ
ಪುರುಷೋತ್ತಿಲ್ಲ

ಮಿಣುಕು ಹುಳ ಅಣಕಿಸಲು
ಇರುಳ ಮಸಿ ಮೆತ್ತಿಕೊಂಡು
ಅರಳುಗಣ್ಣಲ್ಲಿ ನೋಡಿದವು
ಕೆಸರು ಹರಿಸಿದ ತೊರೆಯಲ್ಲಿ
ಪ್ಲಾಸ್ಟಿಕ್ ವಸ್ತು,ಅವಕ್ಕೆ ಮುತ್ತು
ಕಸದಿಂದಲೇ ಸಂಜೆಯ ತುತ್ತು

ಅಲ್ಲಲ್ಲಿ ಅಳುತ್ತಿದ್ದವು
ಕಂದಮ್ಮಗಳು
ಕಾಮ ಕಸಿವಿಸಿಗೊಂಡು
ಕಸದಲ್ಲಿ ಬಿದ್ದ ಪಾಪಗಳು!

ಬೆಂಕಿ ಬಿದ್ದಿದೆ ಅಮ್ಮನೆದೆಗೆ
ಒಲೆಗೆ ಮಾತ್ರ ಅಟ್ಟಿಲ್ಲ
ಸೌದೆಯಿದ್ದರಷ್ಟೇ ಸಾಕೆ?
ಹುಟ್ಟಿಸಿದ ಈ ಮಹಾತ್ಮ
ಮನೆ ಮೆಟ್ಟಿದರೆ ಅದೇ ಜಗಳ
ಮೂಲೆಯಲ್ಲಿ ಕುಳಿತು ಬಾಡಿತೊಂದು ಮನ

ನಾನೇ ಮುಟ್ಟಲು ಹೇಸುವ ಬೂಟು
ಅವುಗಳು ಮುಟ್ಟಿ ಎದೆ ತಟ್ಟಿದವು
ಗಲ್ಲಿ ಗಲ್ಲಿಯಲ್ಲಿ, ಬಸ್ ನಿಲ್ದಾಣದಲ್ಲಿ
ಕೈಚಾಚಿ ನಿಂತಿವೆ
ಕನಸುಗಳ ಹೊತ್ತು
ಅಲೆದಾಡುವವರ ನೋಡುತ್ತಾ
ಮುತ್ತಿದ ನೊಣಗಳ ಕೊಲ್ಲುತ್ತಾ
ನೀರು ಕಾಣದೆ ನೂರು ದಿನವಾಯ್ತು
ನಾರುತ್ತವೆ ಕೊಳೆ ಪದರವ ಹೊತ್ತು

ಅಲ್ಲ...!!!

ಹಲ್ಲು ಮೂಡಿಲ್ಲ, ಗಲ್ಲ ಚಿಗುರಿಲ್ಲ
ಬೆಲ್ಲದಂತ ಮೊಣಕೈ ಬಿಡಿಸಿಲ್ಲ
ಅರೆ ತೆರೆದ ಕಣ್ರೆಪ್ಪೆಯೊಳು
ಮಿಣ ಮಿಣ ಮಿಣುಕುವ ಕಣ್ಣು
ಹುಟ್ಟಿ ಮೂರು ದಿನವಾಗಿಲ್ಲ
ಆಗಲೇ ಐಶ್ವರ್ಯ ರೈ ಹೆಣ್ಣು ಕುಡಿಯ
ಭಾವ ಚಿತ್ರಕ್ಕೈದು ಕೋಟಿಯಂತೆ!

ಮೊನ್ನೆ ಕರೆ ಮಾಡಿದ್ದಳು
ನೋಡಲೆಂದು ಹೋಗಿದ್ದೆ

ಅವಳ ಮನೆಯ ಗೋಡೆಯ ಮೇಲೆಲ್ಲ
ಈ ಮಕ್ಕಳುಗಳ ಚಿತ್ರವೇ ಇತ್ತು
ಆಕಳಿಸುತ್ತಾ ಅಳುತ್ತ ನಿಂತಿದ್ದವು
ಬಾಳ ಮಂಪರಿನಲ್ಲಿ....

ತಳವಿಲ್ಲದವರು...

ಆಡಿಕೊಳ್ಳುವವರೆಲೆಯಡಿಕೆ ಬಾಯಲ್ಲಿ
ಹುಟ್ಟಿದ ಶತ ಹೊಲಸು ಕಥೆಯಲ್ಲಿ
ನಿಮ್ಮನ್ನೆಲ್ಲ ಕಂಡೆ

ಇವರೋ ರೇಷ್ಮೆ ಸೀರೆಯುಟ್ಟವರ
ಮೇಲೆ
ಹರಿದ ಸೀರೆ ಕಥೆ ಕಟ್ಟಿದವರು
ಹರಿದ ಸೀರೆಯುಟ್ಟವರಿಗೆ
ಹರಿದವರವರೇ ಎಂದು
ಬೊಂಬೆ ಕೆತ್ತಿಕೊಟ್ಟವರು
ಸೆರಗು ಜಾರಿದ್ದು ಕಂಡು
ಮರ್ಯಾದೆಯನ್ನು
ಸೆರೆಮನೆಗೆ ಹಂಚಿದವರು
ಗಂಡ ಹೆಂಡತಿ ನಡುವೆ
ಕೆಂಡ ಸುರಿದು
ಹಾಯಿರಿ ಎಂದು ದೇವರ
ಹೆಸರಿಟ್ಟವರು
ಅಕ್ಕನ ಜೊತೆ ಒಂಟವನ
ಪಕ್ಕವೇ ನಿಂತು
ಸಂಬಂಧಕ್ಕೆ ಕೆಸರೆರೆಚಿದವರು
ಗಾಂಧಿ ಗಾದಿಗೆ
ಹಿಂಸೆಯ ಟೊಂಕ ಕಟ್ಟಿ
ಹರಿದ ನೆತ್ತರಿಗೆ ಬೆರಳಜ್ಜಿ
ಕುಂಕುವ ಇಟ್ಟುಕೊಂಡವರು
ಶುದ್ಧ ಬುದ್ಧನಲ್ಲಿ ನಿರ್ಬುದ್ಧತೆ
ತಂದ ಸಿದ್ಧ ಕೊಳಕು ಹಸ್ತರು
ತಳವಿಲ್ಲದವರು ತಳ ಸುಡುವವರು
ಮಗು ನಗುವಿನ ಸುಳ್ಳು ಮೊಗದವರು

ಜಾತಿ ಜಾತಿಯೆಂದು
ನೀತಿ ಕೊಂದು
ದೇಶ ದೇಶದ ನಡುವೆ
ದ್ವೇಷ ತಂದು
ಮತ ಮತದ ನಡುವೆ
ಪಂಥ ಬಂದು
ಇತಿಹಾಸವನ್ನು ಕೊಡಲಿಯಲ್ಲಿ
ಕೊಚ್ಚಿದವರು
ಹಿಂಸೆ ಪಿಪಾಸುಗಳು
ಬಂಧನದ ಗಟ್ಟಿಗಂಟು ಬಿಚ್ಚಿ
ಚಂದ್ರಗೆ ಸೂರ್ಯನ ತಂದು
ನೂರ್ಕಾಲ ಬಾಳಿ ಎಂದವರು

ಒಂದು ಹೃದಯ
ಮತ್ತೊಂದೆದೆಗೆ ಸೋತಿರಲು
ಆ ಸೋಲನ್ನು ನುಂಗಿ
ಗೆಲವು ಕಂಡೆವೆಂದು ಬೀಗುವವರು
ಇಷ್ಟಪಟ್ಟವನ ಭಾವ
ಗೋರಿಯೊಳಗೆ ಹೂತು
ಅನಿಷ್ಟಕ್ಕೆ ಕತ್ತು ಕೊಡಿಸಿ
ಕಷ್ಟದಲ್ಲಿ ಬಾಳುವಾಗ, ಉಬ್ಬಸದಿ
ಮತ್ತೆ ಮತ್ತೆ ನಕ್ಕವರು
ದೇವದಾಸನಿಗೆ ಪಾರ್ವತಿಯನ್ನು
ತರದೇ ಕೈಗೆ ಮದಿರೆ ನೀಡಿ
ರೋಮಿಯೋ ಜೂಲಿಯಟ್ ಮುಂದೆ
ನಿಗಿ ನಿಗಿ ಬೆಂಕಿ ಸುರಿದು
ತಾಜ್ ಮಹಲ್ ಗೆ
ಕತ್ತಲಲ್ಲಿ ಮಸಿ ಬಳಿಯುವವರು
ಭಗ್ಗೆನ ಬೆಂಕಿ ಹಚ್ಚಿದವರು

ನಾವೆಲ್ಲ ಇಲಿಗಳಿವರಿಗೆ
ಪ್ರಾಣಸಂಕಟದರಿವಿಲ್ಲದ ಮಾರ್ಜಾಲ
ಹನಿಮಳೆಯಿವರಲ್ಲ
ಸುನಾಮಿಯ ಕೊಳೆ
ತೊಳೆಯುತ್ತೇವೆಂದು ಒಂದು ಕಟ್ಟು ಬೀಡಿಯಲ್ಲಿ
ಪ್ರಪಂಚವನ್ನುರಿದವರು
ಅನುಭೂತಿಗಳ ಕೊಚ್ಚೆಯಲ್ಲಿ ಹೊಸಕಿ
ಬಾಡದ ಮೊಲ್ಲೆಯೊಂದಿಗೆ
ಕೂಡದ ಪರಿಮಳದ ಹಂಗಿಗೆ
ಬದುಕ ತಳ್ಳಿಸಿದವರು

Sunday 11 December 2011

ಎಲ್ಲಿಂದ ಎಲ್ಲಿಗೆ??

ಕ್ಷಣಿಕ ಸುಖದಾಸರೆಗೆ
ಎರಡು ಚೈತನ್ಯ ಕಲೆತು
ಜೀವವೊಂದು ನಲಿಯಿತು
ಎಲ್ಲಿತ್ತು? ಕಾಡುವ ಪ್ರಶ್ನೆ

ಬಂದ ಜೀವ ಸಾವಿಗೆ ಕಾದು
ಬೊಗಸೆ ನೀರಲಿ ಜೀವ ಕಂಡು
ಹಸಿವಿನ ತ್ರಾಣಕ್ಕೆ ಅನ್ನವಿಕ್ಕಿ
ಉಪ್ಪಿಗೆ ನಾಲಗೆ ಚಪ್ಪರಿಸಿ
ಕಾಮ ಕ್ರೋದಕ್ಕೆ ಬಲಿಯಾಗಿ
ಎದ್ದು ಬಿದ್ದು ಓಡುತ್ತಿತ್ತು
ಅರಿವಿಗೆಟುಕದ ಮತ್ತೊಂದು ಪ್ರಶ್ನೆ

ಹೀಗೆ ಎರಡು ದಿನ ಸಾಗಿರಲು
ಮೂರನೇ ದಿನ ಬೆನ್ನು ಬಾಗಿ
ಕತ್ತಿನಿಂದ ನೊಗ ಕಳಚಿ
ಸುಸ್ತಾಗಿ ಬಿದ್ದಿರಲು, ಶಯನ
ಇಲ್ಲಿಗೆ ಬಂದದ್ದೋ ಏಕೋ ಏನೋ
ತಿಳಿಯದೆ ಹೊರಟಿತು ಜೀವನ್ಮರಣ
ಎಲ್ಲಿಗೆ? ಮತ್ತೆ ಕಾಡುವ ಪ್ರಶ್ನೆ

Friday 9 December 2011

ಬನ್ನಿ ಇವನನ್ನು ಪರಿಚಯಿಸುತ್ತೇನೆ...


ಪಡಸಾಲೆಯಲ್ಲಿ ಪವಡಿಸಿ
ಇಣುಕುವ ಬಾಗಿಲ ಬಳಿ
ನನ್ನೊಡನೆ ಹುಟ್ಟಿದ ತಳಿ
ನಾವು ಅವಳಿ ಜವಳಿ
ಬನ್ನಿ ಇವನನ್ನು ಪರಿಚಯಿಸುತ್ತೇನೆ

ಊರೆಲ್ಲ ಸುತ್ತಿ ಯಾರ್ಯಾರನ್ನೋ
ಕೊಲ್ಲುವುದವನ ಕೆಲಸ
ಕಪ್ಪೆಯೂರ ಹಾವು
ನಮ್ಮ ಮನೆಯೆಲ್ಲರೆದೆಗೂ
ಕೊಳ್ಳಿ ಇಟ್ಟಿದ್ದಾನೆ ಮಳ್ಳ
ಕೈಗೆ ಸಿಗದೆ ಹರಿವ ಹಳ್ಳ

ನೆರೆಮನೆಯ ರಂಗವ್ವನ
ತಾಳಿ ಎಳೆದ ಮೊನ್ನೆ
ಎದುರು ಮನೆಯ ರಂಗಿಯ
ಮದರಂಗಿ ಮಗುವನ್ನು
ನೀರಿಗೆಸೆದ, ಅವಳ ಕತ್ತಿಗೂ
ಹಗ್ಗ ಬಿಗಿದು ಹೆದರಿ ಓಡಿದ್ದ

ಹೆತ್ತಮ್ಮನನ್ನೋ ಎಂದೋ
ನುಂಗಿ, ತೋರಿಸಿ ತನ್ನ ಭಂಗಿ
ಅಪ್ಪನೆದೆಗೊದ್ದು ಕದ್ದೋಡಿದ್ದ
ನಿಜಕ್ಕೂ ಅವನೊಬ್ಬ ಕಳ್ಳ
ಸತ್ಯರೂಪಿ ಹೇಳನು ಸುಳ್ಳ
ತುಂಬುವನು ನನ್ನರಿವಿನ ಬಳ್ಳ

ಒಮ್ಮೆ ತಂಗಾಳಿಯಲ್ಲಿ ಹೊರನಿಂದು
ನನ್ನ ರಕ್ತಿಯನ್ನು ಎಲ್ಲೆಲ್ಲೂ ಕಂಡೆ
ಹಸಿರ ಹಾಸಿ ಮಲಗಿ
ನೀರಿನೊಳಿಣುಕಿ
ಎಲ್ಲರ ಕತ್ತು ಹಿಡಿದದುಮಿದ್ದನು
ಹತ್ತಿರ ಸುಳಿಯದ ಹಾವವನು
ಕಪ್ಪೆಯಪ್ಪನು, ಬಳಿ ಸಾರೇ ನುಂಗುವನು

ಹೆಂಡ ಕುಡಿಯನೊಳಗಿರುವನು
ಧೂಮದ ರಕ್ಕಸ
ವಾಹನದ ವೇಗದ ರಾಕ್ಷಸ
ಕೈಯಲ್ಲಿ ಹಿಡಿದೊಂದು ಹಗ್ಗ
ತೋರಿಸಿಕೊಡುವನು ಕೆಲವರಿಗೆ ಸಗ್ಗ

ನನ್ನಣ್ಣನೆಂಬುವ ಖುಷಿಯೋ
ಕೊಲೆಗಡುಕನೆಂಬ ವಿರಸವೋ
ಅರಿಯದೆ ಕಂಡೆನು ಸೋಲು
ಕೈಬೆರಳ ನುಲಿದ ತಿಳಿನೂಲು
ಹೆತ್ತಮ್ಮನಾಣೆ ನಾವು ಅವಳಿ ಜವಳಿ
ನನ್ನ ದೇಹಕ್ಕೆ ಹೆಸರಿಟ್ಟವರು ನೀವು
ಅವನ ಹೆಸರು ಯಮ ಉಸುರಿದ ಸಾವು

Thursday 8 December 2011

ಸಿಕ್ಕ ಸಿಕ್ಕ ಹೂಗಳ ಆಯ್ದು ತಂದೆ...

ಅಲ್ಲಿ ಇಲ್ಲಿ ಗಲ್ಲಿಯಲ್ಲಿ, ಬೇಲಿಯಲ್ಲಿ
ಮಾರುಕಟ್ಟೆಯ ಮೊಗಸಾಲೆಯಲ್ಲಿ
ಚೆಂಗುಲಾಬಿ, ಸಂಪಿಗೆಯಸಳು
ಕನಕಾಂಬರ ಜಾಜಿ ಮಲ್ಲಿಗೆಯರಳು
ಬಿರಿದು ಬಿಕರಿಗೆ ನಿಂತಳುತ್ತಿದ್ದವು
ಇನ್ನೂ ಮುಡಿಗಿಡದ ಎಳಸು ಹೂವು

ಹೊಟ್ಟೆ ತೀಟೆಗೆ, ಬಟ್ಟೆ, ತಾವಿಗೆ
ಕಂಡವರು ಕೊಂಡವರು
ಸಿಹಿಯುಂಡವರ ವಾಂಛೆ ಕಟ್ಟೆಗೆ
ಭೋರ್ಗರೆಸಿದ ಜಲಪಾತಕ್ಕೆ
ಹೊಸಕಿಹೋದವು ಚೆಂಗುಲಾಬಿಗಳು
ಬೆಂಕಿಯೂರಲ್ಲಿ ಬೆವರು ಸುರಿಸಿ

ಕೊಯ್ದು ದಾರಕ್ಕವನು ಪೋಣಿಸಿ
ಹಾದಿ ಬೀದಿಯವರಿಗೆ ಕಾಣಿಸಿ
ಮಾರಲಿಟ್ಟವರದು ಚೇಳುಮೊಗ
ಹೊತ್ತು ಗಂಜಿಗೆ, ತುತ್ತು ಜೀವಕ್ಕೆ
ಮಧುಮಂಚದಲ್ಲಿ ವಿಷಪ್ರಾಷನ
ಅತ್ತಿತು ಕಾಡು ಸಂಪಿಗೆ, ಬಾಡಿ ಮೆಲ್ಲಗೆ

ತೂ.. ಈ ಹೂಕಟ್ಟುವ ಮಾರಾಯ್ತಿ
ತೆನೆಕಟ್ಟಲಿಲ್ಲ, ಮೊನೆ ಕಾಣಿಸಲಿಲ್ಲ
ದೇವರ ಹಾರದ ಗೆಳತಿಯೊಡಗೂಡಿ
ಒಡನಾಡಿಯಾಗುವಲ್ಲಿದ್ದೆ, ಪಾಪಿಯವಳು
ಕೈಜಾರಿಸಿ ಬೀಳಿಸಿ ಬೀಳಿಸಿಬಿಟ್ಟಳು
ವಿಷಯವಾಸನೆಯ ವಿಷಕೂಪಕ್ಕೆ

ಅಲ್ಲಿನೋಡಿ ನಶ್ವರ ಬೀಜದೊಗಲು
ಒಳಗಿರುವನಂತೆ ಈಶ್ವರ ಕಾಯಲು
ಒಂದು ಮೊಳೆಸಿ ನೂರು ಹುಟ್ಟಿಸಿ
ಮತ್ತೆ ಬೆಳೆಸಿ ಕೊಂಡೊಯ್ಯುವುದು
ಅಸಮನಾತೆಯಲ್ಲಿ ತೂಗುವುದು
ಮ್.. ಇದರ ಬಗ್ಗೆ ಮತ್ತೆ ಮಾತನಾಡೋಣ

ಒಮ್ಮೊಮ್ಮೆ ಕಾಲಿಗೆ ಸಿಕ್ಕುತ್ತವೆ ಮೊಲ್ಲೆ
ನಾಸಿಕದಂಗಿಗೆ ಉಗಿಯುತ್ತೇನೆ ಅಲ್ಲೆ
ಎದುರು ಗುಡಿಯಲ್ಲಿ ಪೂಜೆಗಷ್ಟು ಹೂಗಳು
ಕೊಳೆತ ಇವು ಕಾಲಿಗೆ ಸಿಕ್ಕ ಹೆಣಗಳು
ಜಗವನ್ನು ಕಾಯೋ ಪರಾಕು ತಂದೆ
ಪೂಜೆಗೆಂದು ಸಿಕ್ಕ ಸಿಕ್ಕ ಹೂಗಳ ಆಯ್ದು ತಂದೆ!

Monday 5 December 2011

ಕೆಲವು ಜಿಜ್ಞಾಸೆಗಳು (ಹಾಗೇ ಸುಮ್ಮನೆ)



ಉಪ್ಪಿಗೆರಡರ್ಥ
ಒಂದು ಉಪ್ಪು, ಮಗದೊಂದು ರುಚಿ
ಸಪ್ಪೆಗೇಕೊಂದರ್ಥ!
ವಿರುದ್ಧಾರ್ಥಕವೇ?
ಹಾಗಾದರೆ ನಾಲಗೆ ಹೇಳಿದ್ದು ಹುಸಿಯೇ?
ಸಪ್ಪೆಯಪ್ಪನಾರು?

ಬಿಸಿಲಿನಲ್ಲೊಮ್ಮೆ ನಿಂತು
ಕರಿಯ ಕರಿಯನಾದ
ಬಿಳಿಯನೂ ಕರಿಯನಾದ
ಹಾಗಾದರೆ ಗೌರವವರ್ಣ?
ಕಪ್ಪಾಗುವು ಬಿಳಿಯೋ
ಬಿಳಿಯಾಗದ ಕಪ್ಪೋ?

ಚೂರು ಬಿಡದೇ
ಬೆಳಕನ್ನು ಕತ್ತಲೆ ನುಂಗುವುದು
ನಾಲ್ಕು ಗೋಡೆ ಇದ್ದರೆ ಸಾಕು
ಬೆಳಕಿಗೆ ದಾರಿಯಿಲ್ಲ
ಕತ್ತಲೆಯದೇ ಜಯ
ಕಣ್ಣಾ ಮುಚ್ಚಾಲೆಯಾಟದಲ್ಲಿ

ಬಟ್ಟಲ ತಣ್ಣನೆ ನೀರು
ದಾಹ ನೀಗಿಸಿತು
ಅದೇನು ದಾಹ?
ಗಾಯಕ್ಕೊಂದು ಅಳು
ನಗುವಿನ ನಾವಿಕ?
ನಮ್ಮ ಕೊಲೆಪಾತಕ?

ಜಗದ ಆವೇಗ
ಬೆಳಕಿನ ವೇಗಕ್ಕೆ ಸಿಗದ ರಾಗ
ಬೂದಿ ಉಡುಗಿ ಮುಟ್ಟಲು
ಕೆಂಡದೊಳಗಣ ಬಿಸಿ
ಮುಟ್ಟಿದ್ದು ಕಾಣದಿದ್ದರೆ
ಮನವೇ ಜಿಜ್ಞಾಸೆಯ ಮೂಟೆ

ರಂಜಕದ ಕಡ್ಡಿಗಳು... (ತರಂಗದಲ್ಲಿ ಪ್ರಕಟವಾಗಿದ್ದ ಕವಿತೆ)


ಮಗುವಿನ ನುಗುವಿನ
ಸುಳ್ಳು ಮೊಗದಲ್ಲಿ
ಹಿಕ್ಕೆಯಿಕ್ಕಿದ ಖಗದಲ್ಲಿ
ಹಾದಿಬೀದಿಯ ಜನರೆದೆಯಲ್ಲಿ
ಪರಾಕು ಮಾರಮ್ಮನ
ಬಲಿಕಂಬದ ನೆತ್ತರಲ್ಲಿ
ಹಿಟ್ಲರ್ ನ ಜಾಗ ಮೊಗೆದು
ಮರೆದ ರಕ್ತ ಪಿಪಾಸುಗಳ
ಒಣಗಿದ ಒಡೆದ ಕವಲು ನಿಯಮಗಳಲ್ಲಿ

ದುಡಿಯುತಿರುವ ಮನೆಯೊಳಗೆ
ಹತ್ತಿಹಣ್ಣಿನೊಡಲು ತುಂಬಿ
ಅಲ್ಲಿಂದಿಲ್ಲಿಗೆ ತಂದು ಹಾಕಿ
ರಕ್ತ ಹೀರುವ ಜಿಗಣೆಗಳು
ಕಚ್ಚುವ ಶಕ್ತಿಯಿರದೆ ಬೊಗಳಿ
ಬೊಗಳದೇ ನೂರೆಂಟು ಗಾಯಮಾಡಿ
ಹುಟ್ಟಿಸಿದ ಮರಿ ಕುನ್ನಿಗಳನ್ನು
ಮುಕ್ಕಿದ ಶ್ವಾನ ನಂಬಿಕೆಯಲ್ಲಿ

ಮೂಗಿಗೆ ಕಾಮದ ಬಣ್ಣ ಬಳಿದು
ಕೊಳೆತು ರಸ್ತೆಯಲ್ಲಿ ಬಿದ್ದು
ಹೊಸಕಿಹೋದ ಮಲ್ಲಿಗೆಯೊಡಲ
ಸಲುಗೆಯ ನುಂಗಿದ ರಾಕ್ಷನಲ್ಲಿ
ನೆರೆಮನೆಗೆ ಹೊರೆಯಾಗಿ ನಿಂತು
ಬೆಳೆದ ಮರವನ್ನು ಕತ್ತರಿಸಿ
ರಕ್ತ ತೊಟ್ಟಿಕ್ಕಿಸಿದ ಕುಡುಗೋಲಿನಲ್ಲಿ
ಹೊಳೆದಲುಗಿನಲ್ಲಿ, ಪ್ರಭೃತಿಯಟ್ಟಹಾಸದಲ್ಲಿ

ಅಲ್ಲಿ ಇಲ್ಲಿ ಗಲ್ಲಿಯಲ್ಲಿ, ನನ್ನಲ್ಲಿ, ನಿನ್ನಲ್ಲಿ
ಅವನೆದೆ ಸುಟ್ಟ ಅವಳೆದೆಯಲ್ಲಿ
ಇತಿಹಾಸದ ಕರಾಳ ನಿದ್ದೆಯಲ್ಲಿ
ಟಾಮ್ ನನ್ನು ಕಾಡುವ ಜೆರ್ರಿಯ
ಪುಂಡ ಹುಡುಗಾಟಿಕೆಯಲ್ಲಿ
ಗಾಳಿಯಲ್ಲಿ ನಿಂತಾಗ ಕಾಣ್ವ ಪ್ರತಿ
ಜೀವ ಸೆಟೆಸಿದ ಎದೆಯಲ್ಲಿ
ಸುಡುತ್ತಿದ್ದವು ದೇವ ನೀಡದ
ರಂಜಕದ ಕಡ್ಡಿಗಳು ಗೀಚಿಕೊಂಡು
ನೂರಾರು ಮಂದಿ, ಹೊತ್ತಿಸಿ ದೊಂದಿ,
ಅಡ್ಡಾಡುತ್ತಿದ್ದರು, ಕೊಳ್ಳಿದೆವ್ವಗಳ ದೊಂದುಭಿ

ಹಚ್ಚಿ ಹಬ್ಬಿಸಿ ಕೇರಿ ಕೇರಿಗೆ
ಎರಚಿ ಸೀಮೆಎಣ್ಣೆ ಊರಿಗೆ
ನಡೆವ ದಾರಿಯಗೆದು, ತೊಡೆದರು
ಲೋಕಕ್ಕನ್ಯಾಯವ ಹಡೆದರು
ಪಾಪದ ಕೂಸುಗಳವು
ರಂಜಕದ ಕಡ್ಡಿಯ ಪೆಟ್ಟಿಗೆಯಲ್ಲಿ
ನೆಗೆದು ನೆಗೆದು ಗೀಚಿಕೊಂಡವು
ಭಂಡ ಗಂಡ, ಅಮ್ಮ ಸೇರಿ
ಸೊಸೆ ಕೊಂದು ಮತ್ತೊಂದ ತಂದಂತೆ

ಕಾಣ್ವ ಕಣ್ಣಿಗೊಂದು ದೇವ
ಬೇಡ್ವ, ಬೇಡಿ ತೊಡೆವ ಮಾನವ
ಕಾಣದೇ ಬೇಡದೆ ನೆಮ್ಮದಿ
ಅರುಹಿದ ಕೋಟಿ ಜೀವ
ಇದೆಲ್ಲವ ಕೊಂದು ಮೆರೆದ
ಜಗತ್ತು ನುಂಗಿದ ದುಷ್ಟಭಾವ
ಪ್ರಳಯಕ್ಕೇನು ದಿನಬಾಕಿಯಿಲ್ಲ
ಮರೆತ ಕೃಷ್ಣ ತನ್ನ ಸೊಲ್ಲ
ಗುಹೆಯಾಗಿದೆ ಜಗ, ಗುಹೇಶ್ವರನಿರುವನೆಂಬ
ನಂಬಿಕೆಯಲ್ಲಿ, ವೀಣೆಯಾಗಿ
ವೈಣಿಕನ ಬೆರಳಿಲ್ಲದೆ, ಕಾಯುತ್ತ