ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Wednesday 26 December 2012

ಅವಸಾನ...

ನಾನು ಓದಿದ ಈ ಶಾಲೆಯ ಮುಂದಿನ ರಸ್ತೆ ಬದಿಯಲ್ಲಿ ಒಂದು ಆಲದಮರವಿತ್ತು. ಅಷ್ಟಗಲ ಹರಡಿಕೊಂಡಿದ್ದ ಹಳೆಕಾಲದ ಮರದ ಕೆಳಗಿನ ಕಲ್ಲಿನಕಟ್ಟೆಯ ಮೇಲೆ ದಿನಕ್ಕೆ ನೂರಾರು ಜನಗಳು ಮಲಗಿ ಮೈಕೈ ನೋವನ್ನು ನೀಗಿಸಿಕೊಳ್ಳುತ್ತಿದ್ದರು. ಹೊಲ ಗದ್ದೆಗಳಿಗೆ ಕೂಲಿ ಕಂಬಳಕ್ಕೆ ಹೋಗುತ್ತಿದ್ದ ಹೆಂಗಸರು ತೂಕಲಿಗೆ ಮುದ್ದೆ ಮುರಿದುಕೊಂಡು ಇದೇ ಜಾಗದಲ್ಲಿ ಮೊದಲು ಸೇರಿ ನಂತರ ಕೆಲಸ ಹಂಚಿಕೊಂಡು ಸಾಗುತ್ತಿದ್ದರು. ಭಾನುವಾರ ಬಂತೆಂದರೆ ಸಾಕು ಇದೇ ಮರದ ಕೆಳಗೆ ಒದ್ದಾಡುವುದೇ ನಮ್ಮ ಕೆಲಸವಾಗುತ್ತಿತ್ತು. ಹತ್ತದಿನೈದು ವರ್ಷದ ಹಿಂದೆ ಗೋಲಿ ಆಟಕ್ಕೆ ಅಗೆದಿದ್ದ ಗುಂಡಿ ಇಂದು ಮುಚ್ಚಿಹೋಗಿದೆ, ಆ ಕಲ್ಲಿನ ಮೇಲೆ ಹುಲಿಮನೆ ಆಟವಾಡಲು ಕೊರೆದಿದ್ದ ತ್ರಿಭುಜಾಕಾರದ ಚಿತ್ರ ಮಸಕು ಮಸಕಾಗಿ ಹಾಗೇ ಇದೆ. ಜಿದ್ದಿಗೆ ಬಿದ್ದು ನನ್ನೊಂದಿಗೆ ಆ ಆಟವಾಡುತ್ತಿದ್ದ ಸಿದ್ಧರಾಜು ಇಂದಿಲ್ಲ. ಈ ಜಾಗವನ್ನೇ ಆವರಿಸಿಕೊಂಡು ನೆರಳು ನೀಡಿ ನೂರಾರು ಜನರನ್ನು, ದಣಿದವರನ್ನು ತನ್ನ ಮಡಿಲಿನಲ್ಲಿ ಮಲಗಿಸಿಕೊಂಡ ಮರವೂ ಇಲ್ಲ. ಈ ಮೊದಲು ಊರಿಗೆ ಬಂದು ಐದು ವರ್ಷವಾದ ಕಾರಣವೋ ಏನೋ ಈ ಜಾಗವೆಲ್ಲ ನನಗೆ ಬೋಳು ಬೋಳಾಗಿ ಕಾಣುತ್ತಿದೆ. ಆಲದ ಮರ ಆವರಿಸಿಕೊಂಡಿದ್ದ ಜಾಗವನ್ನೆಲ್ಲ ಇಂದು ಮೊಬೈಲ್ ಟವರ್ ಗಳು ನುಂಗಿಹಾಕಿವೆ. ಆ ಮರದಡಿಯಲ್ಲಿ ಜೊತೆಗೆ ಅಡ್ಡಾಡಿದ ಒದ್ದಾಡಿದ ಗೆಳೆಯರು ಎದೆಯಲ್ಲಿ ಒಂದು ನೆನಪನ್ನು ಕೊರೆದಿಟ್ಟು ಅದೆಲ್ಲೆಲ್ಲಿಗೂ ಹೊರಟುಹೋಗಿದ್ದಾರೆ. ಕೆಲವರು ಅಕಾಲಿಕವಾಗಿ ಸತ್ತುಹೋಗಿದ್ದಾರೆ. ‘ಕಾಳಯ್ಯ ಈಜಲು ಹೋಗಿ ತೀರಿಕೊಂಡ’ ಎಂಬ ಮಾತು ಬಾಯಿಂದ ಬಾಯಿಗೆ ಹರಡಿ ಪಟ್ಟಣದಲ್ಲಿದ್ದ ನನ್ನ ಕಿವಿಗೆ ಬಿದ್ದರೂ ಅದಾವ ಸೋಮಾರಿತನದ ಹಿಡಿತವೋ ಏನೋ ಆತನ ಮುಖವನ್ನು ನೋಡಲು ಬರಲಾಗಲಿಲ್ಲ. ಅರ್ಧರಾತ್ರಿಯಾದೊಡನೆ ಎಚ್ಚರಗೊಳ್ಳುತ್ತಿದ್ದ ಸಿದ್ಧರಾಜು ಕಾಡಿನಿಂದ ಶ್ರೀಗಂಧ ಕದ್ದೊಯ್ಯುತ್ತಿರುವಾಗ ಅದಾರದೋ ಹೊಲದ ಕರೆಂಟ್ ತಂತಿಗೆ ಕಾಲುಕೊಟ್ಟು ಕೊನೆಗೆ ಕತ್ತಿಗೆ ಹಗ್ಗ ಸುತ್ತುಕೊಂಡಂತೆ ಬೆಟ್ಟದ ತಪ್ಪಲಿನ ಮರದ ಕೆಳಗೆ ದೊರಕಿದಾಗಲೂ ಕೆಲಸದ ನೆಪದಿಂದ ಬರಲಿಲ್ಲ. ಈ ಕಲ್ಲಿನ ಎದೆಯಲ್ಲಿರುವ ಹುಲಿಮನೆ ಆಟದ ಪಂಜರದ ಮೇಲೆ ಅವನ ಕೈ ಗುರುತಿದೆ, ನನ್ನ ಅವನ ಬುದ್ಧಿವಂತಿಕೆ ಚತುರತೆ ಎದ್ದು ಕಾಣುತ್ತದೆ.
ಆ ಕಲ್ಲಿನ ಮೇಲೆ ಕುಳಿತುಕೊಂಡೊಡನೆ ಒಂದು ರೀತಿಯ ಭಾವುಕತೆ ಮತ್ತು ಖಾಲಿತನ ನನ್ನನ್ನು ಆವರಿಸಿಕೊಂಡು ಒಂದು ಹತ್ತು ಹೆಜ್ಜೆಯ ಮುಂದಿನ ಪ್ರಪಂಚ ಬೇಡವಾಯಿತು. ಮರದ ನೆರಳ ತಂಪು ನೆತ್ತಿಗೆ ಬೀಳಲಿಲ್ಲವೆಂಬುದೇ ಬೇಸರ.

“ಏನಪ್ಪಾ, ಚೆನ್ನಾಗಿದಿಯಾ?” ಯಾರೋ ಕೇಳಿದರು. ಕಣ್ಣು ಕಾಣದ ವಯಸ್ಸಿನಲ್ಲೂ ಆತ ನನ್ನನ್ನು ಗುರುತಿಸಿಕೊಂಡರೂ ನನಗೆ ಆತನ ಸುಳಿವು ಹತ್ತಿರಕ್ಕೆ ಹೋಗುವವರೆವಿಗೂ ದೊರಕಲಿಲ್ಲ. ಕಪ್ಪಾಗಿರುವ ಕಾರಣದಿಂದ ಎಲ್ಲರೂ ಆತನನ್ನು ‘ಕರಗಣ್ಣ’ ಎಂದು ಕರೆಯುತ್ತಿದ್ದರು. ಆ ಕಾಲದಲ್ಲಿ ಅಷ್ಟು ಸದೃಢನಾಗಿದ್ದವನು ಈಗ ತೀವ್ರ ಕೃಶನಾಗಿದ್ದಾನೆ. ಒಂದು ಕಾಲದಲ್ಲಿ ಷರ್ಟಿನ ಎರಡು ಜೇಬಿನ ತುಂಬಾ ಬರಿ ಕಾಗದಗಳನ್ನೇ ತುಂಬಿಕೊಂಡು ಒಂದೈದು ಪೆನ್ನುಗಳನ್ನು ತುರುಕಿಕೊಂಡಿರುತ್ತಿದ್ದ. ಕೈಯಲ್ಲಿ ಒಂದು ರೇಡಿಯೋ ಹಿಡಿದುಕೊಂಡು ಕನ್ನಡ, ತಮಿಳು, ತೆಲುಗು, ಇಂಗ್ಲೀಷ್, ಹಿಂದಿ ವಾರ್ತೆಯನ್ನೆಲ್ಲಾ ಗಮನವಿಟ್ಟು ಕೇಳಿ ಅರ್ಥವಾಗದಿದ್ದರೂ ಏನೇನೋ ಭಾಷಾಂತರಿಸಿ ಊರಿನ ಜನರಿಂದ ಸೈ ಎನಿಸಿಕೊಂಡಿದ್ದವ. ಇಟ್ಟುಕೊಂಡ, ಕಟ್ಟುಕೊಂಡವರ ಒಡೆದ ಸಂಸಾರಗಳನ್ನೆಲ್ಲಾ ಚಾವಡಿಯ ಮೇಲೆ ಕುಳಿತು ತೀಕ್ಷ್ಣವಾಗಿ ಮಾತನಾಡಿ ಪರಿಹರಿಸುತ್ತಿದ್ದವ, ಸಾಧ್ಯವಾಗದಿದ್ದಾಗ ಹೆಂಡತಿಗೆ ಗಂಡನ ಕಡೆಯಿಂದ ಐದು ಸಾವಿರ ಕೊಡಿಸಿ ತಾಳಿ ಕೀಳಿಸಿಬಿಡುತ್ತಿದ್ದ.

“ಚೆನ್ನಾಗಿದ್ದೇನೆ, ನೀವು ಹೇಗಿದ್ದೀರಿ” ಎಂದೆ.
“ಶಿವ ಮಡಗ್ದಂಗಿದ್ದೀನಪ್ಪ” ಎಂದವನೇ ತಲೆ ಕೆರೆದುಕೊಂಡ.
“ಹೇಳಿ” ಎಂದೆ.
“ಒಂದೈದ್ರುಪಾಯಿ ಇದ್ರೆ ಕೊಡಪ್ಪ, ಒಂದ್ ಕಟ್ಟು ಗಣೇಶ ಬೀಡಿ ತಕ್ಕೋತಿನಿ” ಅಂದ. ಆತನ ಮನೆಯಲ್ಲಿ ನಾನು ಅದೆಷ್ಟೋ ಬಾರಿ ಹೊಟ್ಟೆ ತುಂಬಾ ಉಪ್ಹೆಸರು ಮುದ್ದೆ ತಿಂದಿದ್ದೇನೆ. ಒಂದು ದಿನವೂ ಬೇಸರಿಸಿಕೊಳ್ಳದೆ ಬಡಿಸಿದವರು ಇಂದು ಕೇವಲ ಐದು ರೂಪಾಯಿಗೆ ಕೈಚಾಚಿದ್ದು ಕಂಡು ಬೇಸರವಾದರೂ ಕೊನೆಗೆ ಖರ್ಚಿಗೆ ಇಟ್ಟುಕೊಳ್ಳಿ ಎಂದು ಐವತ್ತು ರೂಪಾಯಿಯನ್ನೇ ಕೊಟ್ಟೆ.
“ನಿಮ್ಮ ಮಗ ಧಾಮೋಧರ ಹೇಗಿದ್ದಾನೆ, ಎಲ್ಲಿದ್ದಾನೆ ಈಗ?” ದುಡ್ಡು ಸಿಕ್ಕಿದ್ದೇ ಖುಷಿಯಾದ ಆತನನ್ನು ಕೇಳಿದೆ.
“ಅಯ್ಯೋ, ಅವನು ಆ ಕೆಳ್ಗಲ್ ಕೇರಿ ಮೂಲೆ ಮನೆ ವೆಂಕ್ಟನ್ ಹೆಂಡತಿ ಜೊತೆ ಓಡಿಹೋಗಿ ತಮಿಳುನಾಡು ಕಾಫಿ ತೋಟದಲ್ಲಿ ಸೇರಿಕೊಂಡವ್ನೆ ಅಪ್ಪ, ಈ ಊರಿಗೆ ಬಂದ್ರೆ ಅವನನ್ನ ಬುಟ್ಟಾರ ಜನಗೋಳು” ಎಂದಾಗ ಈ ರೀತಿಯ ಎಡವಟ್ಟುಗಳಿಗೆ ತಲೆಕೊಟ್ಟು ಊರು ಬಿಟ್ಟುಹೋದ, ಪವಿತ್ರವಾಗಿ ಪ್ರೀತಿಸಿ ಕೊನೆಗೆ ಇಟ್ಟುಕೊಂಡವರು ಎಂಬ ಪಟ್ಟ ಹೊತ್ತುಕೊಂಡ ಎಷ್ಟೋ ಗೆಳೆಯರು ನೆನಪಿಗೆ ಬಂದರು.

“ಅದ್ಸರಿ, ನೀನು ಮದುವೆ ಆಗೋದಿಲ್ವೇ?, ಪಟ್ಟಣಕ್ಕೆ ಸೇರಿ ನೀನು ಇನ್ನೂ ಹೀಗೆ ಉಳ್ಕೊಂಡಿದ್ಯಾ, ನೀನು ಆಗ ಹೊತ್ತು ತಿರುಗಾಡ್ತಿದ್ದ ಕೂಸುಗಳಿಗೆಲ್ಲಾ ಈಗ ಒಂದೊಂದು ಮಕ್ಕಳಾಗಿದೆ” ಆತ ಕೇಳಿದ
“ಆಗೋಣ ಬಿಡಿ ಅಣ್ಣಯ್ಯಾ, ಅವರೆಲ್ಲಾ ಅವಸರಕ್ಕೆ ಬಿದ್ದು ಮದುವೆ ಆದವರು. ನಾವು ಪಟ್ಟಣದಲ್ಲಿರುವವರು ಅವರಂತೆ ಅವಸರಕ್ಕೆ ಬೀಳಲು ಸಾಧ್ಯವೇ” ಎಂದು ಹೇಳಿದನೇ ಮತ್ತೆ ಆ ಕಲ್ಲಿನ ಮೇಲೆ ಕುಳಿತುಕೊಂಡೆ.

ಮದುವೆ ಎಂಬ ಈ ಪದ ನನ್ನ ಕಿವಿಗೆ ಬಿದ್ದರೆ ರೇಖಾ ನೆನಪಾಗುತ್ತಾಳೆ. ಇದೇ ಶಾಲೆಯ ಆವರಣದಲ್ಲಿ ಒಬ್ಬರಿಗೊಬ್ಬರು ಮದುವೆಯ ಆಟ ಆಡಿದ್ದೆವು. ನಮ್ಮಿಬ್ಬರನ್ನು ಹಸೆಮಣೆ ಮೇಲೆ ಕೂರಿಸಿ ಮದುವೆ ಮಾಡಿದ್ದ ಇತರೆ ಗೆಳೆಯರು ಆಟವೆಂಬುದನ್ನು ಮರೆಯುವಷ್ಟು ಗಂಭೀರವಾಗಿ ಆಗಾಗ ಈ ಮದುವೆಯನ್ನು ನೆರವೇರಿಸುತ್ತಿದ್ದರು. ಪ್ರೀತಿ ಪ್ರೇಮ ಎಂಬ ಕಿಂಚಿತ್ತೂ ಅರಿವಿಲ್ಲದ ಆ ಕಾಲದಲ್ಲಿ ಆಕೆಗೆ ಹಳೆಯ ಜಾಮೆಟ್ರಿ ಬಾಕ್ಸ್ ಜೊತೆಗೆ ನಾಲ್ಕಾಣೆಯ ಒಂದು ಪಾವಲಿಯನ್ನು ನೀಡಿದ್ದೆ. ಬಹುದಿನಗಳವರೆವಿಗೂ ಆಕೆ ಅದನ್ನು ತನ್ನೊಡನೆ ಇಟ್ಟುಕೊಂಡಿದ್ದಳು. ನಂತರದ ದಿನಗಳಲ್ಲಿ ನಮ್ಮಿಬ್ಬರ ನಡುವೆ ಬಿರುಗಾಳಿಯಾಗಿ ಬಂದವನು ಲಕ್ಷ್ಮಣ್. ನಿನ್ನೆ ಬಸ್ಸಿನಿಂದ ಹೊರಗೆ ಹೆಜ್ಜೆ ಇಟ್ಟಾಗ ಆತ ತೂರಾಡಿಕೊಂಡು ಮೇಲೆ ಬಿದ್ದಾಗ ಯಾಕೋ ತುಂಬಾ ಕನಿಕರ ಹುಟ್ಟಿತ್ತು. ಇದೇ ಲಕ್ಷ್ಮಣ್, ಆಕೆ ತುಂಬಾ ಜೋಪಾನವಾಗಿಟ್ಟುಕೊಂಡಿದ್ದ ನವಿಲುಗರಿಯೊಂದನ್ನು ತುಂಡು ಮಾಡಿ ನನ್ನ ಪುಸ್ತಕದಲ್ಲಿ ಇಟ್ಟಿದ್ದ. ಇದೇ ವಿಚಾರವಾಗಿ ಮುನಿಸಿಕೊಂಡಿದ್ದ ಆಕೆ ಆ ನಾಲ್ಕಾಣೆ ಪಾವಲಿಯನ್ನು ನನ್ನ ಮುಖಕ್ಕೆ ಎಸೆದುಹೋಗಿದ್ದಳು.

ಈ ಶಾಲೆಯ ಗೋಡೆಗಳು ಇನ್ನೂ ಹಾಗೇ ಇವೆ. ಅಂದು ಎಳೆ ಹುಡುಗನಾಗಿದ್ದವನು ಇಂದು ಬೆಳೆದು ಮುಂದೆ ಕುಳಿತಿರಬಹುದು. ಆದರೆ, ಆ ಗೋಡೆಗೆ ನಾನಿನ್ನೂ ಚಿಕ್ಕವನೆ. ಪಾಳುಬಿದ್ದ ಶಾಲೆಯ ಈ ಸ್ತಬ್ಧಗೋಡೆಗಳು ನನ್ನ ಬುದ್ಧಿಯನ್ನು ತೀಡಿ ತೀಕ್ಷ್ಣಗೊಳಿಸಿದ ಗುರುಗಳನ್ನು ನೆನಪಿಸುತ್ತದೆ, ಈ ಅಂಗಳದಲ್ಲಿ ಚೆಲ್ಲಿಕೊಂಡಿದ್ದ ಗೆಳೆಯರು ಅಷ್ಟೇ ಚಿಕ್ಕವರಾಗಿ ನನ್ನನ್ನು ಕೂಗುತ್ತಿದ್ದಾರೆ. ಅಂದು ಇಲ್ಲೆಲ್ಲಾ ನಲಿದಾಡಿದ ಎದೆಯಲ್ಲಿ ಒಂದು ಗುರುತನ್ನು ಮೂಡಿಸಿದ ಹುಡುಗಿಯರ ಮಕ್ಕಳು ಇಲ್ಲೆಯೇ ಆಡುತ್ತಿವೆ ಎನಿಸುತ್ತಿದೆ. ಆದರೆ, ಈ ಮುಗ್ದ ಮಕ್ಕಳೊಂದಿಗೆ ನನ್ನ ಕುಡಿಗಳು ಸೇರಿಕೊಂಡು ಈ ತಂಪಿನಲ್ಲಿ ಎಲ್ಲಾ ಮರೆತು ಹಳ್ಳಿಯ ಸೊಗಡಿನಲ್ಲಿ ಬೆಳೆಯಲಿ ಎಂದುಕೊಳ್ಳಲಾರೆ.

ಅಸಲಿಯಾಗಿ ಅದು ನನ್ನಿಂದ ಸಾಧ್ಯವೇ?

ನಿನ್ನೆ ಸಂಜೆ ಈ ಹಳ್ಳಿಗೆ ಬಂದು ಹತ್ತು ನಿಮಿಷವಾಗಿರಲಿಲ್ಲ, “ವಯಸ್ಸಾಗಿದೆ, ಮದುವೆ ಮಾಡಿಕೊಳ್ಳಲು ನಿನಗೇನು ದಾಡಿ” ಅಜ್ಜಿ ಒಂದೇ ಸಮನೆ ಸಂಚಿ ಹುಡುಕುತ್ತಾ ಗೊಣಗಿಕೊಂಡಳು.
“ಏನಪ್ಪಾ, ಹುಡುಗಿ ನೋಡೋದೇ? ಮೊನ್ನೆ ರಾಮಣ್ಣನ ಮದುವೆಗೆ ಹೋಗಿದ್ದಾಗ ಒಂದೊಳ್ಳೆ ಸಂಬಂಧ ಗೊತ್ತು ಮಾಡಿಬಂದಿದ್ದೇನೆ” ಅಣ್ಣ ಕೇಳಿಕೊಂಡ.
“ಅವನು ಯಾರನ್ನಾದರೂ ಪ್ರೀತಿಸಿರಬಹುದು ಇಲ್ಲ ಪಟ್ಟಣದಲ್ಲಿ ನಮಗೆಲ್ಲರಿಗೂ ತಿಳಿಯದಂತೆ ಒಂದು ಸಂಸಾರ ಹೂಡಿರಬಹುದು, ಆದುದರಿಂದಲೇ ಮದುವೆಗೆ ಒಪ್ಪಿಗೆ ನೀಡದೆ ಈ ರೀತಿಯಾಗಿ ಆಡುತ್ತಿದ್ದಾನೆ” ಪಕ್ಕದ ಮನೆಯವಳು ತನ್ನದೂ ಒಂದು ಸೊಲ್ಲಿರಲಿ ಎಂದು ನನ್ನ ಮುಖ ನೋಡುತ್ತ ಹೇಳಿದಳು.
“ಮಗನೇ, ನಾ ಸಾಯುವ ಮೊದಲೇ ನಿನ್ನ ಮದುವೆ ನೋಡಿಬಿಡುತ್ತೇನೆ, ಈ ಹಳ್ಳಿಯಲ್ಲಿಯೇ ನಿನ್ನ ಮದುವೆಯಾಗಬೇಕು ಕಂದ”, ಗೂರಲು ರೋಗದಿಂದ ಬಳಲಿ ಮೇಲೆ ಹಾರುತ್ತಿದ್ದ ಜೀವಪಕ್ಷಿಯನ್ನು ಹಿಡಿದುಕೊಂಡ ಅಪ್ಪ ಕಷ್ಟಪಟ್ಟು ನುಡಿದ.
“ನಿನ್ನೆಯಷ್ಟೇ ಬಸಣ್ಣ ಫೋನ್ ಮಾಡಿದ್ದ, ಚಿಕ್ಕಕ್ಕನ ಮಗಳು ಓದಿಕೊಂಡಿದ್ದಾಳಂತೆ, ನೋಡಲೂ ಚೆನ್ನಾಗಿದ್ದಾಳೆ, ಅವರಲ್ಲಿ ಹತ್ತೆಕರೆ ಜಮೀನು ಒಳ್ಳೆ ಆಸ್ತಿ ಇದೆ. ನಿನ್ನೆ ಅವರ ಮನೆಗೆ ಹೋಗಿ ಮಾತನಾಡ್ಕೊಂಡು ಬಂದಿದ್ದೇನೆ, ನಿಮ್ಮ ಮಗಳೇ ನನ್ನ ಸೊಸೆ ಎಂದು ಹೇಳಾಗಿದೆ, ಅವರು ಬೆಳಗ್ಗೆಯಿಂದಲೂ ಫೋನಾಯಿಸಿ ‘ಬೇಗ ತಿಳಿಸಿ, ಅದ್ಯಾರೋ ಕಂಡಕ್ಟರ್ ಬಂದು ನೋಡಿಕೊಂಡು ಹೋಗಿದ್ದಾರೆ’ ಎಂದು ಕೇಳುತ್ತಲೇ ಇದ್ದಾರೆ. ನೀನು ಈ ರೀತಿ ಆಡ್ತಾ ಇರೋದಾದ್ರೂ ಯಾಕೆ ಅಂತ ಗೊತ್ತಾಗ್ತಾ ಇಲ್ಲಪ್ಪ?” ಸಿಟ್ಟು ಮಾಡಿಕೊಂಡ ಅಮ್ಮ ‘ಚೆ’ ಎಂದುಕೊಂಡಳು.

“ದಯವಿಟ್ಟು ಸ್ವಲ್ಪ ಸಮಯ ಕೊಡಿ, ಅವಸರ ಬೇಡ, ನಾನೇನೂ ಈಗ ಹುಚ್ಚನಂತೆ ಬೀದಿ ಬೀದಿ ಅಲೆಯುತ್ತಿಲ್ಲವಲ್ಲ, ನೆರೆ ಕೂದಲು ಬಂದು ಚರ್ಮವೆಲ್ಲಾ ಸುಕ್ಕುಗಟ್ಟಿಹೋಯಿತೇನೋ ಎಂಬಂತೆ ಆಡುವುದೇಕೆ? ಕೂಡಲೇ ಮದುವೆ ಬಗ್ಗೆ ತಿಳಿಸುತ್ತೇನೆ” ಎಂದು ಹೇಳಿ ಮನೆಯಿಂದ ಹೊರ ನಡೆದಿದ್ದೆ.

“ಏನಪ್ಪಾ, ಪಟ್ಟಣಕ್ಕೆ ಹೋದದ್ದೇ ನಮ್ಮನ್ನ ಮರೆತುಬುಟ್ಟಾ?” ಯಾವುದೋ ಪರಿಚಿತ ದ್ವನಿ ಕಿವಿಗೆ ಬಿದ್ದಿತು. ಕೂಲಿ ಮುಗಿಸಿ ಬರುತ್ತಿದ್ದ ನಮ್ಮ ಬೀದಿಯ ಹೆಂಗಸರ ದಂಡೆ ನನ್ನ ಹಿಂದೆ ನಿಂತಿತ್ತು.
“ಚೆನ್ನಾಗಿದ್ದೇನೆ, ನೀವುಗಳು?” ಎಂದೆ.
“ನಮ್ಮದೇನಪ್ಪ, ಕೂಲಿ ಮಾಡಿದರೆ ಉಣ್ಣುವುದು, ಇಲ್ಲದಿದ್ದರೆ ಶಿವನಿಷ್ಟ ಅಂದ್ಕೊಂಡು ನೀರು ಕುಡಿಯುವುದು” ಎಂದಳೊಬ್ಬಳು
“ಪಟ್ಣಕ್ಕೆ ಹೋಗಿ ನೀನು ಕೆಡಲಿಲ್ಲ, ಒಂದು ಸೈಟ್ ತೆಗೆದುಕೊಂಡಿದ್ದಿಯಂತೆ, ಅದೆಷ್ಟೋ ಲಕ್ಷ ದುಡ್ಡನ್ನ ಬ್ಯಾಂಕಿನಲ್ಲಿಟ್ಟಿದ್ದೀಯಂತಲ್ಲಪ್ಪ, ತಣ್ಗಿರು” ಎಂದಳು ಗಂಗವ್ವ. ಈಕೆ ನಮ್ಮ ನೆರೆಮನೆಯಾಕೆ. ನಮ್ಮಮ್ಮ ದಿನಕ್ಕೊಮ್ಮೆಯಾದರೂ ಈಕೆಯ ಬಳಿ ನನ್ನ ವಿಚಾರವೆತ್ತಿ ಬರಿ ಈ ರೀತಿಯ ಸುಳ್ಳನ್ನು ಹೇಳುವುದೇ ಆಯಿತು.
"ಇದೇಕೆ? ಮದುವೆ ಆಗೋಲ್ವೇ?" ಮತ್ತದೇ ಪ್ರಶ್ನೆ ಎದುರಾಗಿದ್ದೇ "ನೀವೆಲ್ಲಾ ನಡೆಯಿರಿ, ಬೀದಿಗೇ ಬಂದು ಮಾತನಾಡುತ್ತೇನೆ" ಎಂದು ಕಳುಹಿದೆ.

ಈ ಕೆರೆ ನೋಡಿ, ಮಳೆಗಾಲ ಬಂದಾಗ ತುಂಬಿಕೊಳ್ಳುತ್ತದೆ, ಬೇಸಿಗೆ ಬಿಸಿಗೆ ಬೆತ್ತಲಾಗಿ ನೆಲ ಬಿರಿಯುತ್ತದೆ. ಅಲ್ಲಿದ್ದ ಕೆಲವು ಜೀವರಾಶಿಗಳು ಅವಸಾನಗೊಳ್ಳುತ್ತವೆ. ಹಾವು, ಚೇಳುಗಳು ಬಿಲ ಸೇರಿಕೊಳ್ಳುತ್ತವೆ. ಅದೆಲ್ಲಿಗೋ ಜೀವ ಹಾರಿ, ಮಾಂಸ ಕರಗಿ ಬಿದ್ದಿರುವ ಕಪ್ಪೆಯ ಅಸ್ಥಿಪಂಜರ ಈ ಜಗತ್ತಿಗೆ ಅಕಾರಣವಾಗಿ ಬಂದ ಒಂದು ಜೀವ ಕಾರಣವಿಲ್ಲದೇ ಕುಣಿದಾಡಿ, ನೆಗೆದಾಡಿ ಕೊನೆಗೆ ಕಾರಣ ಉಳಿಸದೇ ಸತ್ತುಹೋಗುವ ಕುರುಹನ್ನಿಟ್ಟುಕೊಂಡಿದೆ. ಅದೆಲ್ಲಿಂದ ಬಂತು, ಹೊದದ್ದಾದರೂ ಎಲ್ಲಿಗೆ ಎಂಬ ಪ್ರಶ್ನೆಗೆ ಆ ಎಲುಬು ಉತ್ತರಿಸದು, ಬದಲಾಗಿ ಈ ಜೀವನದ ಖಾಲಿತನವನ್ನು, ಇಂದು ನಮ್ಮನ್ನೆಲ್ಲಾ ಅಪ್ಪಿಕೊಂಡು ಬಿಗಿದಿರುವ ಸಂಬಂಧಗಳೊಳಗಿನ ಕೆಲವು ದಿನಮಾತ್ರದ ಆಕರ್ಷಣೆಯನ್ನು ಕನ್ನಡಿಯಾಗಿ ತೋರಿದೆ.

ಈ ಕೆರೆಯೆಂಬುದೂ ಬದುಕಿನಂತೆ ಎಲ್ಲಾ ಬದಲಾವಣೆಗೆ ಹೊಂದಿಕೊಳ್ಳುವ ಒಂದು ವೃತ್ತಾಂತ, ಇದೇ ವೃತ್ತಾಂತದಲ್ಲಿ ಹುಟ್ಟಿ ಸಾಯುವ ಕಪ್ಪೆಯಂತೆ ನಾನೂ ಕೂಡ ಇದೇ ಹಳ್ಳಿಯಲ್ಲಿ ಬದುಕಿಬಿಡಬೇಕಾಗಿತ್ತು. ಪಟ್ಟಣದ ಗೊಂದಲದ ಕಾರಣವಾಗಿ ದಿನಕ್ಕೆ ಡಝನ್ ಗಟ್ಟಲೇ ಸಿಗರೇಟ್ ಸೇದುವ ಬದಲು, ನನಗೆ ಈಜು ಕಲಿಸಿದ ಈ ಕೆರೆಯ ದಂಡೆಯಲ್ಲಿ ಕುಳಿತು ಒಂದು ಮೋಟುಬೀಡಿ ಸೇದಿ ಸಂಜೆಯಾದಂತೆ ಉಂಡು ಪಡಸಾಲೆಯಲ್ಲಿ ಮಲಗಿಬಿಡಬಹುದಾಗಿತ್ತು. ಮೈಗಂಟಿಕೊಳ್ಳುವ ಈ ಪ್ಯಾಂಟ್ ಷರ್ಟ್ ಬದಲು ಒಂದೆರಡು ಪಂಚೆಯಲ್ಲಿ ಜೀವನ ಕಳೆಯಬಹುದಿತ್ತು. ಹಳ್ಳಿಬಿಟ್ಟು ಯೋಚಿಸದ ಯಾವಳೋ ಒಬ್ಬಳನ್ನು ಮದುವೆಯಾಗಿ ಈ ಹೊತ್ತಿಗೆ ಒಂದೆರಡು ಮಕ್ಕಳೊಂದಿಗೆ ಕಾಲ ಕಳೆಯಬಹುದಿತ್ತು. ಎಲ್ಲೆಲ್ಲಿಯೂ ಬಸ್ಸು, ಸ್ಕೂಟರ್ ತುಂಬಿಕೊಂಡು ಯಾವಾಗಲೂ ಹೊಗೆ ಉಗುಳುವ, ಸಣ್ಣ ಸಣ್ಣ ವಸ್ತುವಿನ ವ್ಯಾಪಾರಕ್ಕೂ ದೊಡ್ಡ ದೊಡ್ಡ ಮೋಸ ಮಾಡುವ, ಮುಖ ನೋಡಿ ಮಣೆ ಹಾಕುವ ಪಟ್ಟಣವನ್ನು ಕನಸಿನಲ್ಲಿ ತುಂಬಿಕೊಳ್ಳುವ ಹಳ್ಳಿಗರು ಹಳ್ಳಿಯ ಈ ಸುಪ್ತ ಆಪ್ತ ವಾತಾವರಣವನ್ನು ಮರೆತುಬಿಡುತ್ತಾರೆ. ಪ್ಯಾಂಟ್, ಟೀ ಷರ್ಟ್, ಬೆಲ್ಟ್ ಹಾಕಿಕೊಂಡು ಅಸ್ವಾಭಾವಿಕವಾಗಿ ಮಾತನಾಡುವುದನ್ನೇ ನಾಗರಿಕತೆಯ ಪರಮಾವಧಿ ಎಂದುಕೊಳ್ಳುತ್ತಾರೆ. ಅಲ್ಲಿನ ಖರ್ಚನ್ನು ಲೆಕ್ಕವಿಟ್ಟುಕೊಳ್ಳದೇ ಬಂಡಿಯಷ್ಟು ದುಡಿಯಬಹುದೆಂಬ ಭ್ರಮೆಯ ಅಲಗಿನರಮನೆಯಲ್ಲಿ ತೇಲುತ್ತಾರೆ. ಒಂದಷ್ಟು ಜನ ಉದ್ಧಾರವಾದರೆ, ಒಂದಷ್ಟು ಜನ ಹಳ್ಳಿಯ ಮಡಿಲನ್ನು ಮತ್ತೆ ಅಪ್ಪಿಕೊಳ್ಳುತ್ತಾರೆ. ಒಂದಷ್ಟು ಜನ ಮೆಜೆಸ್ಟಿಕ್‍ನಂತಹ ಕತ್ತಲ ಕೂಪದೊಳಗೆ ಮೈ ಬೆತ್ತಲು ಮಾಡಿಕೊಳ್ಳುತ್ತಾರೆ. ನನ್ನಂತೆ ಏಡ್ಸ್ ನಂತಹ ಮಹಾಮಾರಿಗೆ ಸುಲಭವಾಗಿ ತುತ್ತಾಗಿಬಿಡುತ್ತಾರೆ!

ಅಷ್ಟಕ್ಕೇ ದೊಡ್ಡಪ್ಪನ ಫೋನ್ ಬಂದಿತ್ತು. "ಹಲೋ" ಎಂದೆ.
"ಎಲ್ಲಿದ್ದೀಯಪ್ಪಾ? ಮನೆ ಹತ್ರ ಬೇಗ ಬಾ, ಮದುವೆ ಬಗ್ಗೆ ಮಾತನಾಡಬೇಕು" ಎಂದ ದೊಡ್ಡಪ್ಪನ ಮಾತು ಕೇಳಿ ಮತ್ತಷ್ಟು ಕಿರಿಕಿರಿಯಾಯಿತು.
ಏನೂ ಮಾತನಾಡದೆ ಫೋನಿಡುವಷ್ಟರಲ್ಲಿ "ಏಡ್ಸ್ ವಿರುದ್ಧ ಜಾಗೃತಿ ಮೂಡಿಸುವ ಶಿಬಿರಕ್ಕೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗಿದೆ" ಎಂಬ ಸಂದೇಶ ಬಂತು. ಕೊನೆಗೂ ನನ್ನ ತಪ್ಪು ಅಲ್ಪ ಸ್ವಲ್ಪವಾದರೂ ಸರಿದಾರಿ ಹಿಡಿಯಿತು!

Sunday 9 December 2012

ಸ್ತಬ್ದ ಭಾವಗಳು...

1.
ಮುಂಜಾನೆ ಚಳಿಗದುರಿ ಮೌನವಾಗಿ
ಮಲಗಿದೆ ರಸ್ತೆ
ಪೇಪರ್ ಮಾರುತ್ತಿದ್ದ ಹುಡುಗ
ಹಂಚಿದ್ದಾನೆ ತನ್ನ ವ್ಯಥೆ!

2.
ಮೈಕೊರೆವ ಚಳಿಗೆ ಹರಿದ ಕಂಬಳಿ
ಎಳೆದುಕೊಂಡಿತು ಅಜ್ಜ
ಮನಸ್ಸು ಮುದುಡಿದೆ, ಹೇಳಲು
ಪದಗಳಿಲ್ಲ, ನಡುಗುವ ಸಜ

3.
ಆ ಏಕಮುಖ ಸಂಚಾರದ ದಾರಿಯಲ್ಲಿ
ಮಗುವಿನೊಂದಿಗೆ ತಾಯಿ
ಮುಂದೆ ಹೋದವಳು ಹಿಂದೆ ಬರಳು
ಬೊಗಳಿದೆ ಬೀದಿನಾಯಿ

4.
ರಾತ್ರಿ ಒಂದೇ ಹಾಸಿಗೆಯಲ್ಲಿ ನಡೆದ
ಜಗಳಕ್ಕಿನ್ನೂ ಕುದಿವ ಮನ
ಮುಂಜಾನೆಯ ಚಳಿಗೂ ಕಿಚ್ಚಿಟ್ಟಿದೆ
ಮನೆಯೊಳಗೇ ಸ್ಮಶಾಣ

5.
ಬಸ್ ನಿಲ್ದಾಣದಲ್ಲಿ ಮಲಗಿದ್ದವನಿಗೆ
ಸೂರ್ಯೋದಯದ ತವಕ
ದೊಣ್ಣೆಯ ಏಟಿಗೂ ಏಳಲಿಲ್ಲ
ತೀರದ ಮೈ ಕೈ ನಡುಕ

6.
ಚಳಿ ಮುಗಿದು ಬಿಸಿಲು ನೆತ್ತಿ ಸುಟ್ಟರೂ
ಇವರುಗಳು ಮೌನಿಗಳು
ಹೇಳಿಕೊಳ್ಳಲು ಪದ ಭಂಡಾರವಿಲ್ಲ
ಕಣ್ಣಿಲ್ಲದ ಅಂಧ ಕವಿಗಳು

Tuesday 4 December 2012

ಮೌನ ದ್ವಂದ್ವ

ಚೂರು ಕೆಲಸ ಮಾಡದಿದ್ದರೂ, ಚೀರಿ ಚೀರಿಯೇ ಎದೆ ಕಟ್ಟಿದಂತಾಗಿತ್ತು ಶಾಂತಮ್ಮಳಿಗೆ. ಮನೆಯನ್ನು ಅಚ್ಚುಕಟ್ಟುಗೊಳಿಸಲು ಮನೆಯಾಳುಗಳಿಗೆ ಹೇಳುವುದರಲ್ಲಿಯೂ ಇಷ್ಟು ಸುಸ್ತಾಗುತ್ತದೆ ಎಂದು ಆಕೆಗೆ ತಿಳಿದಿರಲಿಲ್ಲ. ಇವಳುಪಸ್ಥಿತಿ ಇರದಿದ್ದರೆ ಕೆಲಸದಾಳುಗಳು ಒಂದೆರಡು ಘಂಟೆ ಮೊದಲೇ ಮನೆ ಗುಡಿಸಿ, ತೊಳೆದು, ಅದು ಇದು ಜೋಡಿಸುವ ಕೆಲಸ ಮಾಡಿ ಮುಗಿಸಿಬಿಡುತ್ತಿದ್ದರು. ಅಷ್ಟಕ್ಕೆ ಶಾಂತಮ್ಮಳ ಗಂಡ ಲಕ್ಷ್ಮೀಶಭಟ್ಟರು ‘ಸಾಂಬಾರಿಗೆ ಉಪ್ಪೇ ಇಲ್ಲವಲ್ಲೇ’ ಎಂದು ಒಂದೇ ಸಮನೆ ಕೂಗಿಕೊಂಡರು. ‘ಈ ಅಡುಗೆಯವಳು ನಿಮ್ಮ ದೂರದ ಸಂಬಂಧಿ ಎಂದು ಇಟ್ಟುಕೊಂಡಿದ್ದೀರೋ ಹೇಗೆ? ಇಂಗು ತೆಂಗು ಎಲ್ಲವೂ ಇದ್ದರೂ ಊಟಕ್ಕೆ ರುಚಿ ಹತ್ತಿಸಲು ಬರದ ಮಂಗ, ಬೇರೆಯವಳನ್ನು ನೋಡಿಕೊಳ್ಳೋಣವೆಂದರೂ ನೀವು ತುಟಿ ಬಿಚ್ಚುವುದಿಲ್ಲ’ವೆಂದು ಶಾಂತಮ್ಮ ರೇಗಿಕೊಂಡಳು.

ಶಾಂತಮ್ಮಳ ಮೊದಲ ಮಗಳಾದ ಕಾವ್ಯಳನ್ನು ನೋಡಿ ಸಂಬಂಧ ಗೊತ್ತು ಮಾಡಿಕೊಂಡು ಹೋಗಲು ಇಂದು ದೂರದ ಮಂಗಳೂರಿನಿಂದ ಹುಡುಗನ ಮನೆಯವರು ಬರುವುದರಲ್ಲಿದ್ದರು. ಹುಡುಗನ ಹೆಸರು ಲಂಬೋಧರ. ಹುಡುಗನ ಮನೆಯವರು ಆ ಮಂಗಳೂರಿನಲ್ಲಿಯೇ ಅತಿ ಹೆಚ್ಚು ಸಂಭಾವಿತರಲ್ಲದೇ ಅಪಾರಮಟ್ಟದ ಆಸ್ತಿಪಾಸ್ತಿ ಹೊಂದಿರುವವರು. ಸಾವಿರಾರು ಎಕರೆ ಜಮೀನಲ್ಲದೇ, ಮಂಗಳೂರಿನಲ್ಲಿ ಹತ್ತಿಪ್ಪತ್ತು ಕಾಂಪ್ಲೆಕ್ಸ್ ಗಳನ್ನು ಕಟ್ಟಿಸಿಕೊಳ್ಳುವುದಲ್ಲದೇ ಒಂದಷ್ಟು ಹೋಟೆಲ್ ನಡೆಸುತ್ತಿದ್ದರು. ತಿಂಗಳಿಗೆ ಕೋಟಿ ಕೋಟಿ ಲಾಭ ಗಳಿಸುವ ಜನ, ಜೊತೆಗೆ ರಾಜಕೀಯ ಕ್ಷೇತ್ರದಲ್ಲಿಯೂ ಅಷ್ಟೇ ಹೆಸರು ಮಾಡಿ, ಮನೆಮಂದಿಯೆಲ್ಲಾ ಒಮ್ಮೊಮ್ಮೆ ಸ್ಥಳೀಯ ಶಾಸಕರಾಗಿದ್ದರು. ಲಂಭೋದರನ ತಂದೆ ವೆಂಕಟೇಶಭಟ್ಟರ ಕುಟುಂಬವೆಂದರೆ ಮಂಗಳೂರಿನಲ್ಲಿ ಏನೋ ವಿಶಿಷ್ಟವಾದ ಗತ್ತು-ಗಾಂಭೀರ್ಯವಿದೆ. ಅವರಿಂದ ಋಣ ತಿಂದ ಅನೇಕ ಹಳ್ಳಿಗಳಿವೆ, ಬಡ ಜನರು ತಮ್ಮ ಹೊಟ್ಟೆ ಹೊರೆದಿದ್ದಾರೆ. ಹತ್ತಿಪ್ಪತ್ತು ತಲೆಮಾರು ಕುಳಿತು ಉಣ್ಣುವಷ್ಟು ಆಸ್ತಿ ಮಾಡಿದವರೊಂದಿಗೆ ಕೆಲವು ಪುರಾವೆಯಿಲ್ಲದ ಊಹಾಪೋಹ ಮಾತುಗಳೂ ಅಂಟಿಕೊಂಡಿರುತ್ತವೆ ಎಂಬುದು ವಿಧಿಲಿಖಿತವೇನೋ? ಹಾಗೆಯೇ, ಈತನ ಬಳಿ ಇರುವ ಸಾವಿರಾರು ಎಕರೆ ಅಡಿಕೆ, ತೆಂಗಿನ ತೋಟಗಳೆಲ್ಲಾ ಇವನ ತಾತ ಬಡಬಗ್ಗರಿಂದ ಕಿತ್ತುಕೊಂಡಿದ್ದು ಎಂಬ ಅಪವಾದವೂ ಇದೆ. ಮಂಗಳೂರಿನ ದಕ್ಷಿಣದಂಚಿನಲ್ಲಿರುವ ಹತ್ತಾರು ಎಕರೆಯ ಅವನ ಮನೆ ಮೈದಾನವೆಲ್ಲಾ ಒಬ್ಬ ಬಡವನಿಗೆ ಸೇರಬೇಕು ಎಂಬ ವ್ಯಾಜ್ಯ ಇನ್ನೂ ಕೋರ್ಟಿನಲ್ಲಿ ರೆಕ್ಕೆ ಮುರಿದು ಬಿದ್ದಿದೆ. ದಾವೆ ಹೂಡಿದವರಿಗೆ ತಮ್ಮ ರಾಜಕೀಯ ಶಕ್ತಿ ಬಳಸಿಕೊಂಡು ಒಂದಷ್ಟು ಹಿಂಸೆಯೂ ಕೊಟ್ಟಾಗಿದೆ. ವೆಂಕಟೇಶಭಟ್ಟರ ಇಬ್ಬರು ಮಕ್ಕಳಲ್ಲಿ ಮೊದಲನೆಯವ ದಾಮೋಧರ. ಹೆಚ್ಚು ಓದಿಕೊಳ್ಳದಿರುವ ಕಾರಣ ಅಪ್ಪನ ಆಸ್ತಿ ಮತ್ತು ಉದ್ಯಮಗಳ ಹಣ ನಿರ್ವಹಣೆ ಮಾಡುವ ದೊಡ್ಡ ಹೊಣೆಗಾರಿಕೆ ಅವನ ಮೇಲಿದೆ. ಮಾಂಸ ಕಂಡರೆ ಒಮ್ಮೆಲೆ ಎಗರುವ ನಾಯಿಗಳಂತೆ ಇವನ ಸುತ್ತ ಸದಾ ಗೆಳೆಯರ ದಂಡೇ ಇರುತ್ತದೆ. ಅವನು ಹಲ್ಲುಕಿಸಿದು ಒದರುವ ನಗು ತರಿಸದ ಜಾಳು ಜಾಳು ಮಾತಿಗೂ ಎಲ್ಲರೂ ಕಿಸಕ್ಕನೇ ಜೋರಾಗಿ ನಕ್ಕುಬಿಡುತ್ತಾರೆ. ಎರಡನೆಯ ಮಗ ಲಂಬೋಧರ ಅಮೇರಿಕಾದಲ್ಲಿ ಓದಿ ಬಂದವನು, ಪ್ರತಿಷ್ಠಿತ ಕಂಪನಿಯೊಂದರಲ್ಲಿ ಲಕ್ಷಾಂತರ ರೂಪಾಯಿ ಸಂಬಳಕ್ಕೆ ನಿಂತಿರುವವನು. ಅವನು ದುಡಿದ ದುಡ್ಡಿನಲ್ಲಿ ಒಂದು ರೂಪಾಯಿಯೂ ಮನೆಗೆ ತಲುಪಿಲ್ಲ, ಬೇಕಾಗಿಯೂ ಇಲ್ಲ. ತನ್ನ ಸಂಬಳದಲ್ಲಿ ಬಟ್ಟೆ ಬದಲಿಸಿದಂತೆ ತಿಂಗಳಿಗೊಂದು ದುಬಾರಿ ಬೈಕ್ ಗಳನ್ನು ಕೊಂಡುಕೊಳ್ಳುತ್ತಾನೆ. ಹೊಸ ಮಾದರಿ ಕಾರ್ ಗಳು ಮಾರ್ಕೆಟ್ ಒಳಗಡೆ ಬಂದರೆ ಮೊದಲು ಕೊಂಡುಕೊಳ್ಳಲು ಹವಣಿಸುವ ಹುಡುಗ. ಇಷ್ಟೆಲ್ಲಾ ಶೋಕಿ ಇರುವವನಿಗೆ ವೇಶ್ಯೆಯರ ಹುಚ್ಚಿರುವುದಿಲ್ಲವೇ? ವಾರಕ್ಕೊಬ್ಬಳು ಅವನ ಮಗ್ಗುಲಲ್ಲಿರಬೇಕೆಂಬುದು ಅವನ ಗೆಳೆಯರ ಗುಸು ಗುಸು ಅಂಬೋಣ. ಇಂದಿನ ಜನಗಳಿಗೆ ಹಣವಿದ್ದರೆ ಸಾಕು ಗುಣ ಮೇಲ್ಮಟ್ಟದಂತೆ ಕಾಣುತ್ತದೆ ಎಂಬುದು ಜನಜನಿತ. ಇಷ್ಟೆಲ್ಲಾ ವಿಚಾರಗಳು ಸಾರ್ವಜನಿಕವಾಗಿ ಬೂದಿಯೊಳಗಿನ ಕೆಂಡದಂತಿದ್ದರೂ ಲಂಬೋಧರನಿಗೆ ಹೆಣ್ಣು ಕೊಡಲು ಅನೇಕ ಸಂಬಂಧಿಗಳು ದುಂಬಾಲು ಬೀಳುತ್ತಿದ್ದರು. ನಾಲ್ಕಾಣೆ ಕೊಟ್ಟು ತಂದ ಚಾಕೋಲೇಟ್ ಸಂಪೂರ್ಣವಾಗಿ ನಮ್ಮ ಹಕ್ಕಿನಲ್ಲಿರುತ್ತದೆ, ಇನ್ನೂ ನಾವು ಹುಟ್ಟಿಸಿದ ಮಕ್ಕಳು ನಾವು ಗುರುತು ಮಾಡಿದ ಹುಡುಗನನ್ನು ಮರುಮಾತನಾಡದೆ ಮದುವೆ ಮಾಡಿಕೊಳ್ಳಬೇಕೆಂಬುದು ಅವರೆಲ್ಲರುವಾಚ. ಅವನು ತೀರಿಕೊಂಡರೂ, ವಿಚ್ಛೇದನ ನೀಡಿದರೂ ಕರಗದಷ್ಟು ಆಸ್ತಿ ದೊರಕುವುದೆಂಬ ಅತಿಯಾಸೆ ಕೆಲವರದು.

ಶಾಂತಮ್ಮ ಮತ್ತು ಲಕ್ಷ್ಮೀಶಭಟ್ಟರು ಎಲ್ಲವನ್ನೂ ಆಣಿಗೊಳಿಸಿದವರಂತೆ ಕಂಡು ಬಂದು ಸ್ವಲ್ಪ ಸಮಾಧಾನಗೊಂಡರು. ಮಧುಮಗಳಾಗಬೇಕಾಗಿರುವ ಕಾವ್ಯಳನ್ನೇ ಅವರು ಮರೆತುಬಿಟ್ಟಿದ್ದರು. ‘ಹಾ! ಎಂಥ ಜನ ನಾವು’ ಎಂದುಕೊಂಡು ಕಾವ್ಯಳ ಕೋಣೆಗೆ ಅವಸವಸರವಾಗಿ ಹೋದರು. ಶಾಂತಮ್ಮಳ ಎರಡನೆ ಮಗಳಾದ ಕೀರ್ತಿ ಅಕ್ಕನಿಗೆ ಶೃಂಗಾರ ಮಾಡುತ್ತಿದ್ದಳು. ಬಾಯಿಯಲ್ಲಿ ತಲೆಪಿನ್ನು ಕಚ್ಚಿಕೊಂಡು ತಲೆ ಕೂದಲನ್ನು ಬಾಚಣಿಗೆಯಿಂದ ಎಳೆದೆಳೆದು ಬಾಚುತ್ತಿದ್ದಳು. ಒಮ್ಮೆ ಕಾವ್ಯಳನ್ನು ಹಿಂತಿರುಗಿಸಿ ಮುಖ ಮೇಲಕ್ಕೆತ್ತಿದ ಶಾಂತಮ್ಮ ಒಮ್ಮೆಲೆ ದಿಗ್ಭ್ರಾಂತರಾದರು. ಹಳೆಯ ಗೋಡೆಯ ಮೇಲೆ ಸುರಿದ ಮಳೆ ನೀರು ರೈಲುಕಂಬಿ ಆಕಾರ ಮೂಡಿಸುವಂತೆ ಇವಳ ಕೆನ್ನೆಯ ಮೇಲೆಯೂ ನದಿ ಹರಿದುಹೋದ ಗುರುತಿದೆ. ಮೇಕಪ್ ಗಿಂತ ಕಣ್ಣೀರೇ ಹೆಚ್ಚಾಗಿತ್ತು! ಕಣ್ಣಲ್ಲಿ ಮತ್ತೂ ನೀರು ತುಂಬಿಕೊಂಡಿತು. ಮುಖದಲ್ಲಿ ಕಳೆಯಿಲ್ಲ. ಕಿವಿಗೆ ತೊಡಿಸಿದ್ದ ಬೆಂಡೋಲೆ ತೂಕ ಹೆಚ್ಚಾಗಿ ತೂಗಿದಂತೆ ಕಂಡುಬಂತು, ಎದೆ ಮೇಲೊದಿಸಿದ್ದ ಚಿನ್ನದ ನೆಕ್ಲೇಸು, ಸರಗಳು ಯಾಕೋ ಹೊಳೆದಂತೆ ಕಾಣಿಸಲಿಲ್ಲ. ಈಗ ಕಾವ್ಯಳಿಗೆ ವಯಸ್ಸು ಇಪ್ಪತ್ತು ವರ್ಷ, ಇಷ್ಟು ವರ್ಷ ಲಾಲಿಸಿ ಪಾಲಿಸಿದ್ದ ತಾಯಿಗೆ ಆಕೆ ಈ ರೀತಿಯಾಗಿ ಕಂಡಬಂದದ್ದು ನೆನಪಿಲ್ಲ.

‘ಯಾಕೆ ಕಂದಾ? ಏನಾಯಿತು, ಈ ಸಂಬಂಧ ಇಷ್ಟವಿಲ್ಲವೇ? ಬೇರೆ ಯಾರನ್ನಾದರೂ ಇಷ್ಟಪಟ್ಟಿರುವೆಯಾ? ಯಾವುದೋ ಜನ್ಮದಲ್ಲಿ ನಾವು ಮಾಡಿದ್ದ ಪುಣ್ಯದಿಂದ ಇಂದು ಈ ಸಂಬಂಧ ದೊರಕಿದೆ, ಅವರು ಅಷ್ಟು ಶ್ರೀಮಂತಿಕೆಯಲ್ಲಿದ್ದರೂ ಸೊಸೆಯಾಗಿ ಬಡವರ ಮನೆಯ ಹುಡುಗಿಯೇ ಬೇಕೆಂದು ಹಂಬಲಿಸಿ ಬರುವವರಿದ್ದಾರೆ, ಜೊತೆಗೆ ನಿನ್ನ ಸೌಂದರ್ಯವೂ ಅವರಿಗೆ ಇಷ್ಟವಾಗಿದೆ. ನಮ್ಮಂತಹ ಜನ ಅವರಿಗೆ ಸಾವಿರ ಸಾವಿರ ಇದ್ದಾರೆ, ನಮ್ಮ ಅದೃಷ್ಟಕ್ಕೆ ನಮಗೆ ಒಬ್ಬರಾದರೂ ಅಂತಹವರು ದೊರಕಿದ್ದಾರೆ, ನಿನ್ನ ಜೀವನದಲ್ಲಿ ಸುಖತುಂಬಿ ಬರುತ್ತದೆ. ಖುಷಿ ಪಡುವ ವಿಚಾರಕ್ಕೆ ಅಳುವುದಾದರೂ ಯಾಕೆ?’ ಎಂದು ಕೇಳಿದರು.
ಕಾವ್ಯಳಿಗೆ ಅಳು ಜೋರಾಯಿತು, ಕಣ್ಗಳು ಮಳೆ ಹನಿಗೆ ಸಿಲುಕಿದ ಮೈಬಟ್ಟೆಯಂತೆ ಮತ್ತೂ ಒದ್ದೆಯಾದವು. ಅವಳನ್ನು ಸುತ್ತಿಕೊಂಡ ಈ ವ್ಯವಸ್ಥೆಗೆ, ನಮ್ಮನ್ನು ಕಾಯುತ್ತಿರುವ ದೇವರಿಗೆ, ಅರ್ಥ ಮಾಡಿಕೊಳ್ಳದ ಈ ಹಿರಿಯರಿಗೆ, ಎಲ್ಲರಿಗೂ ತಿರಸ್ಕಾರ ಕೂಗುವಂತಹ ನೋವು ಮುಖದಲ್ಲಿತ್ತು. ಜೊತೆಗೆ ನೀರವತೆ ತುಂಬಿದ ಅಳುವಿತ್ತು. ಸ್ಥಿರ ದೃಷ್ಟಿಯಿದ್ದರೂ ಮನಸ್ಸನ್ನು ಎಲ್ಲೋ ತೇಲಿಸಿ ‘ಏನೂ ಇಲ್ಲವೆಂಬಂತೆ’ ತಲೆಯಾಡಿಸಿದಳು. ಅವಳ ಮೌನ ಶಾಂತಮ್ಮಳನ್ನು ಕೊಂಚ ಅಲುಗಾಡಿಸಿತು.

ಕಾವ್ಯ, ನಿಜಕ್ಕೂ ಸುಂದರ ಕವಿತೆಯಷ್ಟೇ ಮೃದು ಸ್ವಭಾವದ ಹೆಣ್ಣುಮಗಳು. ಕೈತೊಳೆದು ಮಟ್ಟಬೇಕಾದಂತಹ ಸೌಂದರ್ಯವತಿ. ಅವಳಿಗೆ ಬುದ್ಧಿ ಚಿಗುರೊಡೆದಾಗಿಂದಲೂ ಮಾತಿಗಿಂತ ಹೆಚ್ಚು ಮೌನವನ್ನು ಪ್ರೀತಿಸಿದಾಕೆ. ತಲೆಯೆತ್ತಿ ಮಾತನಾಡದಷ್ಟು ಸಂಕೋಚ ಸ್ವಭಾವದಳು, ಹುಡುಗ ಜಾತಿಯೆಂದರೆ ಕೊಂಚ ಭಯ ಪಡತ್ತಿದ್ದವಳಾದರೂ ಯಾರಾದರೂ ಹುಡುಗರು ಗೌರವಪೂರ್ವಕವಾಗಿ ಮಾತನಾಡಿಸಿದರೆ ಮನಸ್ಸಿಟ್ಟು ಉತ್ತರ ಕೊಡುತ್ತಿದ್ದವಳು. ಪ್ರಶ್ನೆಗೆ ಕೇವಲ ಉತ್ತರವಷ್ಟೆ. ಹಲ ಸಮಯದಲ್ಲಿ ಅದು ‘ಹೂ, ಊಹೂಂ’ ನಲ್ಲಿ ಮುಗಿದುಹೋಗುತ್ತಿತ್ತು. ಅಹಂಕಾರ ಸ್ವಭಾವವಿಲ್ಲದ ಈ ಮೃದು ಮನಸ್ಸನ್ನು ಎಲ್ಲಾ ಗೆಳೆಯರೂ ಗೌರವಾಧಾರದಲ್ಲಿ ಇಷ್ಟಪಟ್ಟರೂ ಈಕೆಗೆ ಸ್ನೇಹವೆಂದರೂ ಒಂದು ರೀತಿಯ ಅಲರ್ಜಿ. ಆದರೆ ಶಾಲಾ ಕಾಲೇಜು ಪರೀಕ್ಷೆಗಳಲ್ಲಿ ಇವಳೇ ಪ್ರಥಮ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರತಿ ವರ್ಷ ಬಾಚಿಕೊಂಡ ಅನೇಕ ಬಹುಮಾನಗಳನ್ನು ಶಾಂತಮ್ಮ ಷೋಕೇಸಿನಲ್ಲಿ ಸ್ವಲ್ಪ ಅಹಮ್ಮಿಂದಲೇ ಜೋಡಿಸಿಟ್ಟಿದ್ದಾರೆ. ಮೈನೆರೆದು ದೊಡ್ಡವಳಾದ ಕಾಲದಿಂದಲೂ ಆಕೆ ಶಾಲಾ, ಕಾಲೇಜು ಮುಗಿಸಿ ಮನೆಯವರೆವಿಗೂ ತಲೆ ಬಗ್ಗಿಸಿ ನಡೆದುಕೊಂಡೇ ಬಂದವಳು. ಇದೇ ಸ್ವಭಾವದ ತಂಗಿ ಕೀರ್ತಿ ಮತ್ತು ಕಾವ್ಯಳಿಗೆ ಆ ಊರಿನ ಬಡಾವಣೆಯಲ್ಲಿ ವಿಶೇಷ ಗೌರವ ಮಮತೆಯಿತ್ತು. ನನ್ನ ಮಕ್ಕಳು ಅಪರಂಜಿ ಕಣ್ರೋ ಎಂದು ಸಾರುವುದು ಕುಡುಕ ಅಪ್ಪನ ಪ್ರತಿದಿನದ ಹವ್ಯಾಸ.

ಮೊನ್ನೆ ಮೊನ್ನೆ ‘ಒಂದು ಸಂಬಂಧ ನಿನ್ನನು ನೋಡಲು ಮುಂದಿನ ವಾರ ಬರುತ್ತಿದೆ ಮಗಳೇ’ ಎಂದು ಶಾಂತಮ್ಮ ಹೇಳಿದಾಗ ಕಾವ್ಯ ಬೆಚ್ಚಿ ಕುಸಿದಿದ್ದಳು. ತನ್ನ ಸ್ವಭಾವಕ್ಕೆ ಹೋಲುವ ಗಂಗಾಧರ ಎಂಬುವ ಹುಡುಗನ ಪ್ರೇಮಪಾಶಕ್ಕೆ ಕಾವ್ಯ ಒಗ್ಗಿಕೊಂಡಿದ್ದಳು. ಇಷ್ಟು ಒಳ್ಳೆಯತನದ, ಮಾತನ್ನು ಇಷ್ಟ ಪಡದ ಹುಡುಗಿಯೊಬ್ಬಳು ಒಂದು ಹುಡುಗನನ್ನು ಆರಿಸಿಕೊಂಡಿದ್ದಾಳೆಂದರೆ ಅಲ್ಲಿ ಅಷ್ಟಾಗಿ ಮೋಸವಿರುವುದಿಲ್ಲ. ಆತನ ರೂಪಕ್ಕಿಂತ ಸನ್ಮಾರ್ಗವೇ ಈಕೆಗೆ ಇಷ್ಟವಾಗಿತ್ತು. ಕುಡುಕ ಅಪ್ಪ ಪ್ರತಿದಿನ ಅಮ್ಮನನ್ನು ಬಡಿದು, ಪಡಸಾಲೆಯಲ್ಲಿ ಕುಳಿತು ಊರಿಗೇ ಕೇಳಿಸುವಂತೆ ಅಶ್ಲೀಲ ಪದಗಳನ್ನುಪಯೋಗಿಸಿ ಬೊಗಳುವುದು, ಮನೆಯೊಳಗೆ ಬಾರದೆ ಸತಾಯಿಸುವುದನ್ನೆಲ್ಲ ಕಂಡಿದ್ದ ಕಾವ್ಯಳಿಗೆ ಯಾವುದೇ ದುಶ್ಚಟವಿಲ್ಲದ, ದುಶ್ಚಟವನ್ನು ತೀವ್ರವಾಗಿ ವೀರೋಧಿಸುತ್ತಿದ್ದ ಗಂಗಾಧರ ಹತ್ತಿರವಾಗಿಬಿಟ್ಟ. ಸಂಜೆಯಾದರೆ ಮತ್ತಿನಲ್ಲಿ ಮೈಮರೆಯುವ ಅಪ್ಪನ ಭಯ ಆಕೆಗೆ ಚೂರು ಇರಲಿಲ್ಲ. ತಿನ್ನಲು ಉಡಲು ಮನೆಗೆ ತಂದು ಸುರಿದುಬಿಟ್ಟರೆ ಆತನ ಕೆಲಸ ಮುಗಿಯಿತಷ್ಟೇ, ಮತ್ತಾವುದೇ ವಿಚಾರಕ್ಕೂ ತಲೆ ಕೆಡಿಸಿಕೊಂಡವನಲ್ಲ. ಅಮ್ಮನನ್ನು ಒಪ್ಪಿಸಿಕೊಂಡರೆ ಮುಗಿಯಿತು ಎಂದುಕೊಂಡಿದ್ದಳಷ್ಟೆ. ಜೊತೆಗೆ ಹುಟ್ಟಿದ ಕಾಲದಿಂದಲೂ ಕೇವಲ ಮಕ್ಕಳ ಸುಖವನ್ನು ಬಯಸಿದ ಅಮ್ಮ ತನ್ನ ಮುಂದಿನ ಸುಖಕ್ಕೆ ಅಡ್ಡಿಯಾಗಳೆಂಬ ಗಾಢನಂಬಿಕೆ ಕಾವ್ಯಳಲ್ಲಿತ್ತು. ಅಂದು ಸಂಜೆ, ಧೈರ್ಯಮಾಡಿ ಅಮ್ಮನ ಬಳಿಗೆ ಹೋಗುವ ನಿರ್ಧಾರ ಕೈಗೊಂಡಳು. ಎಲ್ಲವನ್ನೂ ಹೇಳಿ ಒಮ್ಮೆ ಅತ್ತುಬಿಟ್ಟರೆ ಅಮ್ಮ ನಿರರ್ಗಳಳಾಗುತ್ತಾಳೆಂಬ ದೃಢ ನಂಬಿಕೆ ಕಾವ್ಯಳದು. ಶಾಂತಮ್ಮ ತಮ್ಮ ಮಕ್ಕಳಿಗೆ ಅಷ್ಟೇ ಸ್ವಾತಂತ್ರ್ಯ ನೀಡಿ ತುಂಬಾ ಆತ್ಮೀಯತೆಯಿಂದ ಬೆಳೆಸಿದ್ದರು. ಎಂದಿಗೂ ಕೈಯೆತ್ತಿ ಒಡೆದವರಲ್ಲ, ಬಾಯಿ ತಪ್ಪಿಯೂ ಬೈದವರಲ್ಲ. ಯಾಕೋ ಕೈಕಾಲುಗಳು ಅದುರತೊಡಗಿದವು. ‘ಆಗುವುದಾಗಲಿ, ಧೈರ್ಯವಾಗಿ ಹೇಳಿಬಿಡು’ ಎಂಬ ಗಂಗಾಧರ್ ನ ಮಾತು ನೆನೆಪಿಸಿಕೊಂಡು, ಒಮ್ಮೆ ಉಸಿರನ್ನೆಳೆದು ನಿಧಾನವಾಗಿ ಹೊರ ಹರಿಸಿ ಅಮ್ಮನ ಬಳಿ ಹೊರಟಳು.

‘ಅಮ್ಮಾ, ನಾನು ನಿನ್ನಲ್ಲಿ ಒಂದು ಪ್ರಶ್ನೆ ಕೇಳುತ್ತೇನೆ, ಉತ್ತರಿಸುವೆಯಲ್ಲವೇ?’
‘ಕೇಳು ಮಗಳೇ’
‘ನಿನ್ನ ಮಕ್ಕಳ ಖುಷಿಯಷ್ಟೇ ನಿನಗೆ ಮುಖ್ಯವಲ್ಲವೇ? ಮದುವೆಯ ನಂತರ ಮಕ್ಕಳು ಗಂಡನೊಂದಿಗೆ ಅಮೃತವನ್ನೋ ಅಂಬಲಿಯನ್ನೋ ಕುಡಿದು ಖುಷಿಯಾಗಿರುವುದನ್ನ ನೀನು ಇಷ್ಟ ಪಡುತ್ತೀಯಲ್ಲವೇ?
‘ಹೌದು ಮಗಳೆ, ಮತ್ತಿನ್ನೇನು? ನನ್ನೆರಡು ಮಕ್ಕಳೇ ನನ್ನ ಕಣ್ಣುಗಳು’
‘ಹಾಗಾದರೆ, ನಾನು ಒಬ್ಬ ಅನ್ಯಜಾತಿ ಹುಡುಗನನ್ನು ಪ್ರೀತಿಸುತ್ತಿದ್ದೇನೆ, ಅವನನ್ನು ಬಿಟ್ಟು ಬದುಕಲು ಸಾಧ್ಯವಾಗುತ್ತಿಲ್ಲ, ಅವನ ಜಾಗದಲ್ಲಿ ಬೇರೆ ಯಾರನ್ನೂ ಊಹಿಸಿಕೊಳ್ಳುವ ಪರಿಸ್ಥಿತಿಯಲ್ಲಿ ನಾನಿಲ್ಲ, ನೀನು ಒಪ್ಪಿಕೊಳ್ಳಬೇಕು’
ಶಾಂತಮ್ಮ ಬೆಚ್ಚಿಬಿದ್ದರು, ಹೂ ಪೋಣಿಸುತ್ತಿದ್ದ ನೂಲುಂಡೆಯನ್ನು ಎಸೆದುಬಿಟ್ಟರು.
‘ಏನಿದು ಮಗಳೇ, ಈ ವಿಚಾರ ನಿಮ್ಮ ಅಪ್ಪನ ಕಡೆಯವರಿಗೆ ತಿಳಿದರೆ ಸುಮ್ಮನಿರುವರೇ? ಅವಳು ಓದಿದ್ದು ಸಾಕು ಮನೆಯಲ್ಲಿರಿಸಿ ಎಂದು ಹೇಳುವುದಲ್ಲದೇ, ಜೈಲಿಗೆ ಹೋಗುವುದನ್ನೂ ಲೆಕ್ಕಿಸದೆ, ಆ ಹುಡುಗನ ಜೀವ ತೆಗೆಯುವುದಲ್ಲದೇ, ನಿನಗೆ ಇನ್ನೊಂದು ವಾರದಲ್ಲಿಯೇ ಮದುವೆ ಮಾಡಿಯಾರು’
‘ನೀವು ಯಾರಿಗೇ ಮದುವೆ ಮಾಡಿದರೂ ನನ್ನ ಹೆಣ ಬೀಳುತ್ತದೆ, ಆತ ಕೀಳುಜಾತಿಯೇನಲ್ಲ, ನಮ್ಮ ಜಾತಿಮಟ್ಟಕ್ಕಿರುವವನು, ಹೆಂಡತಿ ಮಕ್ಕಳನ್ನು ಹಸಿವಿಗೆ ಬೀಳಿಸದಷ್ಟು ದುಡಿಯುತ್ತಾನೆ, ಅಪ್ಪನನ್ನು ಅವನೇ ಒಪ್ಪಿಸುತ್ತೇನೆ ಎಂದು ಮಾತು ಕೊಟ್ಟಿದ್ದಾನೆ, ನೀನು ಸುಮ್ಮನಿರು’

ಶಾಂತಮ್ಮ ಬೆವರತೊಡಗಿದರು. ‘ಪ್ರೀತಿಸಿ ಮದುವೆಯಾದವರು ಹೆಚ್ಚು ದಿನ ಒಟ್ಟಿಗೆ ಬಾಳುವುದಿಲ್ಲ, ಅವರ ಮಕ್ಕಳಿಗೆ ಸಂಬಂಧ ಗೊತ್ತು ಮಾಡಿಕೊಳ್ಳುವುದಷ್ಟು ಸುಲಭವಲ್ಲ, ಯಾವುದೇ ಕಾರ್ಯಕ್ರಮ ಪುನಸ್ಕಾರಗಳಿದ್ದರೆ ಸಂಪ್ರದಾಯದ ವಿಚಾರ ಬಂದಾಗ ಅಂತವರನ್ನು ಒಟ್ಟಿಗೆ ಸೇರಿಸುವುದಿಲ್ಲ, ನಾವೇ ನೋಡುವ ಸಂಬಂಧಿಕ ಹುಡುಗರು ಸುಸಂಸ್ಕೃತರು ಮತ್ತು ಒಂದೇ ಜಾತಿಯವನಾಗಿರುವುದರಿಂದ ಪೂರ್ವಾಪರ ತಿಳಿದಿರುತ್ತದೆ’ ಎಂದರು.
‘ಲವ್ ಮ್ಯಾರೇಜನ್ನ ವಿರೋಧಿಸುವ ಕಾಲ ಮುಗಿಯಿತಮ್ಮ, ಯಾರೇ ಪ್ರೀತಿ ಮಾಡಲಿ, ಎಲ್ಲರ ರಕ್ತದ ಬಣ್ಣ ಕೆಂಪಲ್ಲವೇ? ಒಂದೊಂದು ಜಾತಿ ಜನಕ್ಕೊಂದೊಂದು ಬಣ್ಣದ ರಕ್ತವಿದೆಯೇ? ಆತನನ್ನು ಬಿಟ್ಟು ಬೇರೆಯವರ ಜೊತೆ ಬಾಳಿದರೆ ದೆವ್ವದ ಮನೆಯಲ್ಲಿ ಬಾಳಿದಂತೆ, ನಾನು ಬದುಕುವುದಿಲ್ಲವಷ್ಟೆ’
ಶಾಂತಮ್ಮನ ಕೈಕಾಲುಗಳು ನಡುಗತೊಡಗಿದವು. ‘ಬೇಡ ಮಗಳೇ, ನಿನ್ನ ವಯಸ್ಸಿನವರಿಗೆ ಅದರ ಅರಿವಾಗುವುದಿಲ್ಲ, ಆತನನ್ನು ಕೂಡಲೇ ಮರೆತುಬಿಡು, ನನ್ನ ಮುಂದೆಯೇ ಫೋನಾಯಿಸಿ ಯಾರನ್ನಾದರೂ ಮದುವೆಯಾಗಿ ಸುಖವಾಗಿರು ಎಂದು ಹೇಳಿಬಿಡು, ನಾನು, ನಿನ್ನಪ್ಪ ಬೀದಿಯಲ್ಲಿ ತಲೆಯೆತ್ತಿ ನಡೆಯಲಾಗುವುದೇ? ಮದುವೆ ಸಮಾರಂಭಗಳಿಗೆ ಹೋದಾಗ ಜನಗಳ ಬಳಿ ಮುಖಕೊಟ್ಟು ಮಾತನಾಡುವುದಾದರೂ ಹೇಗೆ, ಮಗಳು ಯಾರನ್ನು ಮದುವೆಯಾದಳು ಎಂದರೆ ಹೇಳುವುದಾದರೂ ಏನು? ಬಾಯಿ ಒದರಿದಂತೆ ನಿನ್ನ ಬಗ್ಗೆ ಯಾರಾದರೂ ಮಾತನಾಡಿಕೊಂಡರೆ ನಮ್ಮಿಂದ ಬದುಕುಳಿಯಲು ಸಾಧ್ಯವಿಲ್ಲ’ ಎಂದ ಶಾಂತಮ್ಮ ನಡುಗುವ ಕೈಗಳಿಂದ ಮೊಬೈಲ್ ಹುಡುಕಿದರು.
‘ನಮ್ಮಂತೆ ಅವರೂ ಮಾಂಸ ತಿನ್ನದ ಜಾತಿ, ಆದುದರಿಂದ ನಡೆಯುತ್ತದೆ ಮಮ್ಮಿ, ನೀವುಗಳು ಹುಟ್ಟಿಸಿದ ಸಂಪ್ರದಾಯಗಳನ್ನು ನೆಲ ಬಗೆದು ಹೂತುಬಿಡಿ, ಮೊದಲಾಗಿ ಅದೇನು ಆಕಾಶದಿಂದ ಉದುರಿದ ನಿಜ ಮಳೆ ಹನಿಗಳಲ್ಲ’
‘ಮೊದಲು ನಿಮ್ಮಕ್ಕನ ನಿಶ್ಚಿತಾರ್ಥ ಮುಗಿಯಲಿ, ನಂತರ ನೋಡೋಣ’ ವೆಂದು ಆ ಕ್ಷಣದಾವೇಗದಿಂದ ತಪ್ಪಿಸಿಕೊಂಡರು ಶಾಂತಮ್ಮ. ಕೀರ್ತಿಗೆ ಮನದೊಳಗಿನ ಭಾರ ಹೊರಗೆ ಹಾಕಿ ಹಗುರಗೊಂಡಂತೆನಿಸಿದರೂ ಮುಂದೇನಾಗುವುದೋ ಏನೋ ಎಂದು ಮನಸ್ಸಿನಲ್ಲಿಯೇ ಚಡಪಡಿಸಿಕೊಂಡಳು !

ಸ್ವ-ಪ್ರೇಮ ವಿಚಾರವನ್ನು ಅಮ್ಮನಿಗೆ ಧೈರ್ಯ ಮಾಡಿ ಮುಟ್ಟಿಸಲು ಮುಂದಾಗುವ ಹೊತ್ತಿಗೆ ತಂಗಿ ಕೀರ್ತಿ ಮತ್ತು ಅಮ್ಮನ ಮಾತುಗಳನ್ನು ಕೇಳಿದ ಕಾವ್ಯ ಅಲ್ಲೇ ಕುಸಿದುಬಿಟ್ಟಳು. ಕೈಕಾಲುಗಳು ಮತ್ತೂ ನಡುಗ ತೊಡಗಿದವು. ‘ಒಂದೇ ಮಟ್ಟದ ಜಾತಿಯವನನ್ನೇ ಅಮ್ಮ ಒಪ್ಪಲಿಲ್ಲ, ಆದರೆ ನಾನು ಪ್ರೇಮಿಸಿರುವುದು ಈ ಪರಮ ನೀಚ ಸಮಾಜ ಕರೆದ ಕೀಳು ಮಟ್ಟದ ಜಾತಿಯ ಹುಡುಗನನ್ನು. ನೆರೆಮನೆಯ ಸಾವಿತ್ರಿ ಒಮ್ಮೆ ಆ ಜಾತಿಯವನೊಂದಿಗೆ ಮಾತನಾಡಿದ್ದು ಕಂಡ ಕೆಲವರು ಊರೆಲ್ಲೆಲ್ಲಾ ಮದುವೆಯೇ ಆಗಿಹೋಯಿತೆನ್ನುವಂತೆ ಗುಲ್ಲೆಬ್ಬಿಸಿದ್ದರು. ಆತನನ್ನು ಮದುವೆಯಾದರೆ ಈ ಊರೇ ನಮ್ಮ ಮೇಲೆ ಬೀಳಬಹುದು, ಅಪ್ಪ ಅಮ್ಮ ಜೀವ ಕಳೆದುಕೊಳ್ಳಬಹುದು. ಅಪ್ಪನ ಮದ್ಯಪಾನ ಮಿತಿ ಮೀರಬಹುದು. ಸಕ್ಕರೆ ಖಾಯಿಲೆ ಹೆಚ್ಚಾಗಿ ಮೂತ್ರಕೋಶಕ್ಕೆ ತೊಂದರೆಯಾಗುತ್ತಿರುವುದನ್ನು ತಡೆಗಟ್ಟಲು ನುಂಗುತ್ತಿರುವ ಮಾತ್ರೆಗಳನ್ನು ಬೀಸಾಡಿಬಿಡಬಹುದು. ಹಾಗಂತ ಗಂಗಾಧರ್ ನನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಜೊತೆಗೆ ಆತನೇನು ಸಮಾಜದ ಉನ್ನತಸ್ಥಾನದಲ್ಲಿರುವ ವ್ಯಕ್ತಿಯೂ ಅಲ್ಲ. ಸೆಲೆಬ್ರಿಟಿಗಳು ಧರ್ಮ ಜಾತಿಗಳನ್ನು ಮೀರಿದರೆ ದೊಡ್ಡ ಸುದ್ದಿಯಾಗುವುದಿಲ್ಲ, ಇಂತಹ ಸಲ್ಲದ ವಿಚಾರಗಳನ್ನು ಹುಟ್ಟುಹಾಕುವ ಪರಮನೀಚ ಜನಗಳು ಆ ಸಮಯದಲ್ಲಿ ತೆಪ್ಪಗಾಗುವುದು ಈ ದೇಶದ ಅದೃಷ್ಟವೋ ದುರಂತವೋ ತಿಳಿಯದು. ಆದರೆ, ಅಮ್ಮನಿಗೆ ಈ ವಿಚಾರ ಮುಟ್ಟಿಸಿ ನಿಶ್ಚಿತಾರ್ಥವನ್ನು ತಡೆಯುವುದಾದರೂ ಹೇಗೆ? ಗೊಂದಲಕ್ಕೆ ಬಿದ್ದಳು ಕಾವ್ಯ. ಮನಸ್ಸು ಅದುರತೊಡಗಿತು. ಅಷ್ಟಕ್ಕೆ ಅಲ್ಲಿಗೆ ಬಂದ ಅಮ್ಮನ ಮೊಗದಲ್ಲಿ ಗಾಬರಿ ಗೊಂದಲವಿತ್ತು. ಕಾವ್ಯಳ ಕಣ್ಣಲ್ಲಿ ಜಿನುಗಿದ ನೀರನ್ನು ಕಂಡು ಮತ್ತೂ ಗಾಬರಿಗೊಂಡ ಶಾಂತಮ್ಮ ‘ಏನಾಯಿತು ಕಂದ’ ಎಂದರು. ತುಟಿಬಿಚ್ಚದ ಕಾವ್ಯ ಏನೂ ಇಲ್ಲವೆಂಬಂತೆ ತಲೆಯಾಡಿಸಿದಳು. ಮುಖದಲ್ಲಿ ನಗು ಸತ್ತು ದುಃಖ ಉಮ್ಮಳಿಸಿಕೊಂಡಿತ್ತು.

ಅಪಘಾತದಂತೆ ಘಟಿಸಿದ ಈ ಘಟನೆಯಿಂದ ವಿಚಲಿತಳಾದ ಕಾವ್ಯ ಓಡೋಡಿ ಬಂದು ಹಾಸಿಗೆ ಮೇಲೆ ಬಿದ್ದುಕೊಂಡಳು. ಭಯ ಉಸಿರಾಟವನ್ನು ಬಿಗಿಗೊಳಿಸಿತ್ತು. ಕೂಡಲೇ ಗಂಗಾಧರನಿಗೆ ಫೋನಾಯಿಸಿ ಈ ಯಾವತ್ತೂ ವಿಚಾರಗಳನ್ನು ಮುಟ್ಟಿಸಿದೊಡನೆ ಆತನೂ ಬೆಚ್ಚಿಬಿದ್ದ. ತಂಗಿ ಇಷ್ಟಪಟ್ಟಿರುವ ನಿಮ್ಮ ಮಟ್ಟದ ಜಾತಿಯವನನ್ನೇ ಒಪ್ಪದವರು ನನ್ನನ್ನು ಒಪ್ಪುತ್ತಾರೆಯೇ ಎಂಬ ಗೊಂದಲ ಮುಂದಿಟ್ಟ. ನಾನೇ ಬಂದು ಮಾತನಾಡೋಣವೆಂದರೆ ನನ್ನದು ನಿಮ್ಮ ಮನೆ ಹೊಸ್ತಿಲು ದಾಟದ ಜಾತಿ, ನಿಮ್ಮವರ ಹೋಟೆಲ್ ಲೋಟಗಳನ್ನು ಮುಟ್ಟದ ಜನ ಎಂದು ಅಳಲು ಪ್ರಾರಂಭಿಸಿದವನು ‘ಏನೇ ಆಗಲಿ, ನಾಳೆಯೇ ನಿಮ್ಮ ಮನೆಗೆ ಬಂದು ನೇರವಾಗಿಯೇ ಮಾತನಾಡಿಬಿಡುತ್ತೇನೆ’ ಎಂದು ನಡುಗುತ್ತ ಹೇಳಿದ ಮಾತಿಗೆ ಕಾವ್ಯ ತಡೆಯಾದಳು. ‘ಅವಸರ ಬೇಡ, ಇಂದು ಸಂಜೆ ಅಮ್ಮನೊಡನೆ ನಾನೇ ಮಾತನಾಡುತ್ತೇನೆ’ ಎಂದು ಹೇಳಿದವಳೇ ಫೋನಿಟ್ಟಳು.

ಕಣ್ಮುಚ್ಚಿಕೊಂಡ ಕಾವ್ಯಳಿಗೆ ನಿದ್ದೆ ಕೂಡಿಬರಲಿಲ್ಲ. ತಂಗಿಯೂ ಪ್ರೇಮಪಾಶಕ್ಕೆ ಕತ್ತೊಡ್ಡಿರುವುದು, ಜೊತೆಗೆ ಅಮ್ಮ ಮತ್ತು ಅವಳ ನಡುವಿನ ಸಂಭಾಷಣೆ, ನಿನಗೆ ಬೇರೆ ಮದುವೆ ಮಾಡುವುದಲ್ಲದೇ, ಜೈಲಿನ ವಾಸ ಅನುಭವಿಸಿದರೂ ಸರಿಯೇ ಆತನನ್ನು ಕೊಲೆ ಮಾಡಿ ಬಿಡುತ್ತಾರೆ ಎಂಬ ಮಾತುಗಳು ಕಿವಿಯಲ್ಲಿ ಗುಯ್ ಗುಡುತ್ತಿತ್ತು. ‘ನೀನಿಲ್ಲದಿದ್ದರೆ ಕ್ಷಣಮಾತ್ರವೂ ನಾನು ಬದುಕಲೊಲ್ಲೆ, ತಂದೆಯನ್ನು ಕಳೆದುಕೊಂಡ ನನಗೆ ಮತ್ತು ನನ್ನ ಮುದಿತಾಯಿಗೆ ನೀನೇ ತಂದೆ ತಾಯಿ ಎಲ್ಲಾ’ ಎಂಬ ಗಂಗಾಧರನ ಮಾತು ನೆನಪಿಗೆ ಬಂದು ಉಮ್ಮಳಿಸಿ ಉಮ್ಮಳಿಸಿ ಅಳತೊಡಗಿದಳು. ಗಂಗಾಧರ್ ತುಂಬಾ ಭಾವುಕ ಜೀವಿ. ಬಡತನದಲ್ಲಿ ಬೆಳೆದವನು ಮತ್ತು ಅಷ್ಟೇ ಕಷ್ಟವನ್ನು ನುಂಗಿರುವವನು. ಆತನೊಡನೆ ಒಂದು ದಿನವಾದರೂ ಕಾವ್ಯ ಫೋನಿನಲ್ಲಿ ಮಾತನಾಡದಿದ್ದರೆ ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ಬೆಚ್ಚಿ ಬೆಚ್ಚಿ ಬೀಳುತ್ತಿದ್ದ.

ಅಷ್ಟಕ್ಕೇ ಯಾರೋ ಕೋಣೆಯ ಬಾಗಿಲು ಬಡಿದರು. ಕಣ್ಣೊರೆಸಿಕೊಂಡು ಬಾಗಿಲು ತೆರೆದಾಗ ‘ಅಮ್ಮ, ಅಜ್ಜಿ ಮತ್ತು ಚಿಕ್ಕಮ್ಮ’ ಒಟ್ಟಿಗೆ ಕೋಣೆಯ ಒಳಗಡೆ ಬಂದರು.
‘ಯಾಕಮ್ಮಾ ಮತ್ತೆ ಮಂಕಾಗಿದ್ದಿ’ ಶಾಂತಮ್ಮ ಕೇಳಿದಳು
ತುಟಿ ತೆರೆಯದ ಕಾವ್ಯ ಸಪ್ಪೆಮೋರೆಯಲ್ಲಿಯೇ ಬಿರುಗಾಳಿ ಎದ್ದುಹೋದ ನಂತರದ ತಂಗಾಳಿಯಂತೆ ಏನೂ ಇಲ್ಲವೆಂಬಂತೆ ಸುಮ್ಮನೆ ತಲೆಯಾಡಿಸಿದಳು.
‘ಹುಡುಗನ ಕಡೆಯವರು ನೋಡಲು ಬರುತ್ತಿದ್ದಾರೆ, ತದನಂತರ ಮದುವೆ, ತವರು ಮನೆ ತೊರೆಯುವುದು’ ಇವೆಲ್ಲಾ ನೆನಪಿಗೆ ಬಂದು ಕೂಸು ಅಳುತ್ತಿದೆ ಎಂದ ಅಜ್ಜಿ ಕಾವ್ಯಳನ್ನು ತೊಡೆಯಮೇಲೆ ಮಲಗಿಸಿಕೊಂಡರು. ಅಜ್ಜಿಯ ಸೀರೆ ಒದ್ದೆಯಾಗುವಂತೆ ಕಾವ್ಯ ಬಿಕ್ಕಳಿಸುತ್ತಿದ್ದಳು.
ಶಾಂತಮ್ಮ ಹೇಳಿದಳು ‘ಮಗು ಕಾವ್ಯ, ನಿನಗೊಂದು ವಿಚಾರವನ್ನು ಹೇಳಲೆಂದೇ ಬಂದಿದ್ದೇವೆ, ಯಾರಿಗೂ ತಿಳಿಯದಂತೆ ಗುಟ್ಟು ಕಾಪಾಡಿಕೋ’ ಎಂದವರೇ ಕೀರ್ತಿಯ ವಿಚಾರವನ್ನು ಹೇಳಿ ಮುಗಿಸಿದರು.
‘ಅವಳಿಗೆ ಇಷ್ಟಬಂದವನಿಗೆ ಮದುವೆ ಮಾಡಿಕೊಡುವುದಲ್ಲವೇ? ಹಿರೀಕರಾಗಿದ್ದುಕೊಂಡು ಜಾತಿ ಜಾತಿ ಎಂದು ಸಾಯುವುದಾದರೂ ಯಾಕೆ ತಾವೆಲ್ಲಾ ?’ ಮೌನವನ್ನು ತಬ್ಬಿಕೊಂಡಿದ್ದ ಕಾವ್ಯ ಕೊನೆಗೂ ತುಟಿಬಿಚ್ಚಿದಳು.
‘ಶ್.. ಕೂಗಿಕೊಳ್ಳಬೇಡ, ನೆರೆಯವರಿಗೆ ಕೇಳಿಸಿ ಗುಲ್ಲೆದ್ದೀತು’ ಎಂದಳು ಅಜ್ಜಿ.
ಶಾಂತಮ್ಮ ಮಾತು ಮುಂದುವರೆಸುತ್ತ ‘ಕಾವ್ಯ, ಅರ್ಥ ಮಾಡಿಕೋ ಮಗಳೆ. ಇದು ನಮ್ಮ ಮನೆತನದ ಪ್ರಶ್ನೆ. ನಿನ್ನ ತಂಗಿಯ ವಿಚಾರ ಅಪ್ಪ, ದೊಡ್ಡಪ್ಪ ಮತ್ತು ಚಿಕ್ಕಪ್ಪನಿಗೆ ತಿಳಿದರೆ ಅವಳನ್ನು ಮತ್ತು ಆ ಹುಡುಗನನ್ನು ಉಳಿಸುವುದು ಉಂಟೇ? ಅವಳ ಓದನ್ನು ಮೊಟಕುಗೊಳಿಸುವುದಲ್ಲದೇ ಕೂಡಲೇ ಸಂಬಂಧಿಕನಿಗೆ ಕೊಟ್ಟು ಮದುವೆ ಮಾಡಿಯಾರು. ಒಂದು ವೇಳೆ ಅವರಿಬ್ಬರೂ ಓಡಿ ಹೋಗಿ ಯಾವುದಾದರು ದೇವಸ್ಥಾನದಲ್ಲಿ ಬೇವರ್ಶಿಗಳಂತೆ ಮದುವೆಯಾದರೆ ನಮ್ಮ ಮರ್ಯಾದೆ ಮೂರಾಣೆಗೂ ನಿಲ್ಲುವುದಿಲ್ಲ. ಮೊನ್ನೆಯಷ್ಟೇ ನಾನು, ನಿನ್ನಪ್ಪ ಬೆಂಗಳೂರಿಗೆ ಹೋಗಿ ಶಾಂತಕ್ಕನ ಮಗಳಿಗೆ ಉಗಿದು ಸಮಾಧಾನ ಮಾಡಿ ಬಂದಿದ್ದೇವೆ. ಅವಳು ಕೂಡ ಒಂದು ಹುಡುಗನ ಜೊತೆ ಓಡಿಹೋಗಲು ತಯಾರಿದ್ದವಳು. ಈಗ ನಮ್ಮ ಕೂಸೇ ಈ ರೀತಿಯಾದರೆ ಅವರಿಗೆಲ್ಲಾ ಏನು ಸಬೂಬು ನೀಡುವುದು ಹೇಳು. ನಮ್ಮ ಸಂಬಂಧಿಕರ ಇಂಥಹ ಎಷ್ಟೋ ವಿಚಾರಗಳಿಗೆ ನ್ಯಾಯವಾದಿಗಳಂತೆ ಹೋಗಿ ಪರಿಹರಿಸಿಬಂದಿದ್ದೇವೆ. ನಮ್ಮ ಸಂಬಂಧಿಕ ವರ್ಗದಲ್ಲಿ ಸಾಚಾತನ ಬಂದಾಗ ನಿಮ್ಮಿಬ್ಬರನ್ನೂ ಎಲ್ಲರೂ ಉದಾಹರಿಸುತ್ತಾರೆ. ಜೊತೆಗೆ, ನಿನಗೇ ಗೊತ್ತಿರುವಂತೆ ನಮ್ಮನ್ನು ಕಂಡರೆ ಕರುಬುವವರು ಅನೇಕ ಮಂದಿಯಿದ್ದಾರೆ. ಅವರ ಕೊಂಕುನುಡಿಗಳನ್ನು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ. ನೇಣು ಬಿಗಿದುಕೊಂಡು ಪ್ರಾಣಬಿಡುತ್ತೇನೆ ಅಷ್ಟೆ. ಇದನ್ನೆಲ್ಲಾ ನೋಡಿಕೊಂಡು ನಿನ್ನ ಕುಡುಕ ರೋಗಗ್ರಸ್ಥ ಅಪ್ಪ ಸುಮ್ಮನಿರುವರೇ?’ ಎಂಬ ಮಾತುಗಳಿಗೆ ಕಾವ್ಯಳ ಕೈಕಾಲುಗಳು ಅಲುಗಾಡತೊಡಗಿದವು. ತಲೆ ಸಿಡಿದಂತಾಯಿತು.

‘ಸದ್ಯ, ನಮ್ಮ ಕಾವ್ಯಳ ವಿಚಾರದಲ್ಲಿ ಈ ರೀತಿಯ ತೊಂದರೆಯಾಗಲಿಲ್ಲ, ರಂಗಣ್ಣನ ದೊಡ್ಡ ಮಗಳು ಯಾವನೋ ಕೀಳುಜಾತಿಯವನೊಡನೆ ಓಡಿಹೋಗಿ ನಾಲ್ಕು ವರ್ಷವಾದರೂ, ಎರಡನೆ ಮಗಳನ್ನು ಮದುವೆ ಮಾಡಿಕೊಳ್ಳಲು ಯಾರೂ ಹತ್ತಿರ ಸುಳಿಯುತ್ತಿಲ್ಲ’ ಎಂದ ಚಿಕ್ಕಮ್ಮನ ಮಾತು ಕೇಳಿ ಕಾವ್ಯಳ ಮನಸ್ಸು ವಿಪ್ಲವಗೊಂಡು ಭಾರವಾಯಿತು. ಆಕೆ ಏನೂ ಮಾತನಾಡಲಿಲ್ಲ. ಮನೆಯಲ್ಲಿ ಹುರುಳಿ ಹುರಿದಂತೆ ಮಾತನಾಡುತ್ತಿದ್ದ, ಹಠ ಮಾಡುತ್ತಿದ್ದ ಕಾವ್ಯ ಮತ್ತೂ ಮೌನವಾದಳು.

‘ಕೀರ್ತಿ ಇನ್ನೂ ಚಿಕ್ಕವಳು, ಅಕ್ಕನೆಂದರೆ ಪ್ರೀತಿ. ಅವಳ ಹಠ ಸ್ವಭಾವವನು ಕಡಿಮೆ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. ಅವಳನ್ನು ನಿನ್ನೊಡನೆ ಕೂರಿಸಿಕೊಂಡು ಸಾವಧಾನವಾಗಿ ಎಲ್ಲಾ ಪರಿಣಾಮಗಳನ್ನು ವಿವರಿಸು, ಬುದ್ಧಿಮಾತು ಹೇಳು, ನಿನ್ನ ನಿಶ್ಚಿತಾರ್ಥ ಮದುವೆ ಮುಗಿದ ನಂತರ ಅವಳ ಮದುವೆಯ ಬಗ್ಗೆ ಆಲೋಚಿಸುವುದಾದರೂ, ಅವಳ ಮಾತಿನ ವರಸೆ ಗಮನಿಸಿದರೆ ಯಾಕೋ ನಮ್ಮೊಡನೆ ನಿಲ್ಲುವವಳಲ್ಲವೆಂದೆನಿಸುತ್ತದೆ. ಒಂದೇ ಜಾತಿಯಾಗಿದ್ದರೆ ಸೋಲಬಹುದಿತ್ತು. ಅನ್ಯಜಾತಿಯವರಿಗೆ ಹುಡುಗಿಕೊಟ್ಟು ತಲೆಯೆತ್ತಿ ಬಾಳಲು ಸಾಧ್ಯವೇ?’ ಎಂದ ಶಾಂತಮ್ಮ, ಅಜ್ಜಿ ಮತ್ತು ಚಿಕ್ಕಮ್ಮ ಮನೆಯ ಹೊರಗಿನ ಪಡಸಾಲೆಗೆ ಬಂದರು. ಕಾವ್ಯಳ ಕೈ ಹಿಡಿದು ಎಳೆದರೂ ಆಕೆ ಜೊತೆ ಹೋಗಲಿಲ್ಲ.

ಬಿಳಿ ಹಾಲಿನಂತಿದ್ದ ಕಾವ್ಯಳ ಮನಸ್ಸು ಒಡೆದ ಹಾಲಾಯಿತು. ತನ್ನನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಂಗಾಧರ್ ಕಣ್ಣಮುಂದೆ ಪ್ರತ್ಯಕ್ಷನಾದ. ಮೈಕೈ ಮುಟ್ಟಿನೋಡಿಕೊಂಡಳು. ‘ನಾವಿಬ್ಬರು ಗಂಡ ಹೆಂಡತಿಯರಾಗುವವರಲ್ಲವೇ?’ ಎಂಬ ಸಬೂಬಿನೊಂದಿಗೆ ಒಬ್ಬರಿಗೊಬ್ಬರು ತಬ್ಬಿಕೊಂಡು ಮೈನುಲಿದುಕೊಂಡಿದ್ದು ನೆನಪಿಸಿಕೊಂಡಳು. ಅಂದು ತೇವವಾಗಿದ್ದ ತುಟಿ ಇಂದೇಕೋ ಒಣಗಿಹೋಯಿತು. ಊಟ ಮಾಡು ಬಾ ಮಗಳೇ ಎಂದು ಕೂಗಿಕೊಂಡ ಅಪ್ಪ ಅಮ್ಮನಿಗೆ ನಾವಿಬ್ಬರೆಂದರೆ ಪ್ರಾಣವೆಂಬುದನ್ನೂ ನೆನಪಿಸಿಕೊಂಡಳು. ನಮ್ಮಿಬ್ಬರಲ್ಲಿ ಒಬ್ಬರನ್ನು ಕಳೆದುಕೊಂಡರೂ ಅವರು ಬದುಕುಳಿಯುವುದಿಲ್ಲವೆಂಬುದು ಅವಳಿಗೆ ಗೊತ್ತು. ಇನ್ನೊಂದೆಡೆ ಪ್ರೀತಿಯ ತಂಗಿ ಕೀರ್ತಿ ಎದುರಿಗೆ ನಿಂತಳು. ನಾನೇ ಒಬ್ಬನನ್ನು ಪ್ರೀತಿಸುತ್ತಿರುವಾಗ, ಗಾಢವಾಗಿ ಹಚ್ಚಿಕೊಂಡಿರುವಾಗ, ಮೈ ಒಪ್ಪಿಸಿಕೊಂಡಿರುವಾಗ, ಕ್ಷಣ ಮಾತ್ರವೂ ಆತನನ್ನು ಬಿಟ್ಟಿರಲಾಗದ ಸ್ಥಿತಿಯಲ್ಲಿರುವಾಗ ತಂಗಿಗೆ ಸಮಾಧಾನಿಸುವುದಾದರೂ ಹೇಗೆ? ಒಂದು ವೇಳೆ ಆಕೆ ‘ನೀನೇ ಯಾರನ್ನಾದರೂ ಪ್ರೀತಿಸಿದ್ದರೆ ಏನು ಮಾಡುತ್ತಿದ್ದೆ’ ಎಂಬ ಪ್ರಶ್ನೆ ಎಸೆದರೆ ಹೇಗೆ ಉತ್ತರಿಸಲಿ ?’ ಎಂದು ಯೋಚಿಸಿಕೊಂಡಳು. ಅಕ್ಕ ಅನ್ಯಜಾತಿಯವನ ಜೊತೆ ಓಡಿಹೋದರೆ ತಂಗಿಗೆ ಹುಡುಗ ದೊರಕುವುದು ಕಷ್ಟಸಾಧ್ಯವೆಂಬ ಚಿಕ್ಕಮ್ಮನ ಮಾತು ಎದೆ ಕೊರೆಯಿತು. ಈ ಸದರಿ ವಿಚಾರಗಳು ಅಪ್ಪನ ಕಡೆಯವರಿಗೆ ತಿಳಿದರೆ ಆ ಹುಡುಗನನ್ನು ಉಳಿಸುವರೇ ಎಂಬ ಅಮ್ಮನ ಮಾತಿನಿಂದ ಮತ್ತೂ ನಡುಗಿದಳು. ಅಕ್ಕ ಮಾಡಿದ ತಪ್ಪಲ್ಲದ ತಪ್ಪಿಗೆ ತಂಗಿಗೆ ಶಿಕ್ಷೆ ಕೊಡುವ ಈ ಸಮಾಜಕ್ಕೆ ನನ್ನ ಚಪ್ಪಲಿಸೇವೆಯಿರಲಿ ಎಂದು ಶಪಿಸಿಕೊಂಡಳು. ಒಂದು ವೇಳೆ ನಾನು ಹೇಳದೆ ಕೇಳದೆ ಗಂಗಾಧರ್ ಜೊತೆ ಓಡಿಹೋದರೆ ಎಂದು ಯೋಚಿಸುವಷರಲ್ಲಿಯೇ, ಹಂಗಿಸುವ ಊರ ಜನರು ಕಣ್ಣ ಮುಂದೆ ಭೂತಗಳಂತೆ ಬಂದು ನಿಂತರು, ಅವರ ವ್ಯಂಗ್ಯಕ್ಕೆ ಅಪ್ಪ ಅಮ್ಮ ಸೋತುಬಿದ್ದವರಂತೆ ಕಂಡುಬಂದರು. ಈ ರೀತಿಯ ಅನೇಕ ಘಟನೆಗಳನ್ನು ಕಣ್ಣಾರೆ ಕಂಡಿದ್ದಳು ಕೂಡ. ಅಪ್ಪ ಅಮ್ಮನ ಹೆಣಗಳು ಮುಂದೆ ತೇಲಿಬಂದವು. ಪ್ರಪಂಚದಲ್ಲಿರುವ ಕೋಟಿ ಕೋಟಿ ಜನಗಳಿಗೆಲ್ಲರಿಗೂ ಹೃದಯ ಇದ್ದಲ್ಲೇ ಇದೆ, ಎಲ್ಲರ ರಕ್ತದ ವರ್ಣ ಕೆಂಪು, ಎಲ್ಲರಿಗೂ ಅಳುವ, ನಗುವ, ಯೋಚಿಸುವ ಶಕ್ತಿಯಿದೆ. ದೇಹರಚನೆಯಲ್ಲಿ ಸಾಮ್ಯತೆಯಿದೆ ಆದರೆ ಬುದ್ಧಿಯಲ್ಲಿಲ್ಲ, ಯಾರೋ ಎಂದೋ ನೆಟ್ಟಿದ್ದ ವಿಷಬೀಜವಿಂದು ಹೆಮ್ಮರವಾಗಿ ನೆರಳ ನೀಡದೆ ಮೈಚುಚ್ಚಿತ್ತಿರುವ ಈ ಭೂಮಿಯಲ್ಲಿ ಹುಟ್ಟಿದ್ದು ನಮ್ಮ ಪಾಪವಷ್ಟೆ ಎಂದುಕೊಂಡಳು. ಮುಂದೆ ಬಿದ್ದಿದ್ದ ಆ ದಿನದ ಪತ್ರಿಕೆಯಲ್ಲಿ ಮರ್ಯಾದಾ ಹತ್ಯಾ ಎಂಬ ಹೆಸರಿನಲ್ಲಿ ನವಜೋಡಿಗಳನ್ನು ಅವರ ಹೆತ್ತವರೇ ಕೊಂದಿದ್ದ ಸುದ್ದಿಯಿತ್ತು. ಕ್ಲಿಷ್ಟಗೊಂಡ ಮನಸ್ಸು ಆ ಪತ್ರಿಕೆಯನ್ನು ಹರಿದುಹಾಕಿತ್ತು.

ಗಂಡಿನ ಮನೆಯವರು ಅಷ್ಟರಲ್ಲಿ ಬಂದಾಗಿತ್ತು. ವೆಂಕಟೇಶಭಟ್ಟರು ಮಂತ್ರಿಯಾಗಿದ್ದ ಸಮಯದಲ್ಲಿ ಘಟಿಸಿದ್ದ ಯಾವುದೋ ಅಕ್ರಮಕ್ಕೆ ಇದ್ದಕ್ಕಿದ್ದಂತೆ ರೆಕ್ಕೆ ಮೂಡಿದ್ದರಿಂದ ಮಾಧ್ಯಮದವರು ಸುತ್ತಿಕೊಂಡರು. ತೆರೆದೆ ಕಿಟಕಿಯ ಸುಡುವ ಗಾಳಿಗೆ ಮೈಯೊಡ್ಡಿ ಎಲ್ಲರನ್ನು ಒಮ್ಮೆ ನೋಡಿದಳು. ಗುದ್ದಲಿ ಪಿಕಾಸಿ ಹಿಡಿದುಕೊಂಡು ಎಲ್ಲರೂ ತನ್ನೆಡೆಗೇ ಬರುತ್ತಿರುವಂತೆ ಭಾಸವಾಯಿತು. ಇವರನ್ನೆಲ್ಲಾ ಬಗ್ಗುಬಡಿಯಲು ಗಂಗಾಧರ್ ಬಂದಿಲ್ಲವಲ್ಲ ಎಂದು ಕೊರಗಿಕೊಂಡಳು. ಆದರೆ, ಅಸಲಿಯಾಗಿ ಈ ವಿಚಾರವನ್ನು ಗಂಗಾಧರ್ ಗೆ ಕಾವ್ಯ ಮುಟ್ಟಿಸಿಯೇ ಇರಲಿಲ್ಲ! ಹುಡುಗನ ಕಡೆಯವರು ತುಂಬಾ ಸಂಭಾವಿತರು ಮತ್ತು ಕ್ರೌರ್ಯದ ಹಿನ್ನೆಲೆಯುಳ್ಳವರು ಎಂಬುದು ತಿಳಿದುಕೊಂಡವಳಿಗೆ ಗಂಗಾಧರ್ ಅವಸರಪಟ್ಟು ಮನೆ ಮುಂದೆ ನಿಂದು ಇವರನ್ನೆಲ್ಲಾ ಎದುರಿಸಿದರೆ, ಆತನ ಜೀವಕ್ಕೆ ತೊಂದರೆಯಾದರೆ, ಮಾಧ್ಯಮಗಳಲ್ಲಿ ಈ ವಿಚಾರ ಮೂಡಿಬಂದು ಮನೆ ಗೌರವ ಮೂರುಕಾಸಿಗೆ ಹಂಚಿಹೋದರೆ, ನನ್ನಪ್ಪ ಅಮ್ಮ ಬೀದಿ ಪಾಲಾದರೆ, ತಂಗಿಯ ಗತಿಯೇನು ಎಂದು ಯೋಚಿಸಿ ಯೋಚಿಸಿ ಮೌನವಾಗಿಯೇ ಉಳಿದುಬಿಟ್ಟಳು. ಹೆಚ್ಚಾಗಿ, ಇದು ಕೇವಲ ನೋಡಿಕೊಂಡು ಹೋಗುವ ಶಾಸ್ತ್ರವಷ್ಟೇ, ತಲೆಬಾಗಿ ತಾಳಿ ಕಟ್ಟಿಸಿಕೊಳ್ಳುವ ಮದುವೆಯಲ್ಲವಲ್ಲ ಎಂದು ಸ್ವಲ್ಪ ಧೈರ್ಯದಿಂದಿದ್ದಳು.

ಜ್ಯೂಸ್ ತಟ್ಟೆ ಹಿಡಿದುಕೊಂಡ ಕಾವ್ಯ ಬಂದಿದ್ದವರ ಮುಂದೆ ನಿಂತಳು. ಅದೇ ಮೌನ ಅವಳನ್ನು ಆವರಿಸಿತ್ತು. ಬಾಗಿಸಿದ ತಲೆಯನ್ನು ಕೊಂಚವೂ ಮೇಲೆತ್ತಲಿಲ್ಲ. ಶಾಂತಮ್ಮ ತಲೆಯೆತ್ತಿ ಒಮ್ಮೆ ಹುಡುಗನನ್ನು ನೋಡು ಎಂದರು. ‘ನಿನ್ನನ್ನು ಬಿಟ್ಟು ಮತ್ತಾವ ಹುಡುಗಿಯನ್ನು ನೋಡುವುದಿಲ್ಲ, ಹತ್ತಿರ ಬಂದರೆ ಬೆಂಕಿಯಾಗಿ ಸುಟ್ಟುಬಿಡುತ್ತೇನೆ’ ಎಂದಿದ್ದ ಗಂಗಾಧರನನ್ನು ನೆನಪಿಸಿಕೊಂಡು ದಳದಳನೆ ಕಣ್ಣೀರು ಸುರಿಸಿದಳು.
‘ಹುಡುಗಿ ತನ್ನ ಮುಖ ತೋರಲಿಲ್ಲ, ಯಾಕೆ ನಾಚಿಕೆಯೋ ?’ ಯಾರೋ ಒಬ್ಬಾತ ಬಂದಿದ್ದವರ ಗುಂಪಿನಿಂದ ಕೇಳಿಕೊಂಡ ತಕ್ಷಣ ತಂಗಿ ಕೀರ್ತಿ ‘ಮುಖ ಮೇಲಕ್ಕೆ ಮಾಡೇ’ ಎಂದಳು. ಅಜ್ಜಿಯೂ ಹತ್ತಿರ ಬಂದರು. ವಿಧಿಯಿಲ್ಲದೆ ಕಾವ್ಯ ಮುಖ ಮೇಲೆ ಮಾಡಿದಳು. ಹರಿಯುತ್ತಿದ್ದ ಕಣ್ಣಧಾರೆಯನ್ನು ಗಮನಿಸಿ ಎಲ್ಲರೂ ಒಮ್ಮೆಲೆ ಅವಕ್ಕಾದರು. ಅಜ್ಜಿ ಮತ್ತದೇ ಸಬೂಬು ನೀಡಿದಳು. ಅಲ್ಲಿ ಕುಳಿತಿದ್ದವರಲ್ಲಿ ತನ್ನನ್ನು ನೋಡಲು ಬಂದ ಹುಡುಗ ಯಾರಿರಬಹುದು ಎಂಬುದರ ಬಗ್ಗೆ ಕಾವ್ಯ ಯೋಚಿಸಲಿಲ್ಲ, ಶಾಂತಮ್ಮ ಮೊನ್ನೆ ತೋರಿಸಿದ್ದ ಫೋಟೋವನ್ನು ನೋಡದ ಕಾವ್ಯ ಬದಲಾಗಿ ಹರಿದು ಬೆಂಕಿ ಹಚ್ಚಿದ್ದಳು.

ಅಂದು ಸಂಜೆ ಕೋಣೆಯಲ್ಲಿ ಮಗುವಿನಂತೆ ಅವಚಿಕೊಂಡು ಮಲಗಿದ್ದ ಮಗಳನ್ನು ಕಂಡ ಲಕ್ಷ್ಮೀಶಭಟ್ಟರು ಮತ್ತು ಜೊತೆಯಲ್ಲಿದ್ದ ಕೀರ್ತಿ ಹತ್ತಿರ ಬಂದವರೇ ತಲೆಸವರಿ ‘ಹುಡುಗ ಇಷ್ಟವಾದನೇ?’ ಎಂದು ಕೇಳಿದರು. ತೀಕ್ಷ್ಣವಾಗಿ ಅಪ್ಪನ ಮುಖ ನೋಡುತ್ತ ಕುಳಿತುಬಿಟ್ಟಳು ಕಾವ್ಯ. ಬಾಯಿಯಿಂದ ಮಾತು ಹೊರಡಲಿಲ್ಲ. ಗಟ್ಟಿಯಾಗಿ ತಬ್ಬಿಕೊಂಡು ಅತ್ತುಬಿಟ್ಟಳು. ‘ಚಿಕ್ಕಂದಿನಿಂದ ಹೂವಿನಂತೆ ಸಲಹಿದ ನನ್ನ ಮಕ್ಕಳನ್ನು ಹುಲಿಯ ಬಾಯಿಗೆ ಕೊಡುವುದಿಲ್ಲ, ಈ ಸಂಬಂಧ ನಿನ್ನ ಏಳೇಳು ಜನ್ಮದ ಪುಣ್ಯ, ಕಳೆದ ಎರಡು ವರ್ಷದಿಂದ ಸತತ ಪ್ರಯತ್ನಿಸಿ ಪ್ರಯತ್ನಿಸಿ ಗೊತ್ತು ಮಾಡಿಕೊಂಡಿದ್ದೇನೆ, ಹುಡುಗ ನಿನ್ನನ್ನು ಇಷ್ಟಪಟ್ಟಿದ್ದಾನೆ, ನಮ್ಮನ್ನು ಬಿಟ್ಟುಹೋಗುವ ಚಿಂತೆ ಮಾಡಬೇಡ ಮಗಳೆ, ನಿನ್ನ ಒಳ್ಳೆಯತನ ನಿನ್ನನ್ನು ಕಾಪಾಡುತ್ತದೆ’ ಎಂದರು.

ಆ ದಿನದ ರಾತ್ರಿಯ ಊಟಕ್ಕೆ ಎಲ್ಲರ ಜೊತೆಯಲ್ಲಿ ಕುಳಿತುಕೊಳ್ಳಲು ಕಾವ್ಯಳಿಗೆ ಇಷ್ಟವಾಗಲಿಲ್ಲ. ತಲೆನೋವಿದೆ ಎಂಬ ನೆಪ ಹೇಳಿ ತನ್ನ ಕೊಠಡಿಯಲ್ಲಿಯೇ ಮಲಗಿಬಿಟ್ಟಳು. ಚಳಿಯಿದ್ದರೂ ಸೆಖೆ ಮೈ ಸುಡುತ್ತಿತ್ತು. ಒಂದು ವಾರದ ಮಟ್ಟಿಗೆ ನಿದ್ದೆ ಮಾಡದ ಕಾವ್ಯಳ ಅರಿವಿಗೆ ಬಾರದೆ ನಿದ್ದೆ ಆವರಿಸಿತ್ತು. ತಾಯಿ ಮಮತೆ ಬಿಡಬೇಕೆ? ತಟ್ಟೆಗೆ ಸ್ವಲ್ಪ ಅನ್ನವನ್ನು, ಕಾವ್ಯಳಿಗೆ ಪ್ರಿಯವಾದ ಮಜ್ಜಿಗೆ ಹುಳಿಗೆ ಸೇರಿಸಿಕೊಂಡು ಕೊಠಡಿಗೆ ಬಂದವರೇ ಗಾಬರಿಗೊಂಡರು. ತುಂಬಾ ನಿದ್ರೆ ಮಾಡುತ್ತಿರುವ ಕಾವ್ಯಳ ಕಣ್ಣಿನಿಂದ ಕಣ್ಣೀರು ತೊಟ್ಟಿಕ್ಕುತ್ತಿದೆ. ನಿದ್ದೆಯಲ್ಲೂ ಅಳುವವರನ್ನು ಶಾಂತಮ್ಮ ಎಂದೂ ಕಂಡಿರಲಿಲ್ಲ. ತಾವೂ ಅತ್ತುಬಿಟ್ಟರು, ಕಷ್ಟಪಟ್ಟು ಎಬ್ಬಿಸಿ ಕಾವ್ಯಳ ಹಣೆಗೆ ಮುತ್ತಿಕ್ಕಿದ ಶಾಂತಮ್ಮ ತುತ್ತು ಮಾಡಿ ಅನ್ನ ತಿನ್ನಿಸತೊಡಗಿದರು. ‘ತವರುಮನೆ ತೊರೆಯುವ ಪ್ರತಿ ಹೆಣ್ಣಿಗೂ ಈ ರೀತಿಯ ನೋವಾಗುವುದು ಸಹಜ, ಅಳಬೇಡ ಕಂದ, ಮೊಬೈಲು ಫೋನು ಇರುವ ಕಾಲದಲ್ಲಿಯೂ ದೂರ ಉಳಿದುಕೊಳ್ಳುವ ಚಿಂತೆ ಏಕೆ?’ ಎಂದು ಹೇಳಿದ ಶಾಂತಮ್ಮನವರು ‘ಕೀರ್ತಿ ಜೊತೆ ಮಾತನಾಡಿದೆಯಾ ಪುಟ್ಟ, ನಿನ್ನ ಜೀವನ ಸುಸ್ಥಿತಿಗೆ ಬಂದದ್ದು ನಮ್ಮ ಪುಣ್ಯ, ಆಕೆಯೊಬ್ಬಳ ದಾರಿಯನ್ನು ಸರಿ ಮಾಡಿಬಿಟ್ಟರೆ ನಾವು ನೆಮ್ಮದಿಯಾಗಿ ಉಳಿದ ದಿನಗಳನ್ನು ಕಳೆದುಬಿಡುತ್ತೇವೆ, ನಿನಗೆ ಸಿಕ್ಕಿರುವ ಸಂಬಂಧ, ಅವರ ಘನತೆ ಗಾಂಭೀರ್ಯಗಳ ಬಗ್ಗೆ ಮಾತನಾಡಿ ಆಕೆಯನ್ನು ಒಪ್ಪಿಸು’ ಎಂದು ಮತ್ತೆ ಕೇಳಿಕೊಂಡರು ಶಾಂತಮ್ಮ. ಅಮ್ಮನ ತೊಡೆ ಮೇಲೆ ಮಲಗಿಕೊಂಡವಳೇ ಮತ್ತೆ ಅಳತೊಡಗಿದಳು. ಪ್ರೀತಿಯ ತೀವ್ರತೆ ಅರಿತ ಕಾವ್ಯಳಿಗೆ ಒಮ್ಮೆಯೂ ಕೀರ್ತಿ ಜೊತೆ ಮಾತನಾಡಿ ಸಂಬಂಧವನ್ನು ಕಿತ್ತುಹಾಕುವ ಧೈರ್ಯ ಬರಲಿಲ್ಲ.

ಆ ರಾತ್ರಿ, ಸುತ್ತಲೂ ನೀರವ ಮೌನ ಆವರಿಸಿತ್ತು. ಜಗತ್ತನ್ನೇ ಬೆಳಗಿದ ಚಂದಿರ ಕಾವ್ಯಳಿಗೆ ಮಾತ್ರ ಮಂಕಾಗಿಯೇ ಕಾಣಿಸುತ್ತಿದ್ದ. ಮನೆಯಲ್ಲಿ ಎಲ್ಲರೂ ಗಾಢನಿದ್ದೆಯಲ್ಲಿದ್ದರು. ಗಂಗಾಧರ್ ನನ್ನು ನೆನಪಿಸಿಕೊಂಡಾಕ್ಷಣ ಮನಸ್ಸು ವಿಲವಿಲನೆ ಒದ್ದಾಡಿತು, ಎದೆ ಬಿಗಿಯಾಗಿ ಉಸಿರು ಕಟ್ಟಿದಂತಾಯಿತು. ಕಿಟಕಿಯ ಬಳಿ ಬಂದ ಕಾವ್ಯ ಗಂಗಾಧರ್ ಗೆ ಫೋನಾಯಿಸಿದಳು. ಎಲ್ಲಾ ವಿಚಾರಗಳನ್ನು ಹೇಳಿ ಬಿಕ್ಕಿ ಬಿಕ್ಕಿ ಅತ್ತು ಹಗುರಾದಳು. ‘ನಿನ್ನ ಜಾಗದಲ್ಲಿ ಬೇರಾರನ್ನೂ ಕಲ್ಪಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ, ಹಾಗೆಯೇ ನನ್ನಪ್ಪ ಅಮ್ಮನ ಸಾವನ್ನೂ ನಾ ನೋಡಲಾರೆ’ ಎಂದು ಅಳುತ್ತಾ ಪ್ರಾರಂಭಿಸಿ ಎಲ್ಲವನ್ನೂ ತಿಳಿಸಿದಳು.
ಎಲ್ಲವನ್ನೂ ಕೇಳಿಸಿಕೊಂಡ ನಂತರ ಗಂಗಾಧರ್ ‘ಮುಂಜಾನೆ 5.30 ರ ಹೊತ್ತಿಗೆ ಬೈಕ್ ನೊಂದಿಗೆ ನಿಮ್ಮ ಮನೆಯ ಬಳಿ ಬರುತ್ತೇನೆ, ನಿನ್ನ ಲಗ್ಗೇಜ್ ಎಲ್ಲ ಈಗಲೇ ಪ್ಯಾಕ್ ಮಾಡಿಟ್ಟುಕೋ, ಈ ಊರು ಬಿಟ್ಟು ಎಲ್ಲಾದರೂ ದೂರ ಹೊರಟುಬಿಡೋಣ’ ವೆಂದ ಮಾತನ್ನು ಕೇಳಿ ಕಾವ್ಯ ಒಮ್ಮೆಲೇ ದಿಗ್ಭ್ರಾಂತಳಾದಳು. ತನ್ನ ಯಾವತ್ತೂ ವಿಚಾರಗಳನ್ನು ಸಮಾಧಾನವಾಗಿ ಕೇಳಿಸಿಕೊಂಡೂ ಈ ರೀತಿಯಾಗಿ ಗಂಗಾಧರ್ ಹೇಳಿದ್ದು ಆಕೆಗೆ ಆಶ್ಚರ್ಯವಾಯಿತು.
ಮಾತು ಮುಂದುವರೆಸಿದ ಗಂಗಾಧರ್ ಹೇಳಿದ ‘ಡಿಯರ್, ನೀನು ಮನೆಬಿಟ್ಟು ಬಂದರೆ, ಅದೂ ನನ್ನ ಜಾತಿಯವನ ಜೊತೆ ಬಂದರೆ ಇಡೀ ಊರಿಗೆ ಊರೇ ಹಂಗಿಸುತ್ತದೆ ಎಂಬುದ ನಾ ಬಲ್ಲೆ. ನಿಮ್ಮ ತಂದೆ ತಾಯಂದಿರು ಬೀದಿಯಲ್ಲಿ ತಲೆಯೆತ್ತಿ ನಡೆಯಲಾಗುವುದಿಲ್ಲವೆಂಬುದು ಎಲ್ಲಾ ಕಟ್ಟಳೆಗಳನ್ನು ಮೀರುವವರಿಗೆ ಈ ನೀಚ ಸಮಾಜ ಕೊಡುವ ಉಡುಗೊರೆ. ಆದರೆ, ಖಂಡಿತವಾಗಿಯೂ ನಿನ್ನ ತಂದೆ ತಾಯಂದಿರು ಸಾಯುವುದಿಲ್ಲ. ಕಾರಣ ನಿನ್ನ ತಂಗಿ ಕೀರ್ತಿ. ಅವಳನ್ನು ಒಂಟಿ ಮಾಡಿ ಈ ಪ್ರಪಂಚ ಬಿಟ್ಟವರು ಸರಿಯರು. ಜೊತೆಗೆ ಅಕ್ಕನ ಸ್ಥಿತಿಯಿಂದೊದಗಿ ಬಂದ ಪರಿಸ್ಥಿತಿ ಕೀರ್ತಿಯನ್ನು ಬದಲಿಸುತ್ತದೆ, ತಂದೆ ತಾಯಿಯ ಸ್ಥಿತಿಗೆ ಮರುಗುತ್ತಾಳೆ, ಅವರೆಲ್ಲರ ಪಾಲಿಗೆ ನೀನು ಹುಟ್ಟಿಯೇ ಇಲ್ಲವೆಂದು ತಿಳಿದುಕೊಂಡು ಹೊರಟುಬಿಡು’
ಇನ್ನೊಬ್ಬನ ಸಾಂಗತ್ಯವನ್ನು ಊಹಿಸಿಕೊಳ್ಳಲಾಗದ ಕಾವ್ಯಳಿಗೆ ಗಂಗಾಧರನ ಮಾತು ಯಾಕೋ ಚೂರು ಸಮಾಧಾನ ತಂದಿತು. ಆಗುವುದು ಆಗಿಯೇ ತೀರಲಿ, ‘ಬರುತ್ತೇನೆ’ ಎಂದು ಬಿಟ್ಟಳು.

ಕೆಲವು ಬಟ್ಟೆ, ಪುಸ್ತಕಗಳು, ಅಮ್ಮ ಕೊಡಿಸಿದ್ದ ಆ ಬೊಂಬೆ, ಅಪ್ಪ ಹುಟ್ಟುಹಬ್ಬಕ್ಕೆ ಕೊಡಿಸಿದ್ದ ಕ್ಯಾಮೆರಾ ಎಲ್ಲವನ್ನೂ ಕಣ್ಣೀರು ಸುರಿಸುತ್ತ ತುಂಬಿಕೊಂಡಳು. ಅಪ್ಪ, ಅಮ್ಮ, ತಾನು ಮತ್ತು ಕೀರ್ತಿ, ಅಜ್ಜಿ ಜೊತೆಯಾಗಿ ತೆಗೆಸಿದ್ದ ಒಂದು ಫೋಟೋವನ್ನು ಎದೆಗೊತ್ತಿಕೊಂಡು ಮಲಗಿದಳು. ರಾತ್ರಿಯೆಲ್ಲಾ ನಿದ್ದೆಯ ಚೂರೂ ಬರಲಿಲ್ಲ. ಮುಂಜಾನೆಯ 5.30 ನ್ನೇ ಕಾಯುತ್ತಿದ್ದಳು. ಹೊರಳಾಡಿ ಹೊರಳಾಡಿಯೇ ಕತ್ತಲ ನುಂಗುತ್ತಿದ್ದಳು. ಸಮಯ ಸುಮಾರು ಮುಂಜಾನೆ 5. ಕತ್ತಲು ದಟ್ಟವಾಗಿಯೇ ಇತ್ತು. ಕಾವ್ಯಳ ಕೊಠಡಿಯ ಬಾಗಿಲು ಇದ್ದಕ್ಕಿದ್ದಂತೆ ಬಡಿದುಕೊಂಡಿತ್ತು. ಗಾಬರಿಗೊಂಡ ಕಾವ್ಯ ಬಾಗಿಲು ತೆರೆದಳು. ಎದುರಿಗೆ ಗಾಬರಿಗೊಂಡ ಶಾಂತಮ್ಮ ನಿಂತಿದ್ದರು. ಮುಖದಲ್ಲಿ ಇನ್ನಿಲ್ಲದ ಆತಂಕವಿತ್ತು.
‘ಮಗೂ, ಕೀರ್ತಿಯನ್ನು ಕಂಡೆಯಾ? ಸುಮಾರು ನಾಲ್ಕು ಘಂಟೆಯಿಂದಲೂ ಮನೆಯಲ್ಲಿ ಕಾಣುತ್ತಿಲ್ಲ, ಅವಳ ಬಟ್ಟೆ ಪುಸ್ತಕ, ಸೂಟ್‍ಕೇಸ್ ಏನೂ ಕಾಣುತ್ತಿಲ್ಲ’ ಕೀರಲು ದ್ವನಿಯಲ್ಲಿ ಶಾಂತಮ್ಮ ಕೂಗಿಕೊಂಡಳು.
‘ನೀನೇದಾರೂ ಅವಳಿಗೆ ಹೇಳಿದೆಯಾ ಅಮ್ಮಾ’ ಅಪರೂಪಕ್ಕೆ ಮಾತನಾಡಿದ್ದಳು ಕಾವ್ಯ.
‘ರಾತ್ರಿ, ಅಕ್ಕನಿಗೂ ಹುಡುಗನ ಗೊತ್ತಾಯಿತು, ನೀನು ನಿನ್ನ ಅತ್ತೆಯ ಮಗನಾದ ಲಕ್ಷ್ಮೀಶನನ್ನು ಮದುವೆಯಾಗು, ಓದಿದ್ದಾನೆ, ಅಮೇರಿಕಾದಲ್ಲಿದ್ದಾನೆ ಎಂದೆ, ಅಷ್ಟೇ’ ಎಂದ ಶಾಂತಮ್ಮ ಬಾಗಿಲ ಹೊರಗೆ ಓಡಿದಳು. ಕಾವ್ಯ ಕುಸಿದುಬಿದ್ದಳು. ಅಷ್ಟಕ್ಕೇ ಗಂಗಾಧರನ ಮೊಬೈಲ್ ಹೊಡೆದುಕೊಂಡಿತು. ವಿಷಯ ಮುಟ್ಟಿಸಿ ಹಿಂದಿರುಗುವಂತೆ ಹೇಳಿದಳು. ಗಾಬರಿಗೊಂಡ ಗಂಗಾಧರ್ ಆ ಕ್ಷಣದಲ್ಲೇನೂ ತೋಚದೆ ಹಿಂದಿರುಗಿಬಿಟ್ಟ.

ಅದೇ ದಿನದಂದು, ಶಾಂತಮ್ಮಳ ಮನೆಯ ಓಣಿಕೊನೆ ಮನೆಯ ಮೋಹನ್ ಕೂಡ ಕಾಣೆಯಾಗಿರುವ ಸುದ್ದಿ ಹಬ್ಬಿಕೊಂಡಿತು. ಕೀರ್ತಿ ಪ್ರೀತಿಸುತ್ತಿದ್ದ ಹುಡಗನಾತ. ಕಾವ್ಯ ಎಲ್ಲೋ ಒಂದು ಕಡೆ ತನ್ನ ದೈನೇಶಿ ಸ್ಥಿತಿ ಕಂಡು ಮರುಗಿದ್ದವಳು ಕೀರ್ತಿಯ ಸಾಹಸವನ್ನು ಮೆಚ್ಚಿಕೊಂಡಳಾದರೂ ಒಪ್ಪಿಕೊಂಡಂತೆ ಬಾಯಿಬಿಡಲಿಲ್ಲ. ಆದರೆ ಸೂರ್ಯ ಮೂಡುವ ಹೊತ್ತಿಗೆ ಮೂಡಿಬಂದ ಬೀದಿಜನಗಳ ಮಾತುಗಳನ್ನು ಅರಿಗಿಸಿಕೊಳ್ಳಲಾಗಲಿಲ್ಲ. ಬಾಯಿಗೆ ಬಂದಂತೆ ಮಾತನಾಡುವ ಜನಗಳು ಹೆಚ್ಚಾದರು. ‘ಅಯ್ಯೋ! ಆ ಎರಡು ಹೆಣ್ಣು ಮಕ್ಕಳು ತಲೆಯೆತ್ತಿ ನಡೆದವರಲ್ಲ, ಈಗ ನೋಡಿ ಅದ್ಯಾವನನ್ನೋ ಇಟ್ಟುಕೊಂಡು ಊರುಬಿಟ್ಟು ಓಡಿಹೋಗಿದೆ ಒಂದು ಹೆಣ್ಣು, ಕಳ್ಳಿಯರನ್ನು ನಂಬಿದರೂ ಮಳ್ಳಿಯರನ್ನು ನಂಬಬಾರದು, ಪಾಪ, ಆ ತಂದೆ ತಾಯಿಗಳಿಗೆ ಸಾಯುವವರೆವಿಗೂ ಒಂದು ಕೊರಗನ್ನು ಕೊಟ್ಟು ತನ್ನ ದಾರಿ ಹಿಡಿದಳು ದರಿದ್ರ ಹುಡುಗಿ’ ಹೀಗೆ ಸಾಗಿತ್ತು ಸಾಲು ಸಾಲು ಮೂದಲಿಕೆ. ಜೊತೆಗೆ ನೆಂಟರಿಷ್ಟರ ನೂರಾರು ಕರೆಗಳು. ಮಾತು ಮಾತಿಗೂ ‘ಮಗಳು ಓಡಿಹೋದಳಂತೆ, ಓಡಿಹೋದಳಂತೆ’ ಇವೇ ಮಾತುಗಳು.

ಎಂದೂ ಕಣ್ಣೀರು ಹಾಕದ ಅಪ್ಪ ಇಂದು ಕಣ್ಣೀರು ಸುರಿಸಿದ್ದು ಕಂಡು ತಾನೂ ಅತ್ತುಬಿಟ್ಟಳು ಕಾವ್ಯ. ಮೊಮ್ಮಗಳ ಫೋಟೋ ಎದೆಗೆ ಒತ್ತಿಕೊಂಡು ಗೋಳಾಡುವ ಅಜ್ಜಿ ಒಂದೆಡೆಯಾದರೆ, ದಿಕ್ಕೇ ತೋಚದಂತೆ, ಗೊಂಡಾರಣ್ಯದಲ್ಲಿ ತಪ್ಪಿಸಿಕೊಂಡ ಜಿಂಕೆ ಮರಿಯಂತೆ ಶಾಂತಮ್ಮ ಅಲೆದಾಡುತ್ತಿದ್ದಳು. ಒಮ್ಮೆ ಅಪ್ಪ ಎದೆನೋವೆಂದು ಇದ್ದಕ್ಕಿದ್ದಂತೆ ನೆಲಕ್ಕೆ ಒರಗಿದ್ದು ಕಂಡು ಕಾವ್ಯ ಗಾಬರಿಯಾದಳು. ಪರೀಕ್ಷಿಸಿದ ವ್ಶೆದ್ಯರು ಇದು ಸಣ್ಣ ಹೃದಯಾಘಾತವಷ್ಟೇ ಎಂದು ಹೇಳುವವರೆವಿಗೂ ಕಾವ್ಯಳ ಅಳು ಕಡಿಮೆಯಾಗಲಿಲ್ಲ.

ಧರ್ಮಸ್ಥಳದಲ್ಲಿ ಕಿರ್ತಿ ಮತ್ತು ಮೋಹನ್ ಮದುವೆಯಾಗಿದ್ದಾರೆಂಬ ವಿಚಾರ ಪತ್ರಿಕೆ ಟೀವಿಗಳಲ್ಲಿ ಬಂದದ್ದೇ ಅಜ್ಜಿ ತೀವ್ರ ಅಸ್ವಸ್ಥರಾಗಿ ತೀರಿಕೊಂಡರು. ಲಕ್ಷ್ಮೀಶಭಟ್ಟರ ಕುಡಿತ ಹೆಚ್ಚಾಯಿತು. ಶಾಂತಮ್ಮ ಹುಚ್ಚಿಯಂತಾಗಿಬಿಟ್ಟರು. ಈ ಘಟನೆಯಾದ ವಾರದೊಳಗೆ ಕಾವ್ಯ ‘ನನ್ನನ್ನು ಮರೆತುಬಿಡು, ಮೇಲ್ಚಾತಿ ಎನಿಸಿಕೊಂಡವನನ್ನು ನನ್ನ ತಂಗಿ ವರಿಸಿದ್ದೇ ದೊಡ್ಡ ಅಪಘಾತವಾಗಿ ಪರಿವರ್ತಿತವಾರುವಾಗ, ಇನ್ನು ನಾನು ನೀನು ಕೂಡಿಕೊಂಡರೆ ನಮ್ಮ ಸಂಸಾರವೇ ಸರ್ವನಾಶವಾಗಿಹೋಗುತ್ತದೆ, ನಂತರ ನಾನೂ ಕೊರಗಿ ಕೊರಗಿ ತೀರಿಕೊಳ್ಳುತ್ತೇನೆ, ನೀನೂ ಬದುಕುವುದಿಲ್ಲ, ನಿನ್ನ ತಾಯಿಯನ್ನು ಒಂಟಿ ಮಾಡಬೇಡ, ನನ್ನನ್ನು ಕ್ಷಮಿಸು, ಮತ್ತೊಬ್ಬನಿಗೆ ಹೆಂಡತಿಯಾಗಿ ಹೋದರೂ ನೀ ಮುಟ್ಟಿದ ಈ ದೇಹವನ್ನು ಮತ್ತಾರೂ ಮೈಲಿಗೆ ಮಾಡಲಾರರು’ ಎಂಬ ಸಂದೇಶ ಕಳುಹಿಸಿ ಆ ಮೊಬೈಲ್ ಅನ್ನು ಕೋಪದಿಂದ ಚೂರು ಚೂರು ಮಾಡಿಬಿಟ್ಟಳು.

ಕಾವ್ಯಳ ಮದುವೆಯ ನೆಪದಿಂದ ಶಾಂತಮ್ಮ ಮತ್ತು ಲಕ್ಷ್ಮೀಶಭಟ್ಟರು ಸ್ವಲ್ಪ ಸಮಾಧಾನ ಚಿತ್ತರಾದಂತೆ ಕಂಡು ಬಂದರು. ಮದುವೆ ಸಮೀಪಿಸುತ್ತಿದ್ದಂತೆ ಲವಲವಿಕೆ ಪಡೆದುಕೊಂಡರು. ತನ್ನ ಕೋಣೆಯಲ್ಲಿ ಒಬ್ಬಳೇ ಮಲಗುವ ಕಾವ್ಯಳ ಮೇಲೆ ತಿರುಗುವ ಫ್ಯಾನ್ ಅನೇಕ ಬಾರಿ ಅವಳನ್ನು ಕರೆದಂತೆ ಭಾಸವಾದರೂ ಅಪ್ಪ ಅಮ್ಮಳನ್ನು ನೆನಪಿಸಿಕೊಂಡು ಮೌನವಾಗಿಯೇ ಉಳಿದುಬಿಟ್ಟಳು. ತಪ್ಪಾಗಿ ಹುಟ್ಟಿಬಿಟ್ಟಿದ್ದೇನೆ, ಎಲ್ಲೋ ಸೇರಿಕೊಂಡು ತಪ್ಪಾಗಿಯೇ ಸತ್ತುಬಿಡೋಣವೆಂದು ನಿರ್ಧರಿಸಿಕೊಂಡಳು.

ಮದುವೆಯ ಹಿಂದಿನ ದಿನ ಲಕ್ಷ್ಮೀಶಭಟ್ಟರು ಕಾವ್ಯಳ ಕೊಠಡಿಗೆ ಬಂದವರೇ ಮಗಳನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಕೀರ್ತಿಯನ್ನು ನೆನಪಿಸಿಕೊಂಡು ಅತ್ತುಬಿಟ್ಟರು. ‘ನಿನಗೆ ಗೊತ್ತು ಮಾಡಿರುವ ಗಂಡಿಗಿಂತಲೂ ಶ್ರೀಮಂತನಾದ ಹುಡುಗನನ್ನು ಅವಳಿಗೆ ನಾನು ಹುಡುಕುತ್ತಿದ್ದೆ, ಆಕೆ ಈ ರೀತಿಯಾಗಿ ಮಾಡಬಾರದಾಗಿತ್ತು’ ಎಂದರು. ಕಾವ್ಯ ಏನೂ ಮಾತನಾಡಲಿಲ್ಲ. ಮೌನದುಸಿರು ಅವಳನ್ನು ಸುಡುತ್ತಿತ್ತು.
‘ನನ್ನ ಮೇಲೆ ಕೋಪವೇ ನಿನಗೆ? ಇತ್ತೀಚೆಗೆ ನಾನು ಏನೇ ಕೇಳಿದರೂ ತಲೆಯಾಡಿಸುವುದು ಬಿಟ್ಟು ಬೇರೇನೂ ಮಾತನಾಡುತ್ತಿಲ್ಲ, ನನ್ನನ್ನು ಮತ್ತು ಅಮ್ಮನನ್ನು ಆಡಿಕೊಂಡು ಹೊಟ್ಟೆ ಉರಿಸುತ್ತಿದ್ದು ಮರೆತುಬಿಟ್ಟೆಯ ಕಂದ’ ಎಂದರು ಲಕ್ಷ್ಮೀಶಭಟ್ಟರು. ಅಪ್ಪನ ಕಣ್ಣನ್ನು ಗಾಢವಾಗಿ ದಿಟ್ಟಿಸಿದ ಕಾವ್ಯ ಮತ್ತೆ ಅದೇ ತೆರನಾಗಿ ಏನೂ ಇಲ್ಲವೆಂಬಂತೆ ತಲೆಯಾಡಿಸಿದಳು. ಮುಖದಲ್ಲಿ ಕಂಡೂ ಕಾಣದಂತೆ ಅಳುವೊಂದು ಆವರಿಸಿತ್ತು.

ನಾಲ್ಕು ಎಕರೆಯಗಲದ ಜಮೀನಿನಲ್ಲಿ ಹರಡಿಕೊಂಡ ಕಲ್ಯಾಣ ಮಂಟಪ. ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಿತ್ತು. ನೂರಾರು ಕಾರುಗಳು ಜಮಾಯಿಸಿದ್ದವು. ಆಗರ್ಭ ಶ್ರೀಮಂತರಿಂದ ಕಲ್ಯಾಣ ಮಂಟಪ ತುಳುಕಿತ್ತು. ಪ್ರತಿಷ್ಠಿತ ವ್ಯಕ್ತಿಗಳ ದಿಂಡೇ ಅಲ್ಲಿ ನೆರೆದಿತ್ತು. ಪಟ್ಟಣವೆಲ್ಲಾ ಸದ್ದು ಮಾಡಿದ್ದ ಮದುವೆಯನ್ನು ಚಿತ್ರಿಕರಿಸಿಕೊಳ್ಳಲು ಮಾಧ್ಯಮ ವರ್ಗ ನೆರೆದಿತ್ತು. ಅಷ್ಟು ದೊಡ್ಡ ಕಲ್ಯಾಣ ಮಂಟಪದ ಯಾವುದೋ ಒಂದು ಕೊಠಡಿಯಲ್ಲಿ ಕಾವ್ಯ ಕುಳಿತಿದ್ದಳು. ಅಂದ ಚಂದದ ನೂರಾರು ಸೀರೆಗಳು ಅವಳ ಮೈಗೆ ಒಗ್ಗಲಿಲ್ಲ. ಎದೆ ಮೇಲೆ ಹಾಸಿದ್ದ ರಾಶಿ ರಾಶಿ ಒಡವೆಗಳು ಮಿರಿ ಮಿರಿ ಮಿಂಚಲಿಲ್ಲ. ಶಾಂತಮ್ಮ ಕಾವ್ಯಳ ತಲೆ ಮೇಲಕ್ಕೆತ್ತಿದರು. ಕಣ್ಣುಗಳು ನೀರಿನಿಂದ ತುಂಬಿಹೋಗಿತ್ತು. ‘ಯಾಕಮ್ಮಾ?’ ಎಂದರು ಶಾಂತಮ್ಮ. ಕಾವ್ಯ ಎಂದಿನಂತೆ ಒಂದು ಪದವೂ ಮಾತನಾಡದೆ ಏನೂ ಎಲ್ಲ ಎಂಬಂತೆ ತಲೆ ಆಡಿಸಿದಳು. ಹೆಣ್ಣನ್ನು ಕರೆದುಕೊಂಡು ಬನ್ನಿ ಎಂಬ ಪುರೋಹಿತರ ಮಾತು ಕೇಳಿದ್ದೆ ಕೆಲ ಹೆಂಗಸರು ಕಾವ್ಯಳ ರಟ್ಟೆ ಹಿಡಿದು ಜೋಪಾನವಾಗಿ ಮಂಟಪದೆಡೆಗೆ ಕರೆದುಕೊಂಡು ಹೋದರು. ಅಷ್ಟಕ್ಕೇ ಅಲ್ಲಿಗೆ ಬಂದ ಲಕ್ಷ್ಮೀಶಭಟ್ಟರು ಕಾವ್ಯಳ ಗಲ್ಲವೆತ್ತಿ ನೋಡಿದೊಡನೆ ಆಶ್ಚರ್ಯವಾಯಿತು. ಅವಳ ಮೊಗದಲ್ಲೇನೋ ಕೊರತೆಯಿತ್ತು, ಕಣ್ಣೀರು ತುಂಬಿಕೊಂಡಿತ್ತು. ಅಪ್ಪನನ್ನು ತಬ್ಬಿಕೊಂಡವಳೇ ಬಿಕ್ಕಳಿಸಿ ಬಿಕ್ಕಳಿಸಿ ಅತ್ತುಬಿಟ್ಟಳು. ಮುಹೂರ್ತಕ್ಕೆ ಸಮಯವಾಗುತ್ತಿದೆ ಎಂಬ ಕೂಗು ಕೇಳಿದ್ದೆ ಕಾವ್ಯಳನ್ನು ಕಲ್ಯಾಣ ಮಂಟಪಕ್ಕೆ ಕರೆದುಕೊಂಡು ಹೋಗಲಾಯಿತು.

ಕೊನೆಗೂ ತಾಳಿ ಕಟ್ಟುವ ಸಮಯ ಸಮೀಪಿಸಿತು. ದೂರದಿಂದಲೇ ಮಗಳನ್ನು ಗಮನಿಸುತ್ತಿದ್ದ ಲಕ್ಷ್ಮೀಶಭಟ್ಟರಿಗೆ ಅಳು ಉಕ್ಕಿಬಂತು. ಕಾವ್ಯ ಬಗ್ಗಿಸಿದ ತಲೆಯನ್ನು ಮೇಲಕ್ಕೆತ್ತಿದ್ದು ಕಾಣಲಿಲ್ಲ. ಸರಸರನೆ ಕಾವ್ಯಳ ಬಳಿ ಹೋದ ಲಕ್ಷ್ಮೀಶಭಟ್ಟರು ಆಕೆಯ ಮುಖವೆತ್ತಿ ನೋಡಿದರು. ತುಟಿಗಳು ಅದುರುತ್ತಿದ್ದವು, ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ತಾನು ಸಾಕಿ ಬೆಳೆಸಿದ, ತನ್ನ ಜೀವವಾದ ಮಗಳ ಮುಖದಲ್ಲಿ ಲಕ್ಷ್ಮೀಶಭಟ್ಟರ ಹೃದಯವನ್ನು ಕೊಯ್ಯುವಂತಹ ತೀಕ್ಷ್ಣ ನೋವಿತ್ತು. ಖಡ್ಕಕ್ಕಿಂತಲೂ ಹರಿತವಾದ ಅವಳ ಮೌನ ಎದೆಯನ್ನು ಚುಚ್ಚಿತು. ಕಣ್ಣೀರು ಧಾರಾಕಾರವಾಗಿ ಹರಿಯಿತು.

ಕಾವ್ಯಳ ಕೈಯನ್ನು ಹಿಡಿದುಕೊಂಡ ಲಕ್ಷ್ಮೀಶಭಟ್ಟರು ‘ಒಬ್ಬಳು ಮಗಳನ್ನು ಕಳೆದುಕೊಂಡಿದ್ದೇನೆ, ಮತ್ತೊಬ್ಬಳು ಮಗಳನ್ನು ಕಳೆದುಕೊಳ್ಳುವುದಿಲ್ಲ, ನನಗೀ ಮದುವೆ ಇಷ್ಟವಿಲ್ಲ, ನನ್ನ ಮಗಳ ನಗುವಿಗೋಸ್ಕರ ಕಾಯುತ್ತೇನೆ ಎಂದವರೇ ಕಾವ್ಯಳನ್ನು ಕರೆದುಕೊಂಡು ಕಲ್ಯಾಣಮಂಟಪದಿಂದ ಹೊರಗೆ ನಡೆದುಬಿಟ್ಟರು.