ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Sunday 16 October 2011

ಮತ್ತೆ ಅತ್ತೆ....

ಇರುಳ ತೆರೆ ಬೆಳಕಿನಲಿ
ಮೌನದ ಜಗ ಜಾತ್ರೆಯಲಿ
ಅಲೆ ತೊಯ್ದು ನಕ್ಷತ್ರ
ಎನ್ನ ಮನವ ಕೂಗಿರಲು
ನಿನ್ನ ನೆನಪಿನಲ್ಲಿ ಅಳುತ್ತಿದ್ದೆ

ನೀಲಾಂಬರ ಸ್ವಚ್ಚಚಾದರ
ಅರವಳಿಕೆಯ ಎಚ್ಚರ
ದಿಗಂತದ ದೇವಗಣಕ್ಕೆ
ನಿನ್ನ ಮುಖಲಾಂಚನ
ಮನ ನಿನ್ನ ಬಯಸಿತ್ತು
ಸತ್ಯವರಿಯದೇ ಮತ್ತೆ ಅತ್ತೆ

ಕಾಂತಮೊಗದವಳು ಏಕಾಂತ
ಮರೆಸಿ, ನನ್ನನ್ನಪ್ಪಿದಳು
ಹಾಲ್ಗೆನ್ನೆ, ಪುಟ್ಟಕಂಗಳೊಡತಿ
ನಿನ್ನಂತೆ ಇರುವಳು
ನಿನ್ನ ಮುದ್ದುಮಗಳು
ನಿನ್ನ ಸಾವನ್ನು ಮರೆಸಿದವಳು

ಒಂದು ಅಳು...

ಮರ ಕಡಿದು ನೆಲ ಅಗೆದು
ಡಾಂಬರು ಮೆತ್ತಿ
ಬಸ್ಸು ರೈಲು ಓಡಿಸಿ
ಆಕಾಶಕ್ಕೆ ಗೋಡೆ ಎಬ್ಬಿಸಿ
ಅಂಗಡಿ ನೂರಾದವು
ಜನಜಾತ್ರೆ ನೂಕು ನುಗ್ಗಲು
ಅಡಿಯಿಡಲು ನೆಲವಿಲ್ಲ
ಮುಡಿಸಿಂಗಾರ ಉಳಿದಿಲ್ಲ
ಕಾಡಿದ ಜಗದೋಟಕ್ಕೆ
ಬೇಡಿಕೆಯ ಕುದುರೆ
ಓಡಿ ಓಡಿ ಸುಸ್ತಾಗಿರಲು
ನಕ್ಕವು ಎರಡು ಮರ
ಒಂದಕ್ಕೆ ವರ್ಷ ನೂರು
ಇನ್ನೊಂದಕ್ಕೆ ಹತ್ತು ಕಡಿಮೆ

ಬರಿದೆ ದಾರಿಯಲ್ಲಿ
ನಡೆದವರಿಗೆ ನೆರಳು
ಹೂಹಣ್ಣು ತೊಗಟೆ
ಕೆಳಗೆ ಕುಳಿತು ಹರಟೆ
ಒಳಗೆ ನಕ್ಕ ಮರಕ್ಕೆ
ಭವಿಷ್ಯದಲ್ಲಿ ದಿಗಿಲು
ಅದಕ್ಕೆ ಬೇಲಿ ಕೈ
ಚಕ್ಕೆಯುದುರಿ ಭಿತ್ತಿಪತ್ರ
ಹೂತ ಪಾದ ಮುರಿದು
ಕೈಕಾಲು ಕತ್ತರಿಸಿ
ವಿದ್ಯುತ್ ತಂತಿ ಪೋಣಿಸಿ
ಬಿಸಿಲಿನಲ್ಲಿ ನಿಂತರು
ಬುಡಕ್ಕೆ ಉಚ್ಚೆ ಉಯ್ದು
ಬಂಧುಬಳಗವ ನುಂಗಿದರು
ಎಲ್ಲ ಕಳೆದುಕೊಂಡು ಮೆರೆದರು

Tuesday 11 October 2011

ಮತ್ತೆ ಹೊಲೆದೆ

ಹರಿದ ಸೀರೆಯ ಮನಸ್ಸನ್ನು
ಹೊಲೆಯಲು ಸೂಜಿ ತಂದೆ
ಚುಚ್ಚಿದಂತೆ ಮತ್ತೆ ಮತ್ತೆ ಅಯ್ಯಯ್ಯೋ ಎನ್ನುತ್ತಿತ್ತು
ರೈಲಿನಂತೆ ಕೊರೆದ ದಾರ
ಮುಗಿಸಿ ಹರವಿ ನೋಡಿದೆ
ಮೊದಲ ಗಂಟು ಮತ್ತೆ ಬಿಚ್ಚಿಹೋಗಿತ್ತು

ಅಲ್ಲೆಲ್ಲೋ ಯಾರೋ
ಚೀಲವೊಂದನ್ನು ದಬ್ಬಳದಲ್ಲಿ ಹೊಲೆಯುತ್ತಿದ್ದರು
ಎದುರು ಮನೆಯ ಬಾಗಿಲಿಗೆ
ಸುತ್ತಿಗೆ ಬಡಿದು ಚಿಲಕ ಸಿಕ್ಕಿಸಿದ್ದರು
ಕಣ್ಣೀರೊರೆಸಿ ಜೋರಾಗಿ ನಕ್ಕೆ
ಗಟ್ಟಿ ಗಂಟು ಬೆಸೆದು ಮತ್ತೆ ಹೊಲೆದೆ

ಮಳೆ ಬರುತ್ತಿದೆ ಇಲ್ಲಿ....

ಮಳೆ ಬರುತ್ತಿದೆ ಇಲ್ಲಿ
ಹೃದಯಮೋಡ ಸುರಿಸಿದ
ಹನಿ ಹನಿಯು ನಿನ್ನ
ನೆನಪಾಗಿ ಕಾಡಿದೆ
ಕಣ್ಣೀರಾಗಿ ನದಿ ಹರಿದು
ಕೆರೆ ಕಟ್ಟೆ ತುಂಬಿದೆ

ಆ ಕೆರೆಯನ್ನೇ ಬಸಿದು
ನೀರು ಹರಿಸಿಕೊಂಡರು
ತುಟಿ ಬಿರಿದ ನೆಲ
ಕೀಳುಜಾತಿಯ ಕಟ್ಟೆ
ಇಲ್ಲದ ಹಾವನ್ನು
ಕೊಲ್ಲುವ ಭರದಲ್ಲಿ
ರಾಡಿ ಎಬ್ಬಿಸಿಬಿಟ್ಟರು

ಆ ಮನೆಯಲ್ಲಿ ಮತ್ತೆ ಹುಟ್ಟಬೇಡ
ಈ ಮನೆಯನ್ನು ಮತ್ತೆ ಮೆಟ್ಟಬೇಡ
ಅರ್ಥ ಮಾಡಿಕೊಳ್ಳದ ಈ ಮನೆ ಯಾಕೆ?
ಹೊಂದಿಕೊಳ್ಳದ ಆ ಮನೆ ಬೇಕೇ?
ಉಯ್ಯಾಲೆಯಲ್ಲಿ ನನ್ನ ನೆನಪೇ ಇರಲು
ಆ ಮನೆಯವರು ನಿತ್ಯ ಸತ್ತರು
ಹಾಗೆ ಮಾಡಿಬಿಟ್ಟು, ಹೀಗಾಗಿ ಹೋಯಿತಲ್ಲ
ಎಂದು ಈ ಮನೆಯವರು ಸುಮ್ಮನೆ ಅತ್ತರು
ಹೂವೆರಡನ್ನು ಹರಾಜಿಗೆ ಇಟ್ಟರು

Sunday 2 October 2011

ಕಾಯಬೇಕಿತ್ತು...

ಮುದ್ದಾದೆರಡು ಮಗು ಹೆತ್ತು
ಎಲ್ಲರೊಪ್ಪುವ ಹೆಸರಿಟ್ಟು
ಆಡಿಸಿ ಬೆಳೆಸಿ ಕಲಿಸಿ
ಮೊಮ್ಮಕ್ಕಳಿಗೆ ಮೂರು ಮುತ್ತು ಕೊಟ್ಟು
ನಂತರ ಹೋಗಬಹುದಿತ್ತು
ಮಾಡುವುದು ಇನ್ನೂ ಇತ್ತು

ಚಂದ್ರನೆದೆಯಲ್ಲಿ ಬೆಳದಿಂಗಳ
ರಂಗವಲ್ಲಿ ಇಕ್ಕಿ
ಅವನಿಗೊಮ್ಮೆ ಕಣ್ಣು ಮಿಟುಕಿಸಿ
ಹರಿವ ನದಿಯೊಂದಿಗೆ ಹರಿದು
ಅದರಿಕ್ಕೆಲಗಳ ಮರದಂಬಿನಲ್ಲಿ
ಒಬ್ಬರಿಗೊಬ್ಬರೂ ತೂಗಿ
ಅಲ್ಲೇ ಕೂಡಿಕೊಳ್ಳಬಹುದಿತ್ತು

ಅವರವರ ಹಣೆಬರಹವೆಂದುಸುರಿದವನಾರು?
ನಿನ್ನ ಹಣೆ ಬರೆದ ಲೇಖನಿ
ನನ್ನ ಬೆರಳ ಸಂಧಿಯಲ್ಲಿತ್ತು
ತಪ್ಪು ಅಚ್ಚನ್ನು ಅಳಿಸಿ
ಚಿತ್ತಾರವಿಟ್ಟು ಮತ್ತೆ ಬರೆಯುತ್ತಿದ್ದೆ
ಕಾಯಬೇಕಿತ್ತು, ಬದುಕಿನೊಲೆಯಲ್ಲಿ
ನೀ ಬೇಯಬೇಕಿತ್ತು

ಒಂಟಿಪಯಣವಲ್ಲ ನಿನ್ನದು
ಜಂಟಿಪಯಣ
ನಾ ನೇವರಿಸಿದ ತಲೆ
ಮುತ್ತಿಕ್ಕಿದ ಕಣ್ಣು
ಸವರಿದ ಮೈ ಕೈ ಈ ರೀತಿ
ಅನಾಥವಾಗಿ ಮಣ್ಣಡಿಯಲ್ಲಿ ಕೊಳೆಯಬಾರದಾಗಿತ್ತು

Saturday 1 October 2011

ಮನಸ್ಸು ಬಗ್ಗಡವಾಗಿ
ಬೇಸರದುಸಿರಿನಲಿ ಮಲಗಿದ್ದಾಗ
ಇದ್ದಕ್ಕಿದ್ದಂತೆ ಮನೆದೀಪ ಹೊತ್ತಿಕೊಂಡಿತು
ಯಾರೋ ಎದೆ ತಟ್ಟಿದರು

ಕನಸೋ ನನಸೋ ನಂಬಲಾಗಲಿಲ್ಲ!
ಹೊಸ್ತಿಲ ಬಳಿ ಅವಳೇ ನಿಂತಿದ್ದಳು
ಅಪ್ಪಿಕೊಳ್ಳಲು ಓಡಿದೆ
ಇರುಳ ತಿಳಿ ಬೆಳಕಿನಲಿ
ಹಾಗೆ ಕರಗಿ ಮಾಯವಾದಳು

ನೋವು ಇಮ್ಮಡಿಗೊಂಡು
ತಿಂಗಳ ಬೆಳಕಿನಂಗಳಕ್ಕೆ ಬಂದೆ
ಆಶ್ಚರ್ಯ!
ಚಂದ್ರನ ಬೆಳದಿಂಗಳಾಗಿ
ಮೈಮೇಲೆಲ್ಲಾ ಸುರಿದಳು!