ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Tuesday 10 July 2012

ಕಾಣದ ನೆರಳು... (ನೈಜ ಘಟನೆಯ ಎಳೆಯೊಂದಿಗೆ...)

ಸಮಯ ಸರಿರಾತ್ರಿ ಒಂದು. ಸುತ್ತಲ ನೀರವತೆಗೆ ಊರಂಚಿನ ಕೆರೆ ಏರಿ ಮೇಲಿನ ಗಾಳಿಯ ರಭಸ ಗುಯ್ ಎಂದು ಕಿವಿಗೆ ಬಡಿಯುತ್ತಿದೆ. ಏನೂ ಇಲ್ಲದಿದ್ದರೂ ಅದೇನನ್ನೋ ನೋಡಿಕೊಂಡು "ಕುಯ್ಯೋ" ಎಂದು ರಾಗ ಎಳೆದು ಬೊಗಳುವ ನಾಯಿಗಳು. ನೆರೆ ಮನೆಯ ಹಸುಗಳು ಮೆಲುಕು ಹಾಕುವ ಶಬ್ದ ಲಯಬದ್ಧವಾಗಿ ಕಿವಿಗೆ ಸುಳಿದಿದೆ. ಹಗಲೆಲ್ಲ ಜನಗಳಿಂದ ಗಿಜಿಗುಟ್ಟುತ್ತಿದ್ದ ಹಳ್ಳಿಯ ಆ ಕೇರಿ ಮತ್ತು ರಸ್ತೆ, ಬೀದಿ ದೀಪದ ಚೂರಿನಲ್ಲಿ ಮೌನವಾಗಿ ಭಯವನ್ನು ನುಂಗಿಕೊಂಡಿದೆ. ಕೆರೆ ಏರಿ ಮೇಲೇ ಹಾದುಹೋಗುವ ಹೊಲ ಕಾಡಿಗೊಯ್ಯುವ ಕಾಲ್ದಾರಿ ಅಕ್ಷರಶಃ ಮುಗುಮ್ಮಾಗಿ ಏನೋ ಅವ್ಯಕ್ತ ಭಯ ಹುಟ್ಟು ಹಾಕಿತ್ತು. ತಡಿಯಲ್ಲಿದ್ದ ಮರಗಳ ಕೊಂಬೆ ರೆಂಬೆಗಳು ಆ ಜಗ ಸತ್ತ ಹೊತ್ತಿನಲ್ಲೂ ಅಲುಗಾಡಿಕೊಂಡು ಒಂದಕ್ಕೊಂದು ಮಾತನಾಡಿಕೊಳ್ಳುತ್ತಿದ್ದವು. ಅವನಿಗೆ ಆ ಮಾರಮ್ಮನ ದೇವಸ್ಥಾನ ದಾಟಲು ಎಂಥದೋ ಭಯ. ಊರನ್ನೆಲ್ಲಾ ಕಾಯುವ ಮಾರಿಗುಡಿಯ ಬಳಿ ರಾತ್ರಿಯ ಸಮಯದಲ್ಲಿ ಹೋಗಲು ಆ ಜನಕ್ಕೆ ಮೊದಲಿನಿಂದಲೂ ನಡುಕ. ತ್ರಿಶೂಲ ಹಿಡಿದ ಚಂಡಿ ಮಾರವ್ವನನ್ನು ಗಾಢ ಕತ್ತಲ ನಡುವಿನ ಮಂದಬೆಳಕಿನಲ್ಲಿ ನೋಡುವ ಧೈರ್ಯ ಯಾರಿಗೂ ಇರಲಿಲ್ಲ. ಇಂದು ಮಾತ್ರ ಆತ ಧೈರ್ಯ ತಾಳಿ ಆ ದೇವಸ್ಥಾನ ದಾಟಿ ಆ ಮನೆ ಬಳಿ ಬಂದೇಬಿಟ್ಟ.

ಈತ ಬಂದದ್ದೇ ಬೇಲಿಯ ತಡಿಯಿಂದ ಯಾರೋ ಸರಸರನೇ ಒತ್ತರಿಸಿಕೊಂಡು ಓಡಿಹೋದರು. ಸೂಜಿ ಬಿದ್ದರೂ ಘಂಟೆ ಭಾರಿಸಿದಂತೆ ಕೇಳುವ ಜಾಗದಲ್ಲಿ ಒಮ್ಮೆಲೇ ಆ ರೀತಿ ಶಬ್ದ ಬಂದದ್ದರಿಂದ ಆತ ದತ್ತನೆ ಬೆಚ್ಚಿಹೋದ. ಕೈಕಾಲು ಅದುರುತ್ತಿದ್ದವು. ಜೋರುಗೊಂಡ ಹೃದಯ ಬಡಿತ ಆತನಿಗೆ ಸ್ಪಷ್ಟವಾಗಿ ಕೇಳ ತೊಡಗಿತು. ಆ ಬೇಲಿಯ ಮೂಲೆಯಲ್ಲಿ ಏನೋ ಬಿಳಿಯ ವಸ್ತು ಬಿದ್ದಿರುವಂತೆ ಕಂಡಿತು. ಧೈರ್ಯ ತಳೆದು ಹತ್ತಿರ ಹೋದವನೇ ಕ್ಷಣಮಾತ್ರದಲ್ಲಿಯೇ ಆ ವಸ್ತುಗಳನ್ನು ಮುಟ್ಟಲು ಹೆದರಿದ. ಹೆಜ್ಜೆ ಹಿಂದಕ್ಕೆ ಊರಿದ. ಅದು ಬಟ್ಟೆಯ ಗಂಟು, ಒಳಗೆ ಏನೋ ಇದೆ ಎಂದು ಗೊತ್ತಾಯಿತು. ನೋಡೇಬಿಡುವ ಎಂದುಕೊಂಡು ನಿಧಾನವಾಗಿ ಕುಳಿತು ಆ ಬಟ್ಟೆ ಮುಟ್ಟುವಷ್ಟರಲ್ಲಿ, ಪಕ್ಕದಲ್ಲಿದ್ದ ಮರದ ಮರೆಯಿಂದ ಯಾರೋ ಧೊಪ್ಪನೇ ಕಲ್ಲನ್ನು ಅವನೆಡೆಗೆ ಎಸೆದರು. ಮತ್ತೆ ಅದುರಿದ ಆತ, ಒದರಿಕೊಂಡು ಥಟ್ಟನೇ ನಿಂತುಕೊಂಡ, ಕಲ್ಲು ಗುರಿ ತಪ್ಪಿತ್ತು.
ಮರದ ಮರೆಯಲ್ಲಿ ಇದ್ದಕ್ಕಿದ್ದಂತೆ ಒಂದು ನೆರಳು ಪ್ರತ್ಯಕ್ಷವಾಯಿತು.

"ಯಾರು....? ಯಾರೂ...? ಏ ಯಾರದು...?"

ನಡುಗುವ ಕೈಯನ್ನು ಸಾವಧಾನವಾಗಿ ಜೇಬಿಗಿಳಿಬಿಟ್ಟು ಮೊಬೈಲ್ ಎತ್ತುಕೊಂಡ. ಮೊಬೈಲ್ ನ ಟಾರ್ಚನ್ನು ಆನ್ ಮಾಡುವಷ್ಟರಲ್ಲಿ ಆ ನೆರಳು ಮಾಯವಾಯಿತು. ಬೇಲಿಯ ತಡಿಯ ಓಣಿಗೆ ಚಂಗನೆ ನೆಗೆದ ಆ ಪ್ರತಿಮೆ ಎರಡು ಮನೆಗಳ ನಡುವೆ ಇರುವ ಕತ್ತಲ ಸಂಧಿಯೊಳಗೆ ತೂರಿಕೊಂಡಿತು. ದೀಪದ ಬೆಳಕಿನಲ್ಲಿಯೇ ನಿಂತುಕೊಳ್ಳಲು ಅದುರುವ ಮೌನದ ಹೊತ್ತಿನಲ್ಲಿ, ಇನ್ನ ಆ ಸಂಧಿಗೆ ನುಗ್ಗುವುದು ಪುಕ್ಕಲುತನದ ಪರಮಾವಧಿಯೆನಿಸಿ ಆತ ಅತ್ತ ಸಾರಲಿಲ್ಲ.

ಧೈರ್ಯಗೆಡದ ಆತ ಮತ್ತೆ ಕುಳಿತುಕೊಂಡ. ಇದ್ದಕ್ಕಿದ್ದಂತೆ ಹಿಂದೆ ಯಾರೋ ಬಂದಂತೆನಿಸಿ ಹಠಾತ್ತನೆ ತಿರುಗಿನೋಡಿದ. ಜೋರಾಗಿ ಬೀಸಿದ ಗಾಳಿಗೆ ಆಲದ ಮರ ಕೆಂಜೆಡೆ ರುದ್ರನಂತೆ ಅಲುಗಾಡುತ್ತಿತ್ತು. ಪ್ರತಿದಿನ ಮುಂಜಾನೆಯೇ ಆತ ಸೌದೆ ತರಿದುಕೊಂಡು ಬರುತ್ತಿದ್ದ ಪೂರ್ವದ ಜುಜ್ಜಲುಕಟ್ಟೆ ಗುಡ್ಡ ಆತನಿಗೆ ದೆವ್ವದಂತೆ ಕತ್ತಲಕೂಪದಲ್ಲಿ ವಿಚಿತ್ರವಾಗಿ ಕಂಡಿತು.
ಹೌದು ಅದು ಬಟ್ಟೆಯ ಗಂಟು. ಅದರ ಪಕ್ಕದಲ್ಲಿಯೇ ಒಂದು ಗುಂಡಿ ಅಗೆಯಲಾಗಿತ್ತು. ಆ ನೆರಳು ನುಗ್ಗಿದ ಸಂಧಿಯಿಂದ ನಾಯಿ ಗೀಳಿಟ್ಟ ಶಬ್ದದೊಂದಿಗೆ ಯಾರೋ ವಿಚಿತ್ರವಾಗಿ ನಕ್ಕ ಶಬ್ದ ಬಂದಿತು. ಯಾಕೋ ಅಲ್ಲಿ ಆತನಿಗೆ ಅದನ್ನು ಬಿಚ್ಚಿ ನೋಡುವ ಧೈರ್ಯ ಬರಲಿಲ್ಲ. ಗಂಟನ್ನು ಕಂಕುಳಲ್ಲಿ ಸಿಕ್ಕಸಿಕೊಂಡವನೇ ನೇರವಾಗಿ ಮನೆಗೆ ಬಂದುಬಿಟ್ಟ. ನಡೆದುಬಂದ ದಾರಿಯನ್ನು ತಿರುಗಿ ನೋಡುವ ಧೈರ್ಯವೂ ಬರಲಿಲ್ಲ. ಮನೆ ಒಳಕ್ಕೆ ನುಗ್ಗಿದವನೇ ಧಡಾರನೇ ಬಾಗಿಲು ಮುಚ್ಚಿಕೊಂಡು ಗೋಡೆಗೆ ಒರಗಿಕೊಂಡ. ಒಂದೇ ಸಮನೆ ಏದುಸಿರು ಬಿಡುತ್ತ ನಿಂತುಬಿಟ್ಟ. ಎದೆ ಢವ ಢವ ಎಂದು ಒಡೆದುಕೊಳ್ಳುತ್ತಿತ್ತು. ನಡುಗುತ್ತಿದ್ದ ಕೈ ಕಾಲುಗಳು ಸ್ವಲ್ಪ ಹತೋಟಿಗೆ ಬಂದವು.

ಕೈಯಲ್ಲಿದ್ದ ಬಟ್ಟೆ ಯಾವುದೋ ಎಳೆ ಮಗುವಿನದು. ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಬಿಚ್ಚಿ ನೋಡಿದಾಗ ಅದರೊಳಗೆ ಒಂದಷ್ಟು ಮಗುವಿನ ಬಳೆಗಳು, ಓಲೆ, ಎರಡು ಕೆಳ ಉಡುಪು ಇತ್ತು. ಆತನಿಗೆ ಕೆಲವು ವಿಚಾರಗಳು ಅಸ್ಪಷ್ಟವಾಗಿ ಗೋಚರಿಸಿದವು. ಇದನ್ನು ಹೂಳಲು ಬಂದವರು ಯಾರಿರಬಹುದು? ಆ ನೆರಳು ಖಂಡಿತ ಯಾವುದೋ ಹೆಣ್ಣು ದೆವ್ವದ್ದು ಎಂದೆನಿಸಿತ್ತು.
-
ಆ ತಾಯಿಯ ಅಳು ಇಂದು ಕೂಡ ನಿಂತಿರಲಿಲ್ಲ. ಒಂದು ವಾರದಿಂದಲೂ ಅನ್ನ ನೀರು ತ್ಯಜಿಸಿ ಕೇವಲ ನೀರು ಕುಡಿದು ಅದನ್ನೂ ಕಣ್ಣೀರಾಗಿ ಹರಿಸಿದ್ದಳು.
"ಹೆತ್ತ ಮಗುವನ್ನು ಕಳೆದುಕೊಂಡರಾಗುವ ಸಂಕಟ ಆ ತಾಯಿಗೆ ಗೊತ್ತು, ಅತ್ತು ಹಗುರಾಗಲಿ ಬಿಡಿ, ಬಂಗಾರದಂತೆ ಆಟ ಆಡಿಕೊಂಡಿದ್ದ ಮಗುವನ್ನ ನುಂಗಿ ಬಿಟ್ಟರು ಪಾಪಿಗಳು" ಎಂದವರೆಲ್ಲರೂ ಇಂದು ಮುಂದೆ ಕುಳಿತು ಕೈ ಹಿಡಿದು "ಈ ರೀತಿ ಅತ್ತರೆ ಕಳೆದುಹೋದ ಮಗು ಬಂದುಬಿಡುವುದೇ? ಪೋಲೀಸರು ಒಂದು ವಾರದಿಂದಲೂ ಮಗುವಿನ ಹುಡುಕಾಟದಲ್ಲಿದ್ದಾರೆ, ನಿನ್ನ ಗಂಡ ಮೈದುನರೇನು ಸುಮ್ಮನೆ ಕುಳಿತಿಲ್ಲ, ಮಾರವ್ವನ ದಯೆಯಿಂದ ನಿನ್ನ ಕೂಸು ಬೇಗ ಸಿಗುತ್ತದೆ" ಎಂದು ಸಮಾಧಾನಿಸುತ್ತಿದ್ದರು.
ತನ್ನ ಮಗು ಕಿಸಕ್ಕೆಂದು ನಕ್ಕಿದ್ದ ಚಿತ್ರಗಳನ್ನು ನೋಡಿಕೊಂಡು ಆಕೆ ಅಳುವುದನ್ನು ನಿಲ್ಲಿಸಲಿಲ್ಲ. ಕರುಳು ಕಿತ್ತು ಬರುವ ಸಂಕಟಕ್ಕೆ ಮನೆ ಸ್ಮಶಾಣವಾಗಿತ್ತು.

ಅಳುತ್ತಳುತ್ತಲೇ ಆಕೆ "ಗೋವಿಂದಪ್ಪ ಹಾಲು ನೀಡಲು ಬಂದಿಲ್ಲವೇ, ಆತನಿಗೆ ಫೋನ್ ಮಾಡಿ ಬೇಗ ಹಾಲು ತರಲು ಹೇಳು, ಎಲ್ಲರಿಗೂ ಟೀ ಕಾಯಿಸಿಕೊಡು" ಎಂದು ತನ್ನ ವಾರಗಿತ್ತಿಗೆ ಹೇಳಿದಳು. ಅಷ್ಟಕ್ಕೆ ಗೋವಿಂದಪ್ಪ ಬಂದ.
ಎಲ್ಲರಿಗೂ ಟೀ ಕಾಯಿಸಿ ಕೊಟ್ಟದ್ದಾಯಿತು. ಆ ತಾಯಿಯ ಹತ್ತಿರ ಬಂದ ಗೋವಿಂದಪ್ಪ ಕಿವಿಯ ಬಳಿ ಮೆಲ್ಲನೆ ಉಸುರಿದ
"ನಿನ್ನ ಮಗುವಿನ ಬಟ್ಟೆ ಮತ್ತು ಬಳೆ, ಓಲೆ ಸಿಕ್ಕಿದೆ" ಎಂದ ಕೂಡಲೇ ಆಕೆ ಬೆಚ್ಚಿ ಬಿದ್ದಳು. ತುಟಿ ಅದುರಿತು, ಕಣ್ಣುಗಳು ಗಿರಗಿರನೆ ಅಲುಗಾಡಿದವು. ಕೆನ್ನೆ ಮೇಲೆ ಕಣ್ಣೀರು ಧಳ ಧಳನೆ ಧಾರಾಕಾರವಾಗಿ ಹರಿಯಿತು.
"ನನ್ನ ಮಗು, ಅಯ್ಯೋ.. ನನ್ನ ಮಗುವನ್ನು ಕೊಂದೆಯಲ್ಲೋ ಪಾಪಿ, ನನ್ನ ಮಗು ನನಗೆ ಕೊಟ್ಟುಬಿಡು, ಅಯ್ಯೋ ನನ್ನ ಮಗು ಸತ್ತು ಹೋಯಿತಲ್ಲ, ನನ್ನ ಮಗು" ಎಂದು ಆಕೆ ಚಿಟಾರನೆ ಕಿರುಚಿ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟಳು. ದೇಹ ಒಂದೇ ಸಮನೆ ಕಂಪಿಸಿಕೊಂಡಿತ್ತು. ಮುಖದ ಮೇಲೆ ನೀರು ಚಿಮುಕಿಸಿ ಆಕೆಯನ್ನು ಎಚ್ಚರಗೊಳಿಸುವಷ್ಟರಲ್ಲಿ ಗೋವಿಂದಪ್ಪನನ್ನು ಪೋಲೀಸರು ಬಂಧಿಸಿ ಎಳೆದೊಯ್ದಿದ್ದರು.
"ನನ್ನ ಮಗು, ನನ್ನ ಮಗು" ಎಂದು ಆಕೆ ಮತ್ತೆ ಅಲುಗಾಡತೊಡಗಿದಳು. ಈ ವಿಚಾರ ಊರೆಲ್ಲ ಹಬ್ಬಿಕೊಂಡು ಎಲ್ಲೆಲ್ಲೋ ಇದ್ದ ಗಂಡ, ಮೈದುನರೆಲ್ಲ ಹಳ್ಳಿಗೆ ಓಡೋಡಿ ಬಂದರು.
-
ಗೋವಿಂದಪ್ಪ ಪೋಲೀಸರಿಗೆ ನೇರವಾಗಿಯೇ ತನ್ನ ಚಟುವಟಿಕೆಯನ್ನು ಮಾರಮ್ಮನ ಮೇಲೆ ಆಣೆ ಮಾಡಿ ಒಪ್ಪಿಕೊಂಡ. ತನಗೆ ಆ ಬಟ್ಟೆಯ ಪೊಟ್ಟಣ ಸಿಕ್ಕಿದ್ದು, ಅರ್ಧರಾತ್ರಿಯಲ್ಲಿ ಅಲ್ಲಿಗೆ ಧಾವಿಸಿದ್ದು, ಧಾವಿಸಲು ಕಾರಣ, ಯಾರೋ ನೆರಳಾಗಿ ಓಡಿಹೋದದ್ದು ಎಲ್ಲಾ ಹೇಳಿದ. ಠಾಣೆಯ ಹೊರಗಡೆ ಊರಿನ ಜನರೆಲ್ಲರೂ ಕೂಡಿಕೊಂಡು ಮಗುವಿನ ದೇಹ ಎಲ್ಲಿದೆ ಎಂದು ಕೇಳಿ ಕೊಡಿಸಿಕೊಡಿ ಎಂದು ಗದ್ದಲಕ್ಕಿಳಿದರು.

ಪೋಲೀಸರು ಗೊಂದಲಕ್ಕೆ ಬಿದ್ದರು. "ಮಗುವಿನ ದೇಹವನ್ನು ಎಲ್ಲಿ ಹೂತಿಟ್ಟಿದ್ದಾನೆ ಎಂದು ಆತ ಹೇಳುತ್ತಿಲ್ಲ, ಇನ್ನೆರಡು ದಿನಗಳಲ್ಲಿ ಬಾಯಿ ಬಿಡಿಸುತ್ತೇವೆ" ಎಂಬ ಪೋಲೀಸರ ಎಂದಿನ ಮಾತಿಗೆ ಊರ ಜನ ಗೊಣಗಿಕೊಂಡೇ ಅಲ್ಲಿಂದ ಕಾಲು ಕಿತ್ತರು.
-
ಸಮಯ ರಾತ್ರಿ ಹನ್ನೆರಡು. ಈ ಬಾರಿ ಇನ್ಸ್ ಪೆಕ್ಟರ್ ಕಾಳಪ್ಪ ಮತ್ತು ಮತ್ತೊಬ್ಬ ಕಾನ್ಸ್ಟೇಬಲ್ ಆ ಬೇಲಿ ಬಳಿ ಬಂದರು. ಪೋಲೀಸ್ ವಸ್ತ್ರವಿರಲಿಲ್ಲ. ಯಾರಿಗೂ ಹಠಾತ್ತನೇ ತಿಳಿಯದಿರಲೆಂದೇನೋ ಕಪ್ಪು ವಸ್ತ್ರ ತೊಟ್ಟಿದ್ದರು. ಎಂದಿನಂತೆ ಸುತ್ತ ಮೌನ ಆವರಿಸಿ ಮನೆಗಳೆಲ್ಲ ದಣಿದು ಸತ್ತು ಮಲಗಿದ್ದವು. ಗೋವಿಂದಪ್ಪ ಹೇಳಿದ ಬೇಲಿಯ ಮೂಲೆಯಿಂದ ಯಾರೋ ನೆಲವನ್ನು ಅಗೆಯುತ್ತಿರುವ ಶಬ್ದ ಟಕ್ ಟಕ್ ಎಂದು ಕೇಳುತ್ತಿತ್ತು. ಕಾಳಪ್ಪ ನಿಧಾನವಾಗಿ ಅಲ್ಲಿಗೆ ಧಾವಿಸಿದಾಗ ಯಾವುದೋ ನೆರಳು ಗೋಚರಿಸಿಕೊಂಡಿತು. ಅಲ್ಲಿ ನೆಲ ಅಗೆಯುತ್ತಿರಲಿಲ್ಲ, ಬದಲಾಗಿ ಅಗೆದ ಗುಂಡಿಯನ್ನು ಯಾರೋ ಕಂಬಳಿ ಹೊದ್ದುಕೊಂಡವ ಮುಚ್ಚುತ್ತಿದ್ದ. ಮುಖ ಮುಚ್ಚಿಕೊಳ್ಳುವ ಟೊಪ್ಪಿ ಧರಿಸಿದ್ದರಿಂದ ಕತ್ತಲಲ್ಲ ಯಾರಿರಬಹುದು ಎಂದು ಊಹಿಸಲಾಗುತ್ತಿರಲಿಲ್ಲ. ಸಾವರಿಸಿಕೊಂಡು ಹತ್ತಿರ ಸಾರಿ ಚಂಗನೇ ನೆಗೆದ ಕಾಳಪ್ಪ ಮತ್ತು ಪೇದೆ ಆತನನ್ನು ಗಟ್ಟಿಯಾಗಿ ಅದುಮಿ ಹಿಡಿದುಕೊಂಡರು. ಇಬ್ಬರನ್ನು ಎಸೆದು ಮೈ ಕೊಡವಿಕೊಳ್ಳಲು ಆತ ಎಷ್ಟೇ ಪ್ರಯತ್ನಿಸಿದರೂ ತಪ್ಪಿಸಿಕೊಳ್ಳಲಾಗಲಿಲ್ಲ. ಅಷ್ಟಕ್ಕೆ ಕಾಳಪ್ಪನವರು ಪೋಲೀಸ್ ಜೀಪ್ ತರಿಸಿ ಆತನನ್ನು ಬಂಧಿಸಿ ಠಾಣೆಗೆಳೆದುಕೊಂಡು ಹೊರಟು ಬಿಟ್ಟರು.

ಆತ ಬೇರೆ ಯಾರೂ ಆಗಿರಲಿಲ್ಲ. ಮಗುವಿನ ಮನೆಯ ನೆರೆಮನೆಯ ಲಿಂಗಣ್ಣ. ಆತನನ್ನು ಬಂಧಿಸಿರುವ ವಿಚಾರ ಊರೆಲ್ಲ ಹಬ್ಬಿ ಠಾಣೆ ಮುಂದೆ ಮತ್ತೆ ಗದ್ದಲ ಶುರುವಾಯಿತು. ಅಪರಾಧಿಯನ್ನಿಟ್ಟುಕೊಂಡು ಒಬ್ಬ ನಿರಪರಾಧಿಯನ್ನು ಬಂಧಿಸಿರುವ ಪೋಲೀಸರ ಕ್ರಮವನ್ನು ಕೆಲ ಸ್ಥಳೀಯ ಪತ್ರಿಕೆಗಳು ಟೀಕಿಸಿದವು.
"ನಾನು ಉಚ್ಚೆ ಉಯ್ಯಲು ಅಟ್ಟಿಯಿಂದ ಹೊರಬಂದಿದ್ದೆ ತಡ, ಇದ್ದಕ್ಕಿದ್ದಂತೆ ನನ್ನ ಮೇಲೆರಗಿ ಎಳೆದುಕೊಂಡು ಬಂದಿದ್ದಾರೆ, ನಾನು ಅಲ್ಲಿ ಏನನ್ನೂ ಅಗೆಯುತ್ತಿರಲಿಲ್ಲ, ಮುಚ್ಚುತ್ತಿರಲಿಲ್ಲ" ಎಂದುಬಿಟ್ಟ ನಿಂಗಣ್ಣ ಉರುಫ್ ಲಿಂಗಣ್ಣ.

ಧೃತಿಗೆಡದ ಕಾಳಪ್ಪನವರು ಈ ಕೇಸನ್ನು ಛೇದಿಸಲು ರೂಪುರೇಷೆ ಹಾಕುತ್ತಿರುವಂತೆಯೇ ಯಾರೋ "ನಮಸ್ತೆ ಸರ್" ಎಂದರು.
ಕತ್ತೆತ್ತಿ ನೋಡಿದ ಇನ್ಸ್ ಪೆಕ್ಟರ್ ಕಾಳಪ್ಪನವರಿಗೆ ಆತ ಅಪರಿಚಿತನಾಗಿ ಕಂಡ. ಈ ಮೊದಲು ಆತನನ್ನು ಎಲ್ಲಿಯೂ ನೋಡಿದ ನೆನಪಿರಲಿಲ್ಲ. ಕೈಯಲ್ಲಿ ಒಂದು ವಾರ್ತಾಪತ್ರಿಕೆಯಿತ್ತು.

"ಸರ್.. ನನ್ನ ಹೆಸರು ಶಂಭು ನಾಯಕ್. ನಾನು ದೂರದ ಮಳವಳ್ಳಿ ಪಕ್ಕದಲ್ಲಿರುವ ಬ್ಲಫ್ ನಲ್ಲಿ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದೇನೆ" ಎನ್ನುತ್ತಿದ್ದಂತೆ ಕಾಳಪ್ಪನವರು ಆತನನ್ನು "ಕುಳಿತುಕೊಳ್ಳಿ" ಎಂದರು. ಕುಳಿತುಕೊಂಡವ ಮಾತು ಮುಂದುವರೆಸಿದ.

"ಸರ್... ಈ ಪೇಪರ್ ನಲ್ಲಿ ಬಂದಿರುವ ಕಾಣೆಯಾದ ಮಗುವಿನ ಭಾವಚಿತ್ರ ನೋಡಿ ಬಂದೆ" ಎನ್ನುವಷ್ಟರಲ್ಲಿ ಪಕ್ಕದಲ್ಲಿದ್ದ ಪೋಲೀಸ್ ಪೇದೆಗಳ ಕಿವಿ ನೆಟ್ಟಗಾಯಿತು.
ಕಣ್ಣರಳಿಸಿದ ಕಾಳಪ್ಪನವರು "ಮುಂದುವರಿಸಿ" ಎಂದರು
"ಈ ಮಗುವಿನೊಂದಿಗೆ ಕಳೆದ ವಾರ ಯಾವುದೋ ದಂಪತಿ, ಬ್ಲಫ್ ನಲ್ಲಿನ ಜಲಪಾತ ವೀಕ್ಷಣೆಗೆ ಬಂದಿದ್ದರು, ಗೇಟ್ ದಾಟುವಾಗ ಆ ಮಗುವಿನ ಮುಗ್ದ ಮುಖವನ್ನು ನೋಡಿ ಕೆನ್ನೆಗೆ ಮುತ್ತುಕೊಟ್ಟಿದ್ದೆ. ಆದರೆ..."
ಕಾಳಪ್ಪ ಕಾತುರರಾಗಿ ಕೇಳಿದರು... "ಆದರೆ...?"
"ಆದರೆ ಆ ದಂಪತಿ ತಿರುಗಿ ಹೋಗುವಾಗ ಆ ಮಗು ಇರಲಿಲ್ಲ. ಯಾರಾದರೂ ಉಳಿದ ಸಂಬಂಧಿಕರೊಂದಿಗೆ ಹೋಗಿರಬಹುದು ಎಂದುಕೊಂಡು ಸುಮ್ಮನಿದ್ದೆ, ಆದರೆ ಈ ಪತ್ರಿಕೆ ವರದಿ ನೋಡಿ ಓಡೋಡಿ ಬಂದಿದ್ದೇನೆ ಸರ್"

ಕಾಳಪ್ಪನವರ ಮನದಲ್ಲಿ ಒಮ್ಮೆಲೇ ಅನೇಕ ಸಂಶಯಗಳು ಮೂಡಿದವು. ಬಂದಿದ್ದವನ ಬಗ್ಗೆ ಬ್ಲಫ್ ಗೆ ಫೋನಾಯಿಸಿ ವಿವರ ಸಂಗ್ರಹಿಸಿಕೊಂಡರು. ಹೌದು ಆತ ಅಲ್ಲಿನ ಗೇಟ್ ಕೀಪರ್ ಆಗಿದ್ದ.

"ಆ ಜೋಡಿಯನ್ನು ತೋರಿಸಿದರೆ ಗುರುತಿಸಬಲ್ಲೆಯಾ?" ಎಂಬ ಕಾಳಪ್ಪನವರ ಪ್ರಶ್ನೆಗೆ ಆತ "ಹೂ" ಎಂದ. ಕಾಳಪ್ಪನವರು ಎಲ್ಲಾ ಸಿದ್ಧತೆ ಮಾಡಿಕೊಂಡರು.

ಮೊದಲು ಆತನಿಗೆ ಗೋವಿಂದಪ್ಪನನ್ನು ತೋರಿಸಲಾಯಿತು. "ಇವನಲ್ಲ" ಎಂದು ತಲೆ ಆಡಿಸಿಬಿಟ್ಟ.
ಲಿಂಗಣ್ಣನನ್ನು ತೋರಿಸಿದ್ದೆ "ಹೌದು, ಈತನೇ" ಎಂದು ಕೂಡಲೇ ಗುರುತು ಹಿಡಿದುಬಿಟ್ಟ. ಕೂಡಲೇ ಎಚ್ಚೆತ್ತುಕೊಂಡ ಕಾಳಪ್ಪ ಸ್ತ್ರೀಪೇದೆಗಳನ್ನು ಕಳುಹಿಸಿ ಲಿಂಗಣ್ಣನ ಪತ್ನಿಯನ್ನು ಬಂಧಿಸಿಕೊಂಡರು. ಊರಿನ ಜನರಿಗೆ ಆಗಷ್ಟೇ ಹುಟ್ಟಿದ ಮಗುವಿನಂತೆ ಪಿಳಿ ಪಿಳಿ ಕಣ್ಣ ಬಿಡುವುದಷ್ಟು ಬಿಟ್ಟು ಮತ್ತೇನೂ ತಿಳಿಯುತ್ತಿರಲಿಲ್ಲ.
ಲಿಂಗಣ್ಣನೊಂದಿಗೆ ಆಕೆಯ ಪತ್ನಿಯನ್ನೂ ಕಂಬಿ ಹಿಂದೆ ತಳ್ಳಲಾಯಿತು. ಕೊನೆಗೂ ನಿಟ್ಟುಸಿರು ಬಿಟ್ಟ ಕಾಳಪ್ಪನವರು ವಿಚಾರಣೆ ಪ್ರಾರಂಭಿಸುವುದಕ್ಕಿಂತ ಮುಂಚೆ ಬ್ಲಫ್ ನಿಂದ ಓಡೋಡಿ ಬಂದಿದ್ದ ಶಂಭು ನಾಯಕ್ ನಿಂದ ದೂರು ದಾಖಲಿಸಿಕೊಳ್ಳಲು ಮುಂದಾದರು.
ಶಂಭು ನಾಯಕ್ ಹೇಳಿದ
"ಸರ್... ಈತನೊಂದಿಗೆ ಇದ್ದದ್ದು ಈಯಮ್ಮ ಅಲ್ಲ ಅನ್ಸುತ್ತೆ" ಎಂದ. ಕಾಳಪ್ಪನವರ ಹುಬ್ಬೇರಿತು. ಒಂದು ಹಂತಕ್ಕೆ ಬಂದ ವಿಚಾರಣೆ ಮತ್ತೆ ದಾರಿ ತಪ್ಪುತ್ತಿದೆ ಎಂದೆನಿಸಿ
"ಹೌದೆ...? ಸರಿಯಾಗಿ ನೋಡಿ ಹೇಳು" ಎಂದರು...
"ಇಲ್ಲ ಸರ್... ಆಕೆ ಈಕೆಗಿಂತ ದಪ್ಪ ಮತ್ತು ಎತ್ತರವಿದ್ದಳು" ಎಂದ ಶಂಭು.

"ನಾನು ನನ್ನ ಗಂಡನ ಕೂಡ ಒಮ್ಮೆಯೂ ಬ್ಲಫ್ ಗೆ ಹೋಗಿಲ್ಲ" ಎಂದು ಲಿಂಗಣ್ಣನ ಹೆಂಡತಿ ಹೇಳಿದಾಗ ಕಾಳಪ್ಪನವರಿಗೆ ಅನುಮಾನದ ಹುತ್ತ ಎತ್ತರೆತ್ತರಕ್ಕೆ ಬೆಳೆದುಕೊಂಡಿತು. ಯಾರಿರಬಹುದಾಕೆ ಎಂದು ಕಾಳಪ್ಪ ಯೋಚಿಸುತ್ತಿರುವಾಗ ಏನೋ ಹೊಳೆದಂತಾಗಿ ಕೂಡಲೇ ಶಂಭುನಾಯಕ್ ನನ್ನು ಜೀಪಿನಲ್ಲಿ ಕೂರಿಸಿಕೊಂಡು ಲಿಂಗಣ್ಣನ ಬೀದಿಗೆ ಕರೆದುಕೊಂಡು ಹೋದರು. ಕಾಳಪ್ಪ ಬಂದದ್ದೇ ತಡ, ಆ ಮಗುವಿನ ಬಡತಾಯಿ ಕಾಲಿಗೆ ಬಿದ್ದುಬಿಟ್ಟಳು. ಹೆತ್ತ ಕರುಳಿನ ಅಳು ಇಷ್ಟು ದಿನವಾದರೂ ಕೊಂಚವೂ ಕರಗಿರಲಿಲ್ಲ.
"ನನ್ನ ಮಗು ಸತ್ತಿಲ್ಲ, ನನ್ನ ಮಗುವನ್ನು ನನಗೆ ಕೊಡಿಸಿಕೊಡಿ ಸ್ವಾಮಿ, ಮಗು ಕೊಡಿಸಿಕೊಡಿ, ನನ್ನ ಮಗುವನ್ನು ಸಾಯಿಸಿದ್ದರೆ ಅವರನ್ನು ಗಲ್ಲಿಗೇರಿಸಿಬಿಡಿ ಸ್ವಾಮಿ, ಗಲ್ಲಿಗೇರಿಸಿ" ಎಂದು ಅಂಗಲಾಚಿಕೊಂಡಳು. ಕಾಲಿಗೆ ಬಿದ್ದಾಕೆಯನ್ನು ಉಳಿದವರು ಸಮಾಧಾನ ಪಡಿಸಿ ಮೇಲಕ್ಕೆತ್ತಿ ನಿಲ್ಲಿಸಿದರು. ಜೊತೆಯಲ್ಲೇ ಇದ್ದ ಶಂಭು ನಾಯಕ್ ಗೆ ಆಶ್ಚರ್ಯವಾಯಿತು. ಆತ ಕಾಳಪ್ಪನವರ ಹತ್ತಿರ ಬಂದು ಕಿವಿಯಲ್ಲಿ ಮೆಲ್ಲಗೆ ಉಸುರಿದ.
"ಸರ್... ಆ ಹೆಂಗಸು ಈಕೆಯೆ....!"
ಕಾಳಪ್ಪನವರು ದಿಗ್ಭ್ರಾಂತರಾದರು.
"ಅವಸರ ಬೇಡ, ನಿಧಾನವಾಗಿ ಯೋಚಿಸಿ ಹೇಳು, ಇಷ್ಟು ಗೋಳಾಡುತ್ತಿರುವ ಹೆಂಗಸನ್ನು ಒಮ್ಮೆಲೇ ಬಂಧಿಸಿಬಿಟ್ಟರೆ, ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಹೆಚ್ಚಾಗಿ ಈಕೆ ಕಾಣೆಯಾದ ಮಗುವಿನ ತಾಯಿ" ಎಂದರು.
ಆತ "ಖಂಡಿತವಾಗಿಯೂ ಅಂದು ಬಂದಿದ್ದವಳು ಇವಳೇ" ಎಂದು ಬಿಟ್ಟ. ಮಾತಿನಲ್ಲಿ ಗಾಢವಾದ ಗಡಸುತನ ಮತ್ತು ಸ್ಪಷ್ಟತೆಯಿತ್ತು.

ಆ ಸ್ಥಳದಲ್ಲಿ ಆಕೆಯನ್ನು ಬಂಧಿಸಿದರೆ ಸರಿ ಬರುವುದಿಲ್ಲವೆಂದುಕೊಂಡ ಕಾಳಪ್ಪನವರು ಏನೂ ತಿಳಿಯದವರಂತೆ ಠಾಣೆ ಕಡೆ ಹೊರಟುಬಿಟ್ಟರು.
ತಮ್ಮ ಪೋಲೀಸ್ ಭಾಷೆ ಮತ್ತು ಶೈಲಿಯಲ್ಲಿ ಲಿಂಗಣ್ಣನನ್ನು ವಿಚಾರಣೆಗೆತ್ತಿಕೊಂಡರು. ಬೆರಳಿನ ಮೂಳೆಗಳು ಸಣ್ಣಗೆ ನಟಕ್ ನಟಕ್ ಎಂದು ಮುರಿದುಕೊಳ್ಳುತ್ತಿದ್ದಂತೆ
"ಹೌದು, ಹೋಗಿದ್ದವರು ನಾನು ಮತ್ತು ನನ್ನ ಹೆಂಡತಿಯಲ್ಲ, ಬದಲಾಗಿ ಜೊತೆಯಲ್ಲಿದ್ದದ್ದು ಆ ಕೂಸಿನ ತಾಯಿ ಲಕ್ಷ್ಮಿ" ಎಂದು ಒಪ್ಪಿಕೊಂಡ.
ಮಾತನ್ನು ಖಚಿತ ಪಡಿಸಿಕೊಂಡ ಕಾಳಪ್ಪನವರು ನತದೃಷ್ಟ ಮಗುವಿನ ತಾಯಿಯನ್ನು ಎಳೆದುಕೊಂಡು ಬಂದರು. ಸಂಬಂಧಿಕರಿಂದ ತೀವ್ರ ಪ್ರತಿಭಟನೆಯೇ ಆಯಿತು. ಒಂದಷ್ಟು ಅನಾಥ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಲಾಯಿತು.
-
ಲಿಂಗಣ್ಣ ಮತ್ತು ಮಗುವಿನ ತಾಯಿಯಾದ ಲಕ್ಷ್ಮಿ ನೆರೆ ಹೊರೆಯವರು. ಲಕ್ಷ್ಮಿ ಮೊದ ಮೊದಲು ಲಿಂಗಣ್ಣನಿಗೆ ಕೊಟ್ಟ ಸಲಿಗೆ, ನಂತರ ಗೆಳೆತನವಾಗಿ ಹಾಸಿಗೆ ಮೇಲೆ ಹೊರಳಾಡುವವರೆವಿಗೂ ಬಂದಿತ್ತು. ದೂರದ ತಮಿಳುನಾಡಿನಲ್ಲಿ ವ್ಯಾಪಾರಕ್ಕೆಂದು ಹೊರಟರೆ ತಿಂಗಳಾದರೂ ತಿರುಗಿ ಬರದ ಗಂಡನ ಭಯ ಆಕೆಗಿರಲಿಲ್ಲ. ಅಂದು ಶಿಶುವಿಹಾರದಿಂದ ಬೇಗ ಬಂದ ಲಕ್ಷ್ಮಿಯ ಮೂರು ವರ್ಷದ ಮಗು, ಅಮ್ಮ ಮತ್ತೊಬ್ಬನ ಜೊತೆ ಮಲಗಿರುವುದು ಕಂಡು ಆಶ್ಚರ್ಯವೇನೂ ವ್ಯಕ್ತ ಪಡಿಸಿರಲಿಲ್ಲ. ಆ ವಯಸ್ಸಿನಲ್ಲಿ ಕಾಮ ಪ್ರೇಮದ ಉತ್ತುಂಗಗಳು ಅರಿವಿಗೆ ಬರುವುದಾದರೂ ಹೇಗೆ ಹೇಳಿ. ಅದರ ಪಾಡಿಗೆ ಅದಿತ್ತು. ಈ ಘಟನೆಯಿಂದ ಸ್ವಲ್ಪ ಕುಗ್ಗಿದ ಲಕ್ಷ್ಮಿ ಮಗುವಿನ ಮೇಲೆ ಅನುಮಾನಿಸತೊಡಗಿದಳು. ಇಂದಲ್ಲ ನಾಳೆ ಈ ಮಗು ಈ ವಿಚಾರವನ್ನು ಮನೆಯವರೊಟ್ಟಿಗೆ ಬಾಯಿ ಬಿಟ್ಟುಬಿಡುತ್ತದೆ ಎಂದು ಪ್ರತಿದಿನ ಸಂಶಯಿಸಿದಳು. ಅನುಮಾನ ದಟ್ಟವಾಗಿ ಬೆಳೆದುಕೊಂಡಿತ್ತು. ಕೊನೆಗೊಂದು ದಿನ ಲಿಂಗಣ್ಣನ ಜೊತೆ ಮಾತನಾಡಿಕೊಂಡು ಮಗುವನ್ನು ಶಿಶುವಿಹಾರದ ಬಳಿ ಬಿಟ್ಟವರಂತೆ ನಾಟಕ ಮಾಡಿ ಹಾಗೆ ಗದ್ದೆಯಲ್ಲಿ ನುಗ್ಗಿ ಊರ ಹೊರಗೆ ಕಾಯುತ್ತಿದ್ದ ಲಿಂಗಣ್ಣನೊಂದಿಗೆ ಬ್ಲಫ್ ಗೆ ತೆರಳಿ ತನ್ನ ಕರುಳ ಕುಡಿಯನ್ನು ನೀರಿಗೆಸೆದು ಬಂದಿದ್ದಳು. ಊರ ಜನರಿಗೆ ಸ್ವಲ್ಪವೂ ಅನುಮಾನ ಬರದಂತೆ ಪ್ರತಿ ಗಳಿಗೆಯಲ್ಲೂ ಗೋಳಿಡುತ್ತಿದ್ದಳು. ಮಗುವನ್ನು ನೀರಿಗೆಸೆಯುವಾಗ ಬಿಚ್ಚಿಟ್ಟುಕೊಂಡಿದ್ದ ಒಡವೆ ವಸ್ತ್ರವನ್ನು ಪೋಲೀಸರಿಗೆ ಮತ್ತು ಪೋಲೀಸ್ ನಾಯಿಗಳಿಗೆ ಹೆದರಿ ಗುಂಡಿ ತೋಡಿ ಸುಟ್ಟು ಮುಚ್ಚಿ ಬಿಡಲು ಮೊದಲು ಇಬ್ಬರೂ ಪ್ರಯತ್ನಿಸಿ ಸಿಕ್ಕಿ ಬಿದ್ದರು.

ಕಂಬಿ ಹಿಂದೆ ಕವಡೆ ಬಿಡುತ್ತಿರುವ ಲಕ್ಷ್ಮಿ ಆಗಾಗ ತನ್ನ ಮಗುವಿನ ನೆರಳು ಕಣ್ಣ ಮುಂದೆ ಮೂಡಿದಂತಾಗಿ ಬೆಚ್ಚುತ್ತಾಳೆ.
ಜೊತೆಗೆ ಗೋವಿಂದಪ್ಪ ಎಂಬ ಕಳ್ಳನೂ ಕೂಡ ಆ ರಾತ್ರಿ ಲಕ್ಷ್ಮಿ ಮನೆಗೆ ಹೊರಟಿದ್ದ. ಆಕೆಗೆ ಆತನೊಡನೆಯೂ ಅಕ್ರಮ ಅನುಬಂಧವಿತ್ತು.
“ಈ ರಾತ್ರಿ ಬಾ, ನಿನ್ನಿಂದ ಏನೋ ಕೆಲಸವಾಗಬೇಕು, ಮರೆಯಬೇಡ” ಎಂದು ಆಕೆಯೇ ಆತನಿಗೆ ಹೇಳಿದ್ದಳಂತೆ. ಆತನನ್ನೂ ಮಾಯ ಮಾಡಿ ಆ ಕೊಲೆ ಆಪಾದನೆಯನ್ನು ಆತನ ಮೇಲೆ ಹೊರಿಸುವ ಹುನ್ನಾರವಿತ್ತೇನೋ.....!

8 comments:

  1. ಕಥೆ ಓದುವವರನ್ನು .. ತುಂಬಾ ತುಂಬಾ ಆಶ್ಚರ್ಯಚಕಿತರಾಗಿಸುತ್ತದೆ.. ಆದರೆ ಕೊನೆಯಲ್ಲಿ ಒಡವೆ ಮತ್ತು ಬಟ್ಟೆಗಳು ಹೇಗೆ ಒಂದು ಗಂಟಿನಲ್ಲಿ ಸಿಕ್ಕಿದ್ದು ಅನ್ನುವುದರ ಪ್ರಶ್ನೆ ಮೂಡುತ್ತಿದೆ .. :)

    ReplyDelete
  2. ಹಾಗೂ ದೇವಸ್ಥಾನ ಮತ್ತು ಸುತ್ತಮುತ್ತಲ ಪರಿಸರದ ವಿವರಣೆಯನ್ನು ಬರೆದಿರುವ ಕಲ್ಪನೆಯೂ ಸಹ ಅದ್ಬುತ .. ರೋಮಾಂಚನಕಾರಿ ಅನುಭವ ಹುಟ್ಟಿಸುವ ನಿರೂಪಣೆ .. :)

    ReplyDelete
  3. ರೋಚಕವಾದ ಕಥನ. ಓದಿಸಿಕೊಳ್ಳುತಾ ಹೋಗುತ್ತಾ, ಅಲ್ಲಲ್ಲಿ ಹಿಡಿದಿಡುತ್ತಾ. ತುಸು ದೀರ್ಘವೆನಿಸಿದರೂ ಬೋರ್ ಎನಿಸದ ಶೈಲಿ.

    ReplyDelete
  4. ಕಥೆ... ನಿಮ್ಮ ಕಥೆಯು ಎಲ್ಲಿಯು ಓದುಗನನ್ನು ಬೇರೆಡೆಗೆ ಗಮನವಿಯ್ಯುದೆ ಎಲ್ಲ ಕಡೆ ಕಾತುರತೆಯನ್ನು ಕಾದಿರಿಸಿಕೊಂಡು, ಓದಿಸಿಕೊಂಡು ಹೋಗುತ್ತದೆ, ಬಾ ಚೆನ್ನಾಗಿದೆ ಮೋಹನ್

    ReplyDelete
  5. Like a detective story. well narrated!!

    ReplyDelete