ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Tuesday 4 June 2013

ಕನ್ನಡಿಯ ಬೆನ್ನು

ಕೊನೆಗೂ ರತ್ನವ್ವಳ ಬೇಸರ ಕಳೆಯಲು ಮುಂಜಾನೆಗೇ ಸುತ್ತಲೂ ಒಂದಷ್ಟು ಜನ ನೆರೆದರು. ಮೂಲೆಯಲ್ಲಿದ್ದ ಸಣ್ಣ ಮಣ್ಣಿನ ದೀಪದ ಬತ್ತಿಯು ಗಾಳಿಯ ರಭಸಕ್ಕೆ ಲಯಬದ್ಧವಾಗಿ ವಾಲಾಡುತ್ತಿತ್ತು.
‘ದೀಪದೊಳಗೆ ಎಣ್ಣೆಯಿಲ್ಲ, ಹರಳೆಣ್ಣೆ ಸುರಿಯಿರಿ, ವೈದಿಕ ಕಾರ್ಯ ಮುಗಿಯೋವರೆವಿಗೂ ದೀಪ ಆರುವಂತಿಲ್ಲ, ಬೇಕಾದರೆ ನಂತರವೂ’ – ಯಾರೋ.
‘ಕೆಂಚಿ, ನಿಂಗೆ ಎಷ್ಟು ಸಾರಿ ಹೇಳಿದ್ದೀನಿ, ದೀಪದ ತಾವೇ ಕಯ್ಯೆಣ್ಣೆ ಇಟ್ಕೋ ಅಂತ’ – ಅಜ್ಜಿ
‘ಎಲ್ಲರೂ ಕಣ್ಣು ಕಟ್ಟಿದಂತೆ ಆಡಬೇಡಿ, ಎಣ್ಣೆ ತುಂಬಿಸಿಟ್ಟಿದ್ದೇನೆ, ಮೊದಲು ಸರಿಯಾಗಿ ನೋಡಿ’ – ಕೆಂಚಿ
‘ಇಷ್ಟು ದೊಡ್ಡವಳಾಗಿ ಈ ರೀತಿ ಅಡ್ಡ ಮಾತಾಡೋದ್ರಿಂದಾನೆ ನಿಮ್ಮಪ್ಪ ತನ್ನ ಜೀವ ತಿಂದ್ಕೊಂಡ’ – ಯಾರೋ ಹೇಳಿದ ಈ ಮಾತಿಗೆ ಮತ್ಯಾರೋ ‘ಹೇ, ಎಂಥ ಮಾತು ಅಂತ ಆಡ್ತೀರಿ, ಆ ಪುಣ್ಯಾತ್ಮ ಹೋಗೋನು ಹೋದ, ಇದ್ದವರನ್ನ ಯಾಕೆ ಗುರಿ ಮಾಡ್ತೀರಿ? ಕರೆಂಟಿಲ್ಲದ ಕಾರಣ ಆ ದೀಪದೊಳಗೇನಿದೆ ಅನ್ನೋದು ಕಾಣ್ತಾ ಇಲ್ಲ, ಆ ಮುನುಷ್ಯನನ್ನ ಮತ್ತೆ ಮತ್ತೆ ನೆನಪಿಸಿ ಯಾಕೆ ರತ್ನವ್ವಳ ಕಣ್ಣಲ್ಲಿ ನೀರು ತರಿಸ್ತೀರಾ?’ ಎನ್ನುವಷ್ಟರಲ್ಲಿ ರತ್ನವ್ವಳÀ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು.

ಅಷ್ಟಕ್ಕೆ ಪುರೋಹಿತರು ಬಂದು ರತ್ನವ್ವನ ಮಗನನ್ನು ಕೂರಿಸಿಕೊಂಡು ಒಂದಷ್ಟು ಮಂತ್ರ, ಮತ್ತೊಂದು ಇನ್ನೊಂದು ಹೇಳಿಸಿ, ಆತ್ಮವನ್ನು ಸ್ವರ್ಗಕ್ಕೆ ಕಳುಹಿಸುವ ನೆಪದಲ್ಲಿ ಗೋಮೂತ್ರ, ಹಾಲು, ಮೊಸರು ಕುಡಿಸಿ, ಕಾಲಿಗೆ ಅಡ್ಡ ಬೀಳಿಸಿಕೊಂಡು, ಕಾಣಿಕೆ ಅದು ಇದು ಮಗದೊಂದು ಎಲ್ಲವನ್ನೂ ತುಂಬಿಕೊಂಡು ಪುಣ್ಯತೀರ್ಥವನ್ನು ಎಲ್ಲರ ಮೇಲೂ, ಗೋಡೆಯ ಮೇಲೂ ಚಿಮುಕಿಸಿ, ಬಾಟಲಿಗೆ ತುಂಬಿ ಹೋದರು. ಉಳಿದವರೆಲ್ಲಾ ಗಂಧದಕಡ್ಡಿ ಕರ್ಪೂರ ಹಚ್ಚಿ ‘ಸ್ವರ್ಗಕ್ಕೆ ಹೋಗು ಆತ್ಮವೇ’ ಎಂದು ಗರ್ಕರಾಗಿ ಮೂರು ಮೂರು ಬಾರಿ ಉಚ್ಚರಿಸಿ ಒಂದಷ್ಟು ಜನ ವಾಡಿಕೆಯಂತೆ ಕಣ್ಣೀರು ಸುರಿಸಿದರು. ಅಲ್ಲೇ ನಿಂತಿದ್ದ ಕೆಂಚಿಯ ಮುಖವಿನ್ನೂ ಕೆಂಪಾಗಿಯೇ ಇತ್ತು. ಕೋಪತಾಪಗಳ ಬೆಂಕಿಯಲ್ಲಿಯೇ ಬೇಯುವ ಆ ಹುಡುಗಿ ಇನ್ನೂ ಪೂಜೆ ಮಾಡಿರಲಿಲ್ಲ. ಮತ್ತೆ ಯಾರೋ ಬೈದರು. ಕೊನೆಗೂ ಬಂದು ಪೂಜೆ ಮಾಡಿ ‘ಅಪ್ಪಯ್ಯಾ’ ಎಂದು ಫೋಟೋ ನೋಡಿಕೊಂಡು ಕಣ್ಣೀರು ಸುರಿಸಿದಳು. ಸೀಮೆ ಹೆಂಚಿನ ಮೇಲೆ ಸುರಿದಿದ್ದ ಕೆಂಡದ ಮೇಲೆ ಬಿದ್ದು ಕರಗಿ ಹೊಗೆಯಾಡಿದ ಸಾಂಬ್ರಾಣಿ, ಧೂಪ ಹೊರಡಿಸಿದ ಘಮಲಿನ ಹೊಗೆ, ಹೂ ಪರಿಮಳ, ಘಂಟೆ ಜಾಗಟೆ ಶಬ್ದದೊಂದಿಗೆ ವಾತಾವರಣ ಮತ್ತೂ ಭಾವುಕವಾಯಿತು.
‘ಎಂಥ ಮನುಷ್ಯ ನಮ್ಮ ಬೀದಿಯಿಂದ ನಮ್ಮನ್ನ ಬಿಟ್ಟು ಹೊರಟುಹೋದನಪ್ಪ, ಆ ದೇವ್ರಿಗೆ ಕರುಣೆ ಅನ್ನೋದೆ ಇಲ್ವೇ?’ ಎಂದು ಸೀರೆ ಕೆದರಿಕೊಂಡು ಗೋಳಾಡಲು ಶುರುವಿಟ್ಟುಕೊಂಡ ರತ್ನವ್ವನ ಅತ್ತಿಗೆಯನ್ನು ನೆರೆಮನೆಯವಳು ತಬ್ಬಿಕೊಂಡು ಎದೆಗೆ ಒರಗಿಸಿಕೊಂಡು ಸಮಾಧಾನ ಮಾಡಲು ಹೋದವಳು ತಾನೂ ಅತ್ತುಬಿಟ್ಟಳು.

ಅಷ್ಟರಲ್ಲಿಯೇ ಹಿರಿಯರೆನಿಸಿಕೊಂಡ ಕೆಲವರು ಬಂದು ಗೋಳಾಡುತ್ತ ಸಮಯ ವ್ಯರ್ಥ ಮಾಡುತ್ತಿದ್ದ ಇವರನ್ನೆಲ್ಲಾ ತರಾಟೆಗೆ ತೆಗೆದುಕೊಂಡು ‘ಗಂಡಸರೆಲ್ಲಾ ಸಮಾಧಿ ಬಳಿ ನಡೆಯಿರಿ, ಯಮಗಂಡ ಕಾಲ ಬರುವ ಮುಂಚೆ ಎಡೆಗಿಡಬೇಕು, ಪೂಜೆ ಪುನಸ್ಕಾರ ಎಲ್ಲ ಮುಗಿಸಬೇಕು, ನಡೆಯಿರಿ’ ಎಂದವರೇ ಪೂಜೆ ಮತ್ತು ಎಡೆಗಿಡಬೇಕಾದ ಸಾಮಾಗ್ರಿಗಳನ್ನು ತುಂಬಿಕೊಂಡಿದ್ದ ಬುಟ್ಟಿಯನ್ನು ಹೊತ್ತುಕೊಂಡು, ಒಂದು ಚರಿಗೆ ನೀರನ್ನೂ ಹೆಗಲಿಗೇರಿಸಿಕೊಂಡು ಹೊರಟುಬಿಟ್ಟರು.

ಅತ್ತ ಸಮಾಧಿಯಲ್ಲಿ ಉಳಿದ ಕಾರ್ಯಗಳು ಸಾಗುತ್ತಿರಲು, ಇತ್ತ ನೆಂಟರಿಷ್ಟರು ಒಬ್ಬೊಬ್ಬರಾಗಿಯೇ ಬಂದು ಸೇರಿಕೊಂಡು ರತ್ನವ್ವನಿಗೆ ಸೀರೆ ಉಡಿಸಿ, ಹೂ ಮುಡಿಸಿ, ಹಣೆಯಷ್ಟಗಲ ಅರಿಶಿಣ ಕುಂಕುಮ ಉಜ್ಜಿ ತಬ್ಬಿಕೊಂಡು ಗೊಳೋ ಎಂದು ಅತ್ತರು. ಆ ಮನೆಯೊಳಗೆ ಹೆಜ್ಜೆ ಇಟ್ಟರೆ ಅಳುವ ಹೆಂಗಸರ ಹಿಂಡು ಹಿಂಡು. ದಿಂಡು ದಿಂಡು ಹೂವನ್ನು ಮುಡಿದುಕೊಂಡ ರತ್ನವ್ವನನ್ನು ನೋಡಿ ಬಿಕ್ಕುವ ಅನೇಕರು. ಕೆಲವರಂತೂ ಅಳು ಬರದಿದ್ದರೂ ತಮ್ಮ ಸೀರೆ ಸೆರಗನ್ನು ಕಣ್ಣಿಗೆ ಒರೆಸಿಕೊಳ್ಳುತ್ತ ತಾವೂ ಕೂಡ ಈ ದುಃಖದಲ್ಲಿ ಭಾಗಿಯಾಗುತ್ತಿದ್ದೇವೆ ಎಂಬುದನ್ನು ಖಾತ್ರಿ ಪಡಿಸುತ್ತಿದ್ದಾರೆ.

ಅಷ್ಟಕ್ಕೇ ಸಮಾಧಿ ಬಳಿ ತೆರೆಳಿದ್ದ ಗಂಡಸರೆಲ್ಲಾ ಮನೆಗೆ ಬರುವವರಿದ್ದರು. ಎಲ್ಲವನ್ನೂ ಸಿದ್ಧತೆ ಮಾಡಿಕೊಂಡಿದ್ದ ಹೆಂಗಸರು ರತ್ನವ್ವನನ್ನು ಹೊಳೆ ದಂಡೆಗೆ ಕರೆದುಕೊಂಡು ಹೋಗಿ ಬಳೆ ಹೊಡೆದು, ಕುಂಕುಮ ಅಳಿಸಿ, ತಾಳಿ ಕೀಳುವ ಶಾಸ್ತ್ರಕ್ಕೆ ಆಣಿಯಾದರು. ಹೊಳೆಯ ದಂಡೆಯೂ ಸ್ಮಶಾಣದಂತೆ ಆರ್ತನಾದಕ್ಕೆ ಸಾಕ್ಷಿಯಾಯಿತು.
‘ಅಯ್ಯೋ! ನಿನ್ನ ಹೆಂಡ್ತಿ ಮಕ್ಕಳನ್ನೆಲ್ಲಾ ಈ ರೀತಿ ಒಂಟಿ ಮಾಡಿ ಹೊರಟೋದಲ್ಲಪ್ಪ, ಈ ಮುಂಡೆಗೆ, ಮುಂಡೆ ಮಕ್ಕಳಿಗೆ ಇನ್ನಾರಪ್ಪ ಗತಿ? ನಿನ್ನ ಹೆಂಡ್ತಿಗೆ ಮುತ್ತೈದೆ ಸಾವಿನ ಪುಣ್ಯ ಕೊಡ್ದೆ, ಈ ರೀತಿ ಬಳೆ ಹೊಡೆದು, ತಾಳಿ ಕಿತ್ತು, ಕುಂಕುಮ ಅಳಿಸೋದು ನೋಡೋಕೆ ಮೇಲಕ್ಕೆ ಹೊರಟೋದಾ?’ - ಎದೆ ಬಡಿದುಕೊಂಡು ರತ್ನವ್ವನನ್ನು ಹಿಡಿದುಕೊಂಡು ಯಾರೋ ಅಳಲು ಪ್ರಾರಂಭಿಸಿದ್ದೇ ಕೆಲವರು ಬಿಕ್ಕಿ ಬಿಕ್ಕಿ ಇಲ್ಲೂ ಕಣ್ಣೀರಾದರು.

ಬಳೆ ಹೊಡೆದು, ತಾಳಿ ಕೀಳುವಾಗಲಂತೂ ಅಳುವ ರತ್ನವ್ವನ ಬೋಳು ಕೈ, ಕುತ್ತಿಗೆ, ನೊಸಲು ಕಂಡು ಎಲ್ಲರ ಅಳು ಮತ್ತೂ ಹೆಚ್ಚಾಯಿತು. ‘ಇನ್ಯಾರವ್ವ ನಿಂಗೆ ಗತಿ?’ ಎಂದು ಹೇಳಿ ತಬ್ಬಿಕೊಳ್ಳುತ್ತಿದ್ದರು. ‘ನಿನ್ ಜೀವನ ಹಿಂಗಾಗ್ಬಾರದಾಗಿತ್ತು ಕಣವ್ವ’ ಎಂದು ತಲೆ ನೇವರಿಸಿದರು. ‘ಮುಂದೆ ನಿನ್ ಕಷ್ಟ ಸುಖ ಯಾರ ಜೊತೆ ಹಂಚ್ಕೋತೀಯವ್ವ’ ಎಂದವರೇ ಸೆರಗಿನಿಂದ ತಮ್ಮ ಕಣ್ಣೀರು ಒರೆಸಿಕೊಂಡರು. ‘ನಿನ್ ಮನೆ ತೊಲೆನೇ ಬಿದ್ದು ಹೋಯ್ತಲ್ಲವ್ವ’ ಎಂದವರು ಕೆದರಿಕೊಂಡಿದ್ದ ಕೂದಲನ್ನು ಸರಿ ಮಾಡಿದರು. ‘ಏನೇ ಆಗ್ಲಿ ಗಂಡ ಇರಬೇಕು ಕಣವ್ವ’ ಎಂದ ಕೆಲವು ಗಂಡಸತ್ತ ಹೆಂಗಸರು ಕಣ್ಣಿನಲ್ಲಿ ನೀರು ತುಂಬಿಸಿಕೊಂಡು ರತ್ನವ್ವನ ಬಳಿ ನಿಂತುಕೊಂಡು ಸಮಾಧಾನಿಸಿದರು. ‘ಓದ್ತಾ ಇರೋ ನಿನ್ ಗಂಡು, ಮದ್ವೆ ಆಗ್ದೇ ಇರೋ ನಿನ್ ಹೆಣ್ಣಿಗೆ ಇನ್ಯಾರವ್ವ ಗತಿ?’ ಎಂದು ಕೆಲವರು ದೇವರಿಗೆ ಹಿಡಿಶಾಪ ಹಾಕಿದರು. ಅಲ್ಲಿಯೇ ಇದ್ದ ಕೆಂಚಿಯನ್ನು ತಬ್ಬಿಕೊಂಡ ಕೆಲವರು ‘ಅಯ್ಯೋ! ವರದಕ್ಷಿಣೆ ಕೊಟ್ಟು ನಿನ್ ಮದ್ವೆ, ಬಾಣಂತನ, ನಾಮಕರಣ ಮಾಡೋರು ಯಾರವ್ವ, ನಿಮ್ ಮನೆ ನಾಯ್ಕಾನೇ ಹೇಳ್ದೆ ಕೇಳ್ದೆ ಹೋಗ್ಬಿಟ್ಟನಲ್ಲವ್ವ’ ಎನ್ನುತ್ತ ಕಣ್ಣೀರಾದರು.

ಅಳುವ, ಅಳಿಸುವ, ಕೀಳುವ, ಹೊಡೆಯುವ ಶಾಸ್ತ್ರವೆಲ್ಲಾ ಮುಗಿದ ಬಳಿಕ ಮನೆಗೆ ಹಿಂದಿರುಗಿದವರೇ ಗಡತ್ತಾಗಿ ಮಾಂಸದೂಟ ಉಂಡು ಅವರವರ ಊರಿಗೆ ಎಲ್ಲರೂ ಕಾಲು ಕಿತ್ತರು. ತಡರಾತ್ರಿಗೆ ಫೋಟೋದ ಮುಂದೆ ನಿಂತು ಎಲ್ಲರೂ ಮರುಪೂಜೆ ಮಾಡಿ ಆತ್ಮವನ್ನು ವೈಕುಂಠಕ್ಕೆ ಕಳುಹಿಸುವ ‘ವೈಕುಂಠ ಸಮಾರಾಧನೆ’ ಎಂಬ ಅಂತಿಮ ಕಾರ್ಯವನ್ನು ಮಗಿಸಿದರು. ಮತ್ತೆ ಕಣ್ಣೀರು ಕಚ್ಚಿಕೊಂಡ ಒಂದಷ್ಟು ಜನ ‘ಧೈರ್ಯ ತಂದ್ಕೋ, ಭಗವಂತ ಕಾಪಾಡ್ತಾನೆ’ ಎಂದು ರತ್ನವ್ವನಿಗೆ ಧೈರ್ಯಮಾತು ಹೇಳಿ ತಮ್ಮ ಮನೆಗಳಿಗೆ ಹೊರಟುಬಿಟ್ಟರು.

ಫೋಟೋ ಮುಂದೆ ಮಲಗಿಕೊಂಡ ರತ್ನವ್ವನ ಕಣ್ಣಿನಲ್ಲಿ ನೀರು ಜಿನುಗುತ್ತಿತ್ತು. ಬಾಗಿಲ ಬಳಿ ಕೆಂಚಿ ಮಲಗಿಕೊಂಡರೆ, ಹೊರಗಿನ ದಿಣ್ಣೆಯ ಮೇಲೆ ರತ್ನವ್ವನ ಮಗ ಲಕ್ಷ್ಮಣ್ ಮಲಗಿಕೊಂಡ. ಆ ಶಾಸ್ತ್ರ, ಈ ಶಾಸ್ತ್ರ, ನೆಂಟರಿಷ್ಟರು ಎಂದುಕೊಂಡು ಹಲವು ದಿನಗಳಿಂದ ನಿದ್ದೆಯೆನ್ನುವುದನ್ನೇ ಮರೆತುಬಿಟ್ಟಿದ್ದ ರತ್ನವ್ವನಿಗೆ ಕಣ್ಣು ಮುಚ್ಚಿದ್ದೇ ನಿದ್ರಾದೇವತೆ ಆವಾಹಿಸಿಕೊಂಡಳು. ಕೆಂಚಿ ಮತ್ತು ಲಕ್ಷ್ಮಣ್ ಅದಾಗಲೇ ಗಾಢನಿದ್ರೆಗೆ ಜಾರಿಕೊಂಡಿದ್ದರು.
***
‘ಅವ್ವ ಅವ್ವ’ – ರತ್ನವ್ವಳ ತೋಳನ್ನು ಜಾಡಿಸಿದ ಲಕ್ಷ್ಮಣ್. ಹತ್ತದಿನೈದು ನಿದ್ದೆ ಮಾತ್ರೆಯನ್ನು ನುಂಗಿದ ಮೊಸಳೆಯಂತೆÉ ಬಿದ್ದುಕೊಂಡಿದ್ದ ರತ್ನವ್ವ ‘ಥೂ! ನಿನ್ನ ಕಾಟ ನಿನ್ನ ಸಾವಿನಲ್ಲೇ ಕೊನೆಯಾಗೋದೇನೋ’ ಎಂದು ಹೇಳುತ್ತ ಹೇಳುತ್ತ ಕಣ್ಬಿಟ್ಟೊಡನೇ ಆಶ್ಚರ್ಯಚಕಿತಳಾದಳು. ಎಬ್ಬಿಸುತ್ತಿದ್ದವನು ತನ್ನ ಮಗನಲ್ಲ ಬೇರೆ ಯಾರೋ ಎಂದೆಣಿಸಿಕೊಂಡಿದ್ದಳು. ರತ್ನವ್ವನ ಸೀರೆಯೆಲ್ಲಾ ಒದ್ದೆಯಾಗಿತ್ತು, ಮುಖದ ಮೇಲೆ ಯಾರೋ ನೀರೆರೆಚಿದ್ದರು. ಇದ್ದಕ್ಕಿದ್ದಂತೆ ಏನೋ ಕಿವಿ ಸಿಡಿಸುವಂತಹ ಶಬ್ದ. ನಿದ್ದೆ ಮಾಡಿ ತುಂಬಾ ದಿನಗಳಾದ್ದರಿಂದ ರತ್ನವ್ವ ಇನ್ನೂ ತೂಕಡಿಸುತ್ತಿದ್ದಳು.
‘ಏನ್ ಸದ್ದಪ್ಪ ಅದು?’ – ಮಗನನ್ನು ಕೇಳಿದಳು
‘ಮಳೆ ಬತ್ತೈತೆ ಕಣವ್ವ, ಸರಿಯಾಗಿ ಕಣ್ಣು ಬಿಡು ಮೊದ್ಲು’
ಕೆಂಚಿ ಮುಖಕ್ಕೆ ನೀರೆರೆಚಿದಳು. ಮಳೆ ಎಂಬ ಶಬ್ದ ಕಿವಿಗೆ ಬಿದ್ದೊಡನೆ ರತ್ನವ್ವ ಗುಡೀರನೆ ಎದ್ದು ನಿಂತುಬಿಟ್ಟಿದ್ದಳು. ಹಚ್ಚಿಟ್ಟಿದ್ದ ಬುಡ್ಡಿಯ ಬೆಳಕಿನಲ್ಲಿ ತನ್ನ ಮಕ್ಕಳನ್ನೊಮ್ಮೆ ನೋಡಿದಳು. ಅವರೂ ನೆಂದದ್ದು ಕಂಡು, ವಲ್ಲಿಯಲ್ಲಿ ಕೈಕಾಲೊರೆಸಿ ಎಂದಿನಂತೆ ಮೂಲೆಯಲ್ಲಿಟ್ಟಿದ್ದ ಒಂದಷ್ಟು ಮಸಿ ಮೂಟೆಗಳನ್ನು ದಮ್ಮುಕಟ್ಟಿ ನಡುಮನೆಗೆಳೆದಳು. ಅಲ್ಲಿಯೇ ಇದ್ದ ನಾಲ್ಕೈದು ಸೈಜುಗಲ್ಲನ್ನು ತಬ್ಬಿ ಹೊಟ್ಟೆಯ ಮೇಲೆ ಮಲಗಿಸಿಕೊಂಡು ಮತ್ತೊಂದು ಮೂಲೆಗೆ ಬಿಸಾಕಿದಳು. ಖಾಲಿಯಾದ ಮೂಲೆಗೆ ಒಂದು ಹರಕು ಚಾಪೆ ಹರಡಿ ತನ್ನ ಮಕ್ಕಳನ್ನು ಮಲಗಿಸಿ, ಆರಲು ಹಾಕಿದ್ದ ಹುಣಸೆ, ಕಾಳು, ಅಕ್ಕಿಯನ್ನೆಲ್ಲಾ ಚೀಲಕ್ಕೆ ತುಂಬಿ, ಅಲ್ಲಲ್ಲಿ ಗುಂಡಿಕಟ್ಟುತ್ತಿದ್ದ ನೀರನ್ನು ಕಾಲಿನ ಮೂಲಕ ಹೊರಕ್ಕೆರಚಿ, ಸುರಿಯುತ್ತಿದ್ದ ಜಾಗಗಳಿಗೆ ಪಾತ್ರೆ ತಟ್ಟೆಗಳನ್ನಿಡುವ ಕೆಲಸ ಪ್ರಾರಂಭಿಸಿ ಕೊನೆಗೆ ಮನೆಯಲ್ಲಿರುವ ಪಾತ್ರೆ ಪಗಡೆಗಳೇ ಸಾಲದಾದಾಗ ವಿಧಿಯಿಲ್ಲದೇ ಮೂಟೆಗೊರಗಿ ಅವಚಿ ಕುಳಿತುಕೊಂಡಳು. ಮಣ್ಣಿನ ಗೋಡೆ ಮೇಲೆಲ್ಲಾ ರೈಲು ಕಂಬಿಯಂತೆ ಮಳೆ ಹರಿಯುತ್ತಿತ್ತು. ಕೈಯಾಡಿಸಿ ದಶಕಗಳೇ ಕಳೆದ ಹೆಂಚುಗಳಿಂದ ಸುರಿದ ನೀರು, ಅಟ್ಟಳಿನ ಗಳಗಳ ಮೂಲಕ ಒಳಗಡೆಗೆ ತೊಟ್ಟಿಕ್ಕಿ ಅಲ್ಲಲ್ಲಿ ನೀರಿನ ಸಣ್ಣ ಸಣ್ಣ ಗುಂಡಿಗಳಾಗಿದ್ದವು. ತೊಟ್ ತೊಟ್ ಎಂದು ತೊಟ್ಟಿಕ್ಕುತ್ತಿದ್ದ ದಪ್ಪ ಹನಿಗಳು ಪಾತ್ರೆ, ಪುಟ್ಟೆ, ಗುಂಡಿ ನೀರಿನ ಮೇಲೆ ಬಿದ್ದು ನೀರಾಗದ ಒಂದಗಲ ಜಾಗದಲ್ಲಿ ಮಲಗಿದ್ದ ಮಕ್ಕಳ ಮೇಲೆ ಚದುರುತ್ತಿದ್ದವು. ಹರಕು ರಗ್ಗಿನೊಳಗಿದ್ದ ಮಕ್ಕಳು ಕಾಲಿಗೆ ನೀರು ಬಿದ್ದೊಡನೆ ಮಡಚಿಕೊಂಡು, ಅವಚಿಕೊಂಡು ಮಲಗಿಕೊಳ್ಳುತ್ತಿದ್ದವು. ನಿದ್ದೆ ಹತ್ತದ ರತ್ನವ್ವಳ ಕಣ್ಣುಗಳು ಮಾತ್ರ ತುಂಬಿಕೊಳ್ಳುತ್ತಿದ್ದ ಪಾತ್ರೆ, ತಟ್ಟೆಗಳ ಮೇಲೇ ಇತ್ತು. ಹೊರಗೆ ರಭಸವಾಗಿ ಹರಿಯುತ್ತಿದ್ದ ಬಚ್ಚಲಿಗೆ ಆಗಾಗ ನೀರನ್ನು ಸುರಿದು ಪಾತ್ರೆಗಳನ್ನು ಖಾಲಿ ಮಾಡಿ ಮತ್ತೆ ಇಡುತ್ತಿದ್ದಳು.

ಇಂದೇಕೋ ಮಳೆ ನಿಲ್ಲುವ ಸೂಚನೆಯೇ ಕಾಣ ಬರಲಿಲ್ಲ. ಹೊದಿಸಿದ್ದ ಲಂಗವೊಂದನ್ನೂ ಬೇಧಿಸಿ ಮಳೆಯ ಹನಿಗಳು ಒಡೆದ ಕಿಟಕಿಗಳ ಮೂಲಕ ಒಳಗಡೆಗೆ ತೂರುತ್ತಿದ್ದವು. ಗುಡುಗು ಮಿಂಚು ಹೆಚ್ಚಾದ ಕಾರಣ ಬಾಗಿಲ ಬಳಿ ಕುಡುಗೋಲನ್ನಿಟ್ಟು ಬರಲು ತೆರಳಿದ ರತ್ನವ್ವಳಿಗೆ ಹೊರಗೆ ಹಚ್ಚಿಟ್ಟಿದ್ದ ದೀಪ ಆರಿಹೋಗಿರುವುದು ಕಂಡಿತು. ಆ ದೀಪವನ್ನು ಮನೆಬುಡ್ಡಿಯಿಂದ ಹಚ್ಚಿ ಮತ್ತೆ ಬಂದಾಗ ತಾನು ಕುಳಿತಿದ್ದ ಜಾಗ ತೇವವಾದ ಕಾರಣ ಮೂಟೆಯ ಮೇಲೆ ಕುಳಿತುಕೊಂಡಳು. ಮಕ್ಕಳು ಮಲಗಿದ್ದ ಮಂದಲಿಗೆ ಒದ್ದೆಯಾಗುತ್ತಿದ್ದರೂ ಅವರನ್ನು ಎಬ್ಬಿಸುವ ರೇಜಿಗೆ ಹೋಗಲಿಲ್ಲ. ಅವರನ್ನು ಎಬ್ಬಿಸಿಬಿಟ್ಟರೆ ಮಲಗಿಸಲು ಜಾಗವಾದರೂ ಎಲ್ಲಿದೆ ಅಲ್ಲಿ? ಮೈಯೊದ್ದೆಯಾಗಿ ಎಚ್ಚರವಾದಾಗ ಮೂಟೆ ಮೇಲೆಯೇ ಮಲಗಿಸೋಣವೆಂಬುದು ಅವಳ ಲೆಕ್ಕಾಚಾರವಾಗಿತ್ತು.

ಗೋಡೆ ಮೇಲೆ ತೂಗು ಹಾಕಿದ್ದ ತನ್ನ ಫೋಟೋವನ್ನು ನೋಡಿಕೊಂಡು ಹೃದಯಭಾರವೆನಿಸಿ ರತ್ನವ್ವ ಮುಖ ಮುಚ್ಚಿಕೊಂಡು ಅತ್ತುಬಿಟ್ಟಳು. ಈ ರೀತಿಯ ವಿಷಣ್ಣ ಸ್ಥಿತಿ ರತ್ನವ್ವಳಿಗೆ ಹಳತು. ಇದೇ ತರಹನಾಗಿ ಧಾರಾಕಾರವಾದ ಮಳೆ ಎಷ್ಟೋ ದಿನ ಸುರಿದಿದೆ. ವಾಸ್ತವದಲ್ಲಿ, ರತ್ನವ್ವಳಿಗೆ ಮೊದಲಿಗಿಂತ ಈಗ ಈ ವಿಚಾರದಲ್ಲಿ ಕಷ್ಟ ಕಡಿಮೆಯಾಗಿದೆ. ಹಿಂದೆಲ್ಲಾ ಈ ರೀತಿ ಮಳೆ ಸುರಿದರೆ, ಮಕ್ಕಳನ್ನು ಸಂಭಾಳಿಸಿ ಮಲಗಿಸುವುದರ ಜೊತೆಗೆ ಕುಡುಕ ಗಂಡನೇನಾದರೂ ಅದೃಷ್ಟಕ್ಕೆ ಮಲಗಿಕೊಂಡಿದ್ದರೆ, ಆತನನ್ನು ತಬ್ಬಿಕೊಂಡು ಅತ್ತಿತ್ತ ದರದರನೆ ಎಳೆದು ಮಲಗಿಸಬೇಕಾಗಿತ್ತು. ದುರದೃಷ್ಟಕ್ಕೆ ಆತನಿಗೆ ಎಚ್ಚರಾಗಿಬಿಟ್ಟರೆ ಕಾರಣವಿಲ್ಲದೇ ಕಾಲು ಕೆರೆದುಕೊಂಡು ನಿಲ್ಲುವ ಹುಂಜದಂತೆ ಜಗಳಕ್ಕೆ ನಿಂತುಬಿಡುತ್ತಿದ್ದ. ಕಾರಣವೇ ಇಲ್ಲದೇ ಮಕ್ಕಳನ್ನು ಬಡಿಯುವುದು ಆತನ ಕುಡುಕ ಸಂಸ್ಕøತಿ! ಮಳೆಗಾಲದ ಅದೆಷ್ಟು ದಿನಗಳಲ್ಲಿ ಆತನ ಕಾಲು ಹಿಡಿದುಕೊಂಡು ರತ್ನವ್ವ ‘ಹೆಂಚಿಗೆ ಕೈಯಾಡಿಸಿಬಿಡೊಮ್ಮೆ, ಮಳೆ ಬಂದ್ರೆ ಹೈಕ್ಳಿಗೆ ಮಲ್ಗೋಕು ತಾವಿಲ್ಲ’ ಎಂದು ಕೇಳಿಕೊಂಡಿದ್ದಾಳೆ. ಆದರೆ, ಮುಂಜಾನೆಯೇ ಕಂಠಮಟ್ಟ ಕುಡಿದು ಬರುತ್ತಿದ್ದ ಆತ ಒಮ್ಮೆಯೂ ಕೂಡ ಆಕೆಯ ಮಾತಿಗೆ ಓಗೊಡಲಿಲ್ಲ. ಹೆಂಚು ಹಾದು ಹೋಗಿರುವ ಗೋಡೆಯ ಜಾಗಕ್ಕೆ ಹಣವಿಲ್ಲದೇ ಮಡ್ಡಿ ಹಾಕುವುದಿಲ್ಲವೆಂದು ಗಾರೆ ಕೆಲಸದವರು ಮುಖ ತಿರುಗಿಸಿದ್ದರು. ಪ್ರತಿ ಮಳೆಯಲ್ಲೂ ರತ್ನವ್ವಳ ಮನೆಯೊಳಗೆ ದಪ್ಪ ಹನಿಯ ಸಣ್ಣ ಮಳೆ, ಈ ರೀತಿಯಾಗಿ ಪಾತ್ರೆಪಗಡೆಗಳನ್ನು ಜೋಡಿಸಿ ರಾತ್ರಿಯೆಲ್ಲಾ ಕಾಲ ಕಳೆಯುವ ಕೆಲಸ ರತ್ನವ್ವಳಿಗೆ.

ತನ್ನ ಕಷ್ಟವನ್ನೆಲ್ಲಾ ನೆನಪಿಸಿಕೊಂಡ ರತ್ನವ್ವ ತನ್ನ ಮಗನ ಮುಖ ನೋಡಿದಳು. ಪ್ರಪಂಚದ ನೋವನ್ನು ಗಂಟು ಕಟ್ಟಿ ಸಮುದ್ರಕ್ಕೆಸೆದು ನಿರಾಳನಾಗಿ ಮಲಗಿದಂತೆ ಕಾಣುತ್ತಿದ್ದಾನೆ. ಆತನನ್ನು ಎಂದಿನಂತೆ ಜೀತ ಮಾಡಿ ಓದಿಸಿ ದೊಡ್ಡವನನ್ನಾಗಿ ಮಾಡಿ ಒಂದೊಳ್ಳೆಯ ಜಾಗಕ್ಕೆ ಕೊಂಡೊಯ್ಯಬೇಕೆಂಬ ಅವಳಾಸೆ ಸ್ವಲ್ಪ ನೆಮ್ಮದಿ ತಂದಿತು. ಅದಕ್ಕಾಗಿ ಆಕೆ ಪಡಬಾರದ ಪಾಡನ್ನು ಪಡುತ್ತಿದ್ದಾಳೆ. ಎರಡು ವರ್ಷ ಗೌಡರ ಜೀತಕ್ಕೆ ಕುರಿ ಮೇಯಿಸಲು ಬಿಟ್ಟಿದ್ದು ನಂತರ ಅವರಿವರ ಕಾಲು ಕೈ ಹಿಡಿದು ಮತ್ತೆ ಶಾಲೆಯ ಮೆಟ್ಟಿಲನ್ನು ಹತ್ತಿಸಿದ್ದಾಳೆ. ಕುಡಿದು ಚಾವಡಿಯಲ್ಲೋ, ಅರಳಿಕಟ್ಟೆಯಲ್ಲೋ ಕಾಲ ಕಳೆದು ಊಟದ ಹೊತ್ತಿಗೆ ಮನೆಗೆ ಬರುತ್ತಿದ್ದ ಗಂಡನ ಪುಡಿಗಾಸು ಆಕೆಗೆ ಎಂದಿಗೂ ನೆರವಾಗಲಿಲ್ಲ. ಮುಂಜಾನೆ ಎದ್ದೊಡನೆ ಮನೆ ಮುಂದೆ ಸಗಣಿ ನೀರೆರೆಚಿ, ರಂಗವಲ್ಲಿ ಇಟ್ಟು, ಅಡುಗೆ ಮಾಡಿ, ರಾತ್ರಿ ಉಳಿದ ತಂಗಳು ಪಂಗಳನ್ನು ತೂಕಲಿಗೆ ತುಂಬಿಕೊಂಡು ಕೂಲಿ ಕಂಬಳಕ್ಕೆಂದು ಹೊರಟುಬಿಟ್ಟರೆ ಮತ್ತೆ ಬರುತ್ತಿದ್ದದ್ದು ಸಂಜೆಗೆ. ಹಗಲೆಲ್ಲಾ ಬಿಸಿಲಿನ ಝಳದಲ್ಲಿ ದುಡಿದು ಬೆವರಾಗಿ, ಒಣಗಿಹೋಗಿದ್ದರೂ ಸಂಜೆ ಮಕ್ಕಳ ಮೊಗವನ್ನು ಕಂಡೊಡನೆ ಅರಳಿಬಿಡುತ್ತಿದ್ದಳು. ಒಮ್ಮೊಮ್ಮೆ ಅವುಗಳನ್ನು ತಬ್ಬಿಕೊಂಡು ಮುದ್ದಾಡಿ, ಕೈಗೆ ಒಂದೈದು ರೂಪಾಯಿ ಇಟ್ಟು ಖುಷಿ ಪಡಿಸುತ್ತಿದ್ದಳು. ದಿನಕ್ಕೆ ಹೆಚ್ಚೆಂದರೆ ಐವತ್ತರಿಂದ ಅರವತ್ತು ರೂಪಾಯಿಯನ್ನು ಸಂಪಾದಿಸುತ್ತಿದ್ದ ಆಕೆಯ ಕೂಲಿ ಇತ್ತ ಅಡುಗೆಗೂ ಅತ್ತ ಹರಿದ ಬಟ್ಟೆಗಳನ್ನು ಹೊಲಿಸಲೂ ಸಾಕಾಗುತ್ತಿರಲಿಲ್ಲ. ಸ್ಟೋರ್ ದಿನಸಿ, ಕಳ್ಳ ಮಡಿಲಿನ ತರಕಾರಿಗಳನ್ನೆಲ್ಲಾ ಬೆರೆಸಿ ಅಡುಗೆ ಮಾಡಿ ಹತ್ತೋ ಇಪ್ಪತ್ತೋ ಉಳಿಸಿಕೊಳ್ಳುತ್ತಿದ್ದವಳಿಗೆ ಕುಡುಕ ಗಂಡ ಅಪರೂಪಕ್ಕೆ ಇಪ್ಪತ್ತು ಮೂವ್ವತ್ತು ಕೊಟ್ಟರೆ ಆಗಾಗ ಅದಕ್ಕಿಂತಲೂ ಹೆಚ್ಚು ಕಾಸನ್ನು ಹೊಡೆದು ಬಡೆದು ಇಸಿದುಕೊಳ್ಳುತ್ತಿದ್ದ. ಆತನ ಸಾವಿನ ಮೂಲಕ ರತ್ನವ್ವಳಿಗೆ ಈಗ ಸ್ವಲ್ಪ ಹಣ ಉಳಿಸುವ ಉಮೇದು ಹೆಚ್ಚಾಗಿದೆ! ಸೌಖ್ಯ ನೀಡದಾತನ ಗೋಳು ರತ್ನವ್ವ ಮತ್ತು ಮಕ್ಕಳಿಗೆ ಪ್ರತಿದಿನವೂ ಸೊಳ್ಳೆಕಾಟದಂತಿತ್ತು. ಕುಡಿದು ಮನೆಗೆ ಬಂದವನೇ ಗೊಣ ಗೊಣ ಎಂದು ನಿದ್ದೆಯಲ್ಲೂ ಪೇಚುತ್ತ ಮನೆ ಮಂದಿಯ ನಿದ್ದೆಯನ್ನು ಹಾಳುಗೆಡವೋದು ಆತನ ಮತ್ತೊಂದು ಕುಡುಕ ರೂಢಿ. ಆತ ಸತ್ತು ಹನ್ನೊಂದು ದಿನಗಳಾಗಿರುವ ಈ ಹೊತ್ತಿನಲ್ಲಿ ಆ ಮನೆಯವರಿಗೆ ಆ ದರಿದ್ರ ಕಾಟವಿಲ್ಲ. ಅಪ್ಪನಿಲ್ಲದ ಕಾರಣ ಮಕ್ಕಳು ಸ್ವಲ್ಪ ನಿದ್ದೆ ಮಾಡಿವೆ, ಆತನಾರ್ಭಟ, ಕಾಟದ ಮುಂದೆ ಈ ಮಳೆಯ ಹೊಡೆತ ಆಕೆಗೆ ದೊಡ್ಡದೆನಿಸುತ್ತಿಲ್ಲ.

ಸಾವಿನ ದಿನದಿಂದ ವೈದಿಕ ಕ್ರಿಯೆ ಮುಗಿಯುವವರೆವಿಗೂ ಪ್ರತಿ ಖರ್ಚಿಗೂ ಬೀದಿ ಜನಗಳ ಬಳಿ ಸಾಲಕ್ಕಾಗಿ ಕೈಯೊಡ್ಡಬೇಕಾಯಿತು. ರತ್ನವ್ವಳ ಗಂಡ ಒಂದು ರೀತಿ ಮನೆಗೆ ಮಾರಿ ಊರಿಗೆ ಉಪಕಾರಿಯೆಂಬಂತೆ ಹೊರಗಿನವರೊಡನೆ ಚೆನ್ನಾಗಿಯೇ ಇದ್ದವ. ಯಾವ ರೀತಿ? ದುಡಿದದ್ದನ್ನು ಒಂದಷ್ಟು ಜನಗಳಿಗೆ ಬಿಟ್ಟಿಯಾಗಿ ಭಟ್ಟಿ ಸಾರಾಯಿ ಕುಡಿಸುವ ಮಟ್ಟಿಗಷ್ಟೇ. ಎಲ್ಲರೂ ಕುಡುಕ ಚೇಲಗಳು. ಈಗ ಸಾಲ ಕೊಟ್ಟವರನ್ನೂ ಕೂಡಿಸಿಕೊಂಡು! ಪ್ರತಿಸಂಜೆ ಕುಡಿದು ಇದ್ದಬದ್ದ ದುಡ್ಡನ್ನೆಲ್ಲಾ ಸಾರಾಯಿ ಗಲ್ಲಕ್ಕೆ ಸುರಿದು ಬರುತ್ತಿದ್ದವನಿಗೆ ಮತ್ತೆ ಕುಡಿಯಬೇಕೆನಿಸುವ ಹಠ, ಚಟ. ರತ್ನವ್ವ ಮತ್ತು ಮಕ್ಕಳಿಗೆ ಇನ್ನಿಲ್ಲದ ಉಪದ್ರವ. ‘ನನ್ನ ಹತ್ರ ಹಣ ಇಲ್ಲ, ನಿನ್ನನ್ನ ನಿನ್ ಮಕ್ಳನ್ನ ಸಾಕ್ತಾ ಇರೋದು ನಾನು ಮೈಮುರಿದು ಸಂಪಾದ್ಸೋ ದುಡ್ಡು’ ಎಂದರೆ, ‘ಬರಿ ಸುಳ್ಳನ್ನೇ ಹೇಳ್ಬೇಡಮ್ಮಿ, ನಾನ್ ಕೊಟ್ಟಿದ್ದ ದುಡ್ಡೆಲ್ಲಾ ನುಂಗಿ ನೀರು ಕುಡಿದ್ಬುಟ್ಟಾ? ನೀನ್ ದುಡ್ದಿದ್ದನ್ನ ಆ ನಿನ್ ಮಿಂಡಂಗೆ ಕೊಡ್ತೀಯ’ ಎಂದು ಗೋಳು ತೆಗೆಯುತ್ತಿದ್ದವ ಕೆಂಚಿಯ ಕಿವಿಯಲ್ಲಿದ್ದ ಓಲೆಗಳನ್ನು ಮಾರಿ ನುಂಗಿ ಕುಡಿದು, ರತ್ನವ್ವಳ ತಾಳಿಯನ್ನೂ ಎಷ್ಟೋ ಬಾರಿ ಅಡವಿಗಿಟ್ಟು ದುಡ್ಡನ್ನು ವ್ಯರ್ಥವಾಗಿ ಜೀರ್ಣಿಸಿದ್ದ. ಗಂಡ ಸತ್ತ ನಂತರದ ಈ ಎಲ್ಲಾ ಮುತುವರ್ಜಿ ಗಾಬರಿಗಳಲ್ಲಿ ಆಕೆ ನಿದ್ದೆ ಮಾಡದೇ ಇರಬಹುದು, ಆದರೆ ಹೆಂಡತಿ ಎಂಬ ಪಟ್ಟದಲ್ಲಿ ಆಕೆಗಿದ್ದ ನೋವು, ಈಗ ವಿಧವೆ ಎಂಬ ಪಟ್ಟದಲ್ಲಿಲ್ಲ. ವಿಧವೆ ಎಂಬ ಪದ ಆಕೆಗೆ ಗೌರವ ಸೂಚಕವಾಗಿ ಕಾಣುವುದರ ಜೊತೆಗೆ ಅದು ನೀಡುತ್ತಿರುವ ನಿರಾಳತೆಯ ಮುಂದೆ ಹೆಂಡತಿ ಎಂಬ ಪಟ್ಟ ಕೊಟ್ಟ ನೋವು ಸಂಕಷ್ಟಗಳು ನೆನಪಿಗೆ ಬಂದರೆ ಸಾಕು ಈ ಮಳೆಯನ್ನೂ ಮೀರಿಸುವಂತೆ ಕಣ್ಣೀರು ಹರಿಯುತ್ತದೆ.

ಮಳೆ ನಿಲ್ಲಲೇ ಇಲ್ಲ. ಅಷ್ಟಕ್ಕೆ ಕೆಂಚಿ ಒದ್ದಾಡಿಕೊಂಡು ಎದ್ದು ಬಿಟ್ಟಳು.
‘ಯಾಕವ್ವಾ ಮಲಗು’ – ಎಂದು ಹೇಳುತ್ತ ಅವ್ವನ ತೊಡೆ ಮೇಲೆ ತಲೆ ಇಟ್ಟಳು.
‘ಮಲ್ಗೋಕೆ ತಾವೆಲ್ಲೈತವ್ವ?’ – ಅವ್ವ ಆ ರೀತಿ ಹೇಳುತ್ತಿದ್ದಂತೆ ಮಗಳು ಕಣ್ಣೀರು ಕಚ್ಚಿಕೊಂಡಳು.
‘ಅಳಬೇಡ ಕಣವ್ವಾ, ನನಗಾದಂಗೆ ನಿನಗಾಗ್ಬಾರದು, ಒಂದೊಳ್ಳೆ ಸಂಬಂಧ ನಿನ್ನನ್ನ ಹುಡ್ಕೊಂಡು ಬರುತ್ತೆ, ನೀನು ಸುಖವಾಗಿ ಮಾರಾಣಿ ತರ ಬಾಳ್ತೀಯ’
‘ಏಟ್ ಸಂಬಂಧ ಬಂದಿತ್ತವ್ವ?’
‘ಅದೆಲ್ಲ ನೆಪ್ಪಲ್ಲಿಡ್ಬೇಡ ಕಂದಾ, ಬಂದಿದ್ದ ನೆಂಟಸ್ತನ ಎಲ್ಲಾ ನಿನ್ ಕುಡುಕಪ್ಪನಿಂದ ಮುರ್ದೋಯ್ತು, ಕುಡುಕನ ಮನೆಯಿಂದ ಹೆಣ್ಣು ತಂದ್ರೆ ಏಳ್ಗೆ ಆಗುತ್ತಾ? ನೆಮ್ಮದಿ ಇರುತ್ತ ಅಂದ್ಕೊಂಡಂದ್ಕೊಂಡೇ ಎಲ್ಲಾ ನಮ್ಮನ್ನ ಕೈ ಬಿಟ್ರವ್ವ’ – ಎಂದು ಹೇಳುತ್ತಿದ್ದಂತೆ ಇಬ್ಬರೂ ಅಳಲು ಶುರುವಿಟ್ಟುಕೊಂಡರು.
‘ಆ ಗಾಯಕ್ಕೆ ಮುಲಾಮು ಹಚ್ದವ್ವ?’ – ಮುಂಜಾನೆ ಬಳೆ ಹೊಡೆಯುವಾಗ ಬಳೆಯ ಸಿವುರು ಚುಚ್ಚಿ ಆಗಿದ್ದ ಗಾಯ ನೋಡುತ್ತ ಕೆಂಚಿ ಕೇಳಿದಳು. ‘ಇಲ್ಲ ಕಣವ್ವ’ ಎಂದೊಡನೆ ಗೊಣಗಿಕೊಂಡ ಕೆಂಚಿ ಮುಲಾಮು ಔಷಧಿಯಿಲ್ಲದೇ ಮುಖಕ್ಕೆ ಬಳಿದುಕೊಳ್ಳಲು ಇದ್ದ ಪೌಡರನ್ನೇ ತಂದು ಸುರಿದಳು.
ಸರಿಯಾದ ಔಷಧಿ ಸಲಕರಣೆ ಸಿಗದೆ ಆತ ಮಾಡಿದ್ದ ಇಂತಹ ಗಾಯಗಳು ಒಣಗಿ ಒಣಗಿ ಗಂಟುಗಳಾಗಿ ಸತ್ತು ನೆಮ್ಮದಿ ತಂದವನ ಮತ್ತೆ ಮತ್ತೆ ಅಣಕಿಸುತ್ತಿದ್ದವು. ಒಮ್ಮೆ ಮೂಗಿಗೆ ಗುದ್ದಿ ರಕ್ತ ಸೋರಿಸಿದ್ದಾಗ ಕೋಪದಲ್ಲಿ ಕೊಂದೇ ಬಿಡುತ್ತೇನೆ ಎಂದು ರತ್ನವ್ವ ಕುಡುಗೋಲೊಂದನ್ನು ಹಿಡಿದುಕೊಂಡಿದ್ದಳು. ‘ಸಾಯ್ಸಮ್ಮಿ, ಬದುಕಿ ನೀನು ಕೆಟ್ಟವಳಾಗು, ಸತ್ತು ನಾನು ಒಳ್ಳೆಯವನಾಗ್ಬಿಡ್ತೀನಿ’ ಎಂದಿದ್ದ. ಈಗ ನಿಜಕ್ಕೂ ಸತ್ತು ಒಳ್ಳೆವನಾಗಿಯೇ ಹೋದ!

‘ಅವ್ವಾ’ – ಕೆಂಚಿ ಕೂಗಿದಳು.
‘ಏನು ಕಂದಾ’
‘ನಾನು ಮದ್ವೆ ಆಗೋದಾದ್ರೆ, ಅವನನ್ನೇ ಆಗೋದು, ಇಲ್ಲಾಂದ್ರೆ...’
‘ಹೇ, ಥೂ! ನಿನ್ ಜನ್ಮಕ್ಕೆ ಬೆಂಕಿ ಹಾಕ, ಈಗ ತಾನೇ ಒಸಿ ಸುಧಾರಿಸ್ಕೊಂಡು ಇನ್ನಾದ್ರೂ ನೆಮ್ಮದಿ ಕಾಣೋಣ ಅಂಥ ಇದ್ದೀನಿ, ಮತ್ತೆ ಅವನ ವಿಚಾರ ತಂದಾ ನೀನು, ಗುಡ್ಸಟ್ಟಿ’

ಕೆಂಚಿ ಬಿಕ್ಕಿ ಬಿಕ್ಕಿ ಅಳುತ್ತ, ಎದೆ ಭಾರಗೊಳಿಸಿಕೊಂಡು ಮೌನವಾದಳು. ತಾಯಿಯ ತೊಡೆಯಲ್ಲಿ ತಲೆ ಇಟ್ಟಿದ್ದ ಅವಳಿಗೆ ಇರುಸು ಮುರುಸಾಯಿತು. ತಲೆ ಬದಲಿಸಿ ಮಸಿಯ ಚೀಲದ ಮೇಲಿಟ್ಟಳು. ಆಕೆಯನ್ನು ನೋಡಿ ಗೊತ್ತು ಮಾಡಿಕೊಂಡು ಹೋಗಲು ಹತ್ತಾರು ಸಂಬಂಧಗಳು ಬಂದಿವೆ. ಎಲ್ಲವೂ ಕುದುರುವಲ್ಲಿರುವಾಗಲೇ ಅವಳಪ್ಪನ ಕಾಟದಿಂದ ಅರ್ಧಕ್ಕೆ ಮುರಿದುಬಿದ್ದಿವೆ. ಇರುವಷ್ಟು ದಿನ ಆತ ಈಕೆಯ ಮದುವೆ ಬಗ್ಗೆ ಯೋಚಿಸಿದವನೇ ಅಲ್ಲ, ಮೈಮೇಲೊಂದಷ್ಟು ಒಡವೆ ಹಾಕಿಸಿದವನಲ್ಲ, ಬದಲಾಗಿ ಇರುವುದೆಲ್ಲವ ಶುದ್ಧವಾಗಿ ಕೇರಿ ಮಾರಿದವನು. ಇದೆಲ್ಲದರ ನಡುವೆಯೂ ಆಕೆಗೆ ಕೆಳಬೀದಿಯ ಹುಡುಗನೊಬ್ಬನ ಮೇಲೆ ಪ್ರೇಮಾಂಕುರವಾಗಿತ್ತು. ಸ್ವಲ್ಪ ಹೆಚ್ಚೇ ಪ್ರೀತಿಸಿದ್ದರೂ ಅನ್ನಿ. ನಡುಗುವ ಮೈ ದನಿಯೊಂದಿಗೆ ಆ ವಿಚಾರವನ್ನು ಎಷ್ಟೋ ದಿನ ಮನೆಯಲ್ಲಿ ಪ್ರಸ್ತಾಪಿಸಲು ಪ್ರಯತ್ನಿಸಿ, ಸೋತು ಕೊನೆಗೊಂದು ದಿನ ಧೈರ್ಯ ತಂದು ಹೇಳಿಯೇಬಿಟ್ಟಾಗ ಕುಡುಕ ಅಪ್ಪ ಜಾಡಿಸಿ ಹೊಟ್ಟೆಗೆ ಒದ್ದಿದ್ದು ಬಾವುಕಟ್ಟಿ ಹಾಗೇ ಇದೆ. ಆ ಹುಡುಗನ ಹಟ್ಟಿವರೆವಿಗೂ ಹೋಗಿದ್ದ ಅಪ್ಪ ಅಂದು ಮಾಡಿಕೊಂಡು ಬಂದಿದ್ದ ರಾದ್ಧಾಂತಕ್ಕೆ ಕೆಲವು ದಿನಗಳವರೆವಿಗೂ ಕೆಂಚಿ ಮನೆಯಿಂದ ಹೊರಗೆ ಬಂದಿರಲಿಲ್ಲ. ‘ಅವರು ನಮ್ಮ ಮಟ್ಟದವರಲ್ಲ, ಅವರು ನಾವು ಬೇರೆ ಬೇರೆ ಕೇರಿಯವರು, ಈ ಮದ್ವೆ ಮಾಡ್ಸೋ ಬದಲು ನಿನ್ನನ್ನ ಯಾವಾದಾದ್ರೂ ಪಾಳುಬಾವಿಗೆ ನೂಕ್ಬಿಡ್ತೀನಿ’ ಎಂದು ರತ್ನವ್ವ ಹೇಳಿದ್ದಾಗ ತನ್ನ ಮನೆಯ ಮುರುಕು ಗೋಡೆ, ಕಿಟ್ಟ ಹಿಡಿದ ಕಂಬ ಗಳಗಳನ್ನು ನೋಡಿ ಕೆಂಚಿ ‘ಇದ್ಯಾವ ಮೇಲ್ಮಟ್ಟವೋ?’ ಎಂದುಕೊಂಡಿದ್ದಳು.

ಮಳೆಯ ರಭಸ ನಿಲ್ಲದ ಕಾರಣ ಕೆಂಚಿಯ ಸಣ್ಣನೆ ಬಿಕ್ಕಳಿಗೆ ರತ್ನವ್ವಳಿಗೆ ಕೇಳಿಸುತ್ತಿರಲ್ಲಿಲ್ಲ. ಆದರೂ ನೊಂದುಕೊಂಡ ತಾಯ ಮನಸ್ಸು ಆಕೆಯ ತಲೆ ಸವರಲು ಕೈ ಚಾಚಿತು. ಕೈ ಒದರಿದ ಕೆಂಚಿ ‘ನಂದು ಒಂದು ಬಾಳಾ?’ ಎಂದುಕೊಂಡಳು. ಆಕೆಯನ್ನು ಒಳ್ಳೆಯೆಡೆಗೆ ಮದುವೆ ಮಾಡಿ, ಆಕೆಯ ಸುಖವನ್ನು ಬಯಸುವ ರತ್ನವ್ವ, ಆಕೆ ತನ್ನ ಸುಖದ ಪುರುಷನನ್ನು ಬಯಸಿಬಿಟ್ಟರೆ ಸಾಕು ಕೆಂಡವಾಗುತ್ತಿದ್ದಳು. ಕುಡುಕಪ್ಪನೊಪ್ಪಿಗೆ ಕೆಂಚಿಗೆ ಉಮೇದಾಗಿರಲಿಲ್ಲ, ಬದಲಾಗಿ ಅಮ್ಮನೊಪ್ಪಿಗೆಗೆ ಕಾದಿದ್ದಳು. ಆದರೆ, ಈ ವಿಚಾರದಲ್ಲಿ ಆಕೆಗೆ ಇಬ್ಬರ ನಡುವೆ ವ್ಯತ್ಯಾಸವೇನೂ ಕಂಡಿರಲಿಲ್ಲ!

ಅಷ್ಟಕ್ಕೇ ‘ಥೂ! ಬಟ್ಟೆಯೆಲ್ಲಾ ಒದ್ದೆಯಾಗಿಹೋಯಿತು’ ಎಂದು ಚೀರಿಕೊಂಡು ಲಕ್ಷ್ಮಣ ಎದ್ದುಬಿಟ್ಟ. ಚರಂಡಿಯ ನೀರು ಉಕ್ಕಿ ಮುಂದಿನ ಮನೆಗೆ ತುಂಬಿಕೊಂಡು, ನಡುಮನೆಗೆ ಬಾಗಿಲ ಮೂಲಕ ಒಸರುತ್ತಿತ್ತು. ದಡದಡನೆ ಎದ್ದ ರತ್ನವ್ವ, ಒಂದು ಗಳ ಹಿಡಿದುಕೊಂಡು, ಸೀರೆ ಸೆರಗನ್ನೇ ತಲೆಗೆ ಟೊಪ್ಪಿ ಮಾಡಿಕೊಂಡು, ಮಗನನ್ನು ಒಳಗಡೆಗೆ ಎಳೆದು ಮುಂದಿನ ಮನೆಯೊಳಗೆ ನುಗ್ಗಿದ ನೀರನ್ನು ತಪ್ಪಲೆ ಮೂಲಕ ಹೊರಕ್ಕೆ ಎರಚಿ, ಗಳದ ಮೂಲಕ ಕೆಸರು ಕಡ್ಡಿ ಮಡ್ಡಿಯನ್ನೆಲ್ಲಾ ತಳ್ಳಲು ನಿಂತಳು. ಆಕೆಯ ತೋಳು ಕೈ ಕಾಲುಗಳು ಇನ್ನಿಲ್ಲದ ವೇಗ ಪಡೆದುಕೊಂಡು ತಳ್ಳುತ್ತಿದ್ದರೂ ನಿಲ್ಲದ ನೀರು ನಡುಮನೆಗೆ ಮತ್ತೆ ನುಗ್ಗುವುದರಲ್ಲಿತ್ತು. ಅಷ್ಟಕ್ಕೆ ಎಡಗಡೆಯ ಗೋಡೆ ಧಪ್ಪನೆ ಕೆಳಕ್ಕೆ ಬಿತ್ತು. ಕೂಡಲೇ ಮತ್ತೊಂದು ಗೋಡೆ ಬದಿಗೆ ಅವಚಿಕೊಂಡರೂ ರತ್ನವ್ವಳ ಕಾಲಿನ ಮೇಲೆ ಗೋಡೆಯ ದಪ್ಪನೆಯ ಹಿಂಟೆ ಬಿದ್ದು ರಕ್ತ ಚಿಮ್ಮಿತು. ಮೂಲೆಯಲ್ಲಿ ಹಚ್ಚಿಟ್ಟಿದ್ದ ದೀಪ ಮಾತ್ರ ಚೂರು ಚೂರಾಗಿ ಗೋಡೆಯ ಮಣ್ಣಿನೊಳಗೆ ಬೆರೆತುಹೋಯಿತು. ಗುಡುಗು ಮಿಂಚಿಗೆ ಹೆದರಿ ಬಾಗಿಲ ಬಳಿ ಇಟ್ಟಿದ್ದ ಕುಡುಗೋಲನ್ನೂ ಅದಾಗಲೇ ನೀರು ಹೊತ್ತುಕೊಂಡು ಹೋಗಿತ್ತು. ನೆಲಕಂಡ ಗೋಡೆ ಎರಚಿದ ನೀರಿಗೆ ಸಂಪೂರ್ಣ ಒದ್ದೆಯಾದ ರತ್ನವ್ವ ನೀರನ್ನು ಹೊರಗೆ ತಳ್ಳಲು ಮತ್ತೆ ಮತ್ತೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮೂಟೆ ಮೇಲೆ ಕುಳಿತಿದ್ದ ಮಕ್ಕಳು ತೂಕಡಿಸುತ್ತಿದ್ದದ್ದನ್ನು ಕಂಡಳು. ಒಳಬಂದವಳೇ ಮಕ್ಕಳನ್ನು ಎಬ್ಬಿಸಿ ತನ್ನ ಸೀರೆ ಸೆರಗಿನಿಂದ ತಲೆಗೆ ಕೊಡೆ ಮಾಡಿ ಬಾಗಿಲ ಬಳಿ ಬಂದು ‘ವೆಂಕ್ಟಕ್ಕ, ವೆಂಕ್ಟಕ್ಕ, ರಾಮಣ್ಣ, ರಾಮಣ್ಣ’ ಎಂದು ಜೋರಾಗಿ ಕೂಗಿದಳು. ಮುಂದಿನ ಮನೆಯ ರಾಮಣ್ಣ ವೆಂಕ್ಟಕ್ಕಳಿಗೆ ಎಚ್ಚರವಾಗಲಿಲ್ಲ. ‘ವೆಂಕ್ಟಕ್ಕ, ವೆಂಕ್ಟಕ್ಕ, ವೆಂಕ್ಟಕ್ಕೋ’ ಎಂದು ಮತ್ತೆ ಶಕ್ತಿಯೆಲ್ಲಾ ಉಪಯೋಗಿಸಿ ಜೋರಾಗಿ ಕೂಗಿದೊಡನೆ ಆ ಮನೆಯಿಂದ ‘ಓ...’ ಎಂಬ ಶಬ್ದ ಬಂತು.
ಕೂಡಲೇ ಕಿಟಕಿ ತೆರೆದ ವೆಂಕ್ಟಕ್ಕ ‘ಏನವ್ವ?’ ಎಂದಳು.
‘ಸ್ವಲ್ಪ ನಮ್ಮ ಐಕ್ಳನ್ನ ನಿನ್ ಮನೇಲಿ ಮಲಗಿಸ್ಕೋ, ಮನೆಯೆಲ್ಲಾ ಸುರಿತಾ ಇದೆ, ಮುಂದಿನ ಮನೆ ಗೋಡೆ ಬಿದ್ದೋಗೈತೆ’
‘ಅಯ್ಯೋ ಶಿವ್ನೇ, ಕಳ್ಸವ್ವ, ಆ ಪುಣ್ಯಾತ್ಮ ನಿನ್ ಗಂಡ ಇದ್ದಿದ್ರೆ ಈ ರೀತಿ ಆಗೋಕೆ ಬಿಡ್ತಿದ್ನವ್ವ, ಗಂಡ ಇಲ್ದೇ ಇರೋ ಮನೆ ಕಣವ್ವಾ ನಿಂದು’ ಎಂದಾಗ ಆಕೆಯ ಮಾತಿಗೆ ಕಿವಿ ಕೊಡದ ರತ್ನವ್ವ ಕೂಡಲೇ ತನ್ನ ಮಕ್ಕಳನ್ನು ಮುಂದಿನ ಮನೆಗೆ ಬಿಟ್ಟುಬಂದು, ನಡುಬಳಸಿ ಸೀರೆಕಟ್ಟಿ, ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಚರಂಡಿಗೆ ಚಾಚಿಕೊಂಡಿದ್ದ ರಾಶಿ ರಾಶಿ ಕಸ ಕಡ್ಡಿಯನ್ನೆಲ್ಲಾ ತಳ್ಳುತ್ತಾ ನಿಂತುಬಿಟ್ಟಳು.

Monday 8 April 2013

ಮನಸ್ಸು (ಕಥೆ) (ಈ ವಾರದ ಕರ್ಮವೀರದಲ್ಲಿದೆ, ಏಪ್ರಿಲ್ 14 - ಏಪ್ರಿಲ್ 20, 2013)

ಬಲವಂತಕ್ಕೆ ಹಾಸಿಗೆಯ ಮೇಲೆ ಬಂದು ಕುಳಿತಿದ್ದಳು. ಅವಳಿಗೆ ಹಣ್ಣುಗಳ ಪಕ್ಕ ಇಟ್ಟಿದ್ದ ಚಾಕುವಿನ ಮೇಲೆ ಕಣ್ಣು. ಆತನಿಗೆ ಹಾಲು, ಹಣ್ಣು ಮತ್ತು ಹೆಣ್ಣಿನ ಮೇಲೆ ಕಣ್ಣು. ಆತ ಹತ್ತಿರ ಬಂದವನೇ ಆಕೆಯ ಸೀರೆ ಸೆರಗ ಮೇಲೆ ಕೈ ಇಟ್ಟ. ಅಲ್ಲೇನೂ ಬಲವಂತವಿರಲಿಲ್ಲ. ಆಕೆಯ ಮೊಗದಲ್ಲಿ ನಾಚಿಕೆಯಿಲ್ಲದಿದ್ದರೂ ಆತನಲ್ಲಿ ತುಸು ನಾಚಿಕೆಯಿತ್ತು. ಆತನಿಗದು ಮೊದಲ ಮಿಲನರಾತ್ರಿ, ಆದರೆ ಆಕೆಗಲ್ಲ. ಸೀರೆ ಸೆರಗು ಹಿಡಿದು ಹತ್ತಿರ ಕುಳಿತವನೇ ತೋಳಿಗೆ ತೋಳು ತಾಗಿಸಿದ. ಬೆಂಕಿ ತಾಕಿದವರು ಓಡುವಂತೆ ಆಕೆ ಪಕ್ಕಕ್ಕೆ ಸರಿದಳು. ಆತನಿಗೆ ಅರ್ಥವಾಗಲಿಲ್ಲ, ಮತ್ತೆ ತೋಳನ್ನು ತಾಗಿಸಿದ. ಆಕೆ ಕೋಪದಿಂದ ತಿರುಗಿದಳು, ಕಣ್ಣಿನಲ್ಲಿ ಬೆಂಕಿ ಹೊಮ್ಮುತ್ತಿತ್ತು. ಆಕೆಯ ಎದೆಯಲ್ಲಿ ತಾಳಿ ಇರಲಿಲ್ಲ, ಆತ ಕೊಟ್ಟಿದ್ದ ಚಿನ್ನದುಂಗುರ ಪಕ್ಕದಲ್ಲಿಯೇ ಇದ್ದ ಬೆಂಚಿನ ಮೇಲಿತ್ತು. ಆದರೆ, ಆ ಕ್ಷಣದಲ್ಲಿ ಆತನಿಗೆ ಅದೆಲ್ಲಾ ಬೇಡವಾಗಿತ್ತು, ಮೊದಲ ಅನುಭವ, ಎಷ್ಟೋ ದಿನಗಳಿಂದ ತಣಿಸಿಕೊಂಡುಬಂದ ಕಾಮತೃಷೆಗೆ ನೀರೆರೆಯಬೇಕಾಗಿತ್ತು. ಈಕೆಗೋಸ್ಕರ ಎಷ್ಟೋ ಜನರನ್ನು ಕಾಡಿಬೇಡಿ ಇಲ್ಲಿಗೆ ಬರಮಾಡಿಕೊಂಡಿದ್ದ. ಆಕೆ, ಎದ್ದು ನಿಂತು ಸರಸರನೆ ಹೋಗಿ ಬಾಗಿಲು ತೆರೆದಳು. ಹೊರಗೆ ಕಾವಲಿಗೆ ನಿಂತ ಒಂದಷ್ಟು ಜನ ಕಂಡರು, ತೂ! ಎಂದು ಉಗಿದವಳೇ ಮತ್ತೆ ಬಂದು ಹಾಸಿಗೆ ಮೇಲೆ ಮಲಗಿದಳು. ಆತ ಕೈಯಿಂದ ಸೊಂಟ ಬಳಸಿದ. ಈಕೆ ಮತ್ತೆ ತೂ! ಎಂದು ಆತನ ಕೈ ಒಗೆದಳು. ಆದರೆ ಆತನಿಗೆ ತಡೆದುಕೊಳ್ಳಲಾಗಲಿಲ್ಲ. ಮತ್ತೆ ಆಕೆಯ ದೇಹವನ್ನು ತನ್ನ ಕೈಗಳಿಂದ ಬಳಸಿದ, ಆಕೆ ಆತನಿಂದ ಬಿಡಿಸಿಕೊಂಡು ಪಕ್ಕಕ್ಕೆ ಹೊರಳಿದಳು. ಆದರೆ ಆತ ಬಿಡಲೊಲ್ಲ, ಕೆನ್ನೆಗೆ ಮುತ್ತಿಕ್ಕಿದ. ಆಕೆ ಎಂಜಲು ಒರೆಸಿಕೊಂಡಳು. ಜಿಂಕೆಯ ಮೇಲೆ ಎರಗಿದ ಹುಲಿಯಂತೆ ಆತ ಗಟ್ಟಿಯಾಗಿ ತಬ್ಬಿಕೊಂಡು ಕಾಲಿನಿಂದ ಅವಳ ಕಾಲದುಮಿ ಕೈಗಳನ್ನು ಗಟ್ಟಿಯಾಗಿ ಹಿಡಿದು ಮೇಲೆ ಹೊರಳಲು ಬಂದ. ಮೈಮೇಲೆ ವಿಷಸರ್ಪ ಬಿದ್ದಾಗ ಕೊಡವಿಕೊಳ್ಳುವಂತೆ ದೇಹವನ್ನು ಕೊಡವಿಕೊಂಡವಳೇ ‘ಹತ್ರ ಬರ್ಬೇಡ, ಕೊಂದ್ಬಿಡ್ತೀನಿ’ ಎಂದು ಅವನು ಕೊಟ್ಟಿದ್ದ ಉಂಗುರವನ್ನು ಮುಖದ ಮೇಲೆಸೆದಳು.

ಆತ ಸ್ವಲ್ಪ ಹೊತ್ತು ಮೌನವಾಗಿ ಆಕೆಯ ಪಕ್ಕ ಮಲಗಿಕೊಂಡ. ಮತ್ತೆ ಆಕೆಯ ಸೌಂದರ್ಯ ಕೆಣಕಿತು. ಈ ಬಾರಿ ಜಿಂಕೆಯ ಮೇಲೆ ಆನೆ ಮಲಗಿದಂತೆ ಮೇಲೆ ಬಿದ್ದ. ಆಕೆಯ ಬಾಯಿಯನ್ನು ಅದುಮಿ ಕಾಲನ್ನು ಒತ್ತಿದ. ಆತ ‘ಆ...’ ಎಂದ. ಆಕೆಯ ಹೊಟ್ಟೆಯ ಮೇಲೆ ರಕ್ತ ಜಿನುಗಿತು. ಅದುಮಿಟ್ಟುಕೊಂಡಿದ್ದ ಬಾಯಿ ಸಡಿಲವಾಯಿತು, ಕೈ ಕಾಲುಗಳು ಅಲುಗಾಡಿದವು. ಆಕೆಯ ಕೈಯಿಂದ ಹರಿದುಕೊಂಡು ಬಂದ ರಕ್ತ ಹೊಟ್ಟೆಯ ಮೇಲಿಂದ ಹಾಸಿಗೆಗೆ ಧುಮುಕಿತು. ಬೆನ್ನಿಗೆ ಎರಡು ಬಾರಿ, ಹೊಟ್ಟೆಗೆ ಮೂರು ಬಾರಿ ಚುಚ್ಚಿಕೊಂಡ ಚಾಕು ಹಾಸಿಗೆಯ ಪಕ್ಕ ಬಿದ್ದುಕೊಂಡಿತು.
-
‘ಥೂ! ಇವಳ ಜನ್ಮಕ್ಕೆ ಬೆಂಕಿ ಹಾಕ, ಹೆಂಗಸಾಗಿ ಒಂದು ಕೊಲೆ ಮಾಡೋಕೆ ಧೈರ್ಯ ಹೇಗೆ ಬಂತು’
‘ಆಹಾಹ... ಮಾಡೋದು ಮಾಡ್ಬಿಟ್ಟು ಈಗ ಗರತಿಯಂತೆ ಮೈ ತುಂಬಾ ಸೀರೆ ಹಾಕ್ಕೊಂಡಿರೋದು ನೋಡು’
‘ನನಗೆ ಮೊದಲೇ ಗೊತ್ತಿತ್ತು ಇವಳು ಶೀಲವಂತೆ ಅಲ್ಲ ಅಂತ, ನಾಯಿ ಮುಟ್ಟಿದ ಮಡ್ಕೆ ಇವಳು, ಈಗ ರಕ್ತ ಹರಿಸಿ ಬಂದವ್ಳೆ’

ಆಕೆ ಕೋರ್ಟಿನ ಮೆಟ್ಟಿಲು ಹತ್ತುವವರೆವಿಗೂ ಈ ಬೈಗುಳಗಳು ನಾಯಿಯಂತೆ ಅವಳ ಹಿಂದೆಯೇ ಬರುತ್ತಿದ್ದವು. ಹೌದು, ಮೈ ತುಂಬಾ ಸೀರೆ ಹೊದ್ದಿದ್ದಳು. ತಲೆ ಬಾಚಿಲ್ಲ. ಕೂದಲು ಕೆದರಿಕೊಂಡು ಬಿರುಗಾಳಿಗೆ ಸಿಕ್ಕ ಬೆಟ್ಟದಂತಾಗಿತ್ತು. ಹಣೆ ಕುಂಕುಮವನ್ನು ಅಳಿಸಿಕೊಂಡಿದ್ದಳು.
ನಿರ್ಭಾವುಕಳಾಗಿ ಅಲ್ಲಿಯೇ ನಿಂತಿದ್ದ ಹೆತ್ತವರನ್ನೊಮ್ಮೆ ನೋಡಿದಳು.
‘ಥೂ! ನಿನ್ನ ಬಾಯಿಗೆ ಮಣ್ಣು ಹಾಕ, ಎಂಥ ಕೆಲಸ ಮಾಡ್ಬಿಟ್ಟೆ ನೀನು, ನಾವು ಬೀದಿಯಲ್ಲಿ ತಲೆಯೆತ್ತಿಕೊಂಡು ನಡೆಯೋಕಾಗುತ್ತೇನೆ?’

ಅಷ್ಟರಲ್ಲಿಯೇ ಒಂದು ಹಳೆಯ ಚಪ್ಪಲಿ ಆಕೆಯ ಹಣೆಗೆ ಬಡಿಯಿತು. ಆಕೆ ಅಲುಗಾಡಲಿಲ್ಲ. ತಂದೆ ತಾಯಿಯನ್ನು ನೋಡಿಕೊಂಡು ಸಣ್ಣಗೆ ನಕ್ಕಳು. ಆ ನಗು ಬರಬೇಕೆಂದರೆ ಮನಸ್ಸಿನಲ್ಲಿ ಅತೀವ ಬೇಸರವಿರಬೇಕು. ಅವಳ ಎದೆಯನ್ನೇ ಕೊಯ್ದುಕೊಂಡು ಬಂದ ನಗು ಅದು.

ಕೈ ಕೋಳವನ್ನು ಬಿಡಿಸಿ ಆಕೆಯನ್ನು ಒಂದು ಬೆಂಚಿನಲ್ಲಿ ಕೂರಿಸಿದರು. ನ್ಯಾಯಾಲಯದಲ್ಲಿ ಕಲಾಪ ನಡೆಯುತ್ತಿತ್ತು. ಒಂದಷ್ಟು ಜನ ಕಪ್ಪು ವಸ್ತ್ರಧಾರಿಗಳು ಸರಿಯನ್ನು ತಪ್ಪೆಂದು, ಇನ್ನೊಂದಷ್ಟು ಜನ ತಪ್ಪನ್ನು ಸರಿಯೆಂದು ಸಾಧಿಸುತ್ತಿರುವಂತೆ ಆಕೆಗೆ ಕಂಡಿತು. ಇವರಿಬ್ಬರ ನಡುವೆ ಹೊಸಕಿಹೋದವಳೆಂದರೆ ನ್ಯಾಯದೇವತೆ. ಆಕೆಯ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಲಾಗಿತ್ತು. ಕೈಯಲ್ಲಿದ್ದ ತಕ್ಕಡಿಯ ಭಾರ ಒಂದೇ ಕಡೆ ಇತ್ತು. ಯಾವ ಕಡೆ? ಆಕೆಗಂತೂ ಗೊತ್ತಿಲ್ಲ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ನ್ಯಾಯದೇವತೆಯ ಮುಂದೆ ತನಗೆ ನ್ಯಾಯ ದೊರಕುವುದೆಂಬ ನಂಬಿಕೆಯೂ ಆಕೆಗಿರಲಿಲ್ಲ. ಒಮ್ಮೆ ತನ್ನ ಕೈ ನೋಡಿಕೊಂಡಳು. ರಕ್ತದ ಕಲೆ ಇನ್ನೂ ಮಾಸಿರಲಿಲ್ಲ. ನುಣುಪಾದ ನೆಲದಲ್ಲಿ ಆಕೆಯ ಮುಖ ವಿಕಾರವಾಗಿ ಕಂಡಿತು. ಮತ್ತೆ ತಲೆ ಎತ್ತಿ ನ್ಯಾಯದೇವತೆ ಕಡೆ ನೋಡಿದಳು. ನನ್ನಂತಹ ಕೊಲೆಗಾತಿಯನ್ನು ನೋಡುವ ಬದಲು ನೀನು ಈ ರೀತಿಯಾಗಿ ಬಟ್ಟೆ ಸುತ್ತಿಕೊಂಡಿರುವುದೇ ಸರಿ ಎಂದುಕೊಂಡಳು.

ಕಟಕಟೆಯಲ್ಲೊಬ್ಬ ಕೊಲೆಗಾರ ನಿಂತಿದ್ದ. ವಾದಿಸಿ ವಾದಿಸಿ ಮಾತು ಮಾತುಗಳು ಬೆಳೆದದ್ದರಿಂದ ಆತ ಸೋತುಹೋಗಿದ್ದನೋ ಏನೋ? ಕೊನೆಗೂ ತಾನೊಬ್ಬ ಕೊಲೆಗಾರನೆಂದು ಒಪ್ಪಿಕೊಂಡಿದ್ದ. ಕೊಲೆ ಮಾಡಿದ್ದು ಸತ್ಯವಾಗಿತ್ತು, ಆದರೆ ಕೊಲೆಯ ಕಾರಣಗಳು ನ್ಯಾಯದೇವತೆಗೆ ಪಥ್ಯವಲ್ಲ. ದೇಹವನ್ನು ಚುಚ್ಚಿದ್ದು ತಪ್ಪು, ದೇಹವನ್ನು ಚುಚ್ಚಲು ಬಂದಿದ್ದ ಮನಸ್ಸಿನ ಗಾಯಗಳನ್ನು ಈ ಜಗತ್ತಿನಲ್ಲಿ ಸಾಕ್ಷಿಯಾಗಿ ಪರಿಗಣಿಸಲಾವುದಿಲ್ಲ. ಮನಸ್ಸು ಎಲ್ಲರಿಗೂ ಕಾಣುವುದಿಲ್ಲ. ಮೌನದೊಳಗೆ ಕೋಟಿ ಮಾತುಗಳಿದ್ದರೂ ತುಟಿಯಿಂದ ಹೊರಗೆ ಹೊಮ್ಮುವುದಿಲ್ಲ.

ನೇಣುಗಂಬಕ್ಕೇರಿಸುವ ತೀರ್ಪಿನೊಂದಿಗೆ ಆತನನ್ನು ಎಳೆದೊಯ್ದ ನಂತರ ಮತ್ತೊಂದು ಕೊಲೆಯ ವಿಚಾರ ಕಟಕಟೆಗೆ ಬಂತು. ಆಕೆಗೆ ತಾನೊಬ್ಬಳೇ ಅಲ್ಲ ಕೊಲೆಗಾತಿ, ಈ ಪ್ರಪಂಚದಲ್ಲಿ ಇತ್ತೀಚೆಗೆ ಕೊಲೆಗಳು ಸುಗ್ಗಿಯಂತೆ ನಡೆಯುತ್ತಿವೆ ಎಂದುಕೊಂಡಳು. ಆಸೆಗೆ ಅನೇಕ ಕೊಲೆಗಳು ನಡೆಯುತ್ತವೆ. ಲೌಕಿಕ ಜಗತ್ತಿನಲ್ಲಿ ಅದು ಮಹಪರಾಧ. ಆಸೆಗಲ್ಲದ ಕೊಲೆಗಳೂ ನಡೆಯುತ್ತಿವೆ, ಲೌಕಿಕ ಜಗತ್ತಿನಲ್ಲಿ ಅದು ಅಪರಾಧವಾದರೂ ಆಂತರಿಕವಾಗಿ ಹುದುಗಿಕೊಳ್ಳುವ ಕಾರಣಗಳಿಂದ ಬೆಂಕಿ ಹೊಮ್ಮುತ್ತಿರುತ್ತದೆ. ಆದರೆ ಲೌಕಿಕ ಜಗತ್ತಿಗೆ ನುಗ್ಗಿ ತಾನು ಅಪರಾಧಿಯಲ್ಲ ಎಂದು ಸಾಬೀತುಪಡಿಸುವಷ್ಟು ಶಕ್ತಿ ಆ ಬೆಂಕಿಗಿಲ್ಲ. ಉರುಬಿದರೆ ಆರಿ ಹೋಗುತ್ತದೆ.
ಕೊನೆಗೂ ಆಕೆಯನ್ನು ಕಟಕಟೆಯಲ್ಲಿ ನಿಲ್ಲಿಸಿದರು. ತನ್ನನ್ನು ಸುತ್ತುಕೊಂಡಿದ್ದ ಬಲೆಯಂತ ಕಂಬವನ್ನು ಒಮ್ಮೆ ಮುಟ್ಟಿ ಸುತ್ತಲೊಮ್ಮೆ ನೋಡಿದಳು. ತನ್ನನ್ನು ನುಂಗುವಂತೆ ನೋಡುತ್ತಿದ್ದ ನೂರಾರು ಬೆಂಕಿ ಮುಖಗಳಿಗೆ ಆಕೆ ತರಗೆಲೆಯಾದಂತೆ ಕಂಡಳು. ಈ ಜನಗಳ ನಡುವೆ ಬದುಕುವುದಕ್ಕಿಂತ ಈ ಪಂಜರದಲ್ಲಿಯೇ ನಿಂತುಕೊಳ್ಳುವುದೇ ಸೂಕ್ತ ಎಂದುಕೊಂಡಳು.

ಅಷ್ಟಕ್ಕೆ ಒಬ್ಬ ವಕೀಲ ಎದ್ದು ನಿಂತುಕೊಂಡ. ಆತ ಪ್ರತಿವಾದಿಯಾಗಿ ಆಕೆಯ ವಿರುದ್ಧ ವಾದ ಮಾಡಲು ಬಂದಿದ್ದವ.

‘ಯುವರ್ ಹಾನರ್, ಈಕೆ ನಿನ್ನೆ ಒಂದು ಕೊಲೆ ಮಾಡಿದ್ದಾಳೆ, ಅವಳ ಕೈ ಮೇಲಿರುವ ರಕ್ತದ ಕಲೆಯೇ ಸಾಕ್ಷಿ’

ನ್ಯಾಯಾಲಯ ಗಕ್ಕನೇ ಮೌನಕ್ಕೆ ತಿರುಗಿಕೊಂಡಿತ್ತು. ಯಾರಿಂದಲೂ ಒಂದು ಪದವೂ ಹೊರ ಹೊಮ್ಮಲಿಲ್ಲ. ಯಾಕೆಂದರೆ ಆಕೆಯ ಪರವಾಗಿ ಮಾತನಾಡಲು ಆಕೆ ವಕೀಲರನ್ನೇ ನೇಮಿಸಿಕೊಂಡಿರಲಿಲ್ಲ. ವಾದಿಯಿಲ್ಲದೇ ಪ್ರತಿವಾದಿಯ ಮಾತಿನಲ್ಲಿಯೇ ಈ ಪ್ರಕರಣ ಮುಗಿಯುವಂತೆಯೂ ಇರಲಿಲ್ಲ.

‘ನಿನ್ನ ಪರವಾಗಿ ವಾದಿಸುವ ವಕೀಲರು ಯಾರೂ ಇಲ್ಲವೇನಮ್ಮ?’ ನ್ಯಾಯಾಧೀಶರು ಕೇಳಿಕೊಂಡರು.
ಕೊಲೆಯಾದ ದಿನದಿಂದ ಆಕೆ ಮೌನಕ್ಕೆ ಶರಣಾಗಿದ್ದಳು. ಇಲ್ಲೂ ಮಾತನಾಡಲಿಲ್ಲ.
‘ನಿನ್ನ ಪರವಾಗಿ ನೀನೇ ವಾದ ಮಾಡಿಕೊಳ್ಳಬಹುದು, ಅವಕಾಶ ಮಾಡಿಕೊಡಲಾಗುವುದು’ ನ್ಯಾಯಾಧೀಶರು ಮತ್ತೆ ಮಾತನಾಡಿದರು ‘ವಾದಿಸುವವರೇ ಇಲ್ಲದಿದ್ದರೆ ಈ ಪ್ರಕರಣ ಸತ್ಯವೆಂದು ಇತ್ಯರ್ಥಗೊಳಿಸಿ ನಿನಗೆ ಶಿಕ್ಷೆ ವಿಧಿಸಬೇಕಾಗುತ್ತದೆ’

ಆಕೆ ಮತ್ತೆ ಮಾತನಾಡಲಿಲ್ಲ. ಆಕೆಯ ಮುಖ ಜಡಿಮಳೆ ಸುರಿದ ನಂತರ ಮೌನವಾಗುವ ನೆಲದಂತೆ ನಿರಾತಂಕವಾಗಿತ್ತು. ಹೊರಗೂ ಮಳೆ ಸುರಿಯುತ್ತಿತ್ತು. ಹೊರಗಡೆ ಯಾರೋ ಹಣೆಮೇಲೆ ಎಸೆದ ಚಪ್ಪಲಿಯ ಧೂಳನ್ನು ಒರೆಸಿಕೊಂಡಳು.

ನ್ಯಾಯಾಲಯದ ಆವರಣದಲ್ಲಿ ಗುಸು ಗುಸು ಹೆಚ್ಚಾಯಿತು. ಕೊಲೆಯಾದ ಹುಡುಗನ ತಾಯಿ ‘ಇನ್ನೇನು ವಾದ ಮಾಡೋದು, ಆಕೆಯನ್ನು ಮೊದಲು ನೇಣುಗಂಬಕ್ಕೇರಿಸಿ’ ಎಂದು ಕೂಗಿಕೊಂಡಳು. ಒಂದಷ್ಟು ಜನ ‘ಹೌದು ಹೌದು’ ಎಂದು ಜೋರು ದನಿಗೂಡಿಸಿದರು.
ನ್ಯಾಯಾಧೀಶರು ‘ಆರ್ಡರ್ ಆರ್ಡರ್’ ಎಂದೊಡನೆ ಮತ್ತೆ ಮೌನ ಕೂಡಿಕೊಂಡಿತು.

ಮರಳುಗಾಡಿನ ಬಿಸಿನೆಲದ ಮೇಲೆ ಚಿಮ್ಮುವ ನೀರಿನಂತೆ ವಕೀಲರ ಗುಂಪಿನಿಂದ ಒಬ್ಬ ವಕೀಲ ‘ನಾನು ವಾದ ಮಾಡುತ್ತೇನೆ’ ಎಂದು ಎದ್ದು ನಿಂತುಕೊಂಡ. ಆತ ಆಕೆಯ ಗೆಳೆÀಯರ ಹಿಂಡಿನಲ್ಲೊಬ್ಬನಾಗಿದ್ದವನು. ವಾದಿಯಾಗಿ ನಿಂತುಕೊಂಡ ಆತ ಹೇಳಿದ
‘ಯುವರ್ ಹಾನರ್, ಕೈ ಮೇಲಿರುವ ರಕ್ತದ ಕಲೆಯನ್ನು ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ’

ಪ್ರತಿವಾದಿ: ‘ತಾನು ಕೊಲೆ ಮಾಡಿರುವುದಾಗಿ ಆಕೆಯೇ ಒಪ್ಪಿಕೊಂಡಾಗಿದೆ’

‘ಯುವರ್ ಹಾನರ್, ಈಕೆ ಕೊಲೆ ಮಾಡಿರಬಹುದು, ಆದರೆ ಆತ ಈಕೆಯನ್ನು ಬಲವಂತವಾಗಿ ಹಾಸಿಗೆಗೆ ಎಳೆದದ್ದು ಎಷ್ಟು ಸರಿ? ಈ ಕೊಲೆಗೆ ಕಾರಣವಾದ ವಿಚಾರಗಳನ್ನು ಪರಿಗಣಿಸಬೇಕಾಗಿ ವಿನಂತಿ’

‘ಈಕೆಯನ್ನು ಬಲವಂತವಾಗಿ ಎಳೆಯುವ ಅಧಿಕಾರ ಆತನಿಗಿತ್ತು’

‘ಮನಸ್ಸೇ ಒಪ್ಪದಿದ್ದ ಮೇಲೆ ಅಧಿಕಾರ ಚಲಾಯಿಸುವುದೆಷ್ಟು ಸರಿ?’

‘ಕಣ್ಣಿಗೆ ಕಾಣದ ಮನಸ್ಸನ್ನು ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಯುವರ್ ಹಾನರ್, ಮನಸ್ಸನ್ನು ಕಟಕಟೆಯಲ್ಲಿ ನಿಲ್ಲಿಸಿ ವಿಚಾರಿಸಲಾಗುವುದಿಲ್ಲ’

‘ಯುವರ್ ಹಾನರ್, ಈ ಕಟಕಟೆಯಲ್ಲಿ ಒಂದು ದೇಹ ನಿಂತಿದೆ, ಆ ದೇಹದೊಳಗೆ ಭಾವನೆಯನ್ನು ತುಂಬಿಕೊಂಡ ಮನಸ್ಸೊಂದಿದೆ’

‘ಆ ಕೊಲೆಗೂ ಮನಸ್ಸೇ ಕಾರಣ, ಆ ಮನಸ್ಸನ್ನು ಹೊತ್ತ ದೇಹಕ್ಕೆ ಶಿಕ್ಷೆ ಆಗಲೇಬೇಕು’

‘ನೋ ಯುವರ್ ಹಾನರ್, ಆತನೊಂದಿಗೆ ಹಾಸಿಗೆ ಏರಲು ಆಕೆಗೆ ಅಂದು ಇಷ್ಟವಿರಲಿಲ್ಲ’

‘ಇಷ್ಟವಿಲ್ಲ ಎಂದ ಮೇಲೆ ಆಕೆ ಅಲ್ಲಿವರೆವಿಗೂ ಯಾಕೆ ಹೋಗಬೇಕಾಯಿತು?’

‘ಐ ಎಂ ಸಾರಿ ಟು ಸೇ ದಿಸ್ ಯುವರ್ ಹಾನರ್, ಅವಳು ಅಲ್ಲಿವರೆವಿಗೂ ಹೋಗಲು ಅವರ ತಂದೆ ತಾಯಿಯೇ ಕಾರಣ’

‘ಐ ಆಬ್ಜೆಕ್ಟ್ ದಿಸ್ ಯುವರ್ ಹಾನರ್, ಈ ಪ್ರಕರಣಕ್ಕೆ ಅನವಶ್ಯಕವಾಗಿ ತಂದೆ ತಾಯಿಯಂದಿರನ್ನು ಎಳೆದು ತರಲಾಗುತ್ತಿದೆ’

‘ಎಳೆದು ತರಲಾಗುತ್ತಿಲ್ಲ ಯುವರ್ ಹಾನರ್, ಕಾರಣಗಳಾಗಿ ಅವರೇ ಪ್ರಕರಣದ ನಡುವೆ ಬರುತ್ತಿದ್ದಾರೆ’

‘ಇದೊಂದು ಕೊಲೆಯಾಗಿದ್ದು, ಕೊಲೆ ಮಾಡಿರುವುದು ತಾನೇ ಎಂದು ಆಕೆ ಒಪ್ಪಿಕೊಂಡಿರುವುದರಿಂದ ಈ ವಿಚಾರಣೆಯನ್ನು ಮುಂದುವರೆಸಿದರೆ ಅರ್ಥವಿರುವುದಿಲ್ಲ ಯುವರ್ ಹಾನರ್’

‘ಯುವರ್ ಹಾನರ್, ಕೊಲೆ ಆಗುವುದಕ್ಕೆ ಕಾರಣವಾದ ಆತನ ಬಲವಂತದ ಪ್ರಯತ್ನವನ್ನು ಪರಿಗಣಿಸಿ ಈಕೆಗೆ ನ್ಯಾಯ ದೊರಕಿಸಿಕೊಡಬೇಕು, ಇದನ್ನು ಅತ್ಯಾಚಾರವೆಂದು ಪರಿಗಣಿಸಬೇಕು’

‘ಯುವರ್ ಹಾನರ್, ಬಲವಂತ ಪಡಿಸಿದ್ದವನು ಅನ್ಯ ವ್ಯಕ್ತಿಯಾಗಿದ್ದರೆ ಪರಿಗಣಿಸಬಹುದಾಗಿತ್ತು, ಮದುವೆಯಾದ ಗಂಡನಾಗಿರುವುದರಿಂದ ಸಹಕರಿಸಬೇಕಾಗಿದ್ದು ಸ್ತ್ರೀಧರ್ಮ, ಇದನ್ನು ಅತ್ಯಾಚಾರ ಎಂದು ಕರೆಯಲು ಕಾನೂನಿನಲ್ಲಿ ಅವಕಾಶವಿಲ್ಲ’

‘ಆಕೆಗೆ ಆತನನ್ನು ವರಿಸುವುದು ಇಷ್ಟವಿರಲಿಲ್ಲ, ತಂದೆ ತಾಯಿಯಂದಿರೆ ಬಲವಂತಕ್ಕೆ ಬಿದ್ದು ಅವಳೊಪ್ಪಿದ್ದವನೊಂದಿಗೆ ಮದುವೆ ಮಾಡದೆ, ಬಲವಂತಕ್ಕೆ ಮದುವೆ ಮಾಡಿದ್ದಾರೆ, ಈ ಕೊಲೆಯ ಕಾರಣವನ್ನು ಸ್ರವಿಸುತ್ತಿರುವ ಈಕೆಯ ಮನಸ್ಸನ್ನು ನ್ಯಾಯದೇವತೆ ಪರಿಗಣಿಸುವುದಿಲ್ಲವೇ?’

‘ಮದುವೆಯಾದ ಮೇಲೆ ಗಂಡ ಹಾಸಿಗೆಗೆ ಎಳೆಯುವುದು ಬಲವಂತವಲ್ಲ ಯುವರ್ ಹಾನರ್, ಅದು ಅಪರಾಧವಾಗಿ ಪರಿಗಣಿಸುವ ಯಾವುದೇ ನಿಯಮ ಕಾನೂನಿನಲ್ಲಿಲ್ಲ’

‘ಯುವರ್ ಹಾನರ್, ಇಲ್ಲಿ ಕೆನ್ನಾಲಗೆ ಚಾಚಿದ ಕಾರಣಗಳು ಒಬ್ಬಳು ಹೆಂಗಸನ್ನು ಬಲವಂತದ ಗೋಡೆಗಳ ನಡುವೆ ಮಾನಸಿಕವಾಗಿ ಅತ್ಯಾಚಾರ ಮಾಡಲು ಹೊಂಚುಹಾಕಿವೆ. ಆಕೆಯ ಭಾವನೆಗೆ ಬೆಲೆ ಕೊಡದೆ ಆಕೆಯನ್ನು ಜೀವವಿಲ್ಲದ ಬೊಂಬೆಯಂತೆ ನೋಡುವುದು ತಪ್ಪು'

‘ಕೆಂಪಾಗಿ ಚೆಲ್ಲಿದ್ದ ರಕ್ತ, ಕೊಲೆಯಾದ ಶವ, ಕೊಲೆ ಮಾಡಿದವಳು, ಚಾಕು ಇವೆಲ್ಲಾ ಮುಂದೆ ಇರುವಾಗ, ಕಣ್ಣಿಗೆ ಕಾಣದ ವಿಚಾರಗಳನ್ನು ಮುಂದಕ್ಕೆ ತರುತ್ತಿರುವ ಪ್ರತಿವಾದಿಯ ಮಾತುಗಳು ಕೇವಲ ಹಾಸ್ಯಾಸ್ಪದವಾಗಿವೆ ಯುವರ್ ಹಾನರ್’

ಅಷ್ಟಕ್ಕೆ ಆಕೆ ನಿಂತಲ್ಲೇ ಕೊಂಚ ಜಗ್ಗಿದಳು. ಮುಂದಿನ ಕನ್ನಡಿಯಲ್ಲಿ ಯಾರೋ ನಿರ್ವಸ್ತ್ರಗೊಂಡು ನಿಂತಿರುವುದನ್ನು ಗಮನಿಸಿದಳು. ಒಮ್ಮೆಲೇ ಎಲ್ಲೋ ನೋಡಿದ್ದೇನಲ್ಲ ಎಂದೆನಿಸಿತು. ಕೂದಲನ್ನು ಸರಿಪಡಿಸಿಕೊಂಡಳು. ‘ಓಹ್ ಅದು ನಾನೇ, ಪ್ರಪಂಚವನ್ನೇ ತೂಗುವ ಸ್ತ್ರೀಧರ್ಮದವಳು’ ಎಂದುಕೊಂಡಳು. ತನ್ನನ್ನು ಪ್ರಾಣಕ್ಕಿಂತ ಪ್ರೀತಿಸಿ, ತನ್ನ ಮೈ ಕಣಕಣಗಳನ್ನು ತುಂಬಿಕೊಂಡ ಗೆಳೆಯನ ಫೋಟೋಗೆ ಹಾರ ಹಾಕಿದ್ದರು. ಸಾಯಲು ಇರುವ ನೂರು ನೆಪದಲ್ಲಿ, ಕೊಲೆ ಮಾಡಿದ್ದನ್ನು ಮುಚ್ಚಲು ಅಪಘಾತವೆನ್ನುವ ಒಂದು ನೆಪದಲ್ಲಿ ಆತನನ್ನು ಈ ಲೋಕದಿಂದ ನಿಶ್ಶೇಷಗೊಳಿಸಿದ್ದು ಇಲ್ಲಿ ಅಪರಾಧವಾಗಲೇ ಇಲ್ಲ. ಹಾಗೆ ತಿರುಗಿ ಇದೇ ಕೈಕಾಲುಗಳನ್ನು ಬಿಗಿಯಾಗಿ ಹಿಡಿದು ಎಳೆದುಕೊಂಡುಹೋಗಿ ಹಸೆಮಣೆ ಮೇಲೆ ಕೂರಿಸಿದವರನ್ನು ಕಂಡಳು. ಅವರ ಕಣ್ಣುಗಳಿಂದ ಹೊರಟ ಬೆಂಕಿ ಆಕೆಯ ಮೈ ಕೈಗೆ ತಾಗಿತು. ಈಗ ನಿಜಕ್ಕೂ ಆ ಬೆಂಕಿ ಸುಡಲಿಲ್ಲ. ಅವರ ಮತ್ತು ಅವಳ ನಡುವೆ ಇದ್ದ ಬಾಂಧವ್ಯವೊಂದು ತೀರ ತೆಳುವಾಗಿಹೋಗಿತ್ತು. ಅವರು ಕಟ್ಟಿಸಿದ ತಾಳಿ ಎಲ್ಲಿ? ನಿನ್ನೆಯೇ ಕಿತ್ತು ಬಿಸಾಡಿದ್ದಳು. ಕನ್ನಡಿಯೊಳಗೆ ಕಾಣುತ್ತಿರುವ ಇದೇ ದೇಹವನ್ನು ನಿರ್ವಸ್ತ್ರಗೊಳಿಸಿದವರು ಯಾರು? ಹೌದು ಇದೇ ಜನಗಳು.

‘ಕಠಿಣ ಕಾರಾಗೃಹ ಜೀವಾವಧಿ ಶಿಕ್ಷೆ' ನ್ಯಾಯಾಧೀಶರು ಕೂಗಿಕೊಂಡರು. ‘ಹೌದು, ಈ ಜೀವದ ಅವಧಿ ಇರುವವರೆವಿಗೂ ತನಗೆ ಶಿಕ್ಷೆ’ ಎಂದುಕೊಂಡ ಆಕೆ ಪೋಲೀಸ್ ಕಾವಲಿನ ನಡುವೆ ನಡೆದಳು, ಹೌದು ಮೌನವಾಗಿ ನಡೆದಳು. ಮತ್ತೊಂದು ಚಪ್ಪಲಿ ಮೈಮೇಲೆ ಬಿತ್ತು.

Thursday 24 January 2013

ಗೆದ್ದೋನ್ಯಾರು? (ಉದಯವಾಣಿಯ ಸಾಪ್ತಾಹಿಕ ಸಂಪದ ಮತ್ತು ವಿಜಯnext ನಲ್ಲಿ ಪ್ರಕಟಿತ)

ಗುಡ್ಡಗಾಡು ಪ್ರದೇಶಗಳ ತಪ್ಪಲಿನಲ್ಲಿರುವ ನಮ್ಮ ಹಳ್ಳಿಗಳಲ್ಲಿ ಸಂಜೆ ಏಳಕ್ಕೆಲ್ಲಾ ನೀರವ ಮೌನ ಕೂಡಿಕೊಳ್ಳುತ್ತದೆ. ಗಿಡ ಮರ ಹೂಗಳ ಮೇಲೆ ಚೆಲ್ಲಿದ ಬೆಳದಿಂಗಳ ಭಾಷೆ ಅರ್ಥ ಮಾಡಿಕೊಳ್ಳಬಹುದು. ಆದರೆ ಆ ಹಳ್ಳಿಯಲ್ಲಿ ಸಂಜೆ ಆರಕ್ಕೆಲ್ಲಾ ಮೌನ ಕೂಡಿಕೊಂಡಿತ್ತು. ಕೆರೆ ಕಡೆಗೆ ಹೋಗುವವರು ಬೇಗ ಮುಗಿಸಿ ಬಂದುಬಿಟ್ಟಿದ್ದರು, ರೋಡಿನ ಪಕ್ಕದಲ್ಲಿ, ಅಲ್ಲಲ್ಲಿರುವ ದಿಣ್ಣೆಗಳಲ್ಲಿ ಬೀಡಿ ಸೇದುತ್ತ ಕುಳಿತಿದ್ದವರೆಲ್ಲಾ ‘ನಡಿರ್ಲಾ, ನಡಿರ್ಲಾ’ ಎಂದುಕೊಂಡವರೇ ಮನೆಗಳಿಗೆ ಕಾಲ್ಕಿತ್ತಿದ್ದರು. ಬೇಲಿ ಮೆಳೆ ಸಂದಿಯಲ್ಲಿ ಕುಳಿತುಕೊಳ್ಳುತ್ತಿದ್ದ ಹೆಂಗಸರಿಗೆ ವಿಧಿಯಿಲ್ಲದ ಪ್ರಾಣ ಸಂಕಟ. ಸಂಜೆಯಾದಂತೆ ಕಳ್ಳ ಪೋಲೀಸ್ ಎಂಬ ಕೇರಿ ಕೇರಿಗೆ ಓಡುವ, ಅಟ್ಟಿಸಿಕೊಂಡು ಹೋಗುವ ಆಟವಾಡುತ್ತಿದ್ದ ಮಕ್ಕಳೆಲ್ಲಾ ಭಯ ಕೂಡಿಕೊಂಡು ಮನೆ ಮೂಲೆಗವಚಿ ಮಲಗಿಬಿಟ್ಟಿದ್ದಾರೆ. ತೊಟ್ಟಿ ಮನೆಯವರು, ಕೊಟ್ಟಿಗೆಯಿಂದ ದನಕರು, ಕುರಿಕೋಳಿಗಳನ್ನೆಲ್ಲಾ ಅಟ್ಟಿಕೊಂಡು ಬಂದು ಹಜಾರದ ಕಂಬಗಳಿಗೆ ಕಟ್ಟಿಕೊಂಡಿದ್ದಾರೆ.

ಕಳೆದ ಹತ್ತು ದಿನಗಳಿಂದ ಹುಲಿಗಳೆರಡು ದಾರಿ ತಪ್ಪಿಯೋ ಅಥವಾ ಹಸಿವು ಹೆಚ್ಚಾಗಿಯೋ ಊರಿಗೆ ಬಂದುಬಿಟ್ಟಿದ್ದವು. ನಿನ್ನೆವರೆವಿಗೂ ಒಟ್ಟು ಹತ್ತು ಜಾನುವಾರು ಮತ್ತು ಕೆಳಗಲ ಕೇರಿಯ ಮಾಚ, ಸಿದ್ಧ, ಸಿದ್ಧನ ಮಗುವನನ್ನು ಕೊಂದು ತಿಂದು ಹಾಕಿದ್ದವು. ಕೊಟ್ಟಿಗೆಗಳನ್ನು ಹುಡುಕಿಕೊಂಡು ಬರುವ ಹುಲಿಗಳಿಗೆ ಒಂದೆರಡು ಬಾರಿ ಪಕ್ಕದ ಗುಡಿಸಲಿನೊಳಗಿದ್ದ ಮನುಷ್ಯರೇ ಹೆಚ್ಚು ರುಚಿಯಾಗಿ ನಾಲಗೆ ಚಪ್ಪರಿಸಿಕೊಂಡಿದ್ದವು. ನಿನ್ನೆ, ಸೂರ್ಯ ಮುಳುಗಿ ಊರನ್ನು ಕತ್ತಲು ನುಂಗುವುದರಲ್ಲಿತ್ತು. ಅಷ್ಟರಲ್ಲಿಯೇ ಕೆಳಬೀದಿಯ ರಂಗಿ ಚಿಟಾರನೆ ಚೀರಿಕೊಂಡಳು. ಓಡೋಡಿ ಹೋಗಿ ನೋಡಿದ ಜನರಿಗೆ ಅವಳ ಗಂಡ ಕೆಂಚಪ್ಪ ಮತ್ತು ಮಗುವಿನ ದೇಹದ ಅಳಿದುಳಿದ ಅಂಗಾಂಗಳು ಕೊಟ್ಟಿಗೆಯ ಅಂಗಳದಲ್ಲಿ ರಕ್ತ ಸಿಕ್ತವಾಗಿ ಬಿದ್ದಿದ್ದವು. ಊರಿಗೆ ಊರೇ ಬೆಚ್ಚಿ ಬಿದ್ದಿತ್ತು.

ಬೇಗ ಮಲಗಿಕೊಳ್ಳುವ ನಮ್ಮ ಹಳ್ಳಿಗರಿಗೆ ಮುಂಜಾನೆಯೂ ಬೇಗ ಎಚ್ಚರಗೊಳ್ಳುವ ಅಭ್ಯಾಸ. ಎಚ್ಚರಗೊಂಡಿದ್ದೆ ಒಂದು ರಗ್ಗನ್ನು ಹೊದ್ದುಕೊಂಡು ರುದ್ರಣ್ಣನ ಹೋಟೆಲ್ ಗೆ ಹೋಗಿ ಒಂದೆರಡು ಬೀಡಿ ಸೇದಿ ಟೀ ಕುಡಿಯುತ್ತಾ ಕುಡಿಯುತ್ತಾ ಸೂರ್ಯನ ಎಳೆ ಬಿಸಿಲನ್ನು ಮೈ ಕೈ ಗೆ ತಾಕಿಸಿಕೊಂಡು ಬೆಚ್ಚಗಾಗುತ್ತಾರೆ. ಹೆಂಗಸರು ಮಬ್ಬಿನಲ್ಲಿಯೇ ಹೊಲಗಳಿಗೆ ತೆರಳಿ ಅವರೆ, ಹಲಸಂದೆ ಕೊಯ್ದು ಪಟ್ಟಣದ ಸಂತೆಗೆ ಕಳುಹಿಸಬೇಕು. ಆದರೆ, ಈಗೀಗ ದಿನ ಬೆಳಗಾದಾಗ ಯಾರೂ ಹೊರ ಬರಲೊಲ್ಲರು. ಅದೇ ಹೆದರಿಕೆ. ಮೇಲೆ ಬಿದ್ದೊಡನೆ ಏಕ್‍ದಂ ಕತ್ತಿಗೆ ಬಾಯಿ ಹಾಕುವ ಪ್ರಾಣಿಯನ್ನು ಕಂಡರೆ ಯಾರಿಗೆ ತಾನೇ ಭಯವಾಗುವುದಿಲ್ಲ.

ಕೊನೆಗೂ ಕಷ್ಟಪಟ್ಟು ನಿದ್ದೆ ತಂದುಕೊಂಡ ಜನ ಬೆಳಗ್ಗೆ ಬೆಳಕಾದ ನಂತರ ಹೊರಗೆ ಬಂದರು. ಪ್ರಪಂಚ ಮುಳುಗಿಹೋದರೂ ತಮ್ಮನ್ನು ಜಗ್ಗಿಸಲು ಸಾಧ್ಯವಿಲ್ಲ ಎಂದುಕೊಂಡಿದ್ದ ಒಂದಷ್ಟು ಜನ ಎಂದಿನಂತೆ ಮುಂಜಾನೆಯೇ ಕೆರೆ ಪಕ್ಕದಲ್ಲಿರು ಆಲದಮರದ ಕೆಳಗಿನ ಸೋಂಬೇರಿಕಟ್ಟೆಯ ಮೇಲೆ ಕುಳಿತುಕೊಂಡರು. ಆಗಷ್ಟೇ ಕೆರೆಕಡೆಗೆ ಹೋಗಿ ನೀರು ಮುಟ್ಟಿಕೊಂಡು ಬಂದಿದ್ದರು. ನಿನ್ನೆಯ ಹಳಸಲು ಸಾರಾಯಿ ಬಾಯಿಗಳೆಲ್ಲಾ ಬೀಡಿ ಕಚ್ಚಿಕೊಂಡಿದ್ದವು.

‘ಅಲ್ಲಾ ಕಣ್ರಲಾ, ಇದೆಷ್ಟ್ ದಿನ ಅಂತ ನಾವು ಈ ಹುಲಿಗೆ ಅಂಜ್ಕಂಡು ಹಿಂಗ್ ಬದುಕ್ಬೇಕು ಅಂತೀನಿ’ ನಮ್ಮ ನಿಂಗಣ್ಣ ಕೇಳಿದ.
‘ಓ... ಇವ್ನ್ ಮನೇಲಿ ಕೋವಿ ಇಟ್ಕಂಡವ್ನೆ, ತಗಬಂದು ಢುಂ ಅನ್ನಸ್ಬುಡ್ತಾನೆ’ ಎಂದು ಹೇಳಿದ ರಾಚಪ್ಪ ‘ಹಿ ಹಿ’ ಎಂದು ಕಿಸಿದುಬಿಟ್ಟ. ಅವನ ದಂತಪಂಕ್ತಿಯ ಕೆಳಗಿನ ಸಾಲಿನಲ್ಲಿ ನಾಲ್ಕು ಹಲ್ಲುಗಳೇ ಇಲ್ಲ. ಊರಿನವರಿಗೆಲ್ಲಾ ಆತನ ನಗು ಚಿರಪರಿಚಿತ.
‘ಲೋ ಬುಡ್ಲಾ, ಇನ್ನೊಂದು ವಾರ ಆದ್ಮೇಲೆ ಅವೇ ಹೋಗ್ತವೆ, ಎಲ್ಲೋ ದಾರಿ ತಪ್ಕಂಡ್ ಬಂದವೆ’ ಎಂದು ಮಾದೇವ ಹೇಳಿದ ತಕ್ಷಣ ‘ನೋಡ್ರಲೋ, ಹುಲಿಗಳು ಯಾವ್ದೋ ಟೂರಿಗ್ ಬಂದವೆ, ಇನ್ನೊಂದೆರ್ಡ್ ಮನೇಲಿ ಮಟನ್ ಊಟ ಮಾಡ್ಕಂಡ್ ತಕ್ಷ್ಣ ಹೊರ್ಟೋಯ್ತವೆ ಅನ್ನಂಗ್ ಮಾತಾಡ್ತಾವ್ನೆ, ನೀನೂ ಒಂದಿನ ಬಾಡೂಟ ಹಾಕ್ಸ್ ಬಿಡಪ್ಪ’- ರಾಚಪ್ಪ ಮತ್ತೆ ಮಧ್ಯೆ ಗಹ ಗಹಿಸಿ ನಕ್ಕು ಮಾತನಾಡಿದ. ಉಳಿದವರೆಲ್ಲಾ ‘ಗೊಳ್’ ಎಂದು ನಕ್ಕುಬಿಟ್ಟು ತಮ್ಮ ಹಳದಿ, ಕಪ್ಪು ಹಲ್ಲುಗಳನ್ನು ಒಬ್ಬರಿಗೊಬ್ಬರು ತೋರಿಸಿಕೊಂಡರು.

ಅಷ್ಟಕ್ಕೆ ರೇಡಿಯೋ ಹಿಡಿದುಕೊಂಡು ಇಂಗ್ಲೀಷ್ ವಾರ್ತೆ ಕೇಳುತ್ತ ರಾಮಣ್ಣ ಅಲ್ಲಿಗೆ ಬಂದ. ಖಾಲಿ ಮಡಕೆಗೆ ಉದಾಹರಣೆ ಕೊಡಿ ಎಂದರೆ ಸೂಕ್ತವಾಗಿ ನಮ್ಮ ರಾಮಣ್ಣನ ಹೆಸರು ಕೊಡಬಹುದು ನೋಡಿ. ದಿನದಲ್ಲಿ ಐವತ್ತು ಪೈಸೆ ದುಡಿಯಲು ಲಾಯಕ್ಕಲ್ಲದವನು. ಹೆಂಡತಿ ದುಡಿದು ಅಡುಗೆ ಮಾಡಿದ ತಕ್ಷಣ ಹೋಗಿ ಚೆನ್ನಾಗಿ ಉಂಡು ಬಂದುಬಿಡುತ್ತಾನೆ. ಕಾಳಿನ ಉಸುಲಿಯಿಲ್ಲದೆ ಮುದ್ದೆ ಗಂಟಲಿಗೆ ಇಳುಗುವುದಿಲ್ಲ. ಆದರೆ, ಊರಿನ ತುಂಬೆಲ್ಲಾ ತನ್ನದೇ ಒಂದು ರೀತಿಯ ಘನತೆ ಉಳಿಸಿಕೊಂಡಿದ್ದಾನೆ. ಎದೆ ನಿಗುರಿಸಿಕೊಂಡು ರೇಡಿಯೋ ಹಿಡಿದುಕೊಂಡು ನಡೆಯುವುದು ಅವನ ರೂಢಿ.
‘ಓ ಬಾ ರಾಮಣ್ಣ, ಏನ್ ಸಮಾಚಾರ?’ ಎಲ್ಲರೂ ಒಟ್ಟಿಗೆ ಕೇಳಿದರು
‘ಏನೂ ಇಲ್ಲ ಮಾತಾಡ್ರಲಾ, ಬಡ್ಡೆತವ ಬೆಳ್ ಬೆಳಗ್ಗೆನ ಮಾಡೋಕ್ ಬೇರೆ ಕೇಮೆ ಇಲ್ಲ ನಿಮ್ಗೆ’ ಎಂದ ರಾಮಣ್ಣ. ತಾನೇನೋ ಕಡಿದು ಗುಡ್ಡೆ ಹಾಕಿಬಂದವನಂತೆ ಮಾತನಾಡಿದವನು ಸುಮ್ಮನೆ ಕುಳಿತುಕೊಂಡು ಇವರ ಮಾತೆಲ್ಲಾ ಕೇಳಿಸಿಕೊಂಡ. ಇದ್ದಕ್ಕಿದ್ದಂತೆ ಆತನ ಖಾಲಿ ತಲೆಗೆ ಒಂದು ಹೊಸ ಐಡಿಯಾ ಹೊಳೆಯಿತು. ಒಂದು ಬಾರಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತುಕೊಂಡು ಗೆದ್ದು ಊರನ್ನಾಳಬೇಕು ಎಂಬ ಕನಸ್ಸು ಇಟ್ಟುಕೊಂಡಿದ್ದಾತನಿಗೆ ಈ ಸಂದರ್ಭವನ್ನು ಯಾಕೆ ಉಪಯೋಗಿಸಿಕೊಳ್ಳಬಾರದೆನಿಸಿತು.
‘ಅಲ್ಲಾ ಕಣ್ರಲಾ, ಅದ್ಯಾವನೋ ಮನೆ ಒಳ್ಗಡೆ ಕುಂತ್ಕಂಡು ವಿದಾನ್ ಸೌದದ್ ಮೆಟ್ಲತ್ತಿನಿ ಅಂತಿದ್ನಂತೆ, ಹಂಗಾಯ್ತು ನಿಮ್ ಕತೆ’ ರಾಮಣ್ಣ ಮಾತನಾಡಿದ.
‘ಅದೇನ್ ಒಸಿ ಅರ್ಥ ಆಗಂಗ್ ಹೇಳಣ್ಣ’ ಇವರ ಜೊತೆಗೆ ಇದ್ದ ಪಾಪಣ್ಣ ತಲೆ ಕೆರೆದುಕೊಳ್ಳುತ್ತ ಕೇಳಿಕೊಂಡ. ಎಲ್ಲರೂ ಒಮ್ಮೆ ಎಂಜಲು ಕೊಳವೆಯನ್ನು ಕಚ್ಚಿ ಕಚ್ಚಿ ಗಾಂಜಾ ಸೇದಿ ‘ಆಹಾ’ ಎಂದುಕೊಂಡು ಉಸಿರುಬಿಟ್ಟರು.
‘ನಾಳೆ ನನ್ ಜೊತೆ ಪಟ್ಣಕ್ ಬನ್ರಲಾ, ಅಲ್ಲಿ ಪಾರೆಸ್ಟ್ ಡಿಪಾಟ್ಮೆಂಟ್ ಹತ್ರ ಎಲ್ರೂ ಉಪ್ವಾಸ ಕುಂತ್ಬಿಡಾನ’ ರಾಮಣ್ಣ ಹೇಳಿದ.
‘ನಾವಿಷ್ಟೇ ಜನ ಹೋಗ್ಬಿಟ್ರೆ ಒಪ್ ಬುಡ್ತಾರಾ ರಾಮಣ್ಣ?’ ಬುದ್ಧಿವಂತನಂತೆ ನಿಂಗಣ್ಣ ಕೇಳಿದ.
‘ಜಾಸ್ತಿ ಜನ ಇದ್ದಷ್ಟು ಉಪ್ವಾಸ ಬೇಗ ಮುಗಿಯುತ್ತೆ ಕಣ್ರಲಾ, ಇಲ್ಲಾಂದ್ರೆ ಹಸ್ಕೊಂಡ್ ಸಾಯ್ಬೇಕಷ್ಟೆ, ನಿಮ್ ಹೆಂಡ್ರು ಮಕ್ಳು, ಅಕ್ ಪಕ್ದವ್ರನೆಲ್ಲಾ ಕರ್ಕೊಂಡು ನಾಳೆ ಬೆಳಗ್ಗೆ ಒಂಬತ್ ಗಂಟೆ ಬಸ್ಗೆ ಬಂದ್ಬುಡ್ರಲಾ’ ಎಂದ ರಾಮಣ್ಣ ಆಗಲೇ ಚುನಾವಣೆ ಕನಸ್ಸು ಕಾಣತೊಡಗಿದ.
ಮುಖ ಮುಖ ನೋಡಿಕೊಂಡ ಎಲ್ಲರೂ ಒಟ್ಟಿಗೆ ‘ಆದದ್ದಾಗ್ಲಿ ಮಾದಪ್ಪನ್ ಜಾತ್ರೆ, ಬತ್ತಿವಿ ಬುಡಣ್ಣ, ಮನ್ಸನ್ ತಿನ್ನೋ ಪ್ರಾಣಿಗಳು ಅವು, ನಾಳೆದಿನ ನಮ್ ಕುತ್ಗೆಗೇ ಬಾಯ್ ಹಾಕ್ಬಿಟ್ರೆ’ ಎಂದರು

‘ಬೆಳಗ್ಗೆನೆ ಚೆನ್ನಾಗ್ ತಿನ್ಕಳಿ ಬಡ್ಡೆತವ, ಅಲ್ಲಿ ಹೋದ್ಮೇಲೆ ಒಂದಕ್ಕೆ ಅಂತ ಎದ್ದೆದ್ ಹೋಗಿ ಚೆನ್ನಾಗ್ ಉಂಡ್ಕಂಡ್ ಬರ್ಬೇಡಿ’ ಎಂದ ರಾಮಣ್ಣನ ಹೊಟ್ಟೆ ತಾಳ ಹಾಕಿದಂತಾಗಿ ಮನೆಕಡೆ ನಡೆದ.

ರಾತ್ರಿಯೆಲ್ಲಾ ಈ ಯಾವತ್ತೂ ವಿಚಾರಗಳು ಹಳ್ಳಿಯ ಮೂಲೆ ಮೂಲೆಗೂ ಹರಡುವಂತೆ ರಾಮಣ್ಣ ನೋಡಿಕೊಂಡ. ಮಕ್ಕಳು ಮರಿಗಳೊಂದಿಗೆÉ ಬದುಕುತ್ತಿದ್ದ ನಮ್ಮ ಜನ ಹುಲಿಗಳಿಗೆ ತುಂಬಾ ಹೆದರಿದ್ದರು. ರಾಮಣ್ಣನಂತ ತಿಳಿದವರ ಜೊತೆ ಹೋಗಿ ನಮ್ಮ ನಮ್ಮ ಕುಡಿಗಳನ್ನು ಉಳಿಸಿಕೊಳ್ಳೋಣ ಎಂದುಕೊಂಡವರೇ ಬೆಳಗ್ಗೆ ಒಂಭತ್ತು ಘಂಟೆಯ ಬಸ್ಸಿಗೆ ಹೊರಡಲು ಅನುವಾದರು.

ಬೆಳಗ್ಗೆ ಒಂಭತ್ತು ಘಂಟೆ ಬಸ್ಸಿಗೆ ಒಂದಷ್ಟು ಜನಗಳನ್ನು ಕೂಡಿಕೊಂಡ ರಾಮಣ್ಣ ಫಾರೆಸ್ಟ್ ಆಫೀಸ್ ಮುಂದೆ ಕುಳಿತು ಧಿಕ್ಕಾರ ಕೂಗಿದ. ಆಫೀಸಿನಲ್ಲಿದ್ದ ಅಧಿಕಾರಿಗಳು ರಾಮಣ್ಣನನ್ನು ಒಳಗೆ ಕರೆದು ‘ಅಲ್ಲಾ ರೀ, ಮೊದ್ಲೆ ಎಲ್ಲಾ ಡಿಸೈಡ್ ಆಗಿದೆ, ಈ ಭಾನುವಾರ ನಿಮ್ಮ ಹಳ್ಳಿಗೆ ಬಂದು ಹುಲಿಗಳನ್ನ ಹಿಡಿಯೋ ಕೆಲ್ಸ ಆಗುತ್ತೆ, ಪೇಪರ್ ನಲ್ಲಿ ಬಂದಿತ್ತು, ನೋಡಿಲ್ವಾ?’ ಎಂದರು. ನಿಜ ಹೇಳಬೇಕೆಂದರೆ ರಾಮಣ್ಣನಿಗೆ ಅದು ಗೊತ್ತಿರಲಿಲ್ಲ, ಆದರೂ ಆತ ಚಾಲಾಕಿ ಮನುಷ್ಯ.
‘ಕಾಲಿಗ್ ಬೀಳ್ತಿನಿ ಬುದ್ಯೋರ, ದಮ್ಮಯ್ಯ ಅಂತೀನಿ, ಏನೇನೋ ಸಬೂಬ್ ಹೇಳಿ ಊರ್ ಜನಗೋಳ್ನೆಲ್ಲಾ ಕರ್ಕಂಡ್ ಬಂದ್ಬುಟ್ಟಿವ್ನಿ, ಈಗ ಸುಮ್ನೆ ಕರ್ಕಂಡ್ ಹೊರ್ಟೋಯ್ತಿನಿ, ಅವರ್ ತಾವ ಏನೂ ಹೇಳ್ಬೇಡಿ ಸ್ವಾಮಿ’ ಎಂದು ಕೇಳಿಕೊಂಡ ರಾಮಣ್ಣ ಹೊರಗೆ ಬಂದು ಗತ್ತಿನಿಂದ ‘ನಡ್ರಲಾ ನಡ್ರಲಾ, ಇದೇ ಆಯತ್ವಾರ ಊರಗ್ ಬೋನ್ ತಂದು ಹುಲಿಗೊಳ್ನ ಹಿಡ್ಕಂಡ್ ಹೋದರಂತೆ, ಸಾಯೇಬ್ರು ಹೇಳವ್ರೆ, ನಡ್ರುಲಾ’ ಎಂದ. ಎಲ್ಲರೂ ಖುಷಿಯಿಂದ ಅಲ್ಲಿಂದ ಬೀಳ್ಕೊಟ್ಟರು. ರಾಮಣ್ಣನ ಈ ಸಾಹಸದ ಬಗ್ಗೆ ಗುಸು ಗುಸು ಹೆಚ್ಚಾಗಿ ಆತನ ಬಗ್ಗೆ ಗೌರವ ಹೆಚ್ಚಾಯಿತು.

ಮತ್ತೆ ಎಲ್ಲರನ್ನೂ ಬಸ್ಸು ಹತ್ತಿಸಿಕೊಂಡ ರಾಮಣ್ಣ ಬಸ್ಸಿನಲ್ಲಿ ತನ್ನ ಹುಸಿ ಸಾಹಸಗಳನ್ನು ವರ್ಣಿಸತೊಡಗಿದ. ‘ಸಾಯೇಬ್ರು, ಮೊದ್ಲು, ರೀ ಆಗಲ್ಲಾರೀ, ನೀವೇ ಏನಾರು ಮಾಡ್ಕಳ್ಳಿ ಅಂದ್ರು, ಆಗ ನಾನು ಯಾರ್ ಹತ್ರ ಹೋಗ್ಬೇಕು ಅಂತ ಗೊತ್ತು ಸ್ವಾಮಿ, ಸಂದೆ ಒಳ್ಗಡೆ ಎಮ್ಮೆಲ್ಲೆ ಶಾಮಪ್ಪೋರೆ ಬತ್ತಾರೆ ಬುಡಿ, ನಮ್ ಜನಗೋಳ್ ಏನ್ ಕಡ್ಮೆ ಬಂದಿಲ್ಲ, ಇನ್ನೆರ್ಡ್ ದಿನ್ದಲ್ಲೇ ಈ ಇಚಾರ ವಿದಾನ್ ಸೌದಕ್ಕೂ ಮುಟ್ಟುತ್ತೆ, ನಿಮ್ ಟ್ರಾನ್ಸ್ಪರ್ ಆಗೋವರ್ಗು ನಾವ್ ಬಿಡಕಿಲ್ಲ, ಹೀಗೆ ಮಾತಾಡುದ್ದೇ ಮಾತಾಡುದ್ದು ಕಣ್ರಲಾ’-ಬೊಂಬಡ ಬಿಡುತ್ತಾ ಹೋದ. ಎಲ್ಲರೂ ತುಟಿ ಮೇಲೆ ಬೆರಳಿಟ್ಟು ಕೇಳಿಸಿಕೊಂಡರು. ರಾಮಣ್ಣ ಕಛೇರಿ ಒಳಗಡೆ ಹೋಗಿದ್ದಾಗ ಒಂದಷ್ಟು ಜನ ಸೈಡಿಗೆ ಹೋಗಿ ಒಂದೆರಡು ಬಾಟಲ್ ಸಾರಾಯಿ ಪೀರಿಕೊಂಡು ಉಪ್ಪಿನಕಾಯಿ ನೆಕ್ಕಿಕೊಂಡು ಬಂದಿದ್ದರು. ‘ನೀನು ನಮ್ ದ್ಯಾವ್ರಿದ್ದಂಗೆ ಅಣ್ಣೋ’ ಎಂದು ಕೂಗುತ್ತಾ ಕಾಲು ಹಿಡಿದುಕೊಳ್ಳಲು ಬಂದರು. ‘ತೂ ಬಡ್ಡೆತವ, ಸಂದಿಗೋಗಿ ಅದೇನೋ ನೆಕ್ ಬಂದ್ಬಿಡ್ತವೆ, ಹೆಂಡ್ರು ಮಕ್ಳಿಗೆ ಹೊತ್ತಗ್ ಸರಿಯಾಗಿ ಉಣ್ಣಕ್ಕಿಕ್ಕರ್ಲಾ’ ಎಂದು ತನ್ನ ಗತ್ತನ್ನು ಮತ್ತೆ ತೋರಿಸಿಕೊಂಡ. ಈ ಮಾತನ್ನು ಕೇಳಿಸಿಕೊಂಡ ರಾಮಣ್ಣನ ಚಡ್ಡಿಜೇಬಿನೊಳಗಿದ್ದ ವಿಸ್ಕಿ ಬಾಟಲ್ ನಗುತ್ತಿತ್ತು.

ಊರಿನಲ್ಲಿ ರಾಮಣ್ಣನ ಹವಾ ಹಬ್ಬತೊಡಗಿತ್ತು. ಭಾನುವಾರ ಸಂಬಂಧಪಟ್ಟ ಅಧಿಕಾರಿಗಳು ಬಂದು ಹುಲಿಗಳನ್ನು ನಿರಾಯಾಸವಾಗಿ ಹಿಡಿದು ಬೋನಿನೊಳಗೆ ಹಾಕಿಕೊಂಡು ಹೋದರು. ಹುಲಿ ಹತ್ತಿರ ಬಂದಂತೆ ಓಡುತ್ತಿದ್ದ ರಾಮಣ್ಣ ದೂರ ನಿಂತುಕೊಂಡು ‘ಹಿಡಿರ್ಲಾ ಹಿಡಿರ್ಲಾ, ಚೂ ಚೂ’ ಎನ್ನುತ್ತಿದ್ದ.

ಹುಲಿಗಳು ಬೋನಿಗೆ ಸೇರಿಕೊಂಡಿದ್ದೇ ಊರಿನ ಜನಗಳು ನಿಜಕ್ಕೂ ನಿಟ್ಟುಸಿರು ಬಿಟ್ಟರು. ರಾಮಣ್ಣ ಎಲ್ಲರನ್ನೂ ಕರೆದುಕೊಂಡುಹೋಗಿ ಫಾರೆಸ್ಟ್ ಆಫೀಸಿನ ಮುಂದೆ ಕುಳಿತುಕೊಳ್ಳದಿದ್ದರೂ ಇಷ್ಟು ಹೊತ್ತಿಗೆ ಹುಲಿಗಳನ್ನು ಹಿಡಿದುಕೊಂಡು ಹೋಗುತ್ತಿದ್ದರು. ಜನಗಳು ಕತ್ತಲಾದ ನಂತರ ಮನೆಯಿಂದ ಹೊರಗೆ ಧೈರ್ಯವಾಗಿ ಬಂದರು, ಮುಂಜಾನೆ ಬೇಗ ಎದ್ದು ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾದರು. ಹಳ್ಳಿ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ಚುನಾವಣೆಯೂ ಹತ್ತಿರವಾಯಿತು. ಊರ ಜನರನ್ನು ನಿರಾತಂಕಗೊಳಿಸಿದ ರಾಮಣ್ಣನ ಪರವಾಗಿ ಜನ ನಿಂತಿದ್ದರು. ಮೂರು ಹೊತ್ತು ಎದೆಮಟ್ಟ ತಿಂದು ಬರಿ ಕನಸ್ಸು ಕಾಣುವುದಷ್ಟೇ ರಾಮಣ್ಣನ ಕೆಲಸ ಆಗಿಹೋಗಿತ್ತು.

ರಾಮಣ್ಣನ ಊಸರವಳ್ಳಿ ಆಟದಿಂದ ತನ್ನ ಜನಪ್ರಿಯತೆ ಕಳೆದುಕೊಂಡವನು ಮಾತ್ರ ಗ್ರಾಮ ಪಂಚಾಯಿತಿಯ ಹಾಲಿ ಅಧ್ಯಕ್ಷನಾದ ಸಿದ್ಧಣ್ಣ. ಆತನೇನು ಹೇಳಿಕೊಳ್ಳುವಂತ ಕೆಲಸವೇನು ಮಾಡಿಸಿರಲಿಲ್ಲ. ಮಳೆ ಬಂದು ಮೇಲಿನಿಂದ ಬರುವ ಕಸ ಚರಂಡಿಗೆ ತುಂಬಿಕೊಂಡಾಗ ಬೀದಿಯ ಒಂದಷ್ಟು ಬಾಯಿ ಬಡುಕ ಹೆಂಗಸರ ಸದ್ದು ಕಿವಿಗೆ ಬಿದ್ದಾಗ ಮಾತ್ರ ಬಂದು ಮುಂದೆ ನಿಂತುಕೊಂಡು ಕಸ ಎತ್ತಿಸುವ ಕೆಲಸ ಮಾಡಿಸುತ್ತಿದ್ದ. ಆದರೆ ಆತ ರಾಮಣ್ಣನಿಗಿಂತ ದೊಡ್ಡ ಊಸರವಳ್ಳಿ. ಹೇಗಾದರೂ ಮಾಡಿ ರಾಮಣ್ಣನ ಬಗೆಗಿನ ಜನಗಳ ಆಸಕ್ತಿ ಕಡಿಮೆಗೊಳಿಸಿ ತನ್ನ ಕಡೆಗೆ ತಿರುಗಿಸಿಕೊಳ್ಳಬೇಕೆಂದು ಹೊಂಚುಹಾಕಿದ.

ತನಗೆ ನಿಷ್ಠವಾಗಿದ್ದ ಒಂದೈದು ಜನರನ್ನು ಕೂರಿಸಿಕೊಂಡು ‘ಹಿಂಗ್ ಮಾಡ್ರುಲಾ’ ಎಂದು ಹೇಳಿಕೊಟ್ಟ. ಬೆಳಗ್ಗೆ ಆದದ್ದೇ ಊರಿನಲ್ಲಿ ಗುಸು ಗುಸು ಪ್ರಾರಂಭವಾಯಿತು. ಮತ್ತೆ ಆಲದಮರದ ಕೆಳಗಿನ ಸೋಂಬೇರಿಕಟ್ಟೆ ಚಟುವಟಿಕೆ ಪಡೆದುಕೊಂಡಿತು.

‘ಅಲ್ಲಾ ಕಣ್ರಲಾ, ಈ ರಾಮಣ್ಣ ನಮ್ ಹೆಸ್ರುನಾಗೆ, ನಮ್ ದನ ಕುರಿ ಹೊಲದ್ ಮ್ಯಾಗೇ ಹುಲಿಕಾಟದ್ ನೆಪ್ದಲ್ಲಿ ಸರ್ಕಾರ್ದವ್ರಿಂದ ತುಂಬಾ ದುಡ್ ತಿಂದವ್ನಂತೆ ಕಲಾ’
‘ಲೋ ಹುಲಿ ಹಿಡಿಯೋಕೆ ಮೇಲ್ನವ್ರಿಂದ ಮೊದ್ಲೆ ಆರ್ಡರ್ ಆಗಿತ್ತಂತೆ ಕಣ್ರುಲಾ’
‘ಬಸಪ್ಪನ್ ಬಸ್ರು ರಾಮಪ್ಪನ್ ಹೆಸ್ರು ಅನ್ವಂಗೆ ಇವ ಹಿಂಗ್ ಮಾಡಿ ನಮ್ ಮುಕಕ್ ಬೂದಿ ಎರ್ಚವ್ನೆ, ನಮ್ ದುಡ್ನೆಲ್ಲಾ ನುಂಕಂಡವ್ನೆ, ಇವ್ನ್‍ಗೆ ಓಟ್ ಹಾಕೋದೆ ಬೇಡ ಕಣ್ಲಾ'-ಹೀಗೆ ಸಾಗಿತ್ತು. ಈ ಮಾತುಗಳು ಕಿವಿಯಿಂದ ಕಿವಿ ಹಬ್ಬಿ ರಾಮಣ್ಣನ ವಿಚಾರದಲ್ಲಿ ಜನಗಳಿಗೆ ಗೊಂದಲ ಮೂಡಿಬಿಟ್ಟಿತು. ಕೆಲವು ಜನ ಒಪ್ಪಿಕೊಂಡರೆ, ಒಂದಷ್ಟು ಜನ ಮಾತ್ರ ‘ಇವೆಲ್ಲಾ ಸುಳ್ಳು ಕಣ್ರಲಾ, ಪಾಪ ಆವಯ್ಯಾ ಹುಲಿ ಹಿಡಿಸಿ ನಮ್ ಐಕ್ಳು ಪ್ರಾಣ ಉಳ್ಸವ್ನೆ’ ಎಂದರು.

ಕೊನೆಗೆ, ಒಂದು ಕಡೆ ಸಿದ್ಧಣ್ಣ ಜನಗಳ ಸಭೆ ಕರೆದು ‘ರಾಮಣ್ಣ ಮೋಸ ಮಾಡವ್ನೆ, ನಾನೇ ಸಿಟಿಗೋಗಿ ಆಪಿಸರ್ನ ವಿಚಾರ್ಸ್ ಕೊಂಡ್ ಬಂದಿವ್ನಿ, ಬೇಕಾದ್ರೆ ಈ ಪೇಪರ್ನೆ ನೋಡಿ’ ಎಂದು ಜನಗಳಿಗೆ ಸಾಕ್ಷಿ ಸಮೇತ ತೋರಿಸಿದ. ಒಂದೆರಡು ಘಂಟೆ ಮಾತನಾಡಿದ. ಜನಗಳೆಲ್ಲಾ ‘ಸಿದ್ದಣ್ಣನಿಗೆ ಜೈ, ಇಲಿ ಗುರುತ್ಗೆ ಜೈ’ ಎಂದರು. ಇತ್ತ ರಾಮಣ್ಣನೂ ಸಭೆ ಕರೆದಿದ್ದ. ‘ನಾನೇನಾರು ಸುಳ್ ಹೇಳಿದ್ರೆ ಆ ಮಾರವ್ವ ನನ್ನನ್ ನುಂಗ್ಕಳ್ಳಿ, ನಾನ್ ಯಾರ್ ದುಡ್ಡೂನು ನುಂಗಿಲ್ಲ, ಬೇಕಾರೆ ಸಿಟಿಗೋಗಿ ಆಪಿಸರ್‍ಗಳ್ನೆ ವಿಚಾರ್ಸ್‍ಕೊಂಡ್ ಬನ್ನಿ, ಇದ್ರಲ್ಲೇ ಗೊತ್ತಾಯ್ತದೆ ಅವ್ನ್ ಎಂತ ದಗಾಕೋರ ಅಂತ, ಐದೊರ್ಷದಲ್ಲಿ ಐದಾಣೆ ಕೆಲ್ಸಾನು ಅವ ಮಾಡಿಲ್ಲ’ ಎಂದ. ಜನಗಳೆಲ್ಲಾ ‘ರಾಮಣ್ಣನಿಗೆ ಜೈ, ‘ಕಪ್ಪೆ’ ಗುರುತ್ಗೆ ಜೈ’ ಎಂದರು. ನಿಜಕ್ಕೂ ಸಿದ್ಧಣ್ಣ ಐದಾಣೆಯಲ್ಲಿ ಒಂದಾಣೆಯ ಕೆಲಸವನ್ನೂ ಮಾಡಿರಲಿಲ್ಲ.

ಚುನಾವಣೆಗೆ ಇನ್ನೂ ಒಂದು ವಾರ ಬಾಕಿ ಇತ್ತು. ಊರಿನ ತುಂಬೆಲ್ಲಾ ಇವೆ ಗುಸು ಗುಸು ಆಗಿಹೋದವು. ಸಿದ್ಧಣ್ಣನ ಕಡೆಯವರು ರಾಮಣ್ಣನ ಮೇಲೆ, ರಾಮಣ್ಣನ ಕಡೆಯವರು ಸಿದ್ಧಣ್ಣನ ಮೇಲೆ ಸಿಕ್ಕ ಸಿಕ್ಕದ್ದನ್ನೆಲ್ಲಾ ಹಬ್ಬಿಸುತ್ತಿದ್ದರು. ಯಾವುದನ್ನು ನಂಬುವುದು, ಯಾವುದನ್ನು ಬಿಡುವುದು ಎಂಬುದೇ ತಿಳಿಯದ ಮುಗ್ಧ ಜನ ಗೊಂದಲಕ್ಕೆ ಬಿದ್ದರು. ಆದರೆ, ಇಬ್ಬರೂ ನೀಡಿದ ದುಡ್ಡು, ಹೆಂಡವನ್ನು ಗುಟ್ಟು ಗುಟ್ಟಾಗಿಯೇ ತೆಗೆದುಕೊಂಡರು.

ಚುನಾವಣೆ ದಿನ ಬಂದೇ ಬಿಟ್ಟಿತು. ಎಲ್ಲಾ ಜನಗಳು ಹೋಗಿ ಮುದ್ರೆ ಒತ್ತಿಬಂದರು. ಕುಡಿದು ತೂರಾಡಿದ ಕೆಲವರು ಸಿದ್ಧಣ್ಣ ಕಂಡರೆ ‘ಸಿದ್ದಣ್ಣನಿಗೆ ಜೈ’ ರಾಮಣ್ಣ ಕಂಡರೆ ‘ರಾಮಣ್ಣನಿಗೆ ಜೈ’ ಎಂದರು. ಚುನಾವಣೆ ಮುಗಿಯಿತು. ಹಳ್ಳಿಯ ಜನಗಳೆಲ್ಲಾ ಮೌನಕ್ಕೆ ಶರಣಾದರು. ಒಬ್ಬರಿಗೊಬ್ಬರು ಯಾರಿಗೆ ಓಟ್ ಹಾಕಿದ್ದು ಎಂದು ಹೇಳಿಕೊಳ್ಳಲೇ ಇಲ್ಲ. ಇಬ್ಬರನ್ನೂ ನಿಷ್ಠುರ ಮಾಡಿಕೊಳ್ಳುವ ಇರಾದೆ ಅವರಿಗಿರಲಿಲ್ಲ. ಓಟ್ ಒತ್ತಿದ್ದ ವಿಚಾರದಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಅನುಮಾನವೆಂಬಂತೆ ಬದುಕಿದರು.

ಕೊನೆಗೂ ಮತ ಎಣಿಕೆಯೂ ಮುಗಿಯಿತು. ಜನಗಳೆಲ್ಲಾ ಉಸಿರು ಬಿಗಿ ಹಿಡಿದು ಕಾದು ಕುಳಿತಿದ್ದರು. ರಾಮಣ್ಣ ಸಿದ್ಧಣ್ಣನ ಮುಂದೆ, ಸಿದ್ಧಣ್ಣ ರಾಮಣ್ಣನ ಮುಂದೆ ಮೀಸೆ ತಿರುವಿದ್ದರು. ಆದರೆ, ಬಂದ ಫಲಿತಾಂಶ ಹಳ್ಳಿಯನ್ನೇ ಅಚ್ಚರಿಯಲ್ಲಿ ಮುಳುಗಿಸಿತ್ತು. ಗೆದ್ದವನು ಮಾತ್ರ ನನ್ನದೂ ಒಂದು ಜೂಜಿರಲಿ ಎಂದು ಚುನಾವಣೆಗೆ ನಿಂತು ಇವರಿಬ್ಬರ ಗದ್ದಲ, ಅಬ್ಬರದಲ್ಲಿ ತನ್ನ ಹೊಲದ ಕೆಲಸ ಮಾಡಿಕೊಂಡು ಸುಮ್ಮನೇ ಇದ್ದ ‘ಕಾಗೆ’ ಗುರುತಿನ ನಮ್ ‘ಯೆಂಕ್ಟ’!.