ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Wednesday 30 November 2011

ಕಾಣಿಸಿಕೊಂಡ...

ಚೂರು ಕಾಗದ ಸಾಕು
ಕಾಣದ ಗಾಳಿಯರಿಯಲು
ಮಿಣುಕು ದೀಪ್ತಿಯಲ್ಲಿದೆ
ಅದರೊಡಲ ನಿಜ ಶಕ್ತಿ

ತಂತಿಯೊಂದನ್ನಿಟ್ಟುಕೊಂಡು
ಮನೆಗೆ ಬೆಳಕ ತಂದ
ಚಿನ್ನದ ಹಾಳೆಯಲ್ಲಿ
ಅಣು ಬೇಧಿಸಿದಾತ

ಮೂರು ನಿಮಿಷವನ್ನು
ಮೂರು ದಿನ ಮಾಡಿದನೊಬ್ಬ
ಮೂರು ದಿನವನ್ನೂ
ಮೂರು ನಿಮಿಷ ಮಾಡಿಹೋದ
ಕಾಣದ ಕಾಲದೊಡನೆ
ಎಷ್ಟೊಂದು ಆಟ

ಪ್ರಪಂಚವೇ ಆಶ್ಚರ್ಯಗಳ
ಮೂಟೆ, ನಾನೂ ಒಬ್ಬ
ಮರೆಮಾಚಿ ನಿಂದ ದೇವ
ಇರುವುದ ಹಿಡಿದು
ಇಲ್ಲದಿದುದ ಕಂಡ ಮಾನವ

ಕಾಣದ ಕೈವಲ್ಯಗಳಿಗೆ ಚಿಹ್ನೆ
ಚಿಹ್ನೆ ಚಿಹ್ನೆ ಬೆರೆಸಿ
ಕೂಡಿಸಿ ಕಳೆಯಿಸಿ ಕೊರತೆಯ ನೀಗಿಸಿ
ಅದರಾಟ ಕಂಡು ಸವಾಲೆಸೆದ
ಒಪ್ಪಿಕೊಂಡ ಆ ಸೂಕ್ಷ್ಮ
ಮಾನವನನ್ನಪ್ಪಿಕೊಂಡಿತು

Sunday 27 November 2011

ನಮ್ಮ ಬೀದಿಯ ರಾಜ್ಯೋತ್ಸವ...

ನಮ್ಮ ಬೀದಿಯಲ್ಲಿ ನಡೆಯಿತು
ಕನ್ನಡ ರಾಜ್ಯೋತ್ಸವ,ನಿನ್ನೆ!
ಆರಕ್ಕೆ ನಿಗದಿಯಾಗಿತ್ತು
ಎರಡೇ ಘಂಟೆ ತಡ ಅಷ್ಟೆ

ಅಬ್ಬರದಬ್ಬರ ಸಂಗೀತ
ನಿಮಗೆ ಗೊತ್ತಲ್ಲ, ಅದೇ ಹಾಡುಗಳು
ಇಷ್ಟೇನಾ ಪಂಕಜ
ಒಬ್ಬ ಒಬ್ಬ ಒಬ್ಬ ಪರಮಾತ್ಮ

ನಡುನಡುವೆ ಅಪ್ಸರೆಯರು
ನಡುವ ಬಳುಕಿಸಿದರು
ಅವರ ಹಾವಭಾವಕ್ಕೆ
ಹಾದಿಬೀದಿ ಪೋಲಿ ಹುಡುಗರ ದಂಡು

ಕುಡಿತದ ಗಮ್ಮತ್ತು, ಹೆಂಡದ
ತುಟಿಯಲ್ಲಿ ಕನ್ನಡವ್ವನಿಗೆ ಮುತ್ತು
ಪಾಪ, ಅತ್ತವು ಮರೆಯಲ್ಲಿ
ಕವಿವರ್ಯರ ಪಟ, ಕನ್ನಡದ ಸ್ವತ್ತು

ಕಾರ್ಯಕ್ರಮದ ಕೊನೆ ಬಂದಿತು
ಇನ್ನೇನೂ ಮತ್ತದೇ ಒಡೆದಾಟ
ನಾಲಗೆ ಎಕ್ಕಡಗಳಾದವು
ಸುಲಲಿತವಾಗಿ ಹರಿದಾಡಿದವು ಬೈಗುಳಗಳು

ಲೋಕದ ಡೊಂಕ ನಾವ್ಯಾಕೆ
ತಿದ್ದಬೇಕು, ಎನಿಸಿತಪ್ಪ ಒಂದು ಕ್ಷಣ
ಹೆಂಡದ ವಾಸನೆ ಕನ್ನಡದ ಕಂಪನ್ನು
ನುಂಗಿತ್ತು, ತಾಯಿ ಅಳುತ್ತಿದ್ದಳು

ಕುಡಿದು ತೇಗಿ ಗುದ್ದಾಡಿದರು
ಮೈಮಾಟ ನೋಡಿಕೊಂಡು ನೆಗೆಯಲು
ಮನೆ ಮನೆಯ ದುಡ್ಡು, ನಡುವೆ
ಹತ್ತಾರು ಜನಗಳು ಅತಿಥಿಗಳು, ಪೋಲೀಸರ ಆತಿಥ್ಯಕ್ಕೆ

ಎಲ್ಲಾರೂ ಅಷ್ಟೆ...

ನಿನ್ನನ್ನೊಮ್ಮೆ ನೋಡಬೇಕು
ಎಂದುಕೊಂಡಾಗಲೆಲ್ಲ
ನನ್ನ ಸುತ್ತ ಮಲ್ಲಿಗೆ ಸುರಿಯುತ್ತದೆ

ನಿನ್ನ ಮುಖಚಿತ್ರ
ಮೂಡಿ ಬಂದಾಗಲೆಲ್ಲ
ನೂರು ಕೋಗಿಲೆ ಕೂಗುತ್ತವೆ

ನಿನ್ನ ಪ್ರೀತಿ ಬೊಗಸೆಯಲ್ಲಿ
ಹಿಡಿಯಲಾಗದೇ ಸೋತಿದ್ದೆ
ಬೊಗಸೆ ಬರೀ ಕಣ್ಣೀರು ಹಿಡಿಯಲೇ?

ಕಣ್ಣಿಂದ ಜಾರಿದ ಹನಿಯ
ಒಣ ನೆಲ ನುಂಗಲಿಲ್ಲ
ನಾ ಪಡೆದದ್ದು, ನೀ ನೀಡಿದ್ದು

ಬದುಕಿಗರ್ಥ ತೋರಿಸಿ
ಅಪಾರ್ಥ ಮಾಡಿ ಹೊರಟೆ
ಆದರೂ ನೀನು ಬದುಕಲಿಲ್ಲವಲ್ಲ!!

Wednesday 23 November 2011

ಡಾಂಬಿಕನಾಗಬೇಡ...

(ಇಂದು ಸತ್ಯ ಬಯಲು ಮಾಡಲು ನಿಂತಾಗ ಆದ ಪರಿಸ್ಥಿತಿಯ ವಿವರಣೆ ಇದು. ಸನ್ಯಾಸಿಯೊಬ್ಬನನ್ನು ಪೂಜಿಸಲು ನಿಂತು ಮಹಾನ್ ವ್ಯಕ್ತಿಗಳ ಜಯಂತಿ, ದೇಶದ ಸಂಭ್ರಮಾಚರಣೆ ನಗಣ್ಯ ಮಾಡಿ ಆತನನ್ನು ಕೊಂಡುಕೊಳ್ಳಲು ನಿಂತಾಗ ನನ್ನ ಕೆಲವು ಪ್ರಶ್ನೆಗಳು)

ಪೂಜಿಸಲವನೊಬ್ಬನೇ ಕಂಡನೇ?
ಗಾಂಧಿ ನೆಹರು ನೆನಪಾಗಲಿಲ್ಲವೇ?
ಭಗತ್, ಸುಖದೇವ್, ರಾಜ್, ಅಣ್ಣ?
ದೇವರ ಮನೆಯಲ್ಲಿ ಹೆಂಡತಿಗೆ
ಗಂಡ ಒದೆಯಲು
ದೂರದ ಗಡಿಯಲ್ಲಿ ನಿಂತ
ಸೈನಿಕರು ನಿನ್ನನ್ನು ಕಾಯಲಿಲ್ಲವೇ
ಅವರ ಮೊಗವನ್ನೊಮ್ಮೆ ಕಾಣು
ಈ ಪ್ರಶ್ನೆ ಇಡುವವರು ನಿಂದಕರೆ?

ದೇವಸ್ಥಾನದೆದುರಲ್ಲಿ
ನೂರಾರು ತಿರುಕರು
ಚಪ್ಪಲಿ ಕಾಯಲಷ್ಟು ಜನ
ಅದ ಕದಿಯಲಷ್ಟು ಜನ
ಎಂಜಲನ್ನಕ್ಕೆ ನೂರು ಕೈ
ಯಾತನೆಯ ಕೊಚ್ಚೆಯಲ್ಲಿ ಬಿದ್ದು
ಬಾಡಿಲ್ಲವೇ ಮಲ್ಲಿಗೆ ನೂರು

ಪವಾಡ ನೋಡಿ ಮರುಳಾದರು
ಬಯಲು ಮಾಡಿದವರಿಗುರುಳಾದರು
ಮುರಿದ ಮೂಳೆ ಜೋಡಿಸಿದ ದೇವ
ಮುರಿದುಕೊಳ್ಳುವಾಗೆಲ್ಲಿದ್ದ?
ಖಾಯಿಲೆ ಗುಣಪಡಿಸಿದಾತನಿಗೆ
ಬಂದದ್ದು ನಿಲುಕಲಿಲ್ಲವೇಕೆ?
ಇವೇ ಪವಾಡ ರಹಸ್ಯ ಬಯಲು

ಸುಳ್ಳನ್ನು ಸತ್ಯ ಮಾಡಬೇಡ
ಮುರಿಯಲು ವಿಜ್ಞಾನ ತುದಿಗಾಲಲ್ಲಿ
ಸೆಟೆದು ನಿಂತಿದೆ
ದೇವನೆಂಬುವನೊಬ್ಬ ನಾಮವಿಲ್ಲದ
ನಿರ್ವಿಕಾರ ಅಶರೀರ
ಜಗತ್ತಿನ ಸಮತೋಲನದಲ್ಲಿದ್ದಾನೆ
ನಿನ್ನ ನಂಬಿಕೆ ನಿನ್ನ ಕಾಯಲಿ
ಬೀದಿಗೆ ತಂದದನು ಡಾಂಬಿಕನಾಗಬೇಡ

Monday 21 November 2011

ವಿಕೃತ ಮನೆ

ವಿಕೃತ ಮನೆ

ಬಾಗಿಲೆದೆಯಲ್ಲಿ ಹೃದಯ
ಪಕ್ಕದಲ್ಲೇ ಅಶ್ಲೀಲ ಭಿತ್ತರ!
ಕಣ್ಮುಚ್ಚುವುದೋ ಬಿಡುವುದೋ
ತೂಕಡಿಸಿ ತೊಟ್ಟಿಕ್ಕುವ ನೀರು
ಡಬ್ಬ ತುಂಬಿಸುವ ಅವಸರ

ಎಡ ಬಲ ಹಿಂದೆ ಮುಂದೆ
ಬಿಟ್ಟಿಲ್ಲ ತುಂಟ ಮಕ್ಕಳು
ಬೀದಿ ಗೌರಮ್ಮನ ಹೆಸರು
ನೀವೂ ಸಂಧಿಸಬಹುದು
ಪಕ್ಕದಲ್ಲೇ ಫೋನ್ ನಂಬರು!

ಬಂದ ಕೆಲಸವೇ ಮರೆತೆ
ಕುಳಿತುಬಿಟ್ಟೆ ಏನೋ ವ್ಯಥೆ
ಹೊರಗೆ ಹೊಟ್ಟೆ ನುಲಿದಿತ್ತು
ಒಳಗೆ ವಾಂಛೆ ಬಿರಿದಿತ್ತು
ಸುಮ್ಮನೆ ಮನಸ್ಸು ಕೆಡಿಸಿತ್ತು!

ಪ್ರೀತಿಯನ್ನೊಬ್ಬ ಕೂಗಿದ್ದನಲ್ಲಿ
ಕಾಮದನುಭವ ಗೀಚಿದ್ದನೊಬ್ಬ
ನನಗೊಂದು ಅವಕಾಶ ಸಿಕ್ಕಿತ್ತು
ಮೂರು ಭಿತ್ತಿ, ಏಕ ದ್ವಾರ
ಕತ್ತಲೆಯಲ್ಲಷ್ಟು ಸತ್ಯ ಮಿಥ್ಯ

ಐದು ನಿಮಿಷ ಐವತ್ತಾಯಿತು
ನನ್ನಂತವರು ನೂರು ಜನ
ಕಾಯಲಿಲ್ಲ ಹೊರಟೇಬಿಟ್ಟಿತು
ನನ್ನೂರಿನ ಬಸ್, ಸಾಕಪ್ಪ
ಬಸ್ ನಿಲ್ಚಾಣದ ಮಲದ ಮನೆಯ ಸಹವಾಸ

Sunday 20 November 2011

ಹೀಗೂ ಉಂಟೆ...

ನನ್ನವಳು ಸ್ನಾನ ಮಾಡಿ
ನೀರನ್ನೇ ತೊಳೆದುಬಿಟ್ಟಳು
.
.
.
.
.
ಎಂದೊಂದು ಕವಿತೆ ಬರೆದಿದ್ದೆ
ಇಷ್ಟು ದಿನ ಅದೆಲ್ಲಿದ್ದರೋ
ಓಡೋಡಿ ಬಂದರು ಕಾರ್ಪೋರೇಷನ್ನವರು
ಟೆಂಡರ್ ಕೊಡಲು
ಬಿಡದೊಪ್ಪಿಸಿ
ತಾತ್ಕಾಲಿಕವಾಗಿ
ಕೆಂಗೇರಿಯನ್ನೇ ಬರೆದುಕೊಟ್ಟರು

ಕಾಣದ್ದು ಕಾಣಿಸಿಕೊಂಡ...

ಕಾಗದದ ಚೂರು ಸಾಕು
ಗಾಳಿಯಿರುವಿಕೆನ್ನರಿಯಲು
ಮಿಣುಕು ದೀಪವೇ ಸಾಕು
ಅದರ ಶಕ್ತಿ ತಿಳಿಯಲು
ತಂತಿಯೊಂದು ಸಾಕು
ಬೆಳಕನ್ನಿಡಿದಿಟ್ಟುಕೊಳ್ಳಲು!

ಚಿನ್ನದ ಹಾಳೆ ಸಾಕಾಯಿತು
ಅಣು ಬೇಧಿಸಲಾತನಿಗೆ
ಕಾಣದ್ದನ್ನು ಕಾಣಿಸಿಕೊಂಡ
ಪಾರಮಾರ್ಥವಲ್ಲವೇ ವಿಜ್ಞಾನ
ಬೆಸೆದು ನಿಂತಿತು ಗಣಿತ ತೋರಿಸಲು
ಕಾಣದ ವಸ್ತುವಿನಾಯಾಮ

ಮೂರು ನಿಮಿಷವನ್ನು
ಮೂರ ಘಂಟೆ ಮಾಡಿಕೊಂಡನೊಬ್ಬ
ಮೂರು ದಿನವನ್ನು
ಮೂರು ನಿಮಿಷವೂ ಮಾಡಿಹೋದ
ಕಾಲ ಕಾಣಲಿಲ್ಲ
ಆದರೂ ಆಟವಾಡಿಸಿಹೋದ

ಒಬ್ಬ ಭಗವಂತ ಜಗ ಬೆಳಗಲಿ
ಕಂಡು ಹೋಗಬೆಕಲ್ಲವೆ ಮಕ್ಕಳ
ಕಾಣಲಿಲ್ಲ, ಕಾಣದಿರಲಿಲ್ಲ
ಪ್ರಪಂಚವೇ ಆಶ್ಚರ್ಯಗಳ ಮೂಟೆ
ನಾನೂ ಒಬ್ಬ, ನಿನೂ ಒಬ್ಬ
ಬೆರಳಿನಾಟ ನೋಡು ಸಾಕು

ಕಾಣದ ಕೈವಲ್ಯಗಳಿಗೆ ಚಿಹ್ನೆ
ಚಿಹ್ನೆ ಚಿಹ್ನೆ ಬೆರೆಸಿ
ಕೂಡಿಸಿ ಕಳೆಯಿಸಿ ಕೊರತೆಯ ನೀಗಿಸಿ
ಅದರಾಟ ಕಂಡು ಸವಾಲೆಸೆದ
ಒಪ್ಪಿಕೊಂಡ ಸೂಕ್ಷ್ಮ
ಮಾನವನನ್ನಪ್ಪಿಕೊಂಡಿತು

ಪುಂಸತ್ವದ ಮಕ್ಕಳು...

ಪುಂಸತ್ವದ ಮಕ್ಕಳು...

ಅಲ್ಲೊಬ್ಬಳು ಹೆತ್ತರೆ
ಪ್ರಪಂಚಕ್ಕೆಲ್ಲ ಹೊಸಗೆ
ಹುಟ್ಟಿದ್ದು ಮಂಗ
ಹಡೆದವಳು ಸಾರಂಗ
ಸಾರಂಗದ ಹಿಕ್ಕೆಯೂ
ಫಸಲಿಗೆ ರಸದೂಟ
ಹೆತ್ತದ್ದು ಗಂಡಸೇ?

ನಾನೋ ತುಂಬು ಗರ್ಭಿಣಿ
ರಾತ್ರೋರಾತ್ರಿ ಪ್ರಸವ
ಕೊಸರುತ್ತಿದೆ ನೋವು
ಕವಿತೆಯೊಂದ ಹೆರಲು
ಹುಟ್ಟಿದ ಮಕ್ಕಳೆಲ್ಲ
ಸತ್ತರು ಸರತಿಯಲ್ಲಿ
ಹಳಸಲು ಭಿಕ್ಷೆ, ಮುಷ್ಟಿ ಕೂಳಿಲ್ಲ

ಪದಗಳ ದುಡಿವ ಗಂಡ
ಹದ ಮಾಡುವುದು
ಕಲಿತಿಲ್ಲ
ಶಾಯರಿ ಸುರಿಸಿ
ನಗುವ ಮಗು ನೀಡಲಿಲ್ಲ

ಮಿಲನಕ್ಕೆರಡಾದರೂ
ಸಿಂಬಳ ಸುರಿಸಿ
ಯಾರೂ ಮುಟ್ಟಲಿಲ್ಲ
ತೊಗಲಿಲ್ಲದ ಪಕಳೆ
ಮತ್ತೆ ಮತ್ತೆ ಹುಟ್ಟುತ್ತಿವೆ
ಪುಂಸತ್ವದ ಮಕ್ಕಳು
ಭ್ರೂಣಹತ್ಯೆ ಮಹಾಪಾಪ

ಆದರೆ ಅವಳಿಜವಳಿ
ಕಸದ ತೊಟ್ಟಿಗೊಂದು
ವ್ಯಂಗ್ಯದ ಬುಟ್ಟಿಗೊಂದು
ಮತ್ತೆ ಹೆರಿಗೆಬೇನೆ
ಎಷ್ಟು ಹೆರಲವ್ವ
ಒಂದು ಮುದ್ದು ಮಗುವಿಗೆ
ಕೆನ್ನೆ ಲೊಚಗುಡಬೇಕು
ಮುಟ್ಟಿದವನು ಮತ್ತೆ ಮುಟ್ಟಿ
ಕೆನ್ನೆ ಕಿವಿ ಕಚ್ಚಿ
ಅಸೂಯೆ ಪಡಬೇಕು
ಬೀದಿಯಲ್ಲಿ ತುಂಟನಾಗಿರಲೆಂದರೆ
ಎಲ್ಲರೂ ಒದೆಯುವವರೇ

ತುಂಬಿದುದರದೊಳಗಿರುವ
ನನ್ನ ಮುಂದಿನ ಮಗುವನ್ನು
ಬೆಳೆಸುವೆನೆದೆ ಸೆಟೆಸಿ
ಹುಟ್ಟಿ ಹುಲಿಯಾಗಿ
ಕಟ್ಟುವನು, ಹೌದು ಕಟ್ಟುವನು
ಕುಟ್ಟಿ ಕುಟ್ಟಿ ಹದಕ್ಕೆ ತರುವನು

ತೆಗಳಿದವ ಬಾಯಿಗೆ
ಅಂಟಾಗಿ, ಹೃದಯಕ್ಕೆ ನಂಟಾಗಿ
ಬಾಳುವನು
ಜಗವ ಗೆಲ್ಲುವನು
ನನ್ನ ಮಗನು, ಜಗವಾಗುವನು
ಜಗವಾಗಿ ನಗುವನು
ಮಿಲನದುತ್ತಂಗದಲ್ಲಿ

ಗರತಿ - ಸವತಿ

ಈ ಬೀದಿಯಿಂದಾ ಬೀದಿಗೆ
ಪಯಣ ಪ್ರತಿದಿನ ರವಿಗೆ
ಇಲ್ಲೊಂದು ಸರತಿ
ಅಲ್ಲೊಂದು ಸರತಿ
ಬೆಳಕು ಚೆಲ್ಲುವನಧಿಪತಿ
ಇಬ್ಬರು ಸತಿ
ಸದ್ಯಕ್ಕೆ ಅತ್ತಕಡೆಯವಳು ಗರತಿ
ಇತ್ತ ಕಡೆಯವಳು ಸವತಿ

ಅಳಲೊಲ್ಲಳು ಇತ್ತಕಡೆಯವಳು
ಕಣ್ಣೀರೊರೆಸಿ
ಸುರಿಯುತ್ತಿದ್ದಾನೆ ಬೆಳದಿಂಗಳು
ಶಶಿಗನ್ನಡಿ, ಬಾನಾಡಿ
ಸೂರ್ಯನೆದೆ ಮುನ್ನುಡಿ
ಪ್ರತಿಫಲಿಸಿ ರವಿಯ ಕಿರಣ ಕಿಡಿ

ಬ್ಯಾಲೆನ್ಸ್...

ತಲೆ ಬುರುಡೆ ಕೊಚ್ಚಿದ ಚಚ್ಚಿದ
ಕೊತ್ವಾಲನಿಗೇನು ಗೊತ್ತು ಬ್ಯಾಲೆನ್ಸ್
ಎಳನೀರು ಬುರುಡೆ ಕೊಚ್ಚಿದ
ಮಾಚನ ಕತ್ತಿ ಹಿಡಿದ ಕೈಗೆ ಗೊತ್ತು ಆ ಸೆನ್ಸ್

ಆತ ತಲೆ ಬುರುಡೆ ಕೊಚ್ಚಿದ್ದು
ಜೀವ ತೆಗೆಯಲು
ಹನಿ ರಕ್ತದೊಳಗೆ ಗಹ ಗಹಿಸಿ
ಕೊನೆಗಾಣಿಸಿ ನಗಲು

ಈತನದೂ ಅದೇ ಕಥೆ ಅಲ್ಲ ಜೀವನ
ಕೈನಲ್ಲಿಣುಕುತ್ತಿರುತ್ತದೆ ನೋವು
ಸಮತೋಲನ ಕಾಯುತ್ತಾನೆ ಕಣ್ಣಲ್ಲಿಟ್ಟು ಠಾವು

ಇನ್ನೊಬ್ಬನ ಜೀವವೂ ‘ಅವನ ಜೀವವೆ'
ಬೇರೆಯವರ ಮನೆಗೆ ಬಿದ್ದರೆ ಬೆಂಕಿಯಂತೆ
ನಮ್ಮ ಮನೆಗೆ ಬಿದ್ದರೆ ಸುಡುವ ಬೆಂಕಿಯೆಂಬ ಚಿಂತೆ

ಅವಳಿಗಾಗಿ - ಹಾಗೇ ಸುಮ್ಮನೆ

ಸಂಜೆ ರವಿಯೊಂದಿಗೆ
ಅವಳಿಗಾಗಿ ಕಾದೆ
ಬರಲೇ ಇಲ್ಲ
ಅವಳ ಭಾವನೆಗಳನ್ನು
ಮಣ್ಣಿನಲ್ಲಿ ಹೂಳಲು ಹೋದೆ
ಮಳೆ ಬಂದು ತಡೆಯಿತು
ಹನಿ ಹನಿ ಮಳೆಯಲ್ಲಿ
ಅವಳ ಮುಖವನ್ನೇ ಕಂಡೆ
ಇದ್ದಕ್ಕಿದ್ದಂತೆ ನಕ್ಕಳು
ಮಳೆ ಜೋರಾಯಿತು
ಪ್ರತಿಹನಿಯಲ್ಲೂ ಅವಳನ್ನೇ
ನೋಡುತ್ತಾ ಕುಳಿತೆ
-
ಬದುಕಿಗರ್ಥ
ಕೊಟ್ಟವಳು ನೀನೆ
ಅಪಾರ್ಥ ಮಾಡಿ
ಹೋದವಳೂ ನೀನೆ
ಅರ್ಥ ಅಪಾರ್ಥದ
ನಡುವೆ ನಾನು
ಬಲೆಗೆ ಸಿಕ್ಕಿದ ಮೀನು
-
ಕಣ್ಣಿಂದ ಜಾರಿದ
ಒಂದೇ ಒಂದು ಹನಿ
ಕೋಟಿ ನೋವನ್ನು ಹೇಳಿತ್ತು
ಕೆನ್ನೆ ತಬ್ಬಲು ಹವಣಿಸಿತು
ಕೆನ್ನೆಗೂ ಸಿಗದ ಹನಿ
ಒಣ ನೆಲದ ಮೇಲೆ ಬಿದ್ದು
ನೆಲವೂ ನುಂಗಲಿಲ್ಲ
ನಾ ಪಡೆದದ್ದು, ನೀ ನೀಡಿದ್ದು
-
ನಿನ್ನ ನಗುವಿಗೆ
ಕಾದು ಕುಳಿತಿದ್ದೆ
ಬೆಳದಿಂಗಳ ಸುರಿಸಿ
ಚಂದ್ರ ನನ್ನನ್ನು
ಸೆಳೆಯಲು ಹೊಂಚಿದ
ನಾನು ಸೋಲಲಿಲ್ಲ
ನೀನು ನಕ್ಕೆ
ಚಂದ್ರನೇ ಸೋತುಹೋದ
-
ಅವನು ನಿನಗಿಷ್ಟವೇ
ಒಪ್ಪಿಕೊಂಡು ಸಂತಸದಿಂದಿರು
ನನಗೆ ನೀನಿಷ್ಟ
ಒಪ್ಪಿಕೊಂಡು
ದುಖದಿಂದಿರುತ್ತೇನೆ
-
ನಿನ್ನ ಗಲ್ಲ
ಅಲ್ಲ ಬೆಲ್ಲ
ಮಧು ಸುರಿದ
ಎಳೆ ಕುಸುಮ ನೀನು
ನಾನಂತು ದುಂಬಿಯಾದೆ
ಮುಡಿಗಿಟ್ಟುಕೊಂಡವರು
ಓಡಿಸಿಬಿಟ್ಟರು

-

ಮನೆ ಮುಂದಿನ ಬಾಳೆ
ನಿನ್ನನ್ನೇ ಹೋಲುವುದಲ್ಲ ಎಂದೊಡನೆ
ಮೇಲೆ ಕುಳಿತಿದ್ದ ಪತಂಗ ಸುಟ್ಟುಹೋಯಿತು
ನಾ ನಕ್ಕು ನೋಡುತ್ತಿದ್ದಂತೆ
ಮಳೆ ಬಂದು ಬಿಸಿ ನೆಲ ತಂಪಾಗಿ
ನಿನ್ನೆದೆಯೊಳಗಿನ ಸ್ವಾರ್ಥ ಕುಣಿಯುತ್ತಿತ್ತು

ಬಾಳೆ ಕಂಬದ ಕನ್ನಡಿಯೊಳಗೆ
ನನ್ನದೇ ನಗು
ನಾನೂ ಹಾಗೆಯೇ, ಸ್ವಲ್ಪ ಸ್ವಾರ್ಥಿ...

-

ನಾನೊಬ್ಬ ವಿಚಿತ್ರ ಕುರುಡ
ಮಣ್ಣಲ್ಲಿ ಮಣ್ಣಾಗಿ ಹೋಗುವ
ಈ ಕಣ್ಣಿಗೆ
ನಿನ್ನ ಬಿಟ್ಟು ಬೇರೇನೂ ಕಾಣದು
ಆದರೂ
ಜಗತ್ತನ್ನೇ ಅಳೆಯಬಲ್ಲೆ
ನಿನ್ನಲ್ಲೇ ಜಗತ್ತನ್ನು ಕಂಡು ಅನುಭವವುಂಡವನು ನಾನು

-

ನೀನೇ ಹೋದಮೇಲೆ
ನನಗೇಕೆ ಬೇಕು ಎರಡನೇ ಹೆಂಡತಿ
ನಿನ್ನ ನೆನಪೇ ನಿನ್ನ ಸವತಿ

-

ಇಂದು ಅವಳಿಗೆ ಎಲ್ಲಾ
ವಿಚಾರವನ್ನು ಹೇಳಲು ಹೊರಟಿರುವೆ!
ಒಪ್ಪಿದರೆ ಭಾವನೆಯೊಂದನ್ನು ಹಡೆದಂತೆ
ಒಪ್ಪದಿದ್ದರೆ ಮುಗ್ದ ಮನಸ್ಸೊಂದನ್ನು ಒಡೆದಂತೆ!

ತವಕ...

ಹಕ್ಕಿ ಉಲಿಯಿತೆ
ಅವಳ ಕಣ್ಣಲ್ಲಿ
ಮತ್ತೇಕೆ ತೇಲಿಹೋದೆ
ಮೇಘಗಳ ಗುಂಪಲ್ಲಿ

ಜೇನು ಜಿನುಗಿತೆ
ಅವಳ ತುಟಿಯಲ್ಲಿ
ಮತ್ತೇಕೆ ಮಧು ಹೀರಿದೆ
ಭ್ರಮರನಾಗಿ ಪುಷ್ಪಸರಧಿಯಲಿ

ದುರಂತ ಕಥೆ ಹೇಳಿತೆ
ಕರಿಮೋಡ ಮುಂಗುರುಳು
ಮತ್ತೇಕೆ ಬೆವರುತಿರುವೆ
ಕೊರೆವ ಚಳಿಯ ಬೆಳಗಿನಲಿ

ಅಲ್ಲಿ ಇಲ್ಲಿ ಎಲ್ಲಾದರೂ ಸಿಕ್ಕು
ಓರೆನೋಟ ಬೀರಿದ್ದಳೆ
ಮತ್ತೇಕೆ ಬೇಡದ ಬಡಾಯಿ
ಭ್ರಮೆಯರಮನೆಯಲ್ಲಿ

ಎದೆಗೂಡಲ್ಲಿ ಎಂದಾದರೂ
ತನ್ನೊಲುಮೆ ಸುರಿದು ಪಿಸುಗುಟ್ಟಿದ್ದಳೇ
ಮತ್ತೇಕೆ ನಿಲ್ಲದ ಸವಾರಿ
ಕನಸೆಂಬ ಕಾಣದ ಕುದುರೆಯಲ್ಲಿ

ನಾಲ್ಕು ಹೂ...

ನಾಲ್ಕು ಹೂವು ಕೊಯ್ದು ತಂದೆ
ಒಂದು ಮುಡಿಗೆ, ಇನ್ನೊಂದು ಕಾಲಡಿಗೆ
ಮತ್ತೊಂದು ದೇವರ ಗುಡಿಗೆ
ಉಳಿದಿದ್ದು ಹೆಣದ ಮರೆವಣಿಗೆಗೆ
ಹಿತ್ತಲಿನ ಬೇಲಿಯಲ್ಲಿ ಬೆಳೆದು
ಕತ್ತಲಿನ ಮೌನದಲ್ಲಿ ನಲಿದು
ನೆರೆಮನೆಗೆ ದಿನ ನೆರಳಾಗಿ
ಮುಡಿಯೇರಿ ನಲಿಯಿತೊಂದು

ಅರಳು ಹೂಗಳು ಹಲವು
ಸುಟ್ಟ ಬೆಟ್ಟದ ಬೂದಿಯಲ್ಲಿ
ಕೆರೆಯ ದಂಡೆಯ ಕೊಳಕಿನಲ್ಲಿ
ಕೆಸರಿನ ತೊಟ್ಟಿಕ್ಕಿದ ನೀರಿನಲ್ಲಿ
ವಿದ್ಯುತ್ ಕಂಬದ ಬುಡದಲ್ಲಿ
ಕೈಗಳ ಕಾಮದ ವಾಂಛೆಯಲ್ಲಿ
ಪೋಲಿದನಗಳ ಬಾಯಿಯಲ್ಲಿ
ಮುದುಡದಿದ್ದರೂ ಕಾಲಿಗೆ ಸಿಕ್ಕಿದ್ದೊಂದು

ಹುಟ್ಟಿನೊಂದಿಗೆ ಸಾವು
ಹಟ್ಟಿಯಲ್ಲಿ ಮುರಿದ ಹಂದರ
ತೊಗಲಿನ ಚಾದರದಡಿ ಆತ್ಮ
ಮೋಡಗಳಾಚೆ ತೂರಿತು
ಸುಖವ ತೊರೆದ ಕುಸುಮವೊಂದು
ಆತ್ಮನಿಗಲ್ಲ ಒಣಗಿದ ಎದೆಗೆ

ಪಂಚಾಕ್ಷರಿ ತಾರಕಕ್ಕೇರಿರಲು
ಗಂಟೆಗಳ ನಿನಾದದ ಸವಿ
ಪಾದದಡಿಯಲ್ಲಿ ಪಾವನವಾಗಿ
ದಿಕ್ಕಿಗೆ ಪರಿಮಳ ಪಸರಿಸಿ
ಭಗವಂತನನು ತೋರಿಸಿತೊಂದು
ಪಾರಮಾರ್ಥದ ನೆರಳಿನಲ್ಲಿ ಮಿಂದು

ಮುಡಿದ ಹೂ ಜಾರಿತ್ತು
ಕಾಲಿನ ಹೂ ಸತ್ತಿತ್ತು
ದೇವರ ಹೂ ಬಾಡಿತ್ತು
ಹೆಣದ ಹೂ ಗುಂಡಿಯಲ್ಲಿತ್ತು
ಬೀಜ ಒಡೆದು ಕೋಗಿಲೆ ಕೂಗಿ
ಚೈತ್ರ ಚಿಗುರಿ ಶಲಾಕ ಉದುರಿ
ನಕ್ಕವು ಹಲವು ಹೂ ಮುಖವ ತೋರಿ
ಕಾಲಚಕ್ರನ ಕೈಗೆ ಸವೆಸುವ ಕೆಲಸ

ನೀನು....

ಸೀರೆ ಸೆರಗು ಮಾಡಿದ್ದು
ನೋಡಲೆಂದು ನನ್ನವಳು ಕದ್ದು
ಬಿಂದಿಗೆ ಮಾಡಿದ್ದು
ಅದನ್ನು ಹೊರಲೊಂದು ಸೊಂಟ ಮೂಡಿದ್ದು
ಬರಲೆಂದು ನೀರಿಗೆ ಮುಂಜಾನೆ ಎದ್ದು

ಅಲ್ಲೆಲ್ಲೋ ಕುಳಿತು, ಯೋಚಿಸಿ
ಭಗವಂತನವಳನ್ನು ಕೊರೆದು ಮತ್ತೆ ಯೋಚಿಸಿ
ಬಳುಕುವ ಕತ್ತು ಕೆತ್ತಿ
ಹೊಳಪು ಮೆತ್ತಿ
ಓರೆ ನಯನ ಹೊರಳಿಸಿ
ಕರಿಮೋಡ ಮುಂಗುರುಳು ಜಾರಿಸಿ
ಅಡಿ ಮುಡಿ ನಡುವೆ
ಕ್ಷೀರಸ್ನಾನ ಮಾಡಿಸಿ, ಮೃದು ತೊಡಿಸಿ
ಆ ನಗ್ನತೆ ಭಗ್ನಗೊಳ್ಳದಿರಲೊಂದು
ಉದ್ದನೆಯ ಸೀರೆ ಉಡಿಸಿ
ಕೈಮುಗಿದು ಪ್ರಾರ್ಥಿಸುತ್ತಿದ್ದೆನ್ನ
ಮುಂದೆ ನಿಲ್ಲಿಸಿದ, ಸಲ್ಲಿಸಿದ, ನಲಿಸಿದ

ತುಟಿ ಮೇಲೊಂದು ಮಧು ಚೆಲ್ಲಿದ ಹೂವಿದೆ
ಹೇಗೆ ಎತ್ತುಕೊಳ್ಳಲಿ ಎಂಬ ತವಕ
ನನ್ನ ತುಟಿಗೂ ಎಂತದೋ ನಡುಕ

ಬನ್ನಿರಪ್ಪ ಬನ್ನಿ..

ಬನ್ನಿರಪ್ಪ ಬನ್ನಿ, ಓಡೋಡಿ ಬನ್ನಿ
ಅಕ್ಕ ನೀವು ಬನ್ನಿ, ಬನ್ನಿ ಹಿರಿಯರೆ
ಇಲ್ಲೊಬ್ಬ ಸತ್ತಿದ್ದಾನೆ ನೋಡಿ
ಚಟ್ಟಕಟ್ಟಿ ಭವ್ಯ ಮೆರವಣಿಗೆ
ಬಂದು ಕೂಡಿಕೊಳ್ಳಿ, ಬನ್ನಿ

ಸುಕ್ಕುಗಟ್ಟಿದ ಬದುಕನ್ನು ನುಂಗಿ
ನೂರು ಎಕ್ಕಡ ನೆಕ್ಕಿ ಗದ್ದುಗೆ ಏರಿ
ಸತ್ಯವನ್ನತ್ಯಾಚಾರ ಮಾಡಿದವನು
ಉಂಡ ಮನೆಗೆ ಊಸುಬಿಟ್ಟ
ಭಂಡನಿವನು ಎಚ್ಚರವಾಗಿಬಿಟ್ಟಾನು
ಬನ್ನಿ ಹೂತುಬಿಡೋಣ

ಬದುಕೊಂದು ದಿನ ಅತ್ತಿತ್ತು
ಅತ್ತು ಅತ್ತು ಇವನ ಹೆತ್ತಿತ್ತು
ಇಂದು ಸತ್ತನಪ್ಪ
ಸಾವಿರ ಜನರ ರಕ್ತ ಕುಡಿದು
ಮಸಣದ ಮೇಲೆ ಮನೆ ಕಟ್ಟಿದ್ದ
ಕೇರಿ ಕೇರಿಯ ಮುಂಡೆಯರು
ಇವನ ಹೆಂಡಿರಂತೆ
ಅವರೂ ಕುಣಿಯುತ್ತಿದ್ದಾರೆ

ಊರೆ ನುಂಗಿದ್ದ
ಮಾರಿಯನ್ನು ಬಿಡದೆ
ನೂರು ಮಲ್ಲಿ ಗೆ ಬಾಡಿಸಿ
ಇಂದು ನಾರುತ್ತಿದ್ದಾನೆ
ಬನ್ನಿ ಬನ್ನಿ ಅನ್ಯಾಯವನ್ನು
ಹೂತು ಸಂಭ್ರಮಿಸೋಣ

ಮರೆಯದೇ ಶ್ರಾದ್ಧಕ್ಕೆ ಬಂದುಬಿಡ್ರಪ್ಪ
ನರಕಕ್ಕೆ ಹೋಗದೆ
ಮಣ್ಣಲ್ಲೂ ಕೊಳೆಯದೆ
ನನ್ನ ಮನೆ ಸೂರಿನಲ್ಲಿ ಉಳಿದುಬಿಟ್ಟಾನು?
ಆಯಿತು, ಆಯಿತು, ಒಪ್ಪಿಕೊಂಡೆ
ತಿಥಿಗೆ ಅವನ ಭಾವಚಿತ್ರವಿಡುವುದಿಲ್ಲ
ನನಗೂ ಮುಖ ನೋಡಲಿಷ್ಟವಿಲ್ಲ ಮಾರಾಯ್ರೆ
ರಾಮ ರಾಮ ಸಾಕಪ್ಪ ಇವನಾಟ

Wednesday 16 November 2011

ನಲ್ಲೆ
ಸಂಜೆ ಸೂರ್ಯ
ಪಡುವಣ ದಿಗಂತದೆದೆಯಲ್ಲಿ
ಬಣ್ಣಚೆಲ್ಲಿ ನಕ್ಕರೆ
ನಿನ್ನ ನೆನಪಾಗುತ್ತದೆ
ಯಾಕೆಂದರೆ
ಮುಂಜಾನೆ ಹೀಗೆ ಕಣ್ಣುಮಿಟುಕಿಸಿ
ಮಧ್ಯಾಹ್ನ ನೆತ್ತಿ ಸುಟ್ಟಿದ್ದು
ಮರೆಯಲಾಗುತ್ತಿಲ್ಲ...

ಪಕ್ಕದಲ್ಲೇ ಇರುವ ಪಾಪಾಸುಕಳ್ಳಿಯ
ಮುಳ್ಳುಗಳಿಂದ
ಮೈಮೇಲೆ ಗೀಚಿಕೊಂಡ
ಆ ಕರಾಳ ನೆನಪುಗಳು
ಉಮ್ಮಳಿಸಿ ಉಮ್ಮಳಿಸಿ ಬಂದು
ತೊಟ್ಟಿಕ್ಕಿಸಿದ ಕಣ್ಣೀರನ್ನು
ಕೆನ್ನೆ ತಬ್ಬಲು ಹವಣಿಸಿದೆ
ಕೆನ್ನೆಗೂ ಸಿಗದ ಹನಿಯನ್ನು
ನೆಲ ನುಂಗದೆ ಅಣಕಿಸಿದೆ
ನೀ ನೀಡಿದ್ದು ನಾ ಪಡೆದದ್ದು

Tuesday 15 November 2011

ನನ್ನವಳು

ನನ್ನವಳು...

ಮಣ್ಣಲ್ಲಿ ಬೆರೆತು, ಬೀಜ ಮೊಳೆತು
ಗಿಡ ಮರವಾಗಿ ನಿಂತು
ಫಲ ಮೈದುಂಬಿ ತೊನೆವಾಗ
ನನ್ನವಳು ನೆನಪು ಒತ್ತರಿಸುತ್ತದೆ

ಸೃಷ್ಪಿಯು ಕಣ್ಣರಳಿಸಿದಾಗ
ಎಲ್ಲಿಂದಲೋ ಬಂದು ನೆಲವನ್ನಪ್ಪಿ
ರಾಶಿ ಇರುಳನ್ನು ನುಂಗಿ
ಎದೆಯಂಗಳಕ್ಕೆ ಬೆಳದಿಂಗಳ ಚುಕ್ಕೆ-
ಯಿಟ್ಟು ಮೆರೆದು ಮೊರೆಯುತ್ತಾಳೆ

ಆಗಮನದೇದುಸಿರಿಗೆ
ಮೋಡ ಒಡೆದು ಭೂ ಮೈ ತೊಳೆದು
ಜಗ ಸೀರೆಯುಟ್ಟು, ಹಸಿರುಬೊಟ್ಟಿಟ್ಟು
ಎಳೆ ಕಂದನಂತೆ ನೆಗೆ ನೆಗೆದು
ಅವಳ ಸೌಂದರ್ಯವನ್ನೆಲ್ಲ ಮೊಗೆಯುತ್ತದೆ

ಸೀರೆಗೊಂದು ಸೆರಗು ಮಾಡಿದ್ದು
ನೋಡಲವಳೆಂದು ಕದ್ದು
ಬಳಕುವ ಕತ್ತು ಮಾಡಿದ್ದು
ಅವಳೊಮ್ಮೆ ತಿರುಗಿ ನೋಡಿದ್ದು
ಎರಡು ಕೂಡಿಯೇ ಅಂಕುರವಾದದ್ದು

ನನ್ನೆದೆಯ ಭಕ್ತಿ
ನಿಷ್ಕಲ್ಮಶ ಜಗತ್ತಿಗವಳೇ ಶಕ್ತಿ

Monday 14 November 2011

ಪೆಟ್ಟಿಗೆ ಒಡೆದರು...

ಜಡಿದ ಬೀಗ ಮುರಿದು
ಪೆಟ್ಟಿಗೆ ಒಡೆದರು
ಇದ್ದ ಸೊತ್ತು
ಕದ್ದೊಯ್ದರು
ಸದ್ದಿಲ್ಲದೇ ಬಂದ ಕಳ್ಳರು

ಅದರಲ್ಲೇನಿತ್ತು?
ಕೊಟ್ಟವನಿಗೆ ಗೊತ್ತು
ಅಮ್ಮನ ಬೆಂಡೋಲೆ
ಹೆಂಡತಿಯ ಬೊಟ್ಟು
ಅಣ್ಣನ ವಜ್ರದುಂಗುರ
ಕಂದನ ನಡುದಾರ
ಮನೆಯ ನೆಮ್ಮದಿ
ಪೆಟ್ಟಿಗೆಯಾಗಬೇಕು ಬೂದಿ

ಏನೇ ಆಗಲಿ
ಸೊತ್ತು ಹೋಯಿತು
ಸುಮ್ಮನೇಕೆ ದೂರು
ಪೆಟ್ಟಿಗೆ ಹರಿದು ಕೊಡುವರು
ಪಟ್ಟಕ್ಕದನು ಕೂರಿಸಿ
ಅಳುವುದೊಂದೇ ಬಾಕಿ
ಕಳ್ಳ ಸಿಗನಮ್ಮ

ಸೊತ್ತಿಗಾಗಿ
ಸುತ್ತ ಅತ್ತು
ಯಾರೋ ಬಂದು
ಭಜನೆ ಮಾಡಿ
ಬೆಂಕಿಯುಗುಳಿ
ಊರ ಕರೆದರು

ಜಿರಲೆ ಗೂಡು
ಪೆಟ್ಟಿಗೆಯಲ್ಲಿ ಹಿಕ್ಕೆ
ವ್ಯಸನ ನಾಥ
ಸ್ವತ್ತು ಇಲ್ಲ
ಸುಟ್ಟು ಬಿಡಿ
ಕೆಟ್ಟು ಕೊಳೆವ
ಮಲ್ಲಿಗೆ ಯಾತಕ್ಕೆ?

ಬಿಡಲೊಲ್ಲರು
ಮಾಯಾಪೆಟ್ಟಿಗೆ
ಮುಡಿದ ಗುಲಾಬಿ
ಬಾಡಿ ಜಾರಿತು
ಆಗಷ್ಟೆ ಕೊಯ್ದಿದ್ದು
ಮೂಗು ಮುಚ್ಚಿ
ಧರಣಿಗೊಪ್ಪಿಸಿ
ಮನೆಗೆ ಬಂದು
ಒಂದು ದೀಪ ಇಟ್ಟು
ಕಳ್ಳನ ಕರುಣೆಗೆ ಕಾದರು
ಅವರೋ ಅಲ್ಲೇ ಇದ್ದರು
ಮುಂದಿನ ಮನೆಗೆ
ಕನ್ನವಿಡಲು ಹೊಂಚಿದ್ದರು

ಜಿಜ್ಞಾಸೆ...

ಉಪ್ಪಿಗೆರಡರ್ಥ
ಒಂದು ಉಪ್ಪು
ಮತ್ತೊಂದು ರುಚಿ
ಸಪ್ಪೆಗೇಕೊಂದರ್ಥ?
ಸಪ್ಪೆಗೆ ಮನೆಯಿಲ್ಲ
ಅದೊಂದು ವಿರುದ್ಧಾರ್ಥಕ
ಎಂದುಕೊಳ್ಳಲೇ?
ನಾಲಗೆ ಮೇಲೆ
ಕೂರುವುದೇಕೆ?

ಬಿಸಿಲಿನಲ್ಲಿ ನಿಂತು
ಕಪ್ಪು ಕಪ್ಪಾಯಿತು
ಬಿಳಿಯೂ ಕಪ್ಪಾಯಿತು
ಅದಿದಾಗುವಾಗ
ಯಾವುದು ಹೆಚ್ಚು
ಬಿಳಿ ಗೌರವವರ್ಣವೇ?
ಬಿಳಿಜಗತ್ತನ್ನು
ತಿಮಿರ ನುಂಗಿತು
ಚೂರು ಬಿಡದೆ
ನಾಲ್ಕು ಗೋಡೆ
ದಾಟುವ ಶಕ್ತಿ
ಬೆಳಕಿಗೆಲ್ಲಿದೆ?

ಬಾಯಲ್ಲವೇ
ಗದ್ದಲ ಮಾಡಿದ್ದು
ಮೌನಕ್ಕೆ ಸೂರು?
ಅದಿರುವುದಂತು ಸತ್ಯ
ಮನೆಗೆ ಬೆಳಕು
ತಂತಿಯಲ್ಲಿ ಹರಿದ
ವಿದ್ಯುತ್ ನಿಂದ
ಚೀಲದೊಳಗೆ
ಸಿಗದ ಕೋಳಿ
ದಾಹವಾದಾಗ
ನೀರು ಕುಡಿದೆ
ಚೊಂಬಲ್ಲಿತ್ತು ನೀರು
ಅದೇನದು ದಾಹ
ಗಾಯಕ್ಕೊಂದು ಅಳು
ನಗುವಿಗೇನು?
ಆದರೂ ನಕ್ಕಿದ್ದು ಸತ್ಯ

ಜಗವನ್ನರಿತವನ್ಯಾರು?
ಬೆಳಕಿನ ವೇಗಕ್ಕೂ
ಸಿಗದದು
ಸಿಗುವುದೂ ಬೇಡ
ಮುಟ್ಟುವುದೆಲ್ಲ
ಕಾಣುವುದು ಸುಳ್ಳು
ಕಂಡದ್ದು ಮುಟ್ಟದಿದ್ದರೆ
ಮನವೇ ಜಿಜ್ಞಾಸೆ

Saturday 12 November 2011

ಸಮತೋಲನ...

ಕಣ್ಣಿನ ನಡುವೆ
ಮೂಗನ್ನಿಟ್ಟು
ಅದರಡಿ ಬಾಯಿಟ್ಟು
ಕೈ ತುದಿಯಲ್ಲಿ
ಐದು ಬೆರಳು ಮೂಡಿಸಿ
ನಕ್ಕನವನು
ಬೆರಳಿಗನ್ನವ ತೋರಿಸಿ
ಮೂಗಿಗೆ ವಾಸನೆ
ಗ್ರಹಿಸಿ
ಬಾಯಿಗನ್ನವನಿಡುವುದು
ಕಣ್ಣು
ಮೂಗು ಬೆನ್ನಿಗಿದ್ದು
ಬಾಯಿ ಮಂಡಿಗಿರೆ
ಕೈ ಸುತ್ತಿಸಿ ಬಾಯಿಗೆ
ತರಬೇಕಾಗಿತ್ತು
ತುತ್ತು ಅನ್ನಕ್ಕೆ ಅಷ್ಟು ಹೊತ್ತು

ಕೈಎರಡು ಕೂಡಿಸಿ
ಬೊಗಸೆ ಮೂಡಿಸಿದ
ಜಲದಾಹ ಇಂಗಲು
ಅವೆರೆಡು ಕಳೆದು
ದುಡಿದನು ತಿನ್ನಲು
ನಾಸಿಕದಲ್ಲಷ್ಟು ಕೇಶ
ಸ್ವಚ್ಚ ಗಾಳಿಗೆ
ಗೋಡೆ ಧೂಳಿಗೆ
ತೊಗಲಿನ ತುದಿಗೆ
ಚೂಪು ಕೂದಲು
ಕಣ್ರೆಪ್ಪೆ ಕಾವಲುಗಾರ
ಕನಸಿನೂರಿನ ಮಹಾದ್ವಾರ

ಹೆಬ್ಬೆರಳು ಹೆಬ್ಬೆಟ್ಟು
ಕೈಬೆರಳ ನಾಯಕನೊಬ್ಬ
ಮತ್ತೊಬ್ಬ ಕಾಲು
ನಡೆಸುವ ಸೇವಕ
ರಾಶಿ ಹಿಡಿಯಲಾಗದಿವನಿರದಿರೆ
ಕೊಂಚ ಕ್ರಮಿಸಲಾಗದವನಿರದಿರೆ


ಪೀಳಿಗೆಯಿಂದ ಪೀಳಿಗೆಗೆ
ತನ್ನ ಸೃಷ್ಠಿ ಉಳಿಯಬೇಕಲ್ಲ
ಕಾಮವೆಂಬ ಪ್ರೇಮವಿಟ್ಟ
ಕಣ್ಣು ಕಣ್ಣು ನೋಡಲು
ತುಟಿ ತುಟಿ ಕೂಡಲು
ಕಾಮತೃಷೆಯಂಗಗಳ
ಗೊಂಬೆಗಳ ನಡುವೆ ಇಟ್ಟ
ಬ್ರಹ್ಮ ಕೆತ್ತಿದಂಗಗಳ
ತಾಳ್ಮೆಯೊಡಗೂಡಿ ಜೋಡಿಸಿ
ಸಮತೋಲನ ಕೊಟ್ಟ
ಹೌದು ಸಮತೋಲನ ಕೊಟ್ಟ
ಸಮತೋಲನ

ಕುದುರೆ ಹತ್ತಿಸಿ ಹಗ್ಗ ಹಿಡಿಸಿ
ಜೀವಾತ್ಮನನ್ನು ತಂದ
ಪರಮಾತ್ಮನನ್ನು ಮರೆತ
ವೇಗದ ಸವಾರಿ ಜೀವಾತ್ಮನದು
ಅಲ್ಲೆಲ್ಲೋ ಕಾದಿದ್ದು
ಹತ್ತಿರ ಬಂದಂತೆ ಕೊಂದ

ಕೋಟಿ ಕೋಟಿ
ಬೊಂಬೆಗಳೊಳಗೆ ಸಮತೋಲನವನ್ನು
ಕೆತ್ತಿ ಮೆರೆದಿದ್ದ ಮೌನವಾಗಿ

Monday 7 November 2011

ಗೃಹಪ್ರವೇಶ...

ಇಲ್ಲೊಂದು ಗೃಹಪ್ರವೇಶ
ಇಟ್ಟಿಗೆಯಲ್ಲವದು ಚಿನ್ನದ ಗಟ್ಟಿ
ಬಣ್ಣ ತುಂಬಿದ ಗೋಡೆಗೆ
ಹೂಹರಡಿ ಮನೆ ಬೆಳಗಿದರು
ನಾಲ್ಕಂತಸ್ತು ಏರಿತ್ತು
ಊರಿನ ಜನರ ರಕ್ತದಲ್ಲಿ

ಹುಳಿಹೆಂಡ ತಿಳಿಗಾಸಿಗೆ
ಮತವನ್ನೇ ದಾನ ಮಾಡಿ
ಮನೆಬಾಗಿಲಿಗೆ ತೋರಣ
ಬರಲೆಂದು ಕಾದವರು
ಹಾದಿಬೀದಿಯ ಬದಿಯಲ್ಲಿ
ಎಂಜಲು ಹೆಕ್ಕಿ ತಿಂದವರು
ಅಂಬಲಿ ಇಲ್ಲದೆ ಪ್ರತಿದಿನ
ಸಿಂಬಳ ಸುರಿಸಿದವರು
ಎಕ್ಕಡ ಹೊಲೆದು ನೊಂದ
ಮೂರು ಕಾಸಿನವರು
ಕಾಲಕಸವನ್ನು ಹೆಕ್ಕಿ
ಕಕ್ಕಸು ತೊಳೆದವರು
ಕತ್ತಲ ಕೋಣೆಯಲ್ಲಿ
ಬೆತ್ತಲೆಯಾಗಿ ಅತ್ತವರು
ಬಾಗಿಲ ಬಳಿ ಕಾದು
ನಾಯಿಯಾದವರು
ಮುಷ್ಟಿ ಕೂಳಿಗಾಗಿ
ಅಷ್ಟುದಿನವ ಕಳೆದು
ಸದ್ದಿಲ್ಲದೇ ಸತ್ತವರು
ಮಾನ ಮುಚ್ಚಿಕೊಳ್ಳಲು
ಗೇಣುದ್ದ ಬಟ್ಟೆ ಇಲ್ಲದೇ
ದಾಸರಂತೆ ವೇಷ ತೊಟ್ಟವರು
ಹರ್ಷದ ಒಂದು ತುತ್ತಿಗೆ
ವರ್ಷವೆಲ್ಲ ಕಣ್ಣು ಬಿಟ್ಟವರು
ಜಡಿಮಳೆಗೆ ಚರಂಡಿ
ಕೊಚ್ಚಿದ ಕೆಸರು ನೀರು
ರಸ್ತೆಯ ನೂರು ಗಾಯ
ರೈತನ ಮುರುಟಿದ ಬೆಳೆ
ಮನೆಮನೆಯ ಕತ್ತಲು
ಬಣಗುಟ್ಟ ಕಛೇರಿಗಳು
ಚಕ್ಕೆಯುದುರಿ ಬೆತ್ತಲೆಯಾಗಿ
ಅರ್ಧ ನಿಂತ ಮರಗಳು
ನೂರು ಮಾತನಾಡಿದವು
ಕಣ್ಣೀರ ಕೋಡಿಯಲ್ಲಿ
ದೆವ್ವವಾಗಿ ಸಂಚರಿಸುತ್ತ
ಆ ಮನೆಯ ಎಲುಬುಗಳಲ್ಲಿ

ಇವನೊಬ್ಬ ಜಿಗಣೆ
ಎಲ್ಲರ ರಕ್ತ ಹೀರಿ
ಹೊಟ್ಟೆ ಉಬ್ಬಿಸಿ ನಿಂತಿದ್ದ
ಕೇಳುವವರು ಕಾಲಡಿಯಲ್ಲಿ
ಜನರಿಂದ ಗೆದ್ದು
ಅವರನ್ನೇ ಒದ್ದು
ಎಲ್ಲವನ್ನೂ ನುಂಗಿದ್ದ...
ಮತ್ತೆ ಗೆದ್ದು ಬೀಗಿದ್ದ!!!