ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Thursday 29 November 2012

ಮುಹೂರ್ತ...

‘ನಕ್ಕಹಾಗೆ ನಟಿಸಬೇಡ, ನಕ್ಕುಬಿಡು ಸುಮ್ಮನೆ
ಬೆಳಕಾಗಲಿ ತಂಪಾಗಲಿ ನಿನ್ನೊಲುಮೆ ಅರಮನೆ

ಈ ಹಾಡು ಕೇಳುತ್ತಿದ್ದಂತೆ ಆತನಿಗೆ ಮನಸ್ಸಿನಲ್ಲಿ ಒಂದು ರೀತಿ ನೋವು ಮತ್ತು ಖುಷಿಯಾಯಿತು.
ಮಧುರ ಯಾತನೆ ಎಂಬಂತೆ.

ಆತ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗಿ, ಆಕೆ ಇನ್ನೂ ಓದುತ್ತಿದ್ದಳು.
ಇಬ್ಬರೂ ಪ್ರೇಮಿಸಿದರು, ಈತನ ಗುಣ ಪ್ರತಿಭೆ ಆಕೆಯನ್ನು ಆಕರ್ಷಿಸಿತು.
ಆಕೆಯ ಒಳ್ಳೆಯತನ ಸೌಂದರ್ಯಕ್ಕೆ ಈತ ಸೋತ. ಪ್ರಪಂಚವನ್ನೇ ಗೆಲ್ಲಬಲ್ಲಂತ ಪ್ರತಿಭಾವಂತ.
ಪ್ರಾರಂಭದಲ್ಲಿ ಒಬ್ಬರಿಗೊಬ್ಬರು ಹೂವು ಮಕರಂದದಂತೆ ಅನ್ಯೋನ್ಯವಾಗಿದ್ದರು.
ಮುಂದುವರೆದಂತೆ ಒತ್ತಡ ಹೆಚ್ಚಾಯಿತು. ಪ್ರೀತಿ ಭಾರವಾಯಿತು.
ಒಳ್ಳೆಯ ಉದ್ಯೋಗದಲ್ಲಿದ್ದ ಆತನಿಗೆ ಸಂಬಂಧಿಕರಿಂದ ಮದುವೆಯಾಗಲು ಒತ್ತಡ ಹೆಚ್ಚಾಯಿತು.
ಒತ್ತಡಕ್ಕೆ ಸಿಲುಕಿಕೊಂಡ ಆತ ದಿಕ್ಕು ತೋಚದಾದ.
ಎಲ್ಲಾ ವಿಚಾರವನ್ನು ಮನೆಗೆ ಮುಟ್ಟಿಸಿ ಒಪ್ಪಿಗೆ ಪಡೆದುಕೊಳ್ಳಲು ವಿಫಲಳಾದ ಆಕೆಯೂ ಗೊಂದಲಕ್ಕೆ ಬಿದ್ದಳು.
ಇಬ್ಬರ ನಡುವೆ ಪ್ರೀತಿಯೆಂಬುದು ಪವಿತ್ರವಾಗಿದ್ದರೂ ಈ ಎಲ್ಲಾ ಗೊಂದಲದಿಂದ ಆಕೆಗೆ ತನ್ನ ಓದು ಸರಾಗಗೊಳಿಸಿಕೊಳ್ಳುವುದು ಕಷ್ಟವಾಯಿತು.
ಆತ ಗೊಂದಲಕ್ಕೊಳಗಾದವನೇ ತನ್ನ ಕೆಲಸ ಬಿಟ್ಟುಬಿಟ್ಟ.
ಇದ್ದ ಅಲ್ಪ ಸ್ವಲ್ಪ ದುಡ್ಡನ್ನೂ ಕಳೆದುಕೊಂಡ. ತನ್ನ ಪ್ರತಿಭೆ ಕುಂಟಿತಗೊಂಡಿತೇ ಹೊರತು, ಬೆಳೆಸಿಕೊಳ್ಳಲಾಗಲಿಲ್ಲ.
ಕಣ್ಣಮುಂದೆಯೇ ಎಲ್ಲವೂ ಕೈಜಾರಿ ಹೋಯಿತು.

ಆಕೆಯೂ ಕಷ್ಟಕ್ಕೆ ಬಿದ್ದಳು, ಪ್ರತಿಯೊಂದಕ್ಕೂ ಆತನನ್ನೇ ನೆಚ್ಚಿಕೊಳ್ಳುತ್ತಿದ್ದವಳಿಗೆ ಈಗ ಆತ ತನ್ನಿಂದ ದೂರವಾಗುತ್ತಿದ್ದಾನೆ ಎಂದುಕೊಂಡಳು.
ಮತ್ತೂ ಗೊಂದಲಕ್ಕೆ ಬಿದ್ದಳು. ಮನೆಯವರ ಕಣ್ಗಾವಲು ಹೆಚ್ಚಾಯಿತು.
ಒಂದು ದಿನ ಇದೇ ವಿಚಾರವಾಗಿ ಇಬ್ಬರಿಗೂ ಮಾತಿಗೆ ಮಾತು ನಡೆಯಿತು.
‘ನಾನು ನಿನ್ನ ಸಹವಾಸದಿಂದ ಸಂಪೂರ್ಣವಾಗಿ ಹಾಳಾದೆ, ನಮ್ಮ ಕುಟುಂಬ ನನ್ನನ್ನೇ ನಂಬಿ ಕೂತಿದೆ’ ಎಂದ ಆತ.
‘ನೀನೊಬ್ಬ ನನ್ನ ಜೀವನದಲ್ಲಿ ಬರದಿದ್ದರೆ ನಾನು ಎಷ್ಟು ಸುಖವಾಗಿರುತ್ತಿದ್ದೆ, ಓದಲೂ ಆಗದೆ, ಬದುಕಲೂ ಆಗದೆ ಸಾಯುತ್ತಿದ್ದೇನೆ, ಒಬ್ಬಳೇ ಮಗಳಾದ ನನ್ನನ್ನೂ ನನ್ನ ತಂದೆ ತಾಯಿ ಕಾದು ಕುಳಿತಿದ್ದಾರೆ’ ಎಂದಳಾಕೆ.
‘ಇಷ್ಟೆಲ್ಲಾ ಅಪವಾದ ಕೇಳಿಕೊಂಡು ನಿನ್ನೊಡನೆ ನಾನಿರಲಾರೆ, ನಿಮ್ಮ ತಂದೆ ತಾಯಿ ನನಗಿಂತಲೂ ಒಳ್ಳೆಯ ಹುಡುಗನನ್ನು ನಿನಗೆ ಹುಡುಕಬಲ್ಲರು, ಅವನನ್ನೇ ಮದುವೆಯಾಗಿ ಸುಖವಾಗಿರು' ಎಂದು ಆತ ರೇಗಿಕೊಂಡ.
‘ನಿನಗೇನು ಕಡಿಮೆ ಹೇಳು, ನಿನ್ನ ಸಂಬಂಧಿಕರೆಲ್ಲಾ ನಿನಗೆ ಹೆಣ್ಣು ನೀಡಿ ಪಾದ ತೊಳೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ, ನನಗಿಂತ ಒಳ್ಳೆಯ ಹುಡುಗಿ ಸಿಗಬಲ್ಲಳು, ಮದುವೆಯಾಗಿ ಸುಖದಿಂದಿರು’ ಎಂದವಳೇ ಅಲ್ಲಿಂದ ಹೊರಟುಬಿಟ್ಟಳು.
ಇಬ್ಬರೂ ತಮ್ಮ ತಮ್ಮ ಮೊಬೈಲ್ ಸಂಖ್ಯೆ ಬದಲಿಸಿಕೊಂಡರು.
ಆತನಿಗೆ ಮದುವೆಯಾಯಿತು ಎಂಬ ಸುದ್ದಿಯನ್ನು ಆತನ ಗೆಳೆಯನಿಂದ ಕೇಳಲ್ಪಟ್ಟಳು. ಆಕೆಗೂ ಮದುವೆಯಾಯಿತು ಎಂಬ ಸುದ್ದಿಯನ್ನು ಆಕೆಯ ಗೆಳತಿ ಆತನಿಗಾಗಿ ಹೊತ್ತು ತಂದಿದ್ದಳು.

ಆತ ಛಲದಿಂದ ಬದುಕಿದ, ವಿಶ್ವಮಟ್ಟದ ಹೆಸರು ಮಾಡಿದ, ತನ್ನಭಿಲಾಶೆ ಈಡೇರಿಸಿಕೊಂಡ.
ಆಕೆಯೂ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗಕ್ಕೆ ಸೇರಿಕೊಂಡವಳೇ ತಂದೆ ತಾಯಿಯನ್ನು ಅಕ್ಕರೆಯಿಂದ ಸಾಕಿಕೊಂಡಳು.
ಹೀಗೆ, ಒಮ್ಮೆ ಆತ ಆಕೆಯ ಹೊಸ ನಂಬರ್ ಪಡೆದುಕೊಂಡವನೇ ಫೋನಾಯಿಸಿದ.
ಆಕೆ ತುಂಬಾ ಖುಷಿಯಿಂದಲೇ ಮಾತನಾಡಿದಳು.
ಎಂಟು ಮತ್ತು ಒಂಬತ್ತು ವರ್ಷದ ಮಕ್ಕಳನ್ನು ಪರಿಚಯಿಸಿ ಮಾತನಾಡಿಸಿ, ತನ್ನ ಕಂದಮ್ಮಗಳು ಎಂದಳು.
ನನ್ನ ರಕ್ತವನ್ನು ಹಂಚಿಕೊಂಡು ಹುಟ್ಟಿ ಬರಬೇಕಾಗಿದ್ದ ಮಕ್ಕಳ ಮಾತು ಕೇಳಿ ಆತ ಮರುಗಿದ, ಆತನೂ ಒಂದೆರಡು ಮಕ್ಕಳನ್ನು ಆಕೆಗೆ ಮಾತನಾಡಿಸಿ ನಿನ್ನ ಹೊಟ್ಟೆಯಲ್ಲಿ ಹುಟ್ಟಬೇಕಾಗಿತ್ತು ಬದಲಾಗಿ ಇವಳ ಹೊಟ್ಟೆಯಲ್ಲಿ ಹುಟ್ಟಿವೆ ಎಂದ.
ತಾನೇ ಹೆರಬೇಕಾಗಿದ್ದ ಮಕ್ಕಳೊಡನೆ ಮಾತನಾಡಿದ ಆಕೆ ತನಗರಿಯದಂತೆ ಕಣ್ಣೀರು ಸುರಿಸಿದಳು.

‘ನೀನು ಅಂದುಕೊಂಡಂತೆ ಸಾಧಿಸಿ ವಿಶ್ವಮಟ್ಟಕ್ಕೆ ಬೆಳೆದದ್ದು ನನಗೆ ಖುಷಿಯಾಯಿತು, ನನ್ನೊಡನೆ ಕುಳಿತಿದ್ದರೆ ಬರಿ ಕಷ್ಟ ಗೊಂದಲದಲ್ಲಿಯೇ ಸಾಯಬೇಕಾಗಿರುತ್ತಿತ್ತು’ ಎಂದಳು ಆಕೆ.
‘ಇರಲಿ ಬಿಡು, ನೀನೂ ಅಷ್ಟೆ, ಓದಿ ಬೆಳೆದು ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ಹೆತ್ತವರನ್ನು ತಣ್ಣಗೆ ಇಟ್ಟಿದ್ದೀಯ, ನನ್ನ ಜೊತೆ ಒಡನಾಟ ಮುಂದುವರೆಸಿದ್ದರೆ ಇವೆಲ್ಲಾ ಸಾಧ್ಯವಾಗುತ್ತಿರಲಿಲ್ಲ’ ಎಂದ ಆತ.
‘ಒಮ್ಮೆ ನಿನ್ನನ್ನು ನೋಡಬೇಕಲ್ಲ’ ಎಂದಳಾಕೆ.
‘ನಾನೂ ಕೂಡ ನಿನ್ನನ್ನು ನೋಡಬೇಕು’ ಎಂದನಾತ.
‘ನಿನ್ನ ಹೆಂಡತಿ ಮಕ್ಕಳೊಂದಿಗೆ ಬಾ’ ಎಂದಳು.
‘ನಿನ್ನ ಗಂಡ ಮಕ್ಕಳನ್ನು ಕರೆದುಕೊಂಡು ಬಂದರೆ ಮಾತ್ರ’ ಎಂದನಾತ.

ನಿಗದಿ ಪಡಿಸಿಕೊಂಡಿದ್ದ ಸ್ಥಳಕ್ಕೆ ಬಂದರು. ಆಕೆಯನ್ನು ನೋಡಿದ್ದೇ ಆತ ಗಾಬರಿಯಾದ.
ಕುತ್ತಿಗೆಯಲ್ಲಿ ತಾಳಿ, ಕಾಲಿನ ಬೆರಳಿನಲ್ಲಿ ಉಂಗುರವಿರಲಿಲ್ಲ.
ಒಬ್ಬಳೇ ಬಂದಿದ್ದಳು.
‘ನಿನ್ನ ಗಂಡ ಮಕ್ಕಳೆಲ್ಲಿ?’ ಎಂದು ಕೇಳಿದನಾತ.
‘ನಾನು ಮದುವೆ ಮಾಡಿಕೊಂಡಿಲ್ಲ' ಎಂದಳಾಕೆ
'ನೀನೇಕೆ ಒಂಟಿಯಾಗಿ ಬಂದಿರುವುದು' ಗಾಬರಿಯಿಂದ ಕೇಳಿದಳಾಕೆ.
‘ನಾನೂ ಮದುವೆಯಾಗಿಲ್ಲ’ ಎಂದನಾತ.
ಆಕೆಯ ಕಣ್ಣಿನಲ್ಲಿ ನೀರು ಜಿನುಗಿತು. ಆತನನ್ನು ಗಟ್ಟಿಯಾಗಿ ತಬ್ಬಿಕೊಂಡಳು.
ಕೂಡಲೇ ಆತ ಅಮ್ಮನಿಗೆ ಫೋನಾಯಿಸಿ ‘ಅಮ್ಮ, ಇನ್ನುಮುಂದೆ ಕೊರಗಬೇಡ, ಮದುವೆಯಾಗುತ್ತಿದ್ದೇನೆ’ ಎಂದ.

ಇಬ್ಬರೂ ಸೋತು ಗೆದ್ದು, ಈಗ ಗೆದ್ದು ಸೋತರು..!

Saturday 10 November 2012

ದೇಹ ಸಿರಿ..

ನಾಳೆ ರಜೆ ಕೊಡಲಾಗುವುದಿಲ್ಲವೆಂದು ಚೀರಿಕೊಂಡ ಬಾಸಿನ ಮಾತನ್ನೂ ಧಿಕ್ಕರಿಸಿ, ಮರೆತು, ಖುಷಿಯಿಂದ ಓಡೋಡಿ ಮನೆಗೆ ಬಂದೆ. ಹೆಂಡತಿ ತುಸು ನಾಚಿಕೊಂಡಳು. ಬಾಣಂತಿ ಕೊಠಡಿಗೆ ಕಾಲಿಡುವಷ್ಟರಲ್ಲಿಯೇ 'ಕಾಲು ತೊಳೆಯದೇ ಒಳಗೆ ಬರಬೇಡಿ ಬಾವ, ಅದೆಷ್ಟು ಭೂತ ಚೇಷ್ಟೆಗಳು ಆ ಪಾದಕ್ಕಂಟಿರುವವೋ?' ಎಂದಳು ನಾದಿನಿ.
'ಅದೇನು ಜನಗಳೋ, ನಿಮ್ಮ ಮನೆ ಭೂತಾಯಿಯ ಮೇಲೇ ಇಲ್ಲ, ಆಕಾಶದಲ್ಲಿ ಕಿರುಗುಟ್ಟುತ್ತಿದ್ದೀರಿ, ನೀನು, ನಿಮ್ಮಕ್ಕ ಇರುವಾಗ ಈ ಮನೆಗೆ ದೆವ್ವ ಬರುವುದುಂಟೆ? ಅದೇನು ಕಟ್ಟುನಿಟ್ಟೋ' ಎಂದೆ.
'ರೀ...' ಎಂದಳು ಅವಳು
'ಗೊತ್ತಾಯ್ತು ಕಣೆ...' ಎಂದವನೇ ಕಾಲು ತೊಳೆದುಕೊಂಡೆ. ನಾದಿನಿ ಒಳಗೊಳಗೆ ನಕ್ಕಳು.

ಒಳಗೆ ಓಡೋಡಿ ಬಂದವನೇ ನನ್ನ ಮಗುವನ್ನು ನೋಡಿ ಒಮ್ಮೆಲೇ ಪುಳಕಗೊಂಡೆ. ಮೈ ಕೈ ಸವರಿದೆ. ಒಮ್ಮೆಲೆ ನನ್ನೊಳಗೆ ನನ್ನದೇ ಜೀವ ತುಂಬಿಕೊಂಡು, ತವಕಗೊಂಡು, ಅದರ ಸ್ಪರ್ಶಕ್ಕೆ ಪುಳಕಿತಗೊಳ್ಳುವುದರೊಂದಿಗೆ ಬಾಂಧವ್ಯ ಭಾವ ಲೋಕದಲ್ಲೊಮ್ಮೆ ಅನುರಕ್ತಗೊಂಡು ತೇಲಾಡಿದೆ.

ನನ್ನಾಕೆ ಟೀ ಮಾಡಿ ತರಲು ಹೊರ ಹೋದಳು. ಪಿಣಿ ಪಿಣಿ ಕಣ್ಣು ಬಿಟ್ಟ ಕಂದಮ್ಮನನ್ನು ನೋಡಿದೆ. ಇದೆಲ್ಲಿತ್ತಪ್ಪ ಇಷ್ಟು ದಿನ ಎಂದುಕೊಂಡೆ? ಇಂದು ಕಂಡು ನನ್ನ ಮನಸ್ಸನ್ನರಳಿಸಿದೆ ಎಂದು ಕೆನ್ನೆಗೆ ತೃಪ್ತಿಯಾಗುವವರೆವಿಗೂ ಮುತ್ತಿಕ್ಕಿದೆ. ಮೂಗು ಮಾತ್ರ ಸತ್ತುಹೋದ ನಮ್ಮಪ್ಪನಂತೇ ಇದೆ. ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿತು. ಪ್ರಯಾಣ ಮಾಡಿಬಂದು ಸುಸ್ತಾಗಿರುವವನು ನಾನಲ್ಲವೇ? ನಾನತ್ತರೆ ಅದಕ್ಕೊಂದು ಕಾರಣವಿದೆ. ಈ ಪಾಪುವೇಕೆ ಈ ರೀತಿ ಚೀರುತ್ತಿದೆ, ಇದು ಇಲ್ಲಿಗೆ ಸರಾಗವಾಗಿ ಬಂತೇ, ಇಲ್ಲ ಸೋತು ಸೋತು ಗೆದ್ದು ಬಂತೆ ಎಂದುಕೊಳ್ಳುವಷ್ಟರಲ್ಲಿ, ಮುಂದೆ ಬಿದ್ದಿದ್ದ ಪುಸ್ತಕದಲ್ಲಿ ಈ ಸಾಲುಗಳು ಕಾಣುತ್ತಿದ್ದವು

ಕತ್ತಲ ಕೋಟೆಯಲ್ಲಿ ಯುದ್ಧ
ಕೋಟಿ ಕೋಟಿ ಜನ
ಮುತ್ತಲು
ಒಬ್ಬ ಗೆದ್ದು ಬಂದ ಧೀರ
ಸುತ್ತ ಕತ್ತಲು
ಅಲ್ಲೊಬ್ಬಳಿದ್ದಳು ನೀರೆ
ಕಾದು ಕೂಡಲು
ಅಂಡಾಣು ವೀರ್ಯಾಣು
ತಬ್ಬಲು
ಹೆತ್ತವರು ಮೈ ಹಬ್ಬಲು

ಅದೊಂದು ದ್ರಾಕ್ಷಿ ಮುದ್ದೆ
ಬೆಳೆದು ಚದುರೆ ನಾನಿದ್ದೆ
ಹೃದಯ ಕಪಾಟು
ತರೆದು
ನೆತ್ತರ ಸೇದದರೊಳಗೆ
ನಗು ಅಳು ಸುರಿದು
ಏನೋ ನಿಂತಿದೆ ನೋಡು
ಗೌಣವಲ್ಲ ಹಿಡಿ ಅದರ ಜಾಡು

ಓಹೋ, ಈತ ಯುದ್ಧ ಮಾಡಿ ಗೆದ್ದು ಬಂದಿರುವ ಧೀರನೇ ಸರಿ. ನಾನು, ಹೆಂಡತಿ ಮೈ ಮರೆತಿದ್ದಾಗ ಯಾರೋ ಸ್ವಯಂವರ ಏರ್ಪಡಿಸಿದ್ದಾರೆ.
ಅಷ್ಟಕ್ಕೆ, ಮಗು ಮೃದುವಾಗಿ ಒದೆಯಿತು. ಒದೆಸಿಕೊಳ್ಳುವುದರಲ್ಲೂ ಇದೆಂಥ ಸುಖವಿದೆ ಎಂದು ಖುಷಿಯಾಯಿತು. ನೋವಾಯಿತೇನೋ ಎಂದು ಅದರ ಮೃದು ಪಾದವನ್ನು ಅಷ್ಟೇ ಮೃದುವಾಗಿ ಒತ್ತಿದೆ. ಕೈಗೆ ಹೆಬ್ಬೆರಳು ಸಿಕ್ಕಿತು. ಆಹಾ! ಈ ಹೆಬ್ಬೆರಳು ನೋಡಿದರೆ ಸ್ವಚ್ಚ ಮತ್ತು ನುಣುಪು ಗೋಡೆಗೆ ಬಡಿದ ಬೆಣೆಯಂತಿದೆ, ಇದೇನಿದು ಎಕ್ಸ್ಟ್ರಾ ಫಿಟ್ಟಿಂಗು? ನನ್ನ ಹೆಬ್ಬೆಟ್ಟು ಆ ಹೆಬ್ಬೆರಳು ಹಿಡಿದುಕೊಂಡಿದ್ದನ್ನು ಮರೆತು ಯೋಚಿಸಿದಾಗ

ಜಗದಲ್ಲಿ ನೀ ಜಂಗಮ
ಚಲಿಸು ಚಲಿಸು
ನಿಲ್ಲದೆಲ್ಲವ ಆವರಿಸು
ಚಿಂತೆ ಬೇಡ
ಮುಂದಿನ ದಾರಿ
ನೋಡ
ನಿನಗೇಕೀ
ದೇಹದ ತೂಕ
ಹೊರುವುದು
ಹೆಬ್ಬೆರಳ ಕಾಯಕ

ಹೆಬ್ಬೆರಳಿಗೆ ದೇಹ ಕೆತ್ತನೆಯೋ
ದೇಹಕ್ಕೆ ಹಬ್ಬೆರಳೋ
ಯೋಚಿಸಿ ಒಮ್ಮೆ ನಕ್ಕುಬಿಡು

ಕಳೆದ ತೇದಿಯಲ್ಲಿ ಹೆಬ್ಬೆರಳ ಮೇಲೆ ಲಾರಿ ಹರಿದು, ಕೊನೆಗೆ ಹೆಬ್ಬೆರಳು ತೆಗೆಸಿಕೊಂಡು, ನಡೆದರೆ ಕೆಳಗೆ ಬೀಳುವ ತಮ್ಮನ ನೆನಪಾಗಿ ಬೇಸರಗೊಂಡೆ. ಹೆಬ್ಬೆರಳೇ ನಿನೆಲ್ಲರಲ್ಲೂ ಇರಬೇಕೆಂದು ಕೈ ಮುಗಿದು ಬೇಡಿಕೊಂಡೆ. ಅದಿರಲಿ, ಹೆಬ್ಬೆರಳ ಜೊತೆಗೆ ಇದೇನಿದು ನಾಲ್ಕು ಸಣ್ಣ ಬೆರಳುಗಳು. ಛೆ! ಇವು ಬೇಡವಾಗಿತ್ತಲ್ಲವೇ? ಬೇಡವೆಂದರೆ ಈಗೇನು ಕತ್ತರಿಸಿದರೆ ಈ ಕಂದಮ್ಮ ಸುಮ್ಮನಿರುವುದೇ? ಹೊತ್ತು ತಂದಿದೆ, ಹೊತ್ತುಕೊಂಡು ಹೋಗಲಿ ಎಂದುಕೊಳ್ಳುವಷ್ಟರಲ್ಲಿ ಮನೆಯ ಹೊರಗೆ ಏನೋ 'ಧಡಾರ್' ಎಂಬ ಶಬ್ದ ಕೇಳಿಸಿತು. ಗಾಬರಿಗೊಂಡು 'ಏನಾಯಿತೂ' ಎಂದು ಚೀರಿ ಬಂದು ನೋಡಿದರೆ, ಮನೆ ಮುಂದಿನ ಚಪ್ಪರ ಗಾಳಿಗೆ ನಿಲ್ಲದೆ ಉದುರಿ ಬಿದ್ದಿದೆ.
'ಅಪ್ಪನಿಗೆ ಹೇಳಿದ್ದೆ, ಇನ್ನೊಂದೆರಡು ಕಂಬವಾದರೂ ಸಿಕ್ಕಿಸು ಎಂದು' ಎಂದು ಹೆಂಡತಿ ಗೊಣಗಿಕೊಂಡಳು. ಏನೋ ಹೊಳೆದಂತಾಗಿ, ಹೆಂಡತಿಗೊಂದು ಕವಿತೆ ಕಟ್ಟಿ ಮಗುವಿನ ಬೆರಳಿಗರ್ಪಿಸಿದೆ.

ಚಪ್ಪರ ಕಟ್ಟಿದ ಅಪ್ಪ
ಕಂಬವೊಂದೆ
ಬೆಪ್ಪ
ಮತ್ತೆರಡೂರುಗೋಲ
ನೆಟ್ಟಿದ್ದರೆ
ತಡೆಯಬಹುದಿತ್ತೀ ತಪ್ಪ

ಹೆಬ್ಬೆರಳ ನೋವ
ನುಂಗಲೆಂದು ಸಾವ
ಕಿರುಬೆರಳ
ಜೊತೆಗಾರರು
ದಾರಿಯಲ್ಲಿ ಕಾಲಿಗಂಬು
ಸಿಗದಿರೆ ಸಾಕು
ಬೆಳೆದುಗುರದರ ಚಾಕು

ಮಗು ನಗುತ್ತಿತ್ತು. ನಾನೂ ಮಗುವನ್ನು ನೋಡಿ ನಗುವಾಗ ಅದರ ಕಣ್ಣಲ್ಲಿ ನನ್ನ ಬಿಂಬವೇ ಕಾಣುತ್ತಿತ್ತು. ನಾನು ಮಗುವಾಗಿದ್ದಾಗ ಅಪ್ಪನೂ ಹೀಗೆಯೇ ಭಾವಿಸಿರಬಹುದು. ನಾನು ಹೇಗೆ ಮೂಗು ಅವನಂತೆಯೇ ಇದೆ ಎಂದುಕೊಂಡನೋ ಹಾಗೆ ಅವನೂ ನನ್ನ ಮೂಗನ್ನು ನೋಡಿ ಅಜ್ಜನನ್ನು ನೆನಪಿಸಿಕೊಂಡಿರಬಹುದು. 'ಸತ್ತುಹೋದರವರು' ಎನ್ನುವುದೇ ತಪ್ಪೇನೋ? ನಮಗರಿಯದಂತೆ, ಆದರೆ ಕಾಣುವಂತೆ ಈ ರೀತಿಯ ಕುರುಹುಗಳನ್ನು ಬಿಟ್ಟುಹೋಗುವರಲ್ಲವೇ? ಮುಂದಿನ ಬಾಗಿಲಲ್ಲಿ ಮರೆಯಾಗಿ ಹಿತ್ತಲ ಬಾಗಿಲಲ್ಲಿ ಬರುವರಲಲ್ಲವೇ ಎಂದೆನಿಸಿತು.

ಓಹೋ...! ಮಗುವಿನ ಬಾಯಿಯಲ್ಲಿ ಹಲ್ಲೇ ಇಲ್ಲವಲ್ಲ. ನಂತರ ಬೆಳೆಯುವುದಾದರೂ ಇತ್ತು, ಜೊತೆಗೆ ಜೋಡಿಸಿ ಕಳುಹಿಸುವುದಲ್ಲವೇ ಎಂದುಕೊಂಡೆ. 'ಮಗುವಿಗೆ ಹಾಲು ಕುಡಿಸಿದ್ದಿಯೇನೆ?' ಮತ್ತೆ ನಾದಿನಿ ಕೂಗಿಕೊಂಡಳು. 'ಈಗ ತಿಳಿಯಿತು ನೋಡಿ, ಎದೆ ಚೀಪುವ ಪೋರ, ಹಲ್ಲಿದ್ದರೆ ಕಚ್ಚೇ ಬಿಡುತ್ತಾನೆ. ಈ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆಯೇ ಈತ ಇಲ್ಲಿಗೆ ಬಂದಿರಬಹುದು. ಹಾಲ್ದುಟಿಯ ನಗು ನನ್ನಲ್ಲಿ ಖುಷಿ ಉಕ್ಕಿಸಿತು. ಏನೂ ಅರಿಯದ ಈ ಕಂದಮ್ಮಗಳು, ಇನ್ನು ಕೆಲವೇ ದಿನಗಳಲ್ಲಿ ಎಲ್ಲವನ್ನೂ ತಿಳಿದುಕೊಳ್ಳುತ್ತವೆ. ವಿಶಾಲ ಚಿಂತನೆಯ ಸೊಗಡಿನಲ್ಲೇ ಬೆಳೆಯುತ್ತಿದ್ದರೂ ಅಲ್ಪತ್ವಕ್ಕೆ ಹೊಂದಿಕೊಳ್ಳುತ್ತವೆ. ಮನಸ್ಸಿನಲ್ಲಿ ರಾಡಿಯೆದ್ದು ಅರಳಿದ ಜೀವ ಮುರುಟಿಕೊಳ್ಳುತ್ತವೆ ಎಂದುಕೊಂಡು ಆತನೆಡೆಗೆ ತಿರುಗುವಷ್ಟರಲ್ಲಿಯೇ ತನ್ನ ಬೊಚ್ಚುಬಾಯಿ ಬಿಟ್ಟ.

ಮತ್ತೆ ಆತನ ಬಾಯಿ ನೋಡಿದೆ. ಕನ್ನಡಿಯಲ್ಲಿ ನನ್ನ ಮುಖವನ್ನೊಮ್ಮೆ ದುರುಗುಟ್ಟಿಕೊಂಡು ನೋಡುತ್ತ ಹಲ್ಲು ಕಿರಿದೆ. ಬೆನ್ನ ಹಿಂದೆ ಒಂದು ಹಳೆಯ ಮಿಕ್ಸಿ ಕಾಣುತ್ತಿತ್ತು.

ನಾಲಗೆ ರುಚಿ ತೀಟೆಗೆ
ಆಹಾರದ ತುಂಡು
ಜಗಿದ ಹಲ್ಲು
ಕಿಣ್ವ ಸುರಿಸಿದ ಜೊಲ್ಲು
ಜರಿದ ಜಠರ
ಪುಡಿಗೊಂಡ ಅನ್ನ ಸಾಕ್ಷಿ
ಇದಲ್ಲವೇ ಮಿಕ್ಸಿ!

ನೋಡಿ, ಬಾಯಿ ನೋಡಿಕೊಂಡೆ ಮಿಕ್ಸಿ ಕಂಡು ಹಿಡಿದಿದ್ದು. 'ನನ್ನ ಮಗು ನನ್ನ ಪ್ರಾಣ'ವೆಂದೆನಿಸಿತು. ತಬ್ಬಿಕೊಂಡೆ. ಒದ್ದಾಡಿ, ಕೈಕಾಲು ಅದುರಿಸತೊಡಗಿದ. ಮತ್ತೆ ಮಲಗಿಸಿಬಿಟ್ಟೆ ನನ್ನವಳು ಕೂಗಿಕೊಳ್ಳುತ್ತಾಳೆಂಬ ಭ್ರಮೆಯಿಂದ. ಒಹೋ, ನಾನು ಮುಟ್ಟಿದಾಕ್ಷಣ ಒದ್ದಾಡಿಕೊಂಡಿತು, ಅಂದರೆ.... (ಮುಂದುವರೆಸೋಣ... :) )