ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Friday 27 April 2012

ಅಮ್ಮ...


ಜೇಬಿಗಿಳಿಸಿಕೊಂಡಿದ್ದೇನೆ ಇರುಳ ತೆರೆಬೆಳಕನ್ನು
ಪರಿ ಪರಿಯಾಗಿ ಕಾಡುವ
ದಿಗಂತದಾಚೆಯ ನಕ್ಷತ್ರ ಸುರುಳಿಯ
ಮಿಂಚಿನ ಸಂಚನ್ನು ಮುರಿದಿಟ್ಟುಕೊಂಡಿದ್ದೇನೆ
ಅಮ್ಮ, ನಿನ್ನನ್ನು ಧ್ಯಾನಿಸಿ
ಕಾದಿದ್ದೇನೆ ಪ್ರೇಮ ಮಲ್ಲಿಗೆ ಪೋಣಿಸಿ
ಬಾ ಬೇಗ ಮಗನುಡುಗೊರೆಗೆ ಬೆಳಕ ಹರಡು

ನೀ ಅಂದು ಯಮಕಿಂಕರಶಯನದಲ್ಲಿ
ಮರಣ ವಿಮಾನ ನಿಷ್ಕರುಣೆಯಲ್ಲಿ
ಅಳುವ ನಭಗಳ ನಡುವೆ ತೇಲಿದಾಗ
ಅನಾಥ ಶಿಶು ಅನಾಥವಾಗೇ ಉಳಿದಾತ್ಮ ಹೊತ್ತು
ಕಣ್ಬಿಟ್ಟಿದ್ದೆ ನಾ, ಮನ ಬಿಚ್ಚಿರಲಿಲ್ಲ
ಇಂದು ಮನ ಗರಿಬಿಚ್ಚಿ ಸ್ವಚ್ಚಂದ ಹಾರಾಟಕ್ಕೆ
ಧ್ಯಾನಿಸಿದ್ದೇನೆ ಚೆಲ್ಲಿ ಬಣ್ಣಗಳ ಕಣ್ಣರಳಿಸಿ
ಆಕಾಶ ಮಡಚಿ ಭೂಮಿಯೊತ್ತು ನಿಂತಿದ್ಧೇನೆ

ನೀ ಬಸಿದು ಕೊಟ್ಟ ಹನಿ ಹನಿ ರಕ್ತ
ರಂಧ್ರ ಮೂಡಿಸಿ ಮೂಳೆ ಸಿಕ್ಕಿಸಿ ಒಣಹಾಕಿದ
ಬಸಿರೊಳು ಮೊಳೆಸಿ ಬೆಳೆಸಿದ ಮಾಂಸ ಮುದ್ದೆ
ಒಡೆದುಕೊಳ್ಳುವ ಖಾಲಿ ಉಸಿರ ಚೀಲದ ಕೆಳಗೆ
ಸುಮ್ಮನೆ ಬಡಿದುಕೊಂಡ ಹೃದಯಯಂತ್ರ
ನಿನ್ನನ್ನು ಕಾಣದೇ ಲೋಕ ಕಂಡ ವ್ಯರ್ಥ ಕಂಗಳು
ತೂರಿ ಬೆಂದುಹೋದ ಹಾಳು ಸ್ಮಶಾಣ ಮನಸ್ಸು
ಬರಡಾಗಿ ಬರಿದಾಗಿ ಕಾದಿವೆ ನೆಲ ಬಿರಿಸಿ
ಉದ್ವಿಗ್ನ ಪರಿಸ್ಥಿತಿ ನನ್ನೆದೆಯಲ್ಲೀಗ, ಬಾ ಬೇಗ

ನಿನ್ನನ್ನು ಧ್ಯಾನಿಸಿ, ಇರುಳು ಮುತ್ತಿಕೊಂಡಂತೆ
ಮಿಂಚನ್ನು ಮುರಿಯುತ್ತೇನೆ
ಮೋಡಗೋಡೆ ನೆಗೆದು ನಿನ್ನನ್ನು ಹುಡುಕಿ ಹುಡುಕಿ
ಚಂದ್ರನ ಜೇಬಿಗಿಳಿಸಿ ನಕ್ಷತ್ರ ಆಯ್ದು ಮಲ್ಲಿಗೆ ಚೆಲ್ಲಿ
ಉಕ್ಕಿದ ಸಮುದ್ರವನ್ನೇ ಮೊಗೆಯುತ್ತೇನೆ
ಮೊಗೆ ಮೊಗೆದಂತೆ ನಿನ್ನ ಮುಖ ಮಾಸಿ
ದರಿದ್ರ ಕಣ್ಣುಗಳಿಂದ ಅಳುತ್ತೇನೆ, ಒರೆಸಿ ಒರೆಸಿ
ಸತ್ಯವನ್ನು ಅಗೆದು ನೋವನ್ನು ಬಗೆಯುತ್ತೇನೆ
ಬಗೆ ಬಗೆದು ನನ್ನನ್ನು ಹೊತ್ತು ಹೆತ್ತು ಮಾಯವಾದ
ಆ ಗರ್ಭಸ್ಥಾನಕ್ಕೆ ತಡಕಾಡುತ್ತೇನೆ ತೊಡರಿ ತೊಡರಿ
ಊರ ತಾಯಂದಿರನ್ನೆಲ್ಲಾ ಅಣಕಿಸಿ ಬಂದಿದ್ದೇನೆ, ಬಾ ಬೇಗ

Sunday 22 April 2012

ಜಾತಿ...

ನೂರು ಜಾತಿ ಕೊಡಲಿ ತಂದಿದ್ದೆ
ನೂರು ಜಾತಿ ಜನರೆದೆ ಬಗೆದೋದಲು
ಜಾತಿಯೊಳಗಷ್ಟು ಜಾತಿ
ಒಂದು ಕೊಡಲಿಯೊಳಗಷ್ಟು ಚಾಕುಗಳು

ಆಲದ ಮರದ ಕೆಳಗೆ
ನೂರು ಬಿಳಲು
ಒಂದೇ ಆಲ ಹಲವು ಜಡೆ
ಇಳ್ಳೆಯೂರಿದ ಬಾಳೆ
ಒಂದೇ ಬಾಳೆ ಹಲವು ಉತ್ಪತ್ತಿ

ಬೋಧನೆಗೆ ನಿಲುಕದ ಜನ
ಕೌಪಿನ ಹರಿದು ಎದೆ ತೆರೆದಿದ್ದರು
ಬಗೆ ಬಗೆಯಾಗಿ ಬಗೆದೆ
ಒಗೆದ ಕುಡುಗೋಲಿನಲ್ಲಿ
ಅಡರಿಹೋದ ಒಂದೇ ಬಣ್ಣದ ರಕ್ತ
ಜಾತಿಗೊಂದು ಬಣ್ಣವಾಗಿದ್ದರೆ ಸೈ
ಅದಾಗಿರಲಿಲ್ಲ, ಮೂಢತ್ವ ನಾಲಗೆ ತೆರೆದಿತ್ತು

ಕೈ ಹಾಕಿದರೆ ಬಡಿದುಕೊಳ್ಳುವೆದೆಯಿತ್ತು
ಒಂದೇ ಬಡಿತ
ಬಡಬಡ ಎಂದರೆ ಬಡಬಡ
ಲಬಲಬ ಎಂದರೆ ಲಬಲಬ
ಮೇಲದ್ದದ್ದೇನು? ಅದೇ ಉಸಿರ ಚೀಲ
ಕೆಳ ಬಸಿರೊಳಗೆ ಜಠರ
ಮೇದೋಜೀರಕ ಕರುಳು ಬೊಂಬು
ಮೇಲ್ಜಾತಿಯವರಲ್ಲಿ ಸಿಗಲಿಲ್ಲ ಕೊಂಬು

ಕೆಳಬಂದರೆ ಜಾತಿ ಹುಟ್ಟಿಸಿದವನ
ಹುಟ್ಟಿನಂಗವೂ ಒಂದೇ
ಮೆಟ್ಟುವ ಪಾದವೂ ಒಂದೆ
ಅವು ತವಕಿಸಿ ಗೈದದ್ದೂ ಒಂದೆ

ಅದೇ ಮೂಢತ್ವ ನಗುತ್ತಿತ್ತು
ನನ್ನ ಕೈ ನಿಧಿರ ರುಚಿಗೆ ನಾಲಗೆ ಚಾಚಿತ್ತು
ಅದೇ ಕುಡುಗೋಲಿನಿಂದ ನಾಲಗೆ ನೂರು ಭಾಗ
ಅವ ಹುಟ್ಟಿಸಿದ ಜಾತಿಗೊಂದೊಂದು ತುಣುಕಿರಲಿ...

Thursday 12 April 2012

ಕಣ್ಣಾಲಿಗಳು ತೇವವಾಗುತ್ತವೆ....

ಮಕ್ಕಳಾಗಿರಲು ಚಂದ
ಮಕ್ಕಳಾಟ ಚಂದ
ಎಲ್ಲಾ ಮರೆತು, ಸಂತಸದ ಅಲೆಯಲ್ಲಿ ತೇಲುವುದು ಇನ್ನೂ ಚಂದ
ಬಾಲ್ಯಕ್ಕೆ ಹೆಚ್ಚು ಆಯಸ್ಸಿರಲಿ...
ಮಕ್ಕಳ ದಿನಾಚರಣೆಯ ಶುಭಾಶಯಗಳು...

ಮಕ್ಕಳಾಗಿರುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಜವಾಬ್ದಾರಿಯಿಲ್ಲದ ವಯಸ್ಸು ಅದು. ನಾವು ಏನೇ ಮಾಡಿದರೂ ಮುಗ್ದತೆಯ ಹೆಸರಿನಲ್ಲಿ ಕ್ಷಮಿಸಿ ಬಿಡುತ್ತಾರೆ. ಲೋಕದ ಡೊಂಕು, ಮಾನಸಿಕ ಬೇಗುದಿ, ದೇಶ ವಿದೇಶಗಳ ಕಷ್ಟ ನಿಷ್ಠುರಗಳ ಗೋಜಿಲ್ಲದೇ ನಮ್ಮದೇ ಲೋಕದಲ್ಲಿ ನಾವು ತೇಲುತ್ತಿರುತ್ತೇವೆ. ಗೆಳೆಯರೆಲ್ಲ ಕೂಡಿ ಬೀದಿಯಲ್ಲಿ ಆಡುತ್ತಿದ್ದ ಗೋಲಿ ಆಟ, ಅಂದರ್ ಹೇಳಿ ನಂತರ ಬಾಹರ್ ಎಂದು ಕತ್ತಿನಪಟ್ಟಿ ಹಿಡಿದುಕೊಂಡು ಜಗಳ ಕಾಯುವುದು. ಊರಿನಾಚೆಯ ಹಳ್ಳಕ್ಕೆ ಹೋಗಿ ಸುಂದರ ಬಚ್ಚೆಗಳನ್ನು ಆಯ್ದುಕೊಂಡು ಆಡುತ್ತಿದ್ದ ಟಿಕ್ಕಿ ಆಟ. ಊರೆಲ್ಲ ಸುತ್ತಿ ಬೆಂಕಿಪೊಟ್ಟಣಗಳನ್ನು ಆಯ್ದು ಟಿಕ್ಕಿಗಳನ್ನು ಕೂಡಿಸಿಕೊಳ್ಳುತ್ತಿದ್ದೆವು. ಬಣ್ಣ ಬಣ್ಣದ ಟಿಕ್ಕಿಗಳಿದ್ದರೆ ಏನೋ ಒಂದು ರೀತಿಯ ಗೌರವ. ಸಾಯಂಕಾಲವಾದಂತೆ ಕಳ್ಳ ಪೋಲೀಸ್ ಆಟ. ಒಂದಿಬ್ಬರು ಪೋಲೀಸ್ ಪಾತ್ರದಲ್ಲಿದ್ದರೆ ಉಳಿದವರೆಲ್ಲ ಕಳ್ಳರು. ಊರಿನ ಮೂಲೆ ಮೂಲೆಯಲ್ಲೆಲ್ಲ ಬಚ್ಚಿಟ್ಟುಕೊಳ್ಳುವ ಕಳ್ಳರನ್ನು ಪೋಲೀಸರು ಹುಡುಕಿ ತರಬೇಕು. ಸುತ್ತು ಸುಸ್ತಾದರೂ ಪೋಲೀಸಾದವನಿಗೆ ಏನೋ ಮರ್ಯಾದೆ. ಪ್ರತಿದಿನ ಶಾಲೆಯಿಂದ ಬಂದ ತಕ್ಷಣ ಕ್ರಿಕ್ಕೆಟ್ ಆಟ. ನಮ್ಮೂರಿನಲ್ಲಿ ಕ್ರಿಕ್ಕೆಟ್ ಮೈದಾನವಿರಲಿಲ್ಲ. ದೊಡ್ಡ ಕೆರೆಯನ್ನೇ ಆಟದ ಮೈದಾನ ಮಾಡಿಕೊಂಡಿದ್ದೆವು. ಯಾವ ಅಂತರಾಷ್ಟ್ರೀಯ ಮೈದಾನಕ್ಕೂ ಕಡಿಮೆ ಇರಲಿಲ್ಲ. ಕೆರೆ ತುಂಬಿಕೊಂಡರೆ ಅವರಿವರ ಹೊಲದಲ್ಲಿ ಆಡುವುದು, ಸುಮ್ಮನೆ ಹೊಡೆಸಿಕೊಳ್ಳುವುದು. ಮನೆಗೆ ಬಂದರೆ ಮತ್ತೇ ಬೈಗುಳ ಹೊಡೆತ. ಆಗಾಗ ಪಕ್ಕದೂರಿಗೆ ಕ್ರಿಕ್ಕೆಟ್ ಪಂದ್ಯಕ್ಕೆ ಹೋಗುತ್ತಿದ್ದೆವು. ಸೋಲು ಗೆಲುವು ಗೊತ್ತೇ ಆಗುತ್ತಿರಲಿಲ್ಲ. ಬರೀ ಜಗಳ. ಔಟಾದರೆ ಔಟಿಲ್ಲ, ಔಟಾಗದಿದ್ದರೆ ಔಟು ಎಂದು ಜಗಳ ಕಾದು ಬರುತ್ತಿದ್ದೆವು. ಆ ಗೆಳೆಯರೆಲ್ಲ ಓದಲು ನಮ್ಮ ಹಳ್ಳಿಗೇ ಬರುತ್ತಿದ್ದರು. ಬಂದಾಗ ಗೆಳೆಯರೆಲ್ಲ ಕೂಡಿಕೊಂಡು ಸೇಡು ತೀರಿಸಿಕೊಳ್ಳುವುದು ಮತ್ತೆ ಅವರು ನಮ್ಮನ್ನು ಅವರೂರಿನಲ್ಲಿ ಕಾಯುವುದು ಇವೇ ಆಗಿಹೋಗುತ್ತಿತ್ತು. ನಮ್ಮ ಹಳ್ಳಿಯಲ್ಲಿ ಹುಲಿ ಮನೆ ಆಟ ಎಂಬ ಬುದ್ಧಿವಂತಿಕೆಯ ಆಟವೊಂದಿದೆ. ಮೂರು ದೊಡ್ಡ ಕಲ್ಲುಗಳು ಹುಲಿಗಳಾಗಿದ್ದರೆ, ಇಪ್ಪತ್ತು ಚಿಕ್ಕ ಕಲ್ಲುಗಳು ಹಸುಗಳಂತೆ, ಬಳಪದಲ್ಲಿ ಬರೆದ ಒಂದು ಹಂದರದಲ್ಲಿ ಹಸುಗಳು ಹುಲಿಯಿಂದ ತಪ್ಪಿಸಿಕೊಳ್ಳಬೇಕು. ಅತೀ ಬುದ್ಧಿವಂತಿಕೆಯ ಆಟ. ನಾವೆಲ್ಲ ಆ ಆಟದಲ್ಲಿ ಊರಿಗೆ ಪ್ರಸಿದ್ಧಿ. ಘಟಾನುಘಟಿಗಳನ್ನೇ ಸೋಲಿಸಿಬಿಡುತ್ತಿದ್ದೆವು. ಡಿಸೆಂಬರ್ ಬಂತೆಂದೆರೆ ಅವರಿವರ ಹೊಲಗಳಿಗೆ ನುಗ್ಗಿ ಹಸಿ ಅವರೇಕಾಯಿ ಕಿತ್ತುಕೊಂಡು ಮಡಕೆಯಲ್ಲಿ ಬೇಯಿಸಿ ತಿನ್ನುತ್ತಿದ್ದೆವು. ಎರಡು ರೂ ಗಾಗಿ ಬೆಳಗ್ಗೆ ಐದರಿಂದ ಒಂಬತ್ತು ಘಂಟೆಯವರೆವಿಗೂ ಅವರೆಕಾಯಿ ಬಿಡಿಸುತ್ತಿದ್ದೆವು.a

ಒಬ್ಬರಿಗೊಬ್ಬರು ಆಪ್ತರಾಗಿ, ಮುಂಬರುವ ಕಷ್ಟಗಳ ಅರಿವಿಲ್ಲದೇ ನಾವು ಹೀಗೆಯೆ ಮಕ್ಕಳಾಗೇ ಇದ್ದಿದ್ದರೆ ಎಷ್ಟು ಚಂದವಲ್ಲವೇ?? ಈಗ ನೋಡಿ.. ತಲೆ ಮೇಲೆ ಹೊತ್ತುಕೊಳ್ಳಲಾಗದಷ್ಟು ಜವಾಬ್ದಾರಿ, ಸಾಲಗಾರರ ಕಾಟ, ಬಡ್ಡಿ ಕೂಡಿಸಲು ಹರಸಾಹಸ, ಎಲ್ಲೇ ಕೆಲಸಕ್ಕೆ ಸೇರಿಕೊಂಡರು ಹೊಂದಾಣಿಕೆ ಇಲ್ಲದೇ ಮಾನಸಿಕವಾಗಿ ಕುಗ್ಗಿಹೋಗುತ್ತೇವೆ, ಬಾಸ್ ನಮ್ಮನ್ನು ಅರ್ಥ ಮಾಡಿಕೊಳ್ಳುವುದಿಲ್ಲ, ಲಾಭವೇ ಮುಖ್ಯವೆನ್ನುವ ಆತನ ಧೋರಣೆಗೆ ನಾವು ಒಗ್ಗಿಕೊಳ್ಳಲಾಲಗುವುದಿಲ್ಲ. ಅರ್ಧ ಘಂಟೆ ಕುಳಿತು ಸಂಭ್ರಮಿಸಲಾಗುವುದಿಲ್ಲ. ನಾಗಾಲೋಟದ ಪ್ರಪಂಚ ಎಲ್ಲವನ್ನು ಕಿತ್ತುಕೊಂಡಿತು. ಒಟ್ಟಿಗೆ ಬೆಳೆದ ಗೆಳೆಯರು ಅನಿವಾರ್ಯತೆಯ ಸೋಗಿನಲ್ಲಿ ಅಗಲಿಹೋದರು. ದಿನವೆಲ್ಲ ಜೊತೆ ಇದ್ದು ಕೆರೆ ಏರಿ ಸುತ್ತಿ ಬೀದಿ ಬೀದಿ ಅಲೆಯುತ್ತಿದ್ದವರಿಗೆ ಎರಡು ನಿಮಿಷ ಮಾತನಾಡುವ ವ್ಯವಧಾನವಿಲ್ಲ. ಮೊಬೈಲ್ ಕಂಪ್ಯೂಟರ್ ಗಳು ಭಾವನಾತ್ಮಕ ಜೀವನವನ್ನು ಕಿತ್ತುಕೊಂಡವು. ಅಪರೂಪಕ್ಕೆ ಸಿಕ್ಕ ಗೆಳೆಯರು ಹೆಂಡದಂಗಡಿಗೆ ಕರೆಯುತ್ತಾರೆ. ಕೆಲವರಂತು ಪ್ರೇಮಪಾಶಕ್ಕೆ ಬಿದ್ದು ನೇಣಿನಲ್ಲಿ ಸತ್ತು ಕಾಣದ ಲೋಕಕ್ಕೆ ಹೊರಟುಹೋದರು. ಮತ್ತೆ ಕೆಲವರು ಜಾತಿಯೆಂಬ ಗೋಡೆಗೆ ಹೆದರಿ ಪ್ರೀತಿಸಿದವರೊಂದಿಗೆ ಪಕ್ಕದ ತಮಿಳುನಾಡು ಸೇರಿಕೊಂಡರು. ಅವರ ಹಾವಭಾವಗಳನ್ನು ಮರೆಯಲು ಎಂದೂ ಸಾಧ್ಯವಿಲ್ಲ. ಮತ್ತೆ ಕೆಲವರು ದಿನವೆಲ್ಲ ಹೆಂಡದ ನಿಶೆಯಲ್ಲಿರುತ್ತಾರೆ. ಬಸ್ ನಿಂದ ಹೆಜ್ಜೆ ನೆಲದ ಮೇಲಿಟ್ಟರೆ ಸಾಕು ಕಾಲಿಗೆ ಸಿಗುತ್ತಾರೆ. ಒಮ್ಮೊಮ್ಮೆ ಎಲ್ಲವನ್ನು ಪಡೆದುಕೊಂಡಿದ್ದೇವೆ ಎಂದೆನಿಸಿದರೂ ಬಾಲ್ಯವನ್ನು ಮೆಲುಕು ಹಾಕಿದಾಗ ಕಳೆದುಕೊಂಡದ್ದೇ ಹೆಚ್ಚಾಗಿ ಕಾಣುತ್ತದೆ. ಈಗಲೂ ಇಲ್ಲಿಯ ಮಕ್ಕಳೊಂದಿಗೆ ಕ್ರಿಕ್ಕೆಟ್ ಆಡುವಾಗ ಹಳೆಯದೆಲ್ಲಾ ನೆನಪಾಗಿ ಕಣ್ಣಾಲಿಗಳು ತೇವವಾಗುತ್ತದೆ.

Wednesday 11 April 2012

ಅನ್ವೇಷಣೆ....

ನೆಲ ಮುಗಿಲರ್ಕ ಆ ತರ್ಕಕ್ಕೆ ಹೆದರಿದ್ದವು
ಆತನಿಗು ಆತನ ಕೆತ್ತಿದಾತನಿಗೂ ಜಗಳ
ಬಡಿದಾಡಲು ಬಡಿಗೆಯಿಲ್ಲ ಗಳ
ಗುದ್ದಾಡಲು ಗುದ್ದಲಿ ಸುತ್ತಿಗೆ ಪಿಕಾಸಿ
ಅರ ಉಳಿ ಚೂರಿಯಿಲ್ಲ ಬಿಕನಾಸಿ

ಒಂದೆಕರೆ ಗುಂಡಿಯಗೆದು, ಬಂಡಿಯಲ್ಲಿ
ತುಂಬಿಕೊಂಡು ಬಂದಿದ್ದನ್ನು ಸುರಿದು
ಮೊದಲು ಎತ್ತಿಕೊಂಡ ಮಿಕ್ಸಿ
ವಿದ್ಯುತ್ ಬಲಕ್ಕೆ ಗಿರ್ರನೆ ತಿರುಗಿ
ಮಸಾಲೆ ಸಂಬಾರ ಸುರ್ರನೆ ನಜ್ಜಿ
ಬೆರೆಸುವುದು ಕಣ ಕಣ ಈ ಶೋಧನ
ಆತನ ಮೂತಿಗೆ ಹಿಡಿದು ತಿವಿದ

ಆತ ಜೋರಾಗಿ ನಕ್ಕ
ವಿದ್ಯುತ್ ನಿಂದ ಅಂದೆ, ಅದೆಲ್ಲಿದೆ??
ನಿನ್ನ ಬಾಯ ಕಾಯಕ
ಜಗಿದ ಹಲ್ಲು, ಕಿಣ್ವ ಸುರಿಸಿದ ಜೊಲ್ಲು
ಕೆಳ ಜಠರದೊಳ ಮರ್ಮ ಕದ್ದ ಮಳ್ಳ
ಬೇರೇನಾದರಿದ್ದರೆ ಹೇಳು ಕಳ್ಳ
ಇದೊಂದು ಅನ್ವೇಷಣಾ ಚೌರ್ಯ
ಒಳಕಲ್ಲು ಬಾಯಿಯೇ ಮೊದಲ ಮಿಕ್ಸಿ

ಕೋಪಗೊಂಡನಾತ, ಮಿಕ್ಸಿ ಎಸೆದ
ಕೈಗೆತ್ತಿಕೊಂಡ ಗಣಕ ಯಂತ್ರ
ಆಧುನಿಕ ಯುಗದ ಮಹಾನ್ ತಂತ್ರ
ಪಟ ಪಟ ಕುಟ್ಟಿ ಜಗತ್ತನ್ನೇ ತೋರಿ
ನಿನ್ನನ್ನು ನನ್ನನ್ನು ಎಲ್ಲರನ್ನೂ ಮೀರಿ
ಬೆಳೆದು ನಿಂತಿದ ನೋಡು ಈ ಪರಿ - ಎಂದ

ಆತನ ನಗು ನಿಲ್ಲಲಿಲ್ಲ, ಜೋರಾಯಿತು
ನಿನ್ನ ಮಗು ಗಂಡೋ ಹೆಣ್ಣು? ಎಂದ
ಹಠಾತ್ತನೆ ಆತ ಗಂಡು ಎಂದ
ನೀನ್ಯಾರೆಂದು ಅದರಲ್ಲಿ ಹೇಳಿಸು
ಆತ ಮತ್ತೆ ಕಕ್ಕಾಬಿಕ್ಕಿ, ಅತ್ತು ಬಿಟ್ಟ ಬಿಕ್ಕಿಬಿಕ್ಕಿ
ಯೋಚಿಸುವ ಶಕ್ತಿಯಿಲ್ಲವದಕ್ಕೆ
ನಿನ್ನ ಮೆದುಳು ತುಂಬಿದ್ದನ್ನೇ ಹೇಳುವುದು
ಪರಾವಲಂಬನೆಯಿಲ್ಲದೆ ಪರಾಮರ್ಶಿಸುವ
ನಾ ಕೊಟ್ಟ ಮೇದುಳೇ ಮಹಾನ್ ಗಣಕ

ಸೋಲದ ಆತ, ಹಲ್ಲು ಕಡಿಯುತ್ತ ಮುಂದಿಟ್ಟ
ಮೊನ್ನೆಯಷ್ಟೇ ತಂದಿದ್ದ ಬಣ್ಣದ ಟೀವಿ
ಅಂಗಾಂಗಗಳ ಮುಗಿದ ಚಲನ ವಲನ
ಬದುಕ ಪಯಣ ವಿವಾಹ ಮಿಲನ
ಆ ಡಬ್ಬದಲ್ಲಿ ಹಿಡಿದಿಟ್ಟಿದ್ದು ತೋರಿಸಿ
ಸೊಂಟಕ್ಕೆ ಕೈ ಸಿಕ್ಕಿಸಿ ನಿಂತ ದರ್ಪ ಸೂಸಿ

ಸಾವಧಾನವಾಗಿ ಕೇಳಿದನಾತ
ಮುಂಜಾನೆ ಬೆವೆತಿದ್ದು ಯಾಕೆ?
ರಾತ್ರಿಯ ಕೆಟ್ಟ ಕನಸ್ಸು – ಆತನುತ್ತರ
ಅದನ್ನು ನಿನ್ನ ಟೀವಿಯಲ್ಲಿ ಕಂಡೆಯಾ?
ಕನಸ್ಸಿನಿಂದ ಕಣ್ಣಿಗೆ ರಾತ್ರಿಯೆಲ್ಲ ಪ್ರದರ್ಶನ
ಕಣ್ಮುಚ್ಚಿದರೆ ಮನಸ್ಸೊತ್ತು ತರುವುದು ದೂರದರ್ಶನ - ಮುಂದುವರೆಯುವುದು...

Sunday 1 April 2012

ನಮ್ಮ ಮನೆಯ ಸುತ್ತಲಿನ ಸಾವುಗಳು...

ಆತ್ಮೀಯನಪಘಾತದಾಘಾತಕ್ಕೆ ಓಡುವಾಗ
ಕಾಲಡಿ ಸಿಕ್ಕು ಚರಕ್ಕೆಂದು ಸತ್ತ ಜಿರಲೆಗಳು
ಚಪ್ಪಲಿ ಸಂಧಿಯ ಇರುವೆಗಳು
ಹೆಬ್ಬೆರಳು ಕುಕ್ಕಿ ಬಡಿಸಿಕೊಂಡ ಚೇಳು
ಕೆನ್ನೆ ಕಚ್ಚಿದ ಸೊಳ್ಳೆಯ ಧಾರುಣವೆನಿಸಿಕೊಳ್ಳದ ಮರಣ
ಮೈಮೇಲೆ ಒಸರಾಡಿದ ಕ್ರಿಮಿಕೀಟದಂತ್ಯ
ಲೆಕ್ಕಕ್ಕೆ ಸಿಗದು, ಆ ಜೀವದ ಬೆಲೆ ಶೂನ್ಯದಿಂದೇಳದು

ಅದೇ ಇರುವೆ
ಗುರುತ್ವಾಕರ್ಷಣಕ್ಕೆ ತಳ ತಿರುಗಿಸಿ
ಎದುರಿಗೆ ಬಂದಿರುವೆಗೆ ಮೀಸೆ ಸೋಕಿಸಿ
ಅನ್ನದಗುಳನ್ನುರುಳಿಸಿಕೊಂಡು ನಡೆವಾಗ
ಅದರ ಬದುಕಿನ ಸಾರ್ಥಕ್ಯಕ್ಕೆ ಮನ ಸೋಲುತ್ತದೆ

ಒಂದೆರಡು ಕಾಲು ಮುರಿದರೂ
ಉತ್ಸಾಹ ಕುಗ್ಗಿಸಿಕೊಳ್ಳದೇ
ನುಣುಪು ರಸ್ತೆಯಲ್ಲೂ ಟೈರಿನೇಟಿಗೆ ಸಿಗದೆ
ಅದೆಬ್ಬಿಸಿದ ಗಾಳಿ ಧೂಳಿಗೆ ಮೈಯೊಡ್ಡಿ
ರಸ್ತೆ ನೀರಿನಲ್ಲೀಜಿ, ಹಸಿ ಹುಲ್ಲಿನಲ್ಲಿ
ನಡೆವಾಗ ಜಿರಲೆ, ಭಾಗಿಸುತ್ತೇನೆ ತಲೆ

ಹೀಗೆ ಒಂದಷ್ಟು ಸಾವುಗಳಿವೆ
ಗಣಿತಕ್ಕೂ ಅಗಣಿತ
ಕಪ್ಪೆ ನುಂಗಲು ಬಂದ ಹಾವು
ದೊಣ್ಣೆಯೇಟಿನಲ್ಲಿ ಪಡೆದುಕೊಂಡಿತು ಸಾವು
ಹೆದರಿ ಬಿಲ ಸೇರಿಕೊಂಡಿತು ಅಲ್ಲೇ ಇದ್ದಿಲಿ
ದೀಪ ಉರಿಸಲು ಹರಿಸಿಕೊಂಡ ವಿದ್ಯುತ್
ನುಂಗಿಕೊಂಡಿತ್ತು ಬಾವಲಿ
ಹಾವು ಕಪ್ಪೆ ಕೊಂದಿದ್ದರೆ ನಿಯಮ
ಹೊಟ್ಟೆಪಾಡು, ಸಮತೋಲನ, ಪ್ರತಿನಿಯಮ
ಹಾವೇ ಸತ್ತದ್ದು ಉಳಿವಿಗಾಗಿನ ಹೋರಾಟವೂ ಅಲ್ಲ
ಹೋರಾಟಕ್ಕೆ ಹಾವು ಬಂದಿರಲಿಲ್ಲ

ಒಂದಿನಿತು ಜೀವವಾದ ಇರುವೆಯಲ್ಲೂ
ಜೀವ ಚೈತನ್ಯವಿದೆ, ಒಂದಂಕುರವಿದೆ
ಅನ್ನ ತಿನ್ನುವಾಸೆ ಇದೆ
ತಿಂದದ್ದು ಜೀರ್ಣಿಸಿ, ಭೂಮಿಗರ್ಪಿಸಿ
ಮಿಲನ ಮೈಥುನಕ್ಕೆ ಸಂಭ್ರಮಿಸಿ
ಹೆರುವ ಶಕ್ತಿಯಿದೆ, ಹೊರುವ ಯುಕ್ತಿಯಿದೆ
ಕಾಲಿಲ್ಲದಿದ್ದರು ನಡೆವ ಹಾವಿಗೆ
ಅದರದೇ ಬದುಕಿದೆ, ಭಾವನೆಯಿದೆ
ಮೊಟ್ಟೆ ಮೇಲೆ ಕುಳಿತು ಮರಿಗೆ ಕಾವ ಮಮತೆಯಿದೆ
ಜೀವಕೋಟಿ ಪಟ್ಟಿಯಲ್ಲದರ ಹೆಸರಿದೆ
ಅದಕ್ಕೂ ವೃತ್ತವಿದೆ, ವೃತ್ತಾಂತವಿದೆ

ಮಾತು ಬಲ್ಲ ಮನುಜ ನಿಯಮ ಮುರಿದು
ಚೂರು ಬುದ್ಧಿವಂತಿಕೆಗೆ ಮೆರೆದು
ಅವುಗಳ ಸಾವನ್ನು ಹಾದರಕ್ಕೆ ಹುಟ್ಟಿಸಿಬಿಟ್ಟ