ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Friday 30 September 2011

ಅಳಿದ ಪ್ರೀತಿ...

ಅಂಗಡಿಯಿಂದ ಅಗ್ಗ ತಂದ
ಜಾತಿ ಹುರುಳಿಗೆ ಕೊರಳೊಡ್ಡಿದ
ಹಗ್ಗ ಬೇಡ ಸೀರೆ ಸಾಕು ಎಂದು
ಅವಳೂ ಹೊರಡಲು ಸಿದ್ಧ
ಯಾರು ಒಂಟಿ ಬಿಡಲಿಲ್ಲ

ನೂರು ದಾರಿ ಸವೆಸಿ
ಎರಡು ಹೃದಯ ಕಲೆತು
ಬಾಳ ಹೊತ್ತಿಗೆಯಲ್ಲಿ ಕನಸಿನ
ಪುಟ ನೂರು ಬಾರಿ ತೆರೆದು
ನಕ್ಕು ಸಂತಸದಿ ಕಣ್ಣೀರು ಇಟ್ಟು
ಒಂದಾದ ಹೃದಯಗಳಲ್ಲಿ ಒಂದೆಲ್ಲಿ?

ಎಂತು ಜಾತಿ ರಕ್ತ ಒಂದೆ ಇರಲು
ಅವನಿಗಿಂತ ಗುಣವಂತ
ರೂಪವಂತ, ಸಿರಿವಂತ
ಹುಡುಕಿ ತರುತ್ತೇವೆ ಎಂದರು
ಕೋಟಿ ಇದ್ದರೇನು, ಅವನಿಲ್ಲವಲ್ಲ

ಹಿಡಿದ ಕೈ ತಾಳಿ ಕಟ್ಟಲಿಲ್ಲ
ತನ್ನ ಮೈ ಹಾಸಿಗೆ ಸೇರಲಿಲ್ಲ
ಅವನ ಮುಖ ಮಾಸಿ ಮಾಯವಾಗಲಿಲ್ಲ
ಮೂರು ದಿನ ಮುಗಿದಿಲ್ಲ
ತವರ ಹೊಸ್ತಿಲ ತುಳಿದರು

ಅಳುತ ಕುಳಿತರು ಹೆತ್ತವರು
ಮಗಳ ಭವಿಷ್ಯ ತುಳಿದವರು
ಮೂರು ಗೇಣಿನ ನರಕ
ಕಣ್ಣ ಮುಂದೆ
ತನ್ನ ಹೃದಯದ ಚಿತ್ರ
ಬಿಡಿಸಿಕೊಂಡು ಮುಂದೆ ನಡೆದಳು
ನಮ್ಮಪ್ಪನಿಗೆ ಇಬ್ಬರು ಹೆಂಡಿರು
ದೇಶಕ್ಕೇನೂ ನಷ್ಟವಿಲ್ಲ
ಕಾರಣ ಚಿಕ್ಕಮ್ಮನಿಗೆ ಮಕ್ಕಳಿಲ್ಲ

ಹಾದರಕ್ಕೆ ಹುಟ್ಟಿದ ಮಗು...

ಹಾದರಕ್ಕೆ ಹುಟ್ಟಿದ ಮಗುವೊಂದು
ಕೊಚ್ಚೆಯಲ್ಲಿ ಬಿದ್ದಿತ್ತು
ಅದರೆದೆಯಲ್ಲಿ ಇಂದಿನ ರಾಜಕೀಯ
ಎಂಬ ಹೆಸರಿತ್ತು...!!!

ಹುಟ್ಟಿದ ಆ ಮಗು
ಮೆಟ್ಟಿದ ಮನೆಯಲ್ಲಿರಲಿಲ್ಲ
ಕೇರಿ ಕೇರಿ ಸುತ್ತಿ ಬಳಸಿ
ಕುಲಗೆಡಿಸಿತ್ತು ಬೀದಿ ಪರಿಮಳವ
ಹಂಚಿ ಹಬ್ಬಿಸಿ ಹಾದರವ..!!!

ಸಂತಸದ ಹಾದಿ...

ಎಮ್ಮೆಗೂ ಗೊತ್ತು
ಪೈಥಾಗೊರಸ್ ಪ್ರಮೇಯ
ಒಮ್ಮೆ ಗಮನಿಸಿ
ಅದು ಕೆರೆ ಸುತ್ತಿ
ದಡ ಸೇರುವುದಿಲ್ಲ
ನೀರಿಗೆ ಇಳುಗಿ
ಹಾಗೆ ನಡೆದುಬಿಡುತ್ತದೆ

ಇರುವೆಗಳಿಗೂ ಗೊತ್ತು
ಜೀವನದ ಶಿಸ್ತು
ಅವು ಅಡ್ಡ ದಿಡ್ಡಿ
ಸಿಕ್ಕಂತೆ ಓಡುವುದಿಲ್ಲ
ಒಂದರ ಹಿಂದೆ ಮತ್ತೊಂದು
ನಡೆವವು ಸಕ್ಕರೆ ತಿಂದು

ಜಿಂಕೆಗೂ ಗೊತ್ತು
ಬಳುಕುವ ವಯ್ಯಾರ
ಬಳುಕಿ ನಡೆದು
ಒಮ್ಮೆ ಹಾರಿದರೆ
ನೋಡಲೆಂತು ಚಂದ

ಆನೆಗೂ ಗೊತ್ತು
ನಡೆವ ಗಾಂಭೀರ್ಯ
ತೂಗಿ ನಡೆದರೆ
ಅನುಸರಿಸುವ ಆಸೆ
ನಾಚಿಕೆಯ ವರಸೆ

ಓದದ ಪ್ರಾಣಿಗಳು
ಖುಷಿಯಿಂದ ನಡೆಸಿವೆ
ತಮ್ಮದೇ ಜೀವನ
ಎಲ್ಲ ತಿಳಿದುಕೊಂಡು
ಎಲ್ಲೋ ಸಿಲುಕಿಕೊಂಡು
ಸಂತಸ ಅಳಿದುಕೊಂಡು
ಸುಮ್ಮನೆ ಕೊರಗಿದೆ ಮನ

Thursday 29 September 2011

ಪ್ರಯಾಣ....

ಪ್ರಯಾಣ....
(ಕಳೆದ ವಾರ ನನ್ನೂರು ಮೈಸೂರಿನಿಂದ ನಾನಿರುವ ಚಿಕ್ಕಮಗಳೂರಿಗೆ ಹೊರಡುವಾಗ ಬಸ್ಸಿನ ಮೂಲಕ ಕಂಡ ದೃಶ್ಯಗಳು)

ಹಾಗೆ ಬರುವಾಗ
ಮೊದಲು ಕಂಡಿತು ಅರಸ್ ಕಾರ್
... ಅದರೊಳಗೆ ಟಾಟಾ ಫೈನಾನ್ಸ್
ಸಾಲ ಕೊಟ್ಟು ವಸ್ತು ಕೊಡುವ ಸ್ಥಳ
ಮತ್ತೆ ಒಂದು ಮೈಲಿ ಸಾಗಿದರೆ
ಹಳೆ ಕಾರುಗಳ ಗುಜರಿ ಅಂಗಡಿ
ಅದರ ಪಕ್ಕದಲ್ಲೇ ಮಣಪ್ಪುರಂ ಗೋಲ್ಡ್
ಮನೆ ಚಿನ್ನಕ್ಕೆ ಮನೆ ಮಾರುವ ಸಾಲ
ಇನ್ನು ಮುಂದೆ ಸಾಗಿದರೆ ವೃದ್ಧಾಶ್ರಮ
ಸದ್ಯಕ್ಕೆ ಸೀಟುಗಳು ಖಾಲಿ ಇಲ್ಲ
ಅಲ್ಲಿಗೆ ಮುಗಿಯಿತು ಶ್ರೀಮಂತಿಕೆಯ ಆಟ

ಹತ್ತು ಮೈಲು ಮುಗಿದು ಸೂರ್ಯ ನೆತ್ತಿಗೆ ಬಂದ
ಹೊಲ ಉಳುತ್ತಿದ್ದ ರೈತರು ಕಂಡರು
ಪಕ್ಕದಲ್ಲೇ ಗದ್ದೆಗೆ ನೀರು ಬಿಟ್ಟ ಜನ
ಸ್ವಲ್ಪ ಮುಂದೆ ಬೀಜ ಎರಚಿ ಬಿತ್ತನೆ
ಕೊನೆಗೂ ಸಿಕ್ಕಿತು ಅರ್ಧಂಬರ್ಧ ಫಸಲು
ಇವರೆಲ್ಲ ಸೇರಿ ಒಂದು ವರ್ಷದ ಕೂಳು ಕಂಡರು
ಅಲ್ಲಿಗೆ ಮುಗಿಯಿತು ರೈತನ ಪಾಡು

ಹಳ್ಳಿಯೊಳಗೆ ಬಸ್ ನುಗ್ಗಿತು
ತೂರಾಡಿ ರೋಡಿಗೆ ಹಾರುವ ಜನ
ಎಲ್ಲೆಲ್ಲು ಇಟ್ಟುಕೊಂಡವರ
ಕಟ್ಟುಕೊಂಡವರ ಸುದ್ದಿ
ಎರಡು ಟೀ ಮೂರು ಬೀಡಿ
ಆಲದ ಅಡಿಯಲ್ಲಿ ಗೊರಕೆ ನಿದ್ದೆ
ಬೀದಿಯಲ್ಲಿ ಮೂರು ಗುಂಪು
ಮೂರು ಪಕ್ಷ, ಮೂರು ರಾಜಕೀಯ
ಪ್ರಪಂಚದ ತತ್ವ ಜ್ಞಾನಿಗಳಂತೆ ಇವರು
ಇಬ್ಬರು ಹೆಂಡಿರ ಮುದ್ದಿನ ಜನಗಳು
ಪಾಪ ಮಣ್ಣಿನ ಗೋಡೆಯ ನಡುವೆ
ರಾಗಿ ಬೀಸಿ ಕೂಳು ತೋರಿದ ಹೆಂಗಸರು
ಸಂಸಾರ ತೂಗಿ ಜಗದಲ್ಲಿ ಮೆರೆದರು
ಇಷ್ಟಕ್ಕೆ ಮುಗಿಯಿತು ಹಳ್ಳಿಯ ಜೀವನ

ಕೊನೆಗೂ ಸಿಕ್ಕಿತು ಕೆಲಸದ ಊರು
ಯಾಕೆ ತಡ ಎಂದು ನೂರು ಫೋನು
ಬಾಕಿ ಇದ್ದದ್ದು ಮೂರೇ ನಿಮಿಷ
ನಡೆಯಲಾಗಲಿಲ್ಲ, ಓಡಲು ಶುರು ಮಾಡಿದೆ
ಮತ್ತೆ ಪ್ರಾರಂಭವಾಯಿತು ನನ್ನ ಜೀವನ

ಮೌನ ಪ್ರೀತಿ...

ಮರಳಿನ ಮೇಲೆ
ನಿನ್ನದೇ ಚಿತ್ತಾರ
ಸುಲಲಿತ ಸುಂದರಿ
ಅಲೆಯ ವೇಗಕೆ ಅಲೆಮಾರಿ
ನೀಲ ಆಕಾಶದ ಉಸಿರಿನಲಿ
ನಿನ್ನದೇ ಒರಟುತನ
ಅಲೆಬಲೆಯ ಸೆಲೆಯಲ್ಲಿ
ಕೊಚ್ಚಿಹೋಯಿತು ಆ ಸಿರಿ
ಕತ್ತಲ ಮನೆಯ ತಿಳಿದೀಪ
ನಿನ್ನ ಸೂಕ್ಷ್ಮತೆಯ ಮುಖ
ಬೆಳಕಿನ ಹೊಗೆಯ ವಾಸನೆಗೆ
ಮಾಸಿಹೋಯಿತು, ಬಿಡಿಸಲಾಗದು

ಅರಿಯದ ಭಾವಕೆ
ಒಲುಮೆಯ ಚೀರಿಕೆ
ಎದೆಯ ತುಡಿತದ
ತಬಲಾ ವಾದನವ
ನುಡಿಸುವ ಬೆರಳು
ಹಿಡಿದಿರಲು ಕೊರಳು
ಸ್ಪರ್ಶದ ಅನುಭೂತಿಗೆ
ಸಾವಿನಲ್ಲೂ ಸೋತಿರಲು
ಯಮ ನಕ್ಕು ಕ್ಷಮಿಸಿಬಿಟ್ಟ
ನನ್ನ ಪ್ರೀತಿ ಸಾಯುವುದಿಲ್ಲ

Wednesday 28 September 2011

ಕರಗಿಹೋದಳು...

ಕಷ್ಟಪಟ್ಟ ಮರಹತ್ತಿ
ಮೂರು ಕಾಡಸಂಪಿಗೆ ಕೊಯ್ದು ತಂದೆ
ಒಂದು ಹೂವನ್ನೂ ಮುಡಿಯಲಿಲ್ಲ
ನಿಶೆಯಲ್ಲಿ ಹಾಗೆ ಕರಗಿಹೋದಳು

ಎಲ್ಲಿಂದಲೋ ಬಂದು ಸೃಷ್ಟಿಯ
ಕಣ್ಣರಳಿಸಿದಳು, ನೆಲವನ್ನು
ಗಟ್ಟಿಯಾಗಿ ಅಪ್ಪಿದಳು
ಏನೇ ಆದರೂ ರಾಶಿ ಇರುಳನ್ನು
ನುಂಗದ ತಿಳಿ ಹಣತೆಯಾದಳು

ಸುಟ್ಟುಹೋದ ಎದೆಗೆ
ಮಂಕುಕವಿದ ರಾತ್ರಿ ನೂರು
ವರ್ತಮಾನದಲ್ಲಿ ನಿದ್ದೆ
ಕೈ ಜಾರಿದ ಭವಿಷ್ಯದಾಸರೆ
ಒಬ್ಬಳಿಗಾಗಿ ಎಲ್ಲಾ ಕಳೆದುಕೊಂಡು ಒಬ್ಬಂಟಿಯಾದೆ

ಈಗಲೂ ಅಲ್ಲಿ ಇಲ್ಲಿ ಸಿಗುತ್ತಾಳೆ
ನನ್ನನ್ನು ನೋಡಿ ಸುಮ್ಮನೆ ನಗುತ್ತಾಳೆ
ಮುಟ್ಟಲು ಹೋದರೆ ಸುಟ್ಟುಬಿಡುತ್ತಾಳೆ
ನೆನಪುಗಳು ನಕ್ಷತ್ರಗಳಾಗಿ ಉದುರುತ್ತಿರುತ್ತವೆ

ಹೀಗಿರಲು...

ಸ್ನೇಹ ಮೇಳೈಸಿರಲು
ವಾದಕ್ಕೆಲ್ಲಿದೆ ಜಾಗ
ಹಾಸ್ಯ ಹೊಕ್ಕಿರಲು
ನೋವಿಗೆಲ್ಲಿದೆ ಮಾರ್ಗ
ಮನುಷ್ಯ ತನ್ನನ್ನು ತಾನು
ಅರ್ಥೈಸಿಕೊಂಡಿರಲು
ಶ್ರೀಮಂತಿಕೆಗೆಲ್ಲಿದೆ
ನುಸುಳುವ ಹುನ್ನಾರ?

ಪ್ರೀತಿ ಮಾಡಿರಲು
ದ್ವೇಷಕ್ಕೆಲ್ಲಿದೆ ಹುಟ್ಟು
ಮೌನ ತಾಳಿರಲು
ಜಗಳಕ್ಕೆಲ್ಲಿದೆ ಆಸ್ಪದ
ಎಲ್ಲ ತಿಳಿದವನಿಲ್ಲ
ಎಂದರಿತರೆ ಗರ್ವಕ್ಕೆಲ್ಲಿದೆ
ಮೆರೆದಾಡುವ ಉತ್ಸಾಹ?

ಹುಟ್ಟು ನಿಗೂಢ
ಎಂದು ತಿಳಿಯಲು
ಸಾವಿಗೆಲ್ಲಿದೆ ನೋವು
ಇರುವುದು ಮೂರೇ
ದಿನ ಎಂದರಿಯಲು
ನಗುವಿಗೆಲ್ಲಿದೆ ಬರ
ಹೊತ್ತೊಯ್ಯುವುದು
ಬರೀ ಶೂನ್ಯ ಎಂದು
ಇಂದು ತಿಳಿಯಲ್
ಕಣ್ಣ ಮುಂದೆಲ್ಲಿದೆ ಆಸೆ?

Monday 26 September 2011

ದೇವರು

ನಮ್ಮ
ಕಟ್ಟಡದಲ್ಲಿ
ನೂರಾರು
ನಲ್ಲಿಗಳು
ನೀರು
ಬಂದದ್ದು
ಮಾತ್ರ
ಒಂದೇ
ಟ್ಯಾಂಕ್ ನಿಂದ
ಮನೆಯ
ಮೇಲಿತ್ತು

ಎರಡು ಮುಖ...

ಹೇಯ್ ಕನ್ನಡಿಯೇ
ನನ್ನ ರೂಪದ ಮುನ್ನುಡಿಯೇ
ನಾಚಿ ನೀರಾಗಿದೆ ಕೆನ್ನೆ
ಉದ್ದ ಕೂದಲೆಳೆದು
ಕಟ್ಟಿದ ಎರಡು ಜಡೆ
ಹುಲ್ಲು ಹಾಸಿಗೆ ನಡುವಿನ ದಾರಿ ಬೈತಲೆ
ಸೈನಿಕರು ನಿಂತಂತೆ ಹಲ್ಲು ಸಾಲು
ಮುಖಕ್ಕೆ ಫೇರ್ ಅಂಡ್ ಲವ್ಲಿ
ಮೈ ತುಂಬಾ ಪರಿಮಳ ಸೆಂಟು
ಬಿಳಿ ಆಕಾಶದ ನಡುವೆ ಹೊಳೆದ ಸೂರ್ಯ
ಹಣೆಯ ಮೇಲೆ ಸಿಂಧೂರ
ವಜ್ರ ಮೂಗುತಿ, ಕಿವಿಗೆ ಬೆಂಡೋಲೆ
ನಿನ್ನೆ ತಂದ ಕಾಂಜಿವರಂ ಸೀರೆ
ನನ್ನಿಂದ ಹೊಳೆಯಿತು ಹೂವಿನ ಚಿತ್ತಾರ
ಮೈ ಕೈ ತುಂಬಿಕೊಂಡ ಅಮಲು
ಕನ್ನಡಿಯೇ ಮಧುರ ನಿನ್ನ ಸಿಹಿ ಸತ್ಯ

ಹೇಯ್ ಕನ್ನಡಿಯೇ
ಮುಂದಿನ ಸತ್ಯದ ಮುನ್ನುಡಿಯೇ
ನಾಚದೆ ಸುಕ್ಕುಗಟ್ಟಿತು ಕೆನ್ನೆ
ಕೈ ಕತ್ತಿನಲ್ಲಿ ಸೀರೆ ನೆರಿಗೆ
ತಲೆ ತುಂಬಾ ಬಿಳಿ ಕೂದಲು
ಬಾಚಣಿಗೆ ತುಂಬಾ ಅದೇ ಕೂಡಲು
ಉದ್ದದ ಜಡೆ ಮೋಟಾಯಿತು
ಕಣ್ಣುಗಳು ಒಳ ಹೋಗಿ
ದೃಷ್ಟಿ ನೆಡಲಾಗದೆ ಸೋತಿದೆ
ಈ ಲಕ್ಷಣಕ್ಕೆ ಬೂದು ಬಣ್ಣದ ಸೀರೆ
ಹೂವಿನ ಚಿತ್ತಾರಕ್ಕೆ ನಾನೇ ದೃಷ್ಟಿ ಬೊಟ್ಟು
ನೆಗೆದ ಯವ್ವನ ಮುಗಿದು ತೀರಿತು
ಮುದಿತನದ ಕತ್ತಲು ಓಡಿ ಕೂಡಿತು
ಮೈ ಕೈ ನಲ್ಲಿ ಸಾವು ತುಂಬಿತು

ನಗು ಅಳುವಿನ ಗೊಂದಲದಲ್ಲಿ...

ಅಳುವ ಮುಚ್ಚಲು
ಕೆಲವರು ನಗುತ್ತಾರೆ
ಆದರೂ ಕಣ್ಣಿನ ಗೋಡೆ
ತಡೆಯದು ಅಶ್ರುಧಾರೆ
ಕಣ್ಣೀರಿನೊಡಗೂಡಿದ ಆ
ನಗುವಿನಲ್ಲಿ ಗಟ್ಟಿತನ ಇಣುಕುತ್ತದೆ.

ಅಳು ಬರದಿದ್ದರು
ಕೆಲವರು ಅಳುತ್ತಾರೆ
ಆದರು ಅಳಲು ಬರದೆ
ಮತ್ತೆ ಮತ್ತೆ ಸೋಲುತ್ತಾರೆ
ಆ ಅಳುವಿನಲ್ಲಿ ಆಸೆ
ಲಾಭ ಎದ್ದು ಇಣುಕುತ್ತದೆ

ಕೆಲವರು ನಗಲಾಗದೆ
ಅಳಲಾಗದೆ ತೊಳಲಾಡುತ್ತಾರೆ
ನಗುತ್ತಲೇ ಇರುತ್ತಾರೆ
ಮನಸ್ಸಿಗೆ ಏನೊ ತುಂಬಿ
ಕೂಡಲೆ ಅಳು ಚೆಲ್ಲುತ್ತದೆ
ಕಣ್ಣು ತೂಕದ ಆ ದ್ವಂದ್ವದಲ್ಲಿ
ಅವರ ಮಂಕುತನ ಇಣುಕುತ್ತದೆ

ಕೆಲವರು ಸುಖದ ಸುಪ್ಪತ್ತಿಗೆಯ
ವ್ಯರ್ಥ ಲಾಲಸೆಯಲಿ ಮಿಂದು
ನಕ್ಕು ನಕ್ಕು ಅಳುವನ್ನು ಕಂಡಿರದಿರುತ್ತಾರೆ
ಮನಸ್ಸಿಗೆ ಸುಡುವ ಕಿಚ್ಚು ತುಂಬಿದಾಗ
ತಾಳಲಾಗದೆ ಸಾವಿನ ಸಂಚು ಇಣುಕುತ್ತದೆ
ಅತ್ತವನಿಗಲ್ಲವೆ ನಗುವಿನ ರುಚಿ

ಶುದ್ಧ ಪ್ರೀತಿ...

ನಿನ್ನ ಕಣ್ಣುಗಳಿಂದ
ಸಾಗರವೇ ಧುಮ್ಮಿಕ್ಕಿತು
ಎಂತು ಪ್ರೀತಿಯ ಪರಿ
ನಿನ್ನ ಹೃದಯದೊಳಗೆ
ಭೂಮಾತೆ ಮಲಗಿದ್ದಳು
ಎಂತು ಮಮತೆಯ ಸಿರಿ

ನಾ ನಡೆದಾಗ ನೆರಳಾದೆ
ಕೊರಳಾದೆ, ಮರುಳಾದೆ
ಒಳಗಣ್ಣು ತೆರೆದಾಗ
ನೀ ಬಂದೆ ತಾಯಾದೆ
ಗೆರೆಬಿಚ್ಚಿ ನವಿಲಾದೆ
ಚಿತ್ತಾರ ತುಂಬಿ ಬಣ್ಣವಾದೆ
ಕೆರೆಯಾದೆ, ತೊರೆಯಾದೆ
ವಿಧ ವಿಧವು ನೀನಾದೆ

ಮರೆತಾಗ ನೆನಪಾದೆ
ನೆನೆದಾಗ ನೀರಾದೆ
ನೀರಾಗಿ ಭೋರ್ಗರೆದೆ
ಭೋರ್ಗರೆದು ಒಳ ಹರಿದೆ
ಒಳಗನಸು ತಿಳಿಗೊಳಿಸಿ
ಮಳೆಯಾಗಿ ನಾ ನೆನೆದೆ
ಮಳೆ ಭೂಮಿ ತೊಳೆದು
ಇಳೆಯ ಹಸಿರು ನೀನಾದೆ
ಹಸಿರಾಗಿ ಉಸಿರಾದೆ
ನಿನ್ನೊಳಗೆ ನಾ ಇಣುಕಿ
ಜಗಸುಖದ ಕೈ ಹಿಡಿದೆ

Sunday 18 September 2011

ಕವಿತೆಗಳ ಹಾದಿಯಲ್ಲಿ

ಕವಿತೆಗಳ ಹಾದಿಯಲ್ಲಿ
ಸಾಗಿರುವ ನಿಮ್ಮ ಬಂಡಿಯಲ್ಲಿ
ಕುಳಿತುಕೊಳ್ಳಲು ಒಂದಿನಿತು
ಜಾಗ ನೀಡಿ
ದುಡ್ಡು ಕೇಳಲು ನೀವು
ಬಂಡಿಯ ನಿರ್ವಾಹಕನಲ್ಲ
ನೀಡಲು ನಾನೇನು
ಪ್ರಯಾಣಿಕನಲ್ಲ

ಸ್ನೇಹದ ಕೊಂಡಿಯಲ್ಲಿ
ನೀವು ತೂಗುತಿದ್ದಿರಿ
ಆತ್ಹ್ಮೀಯನಿಗೆ ಬೇಸರವಯಿತೇನೋ
ಎಂದೆನಿಸಿ ನಾನು ಕೂಡಿಕೊಂಡೆ

ಯೋಚಿಸಿ ನೋಡಿ...

ಮಾನವ ಮಹಾನಗರ ಕಟ್ಟಿದ
ಗಗನ ಚುಂಬಿ ಕಟ್ಟಡಗಳು
ನಿಲ್ಲಲು ಜಾಗವೇ ಇಲ್ಲ
ಸಿಕ್ಕ ಜಾಗದಲ್ಲಿ ನಿಂತರೆ
ಕಟ್ಟಡದ ತುದಿ ಕಾಣದು
ಸಮತೋಲನ ಕೋನ ಇಲ್ಲ
ಕಷ್ಟ ಪಟ್ಟು ಮೆಟ್ಟಿಲು ಹತ್ತಿ
ಕೆಳ ಹಿಣುಕಿದರೆ ನೆಲ ಕಾಣದು

ದೊಡ್ಡ ಮನೆಗಳು ಕಂಡವು
ಒಳ ಹೊಕ್ಕು ನೋಡಿದರೆ
ಗಂಡ, ಹೆಂಡತಿ, ಮಗು
ಅದೇ ಸಣ್ಣ ಸಂಸಾರ

ಎಲ್ಲೆಲ್ಲು ಜ್ಞಾನ ತುಂಬಿತ್ತು
ಆದರೂ ನಿರ್ಧಾರಕ್ಕೆ ಬರದ ಜನ
ಅಂಗಡಿ ತುಂಬೆಲ್ಲ ಔಷಧಗಳು
ಆಸ್ಪತ್ರೆ ತುಂಬಾ ರೋಗಿಗಳು
ಜನಗಳು ಆಸೆಗಳನ್ನು ಗುಣಿಸಿದ್ದರು
ಆದರೆ ಮೌಲ್ಯವನ್ನು ಕಳೆದಿದ್ದರು
ಅತಿಯಾಗಿ ಮಾತನಾಡುತಿದ್ದರು
ಕಡಿಮೆ ಪ್ರೀತಿಸುತಿದ್ದರು
ಹೆಚ್ಚೆಚ್ಚು ದ್ವೆಶಿಸುತಿದ್ದರು

ಚಂದ್ರನ ಎದೆ ತಟ್ಟಿ ಬಂದಿದ್ದರು
ಪಕ್ಕದ ಬೀದಿಯನ್ನೇ ದಾಟಲಾಗುತ್ತಿಲ್ಲ
ನೆರೆಮನೆ ಮಂದಿಯ ಮುಖ ಕಂಡಿಲ್ಲ
ಹೊರ ಜಗತ್ತಿಗೆ ಅಡಿ ಇಟ್ಟ ಜನಗಳಿಗೆ
ಒಳ ಜಗತ್ತು ಕೈಗೆ ಸಿಗಲೇ ಇಲ್ಲ
ದುಡ್ಡು ಕೂಡಿ ಕೂಡಿ ಬೆಳೆಯುತ್ತಿತ್ತು
ಗುಣ ಕಳೆದು ಕಳೆದು ಕರಗುತ್ತಿತ್ತು
ಸ್ವಾತಂತ್ರ್ಯ ಕಣ್ಣಿಗೆ ಕಾಣುತಿತ್ತು
ನಗುವಿನಲ್ಲಿ ಅದೇ ಕೊರತೆ ಇತ್ತು
ಗಲ್ಲಿ ಗಲ್ಲಿಯಲ್ಲೂ ತಿಂದಷ್ಟು ಊಟ
ಆದರೂ ಅಪೌಷ್ಟಿಕತೆಯಿಂದ ಸತ್ತ ಮಕ್ಕಳು

ಒಂದು ಮನೆಯಲ್ಲಿ ಎರಡು ಸಂಬಳ
ಎಲ್ಲರೆದರು ಸಂತಸದ ಗೃಹಪ್ರವೇಶ
ಒಳ ಹೊಕ್ಕಿದರೆ ಎರಡು ಮನೆ
ನಡುವೆ ನ್ಯಾಯಾಂಗದಿಂದ ವಿಚ್ಛೇದನ
ಮಕ್ಕಳು ಅರ್ಧನಾರೀಶ್ವರರು

ಹೊರಗಣ್ಣಿಗೆ ಜಗತ್ತು ನಗುತಿತ್ತು
ಒಳಗಣ್ಣಲ್ಲಿ ಜಗವದು ಸೊರಗಿತ್ತು..

ಅಗೋಚರ...

ಇರುಳ ಹೊರಳಿಕೆಯಲ್ಲಿ
ಮನೆಗಳಿಗೆ ದರಿದ್ರ ನಿದ್ದೆ
ನಿಶಬ್ದದ ಸವಿ ನೀರವತೆ
ಅನುಭವಿಸಿದೆ ಆರ್ದ್ರತೆ
ಆದರೆ ಕಣ್ಣಿಗೆ ಕಾಣಲಿಲ್ಲ

ಮನದ ಕಾರ್ಮೋಡದೊಳಗೆ
ಕೋಟಿ ನಕ್ಷತ್ರ ಶಯನ
ಹಾದು ಹೋದ ನೆಮ್ಮದಿ
ಸ್ವಲ್ಪದರಲ್ಲೇ ಪಕ್ಷಿಗೂಡು
ನನ್ನ ಮುಂದೆ ನಿಲ್ಲಲಿಲ್ಲ

ತಂತಿಯಿಂದ ಹರಿದು ಸಾಗಿ
ಬೆಳಕು ಮನೆಯ ಕೂಡಿತು
ಗೋಡೆ ಮೇಲೆ ಚೀಲ ಹಾಸಿ
ಅದರ ಚೂರು ಹಿಡಿಯಲಿಲ್ಲ
ಹರಿದ ಪರಿ ಗೋಚರಿಸಲಿಲ್ಲ

ಹರಿವ ನದಿಗೆ ಅಡ್ಡಗೋಡೆ
ಸಿಡಿದ ಬಾವಿ, ಹೃದಯಾಘಾತ
ಕುಡುಗೋಲಿನ ಅಲಗಿನಲ್ಲಿ
ಮೇಲೆ ನಿಂತ ಮುಷ್ಠಿಬುದ್ಧಿ
ನೆಗೆದ ಜೀವ ಕಾಣಲಿಲ್ಲ!

ಕಣ್ಣು ಕೂಡಿ, ತುಟಿ ಸೇರಿ
ನಡುವಲ್ಲಿ ಕಾಮ ಘರ್ಷಣೆ
ಬಯಕೆ ಬೆವರು ಕಲೆತು
ಜೀವವೊಂದು ಮೊಳೆಯಿತು
ಅದೆಲ್ಲಿತ್ತೋ ತಿಳಿಯಲಿಲ್ಲ

ಮನೆಯ ಸೂರಿನಲ್ಲಿ ಮಲಗಿ
ಒಂಬತ್ತು ದಿನ ಅಲ್ಲೇ ತಂಗಿ
ಲೋಕ ಬಿಟ್ಟು ಮತ್ತೆ ಬಂದು
ಗೂಡು ಹುಡುಕಿ ಒಳಗೆ ಸಾರಿ
ಪುನರ್ಜನ್ಮ, ಮನವು ನಂಬಲಿಲ್ಲ

ಪಯಣ ಮುಗಿಸಿ ವಿಮಾನ ಹತ್ತಿದೆ..

ಬಂದದ್ದು ಬೆಳ್ಳಂಬೆಳಗ್ಗೆ
ತಂಗಿದ್ದು ಮೂರು ದಿನ
ಕಂಡದ್ದು ಬೆಳಕು ಮತ್ತು
ಅದರ ಅಂಚು ಕತ್ತಲು

ಸಿಕ್ಕವರು ನೂರು ಜನ
ನಕ್ಕವರು ಮೂರೇ ಜನ
ಹೊಕ್ಕವರು ಎರಡೇ ಜನ
ಹೊತ್ತವರು ನಾಲ್ಕು ಜನ

ದುಡಿದದ್ದು ಲೆಕ್ಕವಿಲ್ಲ
ಉಳಿದದ್ದು ಗೊತ್ತೇ ಇಲ್ಲ
ಅಳಿದದ್ದು ಬರಲೇ ಇಲ್ಲ
ಈಗ ಅದ್ಯಾವುದು ನೆನಪಿಲ್ಲ

ಮೂರು ದಿನ ಮುಗಿಯಿತು
ತಂದ ವಿಮಾನ ಕರೆಯಿತು
ಬೆಂಕಿಗೆ ಮನೆ ಸುಟ್ಟಿತು
ಮಂದಿ ಗುಂಪು ಹೊರಟಿತು

ಕೊರಗಿದವು ನೂರು ಮನ
ಹೆಂಡತಿ, ಮಗು, ನನ್ನ ಜನ
ಮರೆಸಿಬಿಟ್ಟಿತು ಕಾಲ ಚಲನ
ಹೊತ್ತವರಿಗೆ ಜೀವ ನಮನ