ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Friday 31 August 2012

ಅಭಿಪ್ರಾಯ ಮತ್ತು ಇತರೆ ಕಥೆಗಳು….

ಅಭಿಪ್ರಾಯ…

ಶಿಷ್ಯ: ಗುರುಗಳೇ ಈಗ ದೇಶದಲ್ಲಿ ಎಲ್ಲೆಲ್ಲೂ ಧರ್ಮ-ಧರ್ಮಗಳ ನಡುವೆ ಬರೀ ಗಲಭೆ, ದೊಂದಿ ನಡೆಯುತ್ತಿದೆ. ಈ ವಿಚಾರವಾಗಿ ತಮ್ಮ ಅಭಿಪ್ರಾಯವೇನು
ಗುರುಗಳು: ಧರ್ಮ ಧರ್ಮದ ನಡುವೆ ಎಂದೂ ಜಗಳ ನಡೆದಿಲ್ಲ. ಅದು ಅಧರ್ಮ ಅಧರ್ಮದ ನಡುವಿನ ಕಲಹ. ನಿನ್ನಭಿಪ್ರಾಯವನ್ನು ಮೊದಲು ಬದಲಿಸಿಕೋ..
---
ತಳ ನೀತಿ...

ಹಸಿವನ್ನು ತಾಳದ ಆಕೆ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದಳು. ಆಕೆಯನ್ನು ನೋಡಿದ್ದೇ ಗುರುಗಳು ಶಿಷ್ಯನ ಕಿವಿಯಲ್ಲಿ ಏನೋ ಪಿಸುಗುಟ್ಟಿದರು.
ಓಡಿಹೋದ ಶಿಷ್ಯ ತುಂಡು ಬಟ್ಟೆ ತಂದು ಆಕೆಯ ಮುಖ ಮುಚ್ಚಿದ...
---
ಅಕ್ಕಿ - ಅನ್ನ...

ಪಟ್ಟಣದ ಹೋಟೆಲ್ ಒಂದರಲ್ಲಿ ಹೊಟ್ಟೆ ತುಂಬಾ ತಿಂದ ರೈತನೋರ್ವ ಹೆಚ್ಚು ಹಣ ತೆತ್ತು ಬರುವಾಗ ಹೀಗೆ ಅಂದುಕೊಂಡ
"ಅಕ್ಕಿಯನ್ನು ಮಾರುವ ಬದಲು, ನಾನು ಅನ್ನವನ್ನೇ ಮಾರಬಹುದಾಗಿತ್ತಲ್ಲವೇ?"
---
ಗಾಳಿ…

‘ಈ’ ಜಾತಿಯವರಿಗೆ ದೇವಸ್ಥಾನ ಮತ್ತು ಹೋಟೆಲ್ ಒಳಗೆ ಪ್ರವೇಶವಿಲ್ಲ ಎಂದು ತೀರ್ಪಿತ್ತ ಊರ ಯಜಮಾನ ಸಮಾಧಾನಗೊಂಡು ಸಾವಧಾನದಿಂದ ಉಸಿರೆಳೆದುಕೊಂಡ
ಅವನು ಎಳೆದುಕೊಂಡ ಗಾಳಿ ಆ ‘ಈ’ ಜಾತಿಯವರ ಬೆನ್ನು ತಾಕಿ ಬಂದಿತ್ತು.
ಇಲ್ಲಿಗೆ ಬರುವಷ್ಟರಲ್ಲಿ ಅವರೂ ಎಳೆದು ಬಿಟ್ಟಿದ್ದ ಗಾಳಿ ಕೂಡಿಕೊಂಡಿದ್ದು ಆತನಿಗೆ ಗೊತ್ತೇ ಆಗಲಿಲ್ಲ….!
---
ಧರ್ಮ...

ಕೆಲವರನ್ನು ಭಯತ್ಪಾದಕರೆಂಬ ಶಂಕೆ ವ್ಯಕ್ತವಾಗಿ ಬಂಧಿಸಲಾಯಿತು…
ಒಬ್ಬ: ಅವರು ‘ಆ’ ಧರ್ಮದವರು…
ಮತ್ತೊಬ್ಬ: ತಪ್ಪು, ಅವರು ‘ಆ’ ಧರ್ಮವನ್ನು ಅರ್ಥ ಮಾಡಿಕೊಳ್ಳದವರು…!
---
ಬೇಡಿದವರು...

ಮೊನ್ನೆ ವಿಜಯ ಮಲ್ಯ ಎಂಬಾತ ದೇವಸ್ಥಾನ ಒಂದಕ್ಕೆ ಚಿನ್ನದ ಬಾಗಿಲು ಕೊಡಲು ಹೋದಾಗ ದೇವಸ್ಥಾನದ ಆವರಣ ಸ್ವಚ್ಛವಾಗಿತ್ತಂತೆ.
ಕಾರಣವೇನೆಂದರೆ 'ಇಷ್ಟು ದಿನ ಬೇಡುತ್ತಿದ್ದ ಭಿಕ್ಷುಕರನ್ನು ಹೊಡೆದು ಓಡಿಸಿದ್ದರು'
ಬೇಡದವನ ಬಳಿ ಹೋಗುವಾಗ ಬೇಡಿದವರೇ ಬೇಡವಾದರು...

ಅದೇ ಮಲ್ಯ ದೇವಸ್ಥಾನಕ್ಕೆ ಬರುವುದು ಒಂದು ಘಂಟೆ ತಡವಾಯಿತಂತೆ. ನಡೆದು ಬರುವ ವಿಜಯಮಲ್ಯನ ಕಾಲನ್ನು ಕಿಂಗ್ ಫಿಷರ್ ಕುಡಿದ ನಮ್ಮ ಸಿದ್ಧ ಹಿಡಿದುಕೊಂಡಿದ್ದ. ಸಿದ್ಧನ ಜುಟ್ಟಿನ ಜೊತೆಗೆ ಆಕೆಯ ಹೆಂಡತಿಯ ತಾಳಿಯನ್ನೂ ಹಿಡಿದುಕೊಂಡಿದ್ದ ಸಾಲ ಕೊಟ್ಟ ಊರ ಗೌಡ...
---
ಹಾಲು - ತುಪ್ಪ...

ಎಳೆ ಕಂದನನ್ನು ತಬ್ಬಿಕೊಂಡು ಭಿಕ್ಷೆ ಬೇಡುತ್ತಿದ್ದ ಅಮ್ಮ ಅಂದಳು "ಮಗುವೇ, ಭಿಕ್ಷೆ ಬೇಡಿಯಾದರೂ ನಿನಗೆ ಹಾಲು ತುಪ್ಪ ತಿನ್ನಿಸಿ ಸಾಕುವೆ"
ಆಕೆ ಬೇಡಿದ್ದು ದೇವರಿಗೆ ಕೇಳಿಸಲೇ ಇಲ್ಲ.
ಆತ ಕ್ಷೀರಾಭಿಷೇಕ, ತುಪ್ಪಾಭಿಷೇಕದಲ್ಲಿ ಮಗ್ನ.
ಮಗುವಿಗೆ ಬೇಕಾಗಿದ್ದ ಅದೇ ಹಾಲು, ತುಪ್ಪ ಆಲ್ಲಿ ಹರಿಯುತ್ತಿತ್ತು ದೇವಸ್ಥಾನದ ಮೂಲೆಗಿಂಡಿಗೆ
---
ಜಗಜ್ಜಾಹೀರು…

ಜಗಳದ ಮಧ್ಯೆ ಆಕೆ "ನೀನು ಗಂಡಸೇ ಅಲ್ಲ" ಎಂದು ಗಂಡನನ್ನು ಒಂದಷ್ಟು ಜನಗಳಿಗೆ ಕೇಳುವಂತೆ ಜೋರಾಗಿ ಬೈದಳು. ಮುನಿಸಿಕೊಂಡ ಆಕೆ ಬೇಸರ ಕಳೆಯಲು ಟೀವಿ ಹಚ್ಚಿದಳು..
“ಗಂಡನಿಗೇ ‘ಅದು’ ಇಲ್ಲ” ಎಂಬ ವಾರ್ತೆ… ಇವಳಿಗಿಂತ ಹೆಚ್ಚು ನಾಚಿಕೆಗೆಟ್ಟ ಮಾಧ್ಯಮಗಳು…
---
ಅಕ್ಕ ತಂಗಿ – ಅಣ್ಣ ತಮ್ಮ…

ಮೈ ಕೈ ಕಾಣುವಂತೆ ತುಂಡು ಬಟ್ಟೆ ಧರಿಸಿ ಬಂದಿದ್ದ ಆಕೆಯನ್ನು ಆತ ದುರುಗುಟ್ಟಿಕೊಂಡು ನೋಡುತ್ತಿದ್ದ…
ಆಕೆ: ನಿನಗೆ ಅಕ್ಕ ತಂಗಿಯರಿಲ್ಲವೇ?
ಆತ: ನಿನಗೆ ಅಣ್ಣ ತಮ್ಮಂದಿರಿಲ್ಲವೇ??!
---
ಸರಿ – ತಪ್ಪು..

ಕೈಯಿಂದ ಜಾರಿದ ಆ ಫೋಟೋ ಕೆಳಕ್ಕೆ ಬೀಳುತ್ತಿತ್ತು. ಕಾಲಿನಿಂದಲಾದರೂ ತಡೆಯಬಹುದಾಗಿತ್ತು.
ಸರಿಯೋ ತಪ್ಪೋ ಎಂದು ಯೋಚಿಸುವಷ್ಟರಲ್ಲಿ ಅದು ನೆಲಕ್ಕಪ್ಪಳಿಸಿ ಹೊಡೆದೇ ಹೋಯಿತು..

Saturday 18 August 2012

ನೀವಿಬ್ಬರೂ ಒಂದೆ...!

ಜಗಮಳ್ಳಿ, ಕಳ್ಳಿ, ನಿನ್ನ ಮೈ ಕೈ ಬಿಳಿ
ದುಂಡಗೆ ಸಣ್ಣಗೆ ನುಣ್ಣಗೆ, ಹಾಲು
ಗೋಣಿಗೆ ನನ್ನ ತುಟಿಯೆಂಜಲು
ದಿನ ಸವಿದೆ ಮೃದು ಅಧರ ಕಮಾಲು

ಹೊರ ಚಾಚಿದಗ್ನಿ ಹೊಳೆವ ಸೌಷ್ಠವಾಂಗ
ಒಳ ಇಣುಕಿದರೆ ಬರೀ ಇದ್ದಲು ಬೂದಿ
ಹೊಗೆ ಗೂಡಿಗೆ ಗೂರಲು ಕೆಮ್ಮು
ಕೆಮ್ಮಿ ಕೆಮ್ಮಿದರೆದೆನೋವು ಏನೋ ವ್ಯಾಧಿ!

ಮೊದ ಮೊದಲು ಮುಟ್ಟಲು ಹೆದರಿದ್ದೆ
ಜಗ್ಗಿತ್ತು ಕುಗ್ಗಿತ್ತು ದೇಹ ನಡುಗಿ
ಈಗೀಗ ನೀ ಸುಟ್ಟರೂ ನಿನ್ನದೇ ನೆನಪು
ಚಟವೋ ಹಠವೋ ತೊಲಗೆ ಬೆಡಗಿ!

ಮಳೆ ರೈಲುಕಂಬಿ ಕೊಳೆ ಗೋಡೆಯ
ನಕ್ಕಪ್ಪನ ಫೋಟೋ ಅಣಕಿಸಿತ್ತು
ಮುಟ್ಟಿ ಮೈ ಮಾಟಕ್ಕೆ ಬಣ್ಣಕ್ಕೆ ಸ್ಪರ್ಶಕ್ಕೆ
ತುಟಿ ಸುಟ್ಟುಕೊಳ್ಳಬೇಡ ಎನ್ನುತ್ತಿತ್ತು!

ಚಂದ್ರಾಂಬರವಣಕಿಸಲು ನಕ್ಷತ್ರ ನೆನಹು
ಸುಟ್ಟು ಸುಟ್ಟು ಮೂಲೆಗೆಸೆಯುತ್ತೇನೆ
ಧೂಮಪಾನ-ಮತ್ತು ನೀನು, ಇಬ್ಬರೂ
ಹಾನಿಕಾರಕವೆಂಬುದನ್ನೇ ಮರೆಯುತ್ತೇನೆ!

Friday 17 August 2012

ಒಂದಷ್ಟು ವಿಚಿತ್ರ ವಿದಾಯಗಳು…

ಆ ಟೇಬಲ್ಲಿನ ಮೇಲೆ ಬಿದ್ದ ಕೂದಲು
ಜೊತೆಗಿತ್ತು ಹುಟ್ಟಿದಂದಿನಿಂದಲೂ
ಬೆಳೆದಂತೆ ಕತ್ತರಿಸೊತ್ತರಿಸಿದರು
ತೆಂಗೆಣ್ಣೆ ನುಂಗಿ ನಿಂತಿತ್ತು
ಜೀವ ಭಾವ ಮೀಟಿ
ಬಂದವರೆಲ್ಲ ಪಕಳೆಯಂತುದುರಿದರೂ
ನೆರಳಂತಿದ್ದೆ ನೀ ಜೊತೆಗೆ
ಇಂದನಾಥ ಹೆಣ, ಸೇರು ಸ್ವರ್ಗ

ಹತ್ತತ್ತಿಪ್ಪತ್ತು ಬೆರಳಲ್ಲುಗುರು
ಕತ್ತರಿಸಿದರಳದೆ
ಹುಲುಸಾಗುವ ಚಿಗುರು
ಇಂದು ತುಂಡಂದು ಬುಡ
ಸೇರು ತಂಗಾಳಿಯೆಡೆಗೆ ಗೋಳಿಡಬೇಡ

ಹೇ ಸುಕ್ಕು ತೊಗಲೊಳ ಕೋಶವೇ
ಅಂದು ನಿನ್ನ ಸ್ಪರ್ಶಕ್ಕೆ
ತನು ಆತ್ಮಕಾಯ ಮನ ಪ್ರೇಮಮಯ
ಗೋಣೆತ್ತಿದರೆ ವಸ್ತ್ರ ನೆರಿಗೆ
ಹಣೆಯುದ್ದ ಹರಿದ ದಾರ ಮುಪ್ಪಿಗೆ
ಇದ್ದಷ್ಟು ದಿನ ನಿನ್ನೊಪಿನ ಖುಷಿ
ಹೋಗಿ ಬಾ ಬರಲಿ ಸುಖ ನಿನ್ನರಸಿ

ಒಳ ಇಳಿದ ಜಲ ಬೆವರು ಮೂತ್ರ
ರೈತನುಳುಮೆ ವರ್ಷದ ಹರ್ಷಕ್ಕೆ
ಕಾಳು ಮೊಳೆತೊಡೆದು
ಜೀವ ಬುಗ್ಗೆ ಇಣುಕಿ ಬೆಳೆದು
ಪೈರಾಗಿ ತೊನೆದು ಭತ್ತ ಒಡೆದಕ್ಕಿ
ಅನ್ನವಾಗೆನ್ನುದರ ಸೇರಳಿಯಿತು
ಅಲ್ಲೆಲ್ಲೂ ಕಳೆದುಹೋಗದ ಮುತ್ತು

ಬದುಕು ಬೆದಕಿನೊಂದಿಗಿದ್ದ ಶಕ್ತಿಯೇ
ಯಮ ಬಂದಿಹನು ಯವ್ವನವೇ
ಅಳಿದಳಿದು ಕಳಚಿ ಹೋಗು
ಉಳಿಯಲಿ ಬರಿ ಮುಪ್ಪು
ಹಠ ಮಾಡುವುದು ಲೋಕರೂಢಿ ತಪ್ಪು
ವಿದಾಯ ನಿನಗೆ, ಬರುವೆ ಹಿಂದಿಂದೆ
ಹಳ್ಳ ತೊರೆಗಳಲ್ಲಿ ಸಮುದ್ರ ಕೂಡುವುಪ್ಪು...!

Tuesday 14 August 2012

ಅಮ್ಮ ಸ್ವಾತಂತ್ರ್ಯವೆಲ್ಲಿದೆ..?

ಐಷಾರಾಮಿ ವರ್ತುಲ ರಸ್ತೆಯುಬ್ಬಿನಲ್ಲಿ ಸರ್ಕಾರದ ಬೆವರು
ಹೆಣದ ಮೇಲಿನ ಸಿಂಗಾರ ಮಳೆ ತೋಡಿದ್ದ ಗುಂಡಿ
ಸಾಕಿದ ಸೊಳ್ಳೆ ಕಚ್ಚಿಸಿಕೊಂಡಲ್ಲೇ ಇದ್ದ
ಮುದ್ದು ಮಗು ಕೇಳಿತು "ಅಮ್ಮ ಸ್ವಾತಂತ್ರ್ಯವೆಲ್ಲಿದೆ?"

ಅದಾರೋ ಕೊಟ್ಟಿದ್ದ ಕೊಳೆ ಕಂಬಳಿ ಕೊಡವಿ ಹುಡುಕಿದಳು
ಹರಿದ ಸೀರೆ ತೂತಿನಲ್ಲಿ ಜೋತುಬಿದ್ದ ಮೊಲೆ
ಚೀಪುತ್ತ ಮಗು ಉಚ್ಚೆ ಹೊಯ್ದು ರಚ್ಚೆ ಮಾಡಿತು
'ಇನ್ನೂ ಸಿಕ್ಕಿಲ್ಲ ಮಗನೆ, ನೀ ಉಚ್ಚೆ ಹೊಯ್ದದ್ದು ಮಾತ್ರ ಸ್ವೇಚ್ಛಾಚಾರ!'

ಮಗು ಒದ್ದ ಸಿಲ್ವರ್ ತಟ್ಟೆ ಮೊಗಚಿತು, ಒಳಗಿದ್ದನ್ನದಾತನಳು ಗೋಳು
ಹೆಗಲ ನೇಗಿಲು ತರಚಿದ ಗಾಯದ ರಕ್ತದಲ್ಲಿರಲಿಲ್ಲ
ಹೊತ್ತಿ ಉರಿಯಿತು ಬೆಳಗಿ ತಡಿ ಭವ್ಯ ಬಂಗಲೆ ಮಹಲು ಕಮಾಲು
'ಮಗನೇ ಅಲ್ಲಿರಬಹುದು, ಒಂದಷ್ಟು ಬೆಳಕು ಕಂಡಿದೆ' ಬಾ ನೋಡೋಣ

ಬಂಗಲೆ ಬಂಗಲೆಯಲ್ಲಿ ವಿದ್ಯಾದಾನ ಮುಖವಾಡ ಗರ್ಭಪಾತ ಫಲಕ
ಜಾತಿ ತೊಲಗಲಿ ಸರಿ ನೀತಿ ಬರಲಿ ಎಂದವರ ಹತ್ತಿರ
ಕಂತೆ ಕಂತೆಯಲ್ಲಿ ಹೆಣದ ಮೇಲಿನ ಹಣ, ಜಾತಿ ಪ್ರಮಾಣ ಪತ್ರ
ಹುಣಸೇಮರದ ಕೊಂಬೆಗೆ ಜಾತಿ ಚೂರಿಯಲಗಿನ ಕೋಟಿಯಾತ್ಮ ಚೀತ್ಕಾರ ವಿಚಿತ್ರ

ಅಮ್ಮ ಹರಿದ ಸೀರೆ ಚಾಚಿದಳು ಕಂದನ ತುತ್ತಿನ ಹೊಟ್ಟೆ ಚೀಲ ಉಬ್ಬಲು
ಮುಂಜಾನೆಯ ಗಂಜಿ ಹಣ, ಕಸಿದ ಪೊಲೀಸ್ ಮಗನ ಹೆಣ'ದ ವಾಸನೆ
ರಸ್ತೆಯಿಳಿಜಾರಿನ ಮಲಪೈಪಿನೊಳಗೆ ಮಂತ್ರಿವರ್ಯ ನಿರ್ವೀರ್ಯ
ಶೂರರ ರಕ್ತಭ್ಯಂಜನದಲ್ಲಿ ಹುಟ್ಟಿದ ಸ್ವಾತಂತ್ರ್ಯ ನೀ ಯಾರ ಮನೆ ಹೊಸ್ತಿಲು?

ಮಗನೇ ಅಂದು ಇಲ್ಲೇ ಸಿಕ್ಕಿತ್ತು, ರಾತ್ರಿ ಮುತ್ತು ನೀ ಹುಟ್ಟಿರಲಿಲ್ಲವಿನ್ನು
ನಿನ್ನಣ್ಣಂದಿರಗೇ ಕೊಟ್ಟಿದ್ದೆ, ಅಂಧರು ತಂದಿಟ್ಟರು ತಲೆ ನೋವನ್ನು
ಬಿಡಬೇಡ ಕಂದಾ, ನನ್ನಾನಂದ ಹುಡುಕು ದುಡುಕಬೇಡ, ಮನೆ ಗುಡಿಸು
ಕೊಳೆ ಉಡುಗಿ ಹೋದಂತೆ, ಹೊಳೆವುದು ಮುತ್ತು, ಬಿಡು ಚಿಂತೆ...

Saturday 11 August 2012

ದೇವಕಣ…

ಅದಾವುದದು ಕಾಣದಲೆ
ಊರ್ಣನಾಭನ ಬಲೆ
ಜಗ ಬಿಗಿದ ಸಂಕೋಲೆ, ಅಂಡಲೆ?!

ರೆಪ್ಪೆಯೊಳ ಶೂನ್ಯಾಂತ್ಯ ಮಣ್ಣು
ಕಣಕ್ಕುರುಳುರುಳು ಕಣ್ಣು
ಕೆರಳಾಡಿ ಕೆಂಪನೆ ಹಣ್ಣು
ಮೂಲೆಗೊತ್ತರಿಸಿಕೊಂಡ ಗೋಣು
ಕಂಡ ಕಣ ಕೊಂಡ ಕಾಣದ ಕಣದಣು

ಅಣುವಣು ಭಾಗಿಸೊಳಗಣು
ಕಣ ಕಣವೆಂಬುದ ಕಾಣೆ, ನನ್ನಾಣೆ
ಕಣದೊಳಗೆ ಕಣ ಹಲಗುಣ
ಕೊರೆ ಕೊರೆದಂತೆ ಕಣ
ಕಾಣದ ಕಣ ಕಂಡರೆ ನಿಧಿ ಹಣ
ಕೊನೆ ಕಣದೊಳಗುಳಿದಣು ಕ್ಷಣ!

ಕಾಣದ ಕಣ ನೀ ಕಂಡ
ಕಡಲೊಡಲೊಳು ಬಂಧಿ
ಅಪ್ರಬುದ್ಧ ಮೆಟ್ಟಿಲಿಟ್ಟ
ಕಿಟ್ಟ ಸುರಿದಟ್ಟಣಿಗೆಯೊಳಗೆ
ಮಾನವ ನಿರ್ಮಿತ ಸಂಬಂಧಿ

ಅಂಶಕ್ಕೆ ತಟಸ್ಥ ಸಂಖ್ಯೆ
ಛೇದಕ್ಕೆ ಬೇಡವಂಕೆ ಶಂಕೆ
ಚಲಿಸಲಿ ವಿಶ್ವಾಂತ್ಯಕ್ಕೆ
ಗಣಿತ ಭಾಗಲಬ್ದ ಸೊನ್ನೆ
ಲೋಪವಾಯಿತು ಕ್ಷಮಿಸಿ
ಸೊನ್ನೆಯಲ್ಲ, ಶೂನ್ಯ ಸಮೀಪ
ನಿನ್ನೆಗೆ ನಿನ್ನೆ ಮೊನ್ನೆಗೂ ಮೊನ್ನೆ

ಅಳೆಯಲಾಗದಪರಿಮಿತಳತೆಯ
ಗಟ್ಟಿಕಣ ನೀ ವ್ಯಾಸ ಶೂನ್ಯ
ಸಚಿತ್ರ ಭ್ರಮೆಯಲ್ಲಿ ಚಿತ್ರ ಬರೆದು
ವಿಚಿತ್ರ ಕಟ್ಟು ಕಟ್ಟಿ
ಮೊಳೆ ಕುಟ್ಟಿ ಊರ ತಡಿಕೆಗೆ
ಬಂಧಿಸುವಿರಾದೆಯೇ ಜಗ ತುಟ್ಟಿ

Friday 10 August 2012

ಸುದ್ದಿ...

ಮೊನ್ನೆ ಕಾಗೆ ನೆತ್ತಿಯೊತ್ತಿ
ನನ್ನ ಮುಂದೆ ಕಾ ಕಾ
ಎಂದರಚಿದಾಗ
ತಿನ್ನಲೆರಡಗಳೆಸೆದದ್ದು
ದೊಡ್ಡ ಕೆಟ್ಟ ವಾರ್ತೆಯಾಯ್ತು

ಹಾದರಗಿತ್ತಿ ಹೆತ್ತ ಮಗು
ಊರಾಶ್ಚರ್ಯಸಹ್ಯ
ತೂ ಎಂದ ಮಂದಿ
ಬೀದಿಯಲ್ಲಿ ದೊಂದಿ
ಅವಳ ಮನೆ ಭಿತ್ತಿ ಮೇಲೆ
ಅಸ್ಪಷ್ಟ ವೀರ್ಯ
ಡಿ.ಎನ್.ಎ ಸುದ್ದಿ ನಿರ್ವೀರ್ಯ!

ಐಶ್ವರ್ಯ ರೈಗೂ ಹೆರಿಗೆ ಬೇನೆ
ಹೆಣ್ಣು ಇಲ್ಲವೆ ಗಂಡು ತಾನೆ?
ಬೇರೇನಾಗುವುದಿತ್ತು?
ಆಗುವುದರಾಗಲಿ ಜಗಮಾತು
ಅವಳಾಡಂಬರ ಮನೆ
ಹೊಸ್ತಿಲ ಕಾಲು ಹಿಡಿದ
ಕಿಟಕಿ ಗೋಡೆ ಮೇಲೆ ಜೋತ
ಹರಕು ಬಟ್ಟೆ ನಮ್ಮ ಪುಟ್ಟಿ
ಆಧುನಿಕ ಕ್ಯಾಮರಾಕ್ಕೂ ತುಟ್ಟಿ!

ಮಂತ್ರಿ ಭವ್ಯ ಬಂಗಲೆ ಮುಳ್ಳು
ಹೂವಿನ ಮೇಲೆ ಕುಳಿತ ಸಿದ್ಧಿ
ಅಪ್ಪ ಎನ್ನುತ್ತಿತ್ತು ಮಗು
ಮನೆ ಮಾಲೀಕನ ಗುದ್ದಿ
ಬ್ರೇಕಿಂಗ್ ನ್ಯೂಸ್ ನಲ್ಲಿ
ತಾಯಿ ಮಗು ಸಂಬಂಧ ಬ್ರೇಕ್
ಹುಚ್ಚಾಸ್ಪತ್ರೆ ಪಕ್ಕ ಅತ್ತನಾಥಾಶ್ರಮ

ಬಚ್ಚಲ ಮನೆಯೊಳಗಿಣುಕಿದ
ಕರಿ ನಾಗರಕ್ಕೆ
ದೇವರ ನಾಮ ಎಳೆದು
ನೆರೆ ಮನೆ ಜಿರಲೆಯ
ಆರು ಕಾಲಿಗೊಂದೊಂದು
ಸುದ್ದಿ ಕಟ್ಟಿದವನು
ದೋಷೋದ್ಧಾರಕ ಪ್ರಚೋದಕ
ಅರೆಬೆಂದನ್ನಕ್ಕೆ ಮೊಸರು

ಸದ್ದಿಲ್ಲದೆ ಗುದ್ದಲಿ ಪಿಕಾಸಿ ಚೂರಿ
ಹಿಡಿದ ಸುದ್ದಿಗಾರರು
ಹೆಗ್ಗಣ ಬಿಟ್ಟಗೆದರು ಬೆಟ್ಟ
ಹಿಡಿದರಿಲಿ
ಘರ್ಜಿಸಿದಂತೆ ಸತ್ತ ಹುಲಿ
ತಂತಿಗೆ ನೇತುಹಾಕಿ ಬಾವಲಿ
ಮಾಂಸವೇ ಇಲ್ಲದೆಲುಬಿಗೆ
ಇಳೆ ಸೀರೆ ಸೆರಗಿಗೆ ಕೈ
ಈ ಹಾಳು ಸೂರ್ಯನದೋ ಎಂದಿನ ನಗು