ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Wednesday 13 June 2012

ದೇವರು ಮತ್ತು ಇತರೆ ಕಥೆಗಳು....


ದೇವರು...

ಆತ: "ಸ್ವಾಮೀಜಿ, ದೇವರಿದ್ದಾನೆಯೇ?"
ಸ್ವಾಮೀಜಿ: " ಈ ಪ್ರಶ್ನೆ ಕೇಳುತ್ತಿರುವ ನೀನಾರು?"

ಪ್ರೀತಿ...

ಆತನಿಗೆ ಮಗಳೆಂದರೆ ಪ್ರಾಣ. ಯಾವನೋ ತನ್ನ ಮಗಳನ್ನು ಪ್ರೀತಿಸಿದ್ದಾನೆ ಎಂದು ತಿಳಿದಾಕ್ಷಣ ಹುಡುಕಿಕೊಂಡು ಹೋಗಿ ಕೆನ್ನೆ ಮೂತಿಗೆ ನಾಲ್ಕು ಭಾರಿಸಿ ಬಂದಿದ್ದ. ಪ್ರೀತಿ ಮಾಡಿದ ತಪ್ಪಿಗೋ ಏನೋ ಒಂದು ಕಣ್ಣು ಊದಿಕೊಂಡು ಮೂಗಿನಲ್ಲಿ ರಕ್ತ ಸೋರುತ್ತಿತ್ತು.
ಮನೆಗೆ ಬಂದವನೇ ಆಶ್ಚರ್ಯಗೊಂಡ.
ತನ್ನ ಮಗಳ ಎರಡೂ ಕಣ್ಣುಗಳು ಊದಿಕೊಂಡಿದ್ದವು...

ಬಟ್ಟೆ...

ಆಕೆ ಮೈ ಮಾಟ ಕಾಣುವಂತೆ ಬಿಗಿಯಾದ ಉಡುಪು ತೊಟ್ಟಿದ್ದಳು. ಒಬ್ಬಾತ ಕಣ್ಣರಳಿಸಿ ಅವಳನ್ನೇ ನೋಡುತ್ತಿದ್ದ.
ಆಕೆ: "ನಿನಗೆ ಅಕ್ಕ ತಂಗಿಯರಿಲ್ಲವೇ?"
ಆತ: "ನಿನಗೆ ಅಣ್ಣ ತಮ್ಮಂದಿರಿಲ್ಲವೇ?"

ಸಂದೇಹ

ನಮ್ಮ ಕುಲ ದೇವರು ವೆಂಕಟೇಶ್ವರ ಮತ್ತು ನಿನ್ನಪ್ಪನ ಕುಲದೇವರು ಮಹದೇಶ್ವರ. ವೆಂಕಟೇಶ್ವರನ ಕುಲದಿಂದ ಮಹದೇಶ್ವರ ಕುಲದವರು ಹೆಣ್ಣು ತರಬಾರದು, ನಿಮ್ಮಪ್ಪನ ಕಡೆಯವರು ತಿಳಿಯದೇ ಮಾಡಿದ ತಪ್ಪಿದು ಎಂದು ಅಮ್ಮ ಹೇಳುತ್ತಿದ್ದಾಗ ಮಗ ಕೇಳಿದ
"ಹಾಗಾದರೆ ನಾನು ಹುಟ್ಟಿದ್ದು ಯಾಕಮ್ಮ?"

ಹಾಲು...

ಮಗು ಅಪೌಷ್ಠಿಕತೆಯಿಂದ ನರಳುತ್ತಿದೆ. ಪ್ರತಿ ಮುಂಜಾನೆ ಒಂದು ಲೋಟ ಹಾಲು ಕುಡಿಸಿ, ಹಣ್ಣು ತರಕಾರಿ ತಿನ್ನಿಸಿ ಎಂದು ವೈದ್ಯರು ಸಲಹೆಯಿತ್ತರು.
ತುತ್ತು ಅನ್ನಕ್ಕೆ ಬಿಡಿಗಾಸಿಲ್ಲದ ಆ ತಾಯಿ ಯೋಚಿಸುತ್ತ ನಡೆಯುವಾಗ ಆ ಮಗು "ಅಮ್ಮ ಅಮ್ಮ ಅಲ್ಲಿ ನೋಡಮ್ಮ ಹಾಲು" ಎಂದು ಕೂಗಿಕೊಂಡಿತು.
ಮನೆ ಮುಂದಿನ ಹುತ್ತಕ್ಕೆ ಚೊಂಬುಗಟ್ಟಲೆ ಹಾಲು ಸುರಿದಿದ್ದರು.
ಆ ಹಾವು ಹಾಲು ಕುಡಿದು ಸತ್ತಿತು
ಆ ಮಗು ಹಾಲು ಕುಡಿಯದೇ ಸತ್ತಿತು.

ಚಿಲ್ಲರೆ...

ಅಸಹಾಯಕನೊಬ್ಬ ಭಿಕ್ಷೆ ಕೇಳಿದಾಗ ಚಿಲ್ಲರೆ ಇಲ್ಲ ಎಂದುಬಿಟ್ಟ.
ದೇವಸ್ಥಾನಕ್ಕೆ 501 ರೂ ಹಾಕಬೇಕಾಗಿ ಬಂದಾಗ, ಒಂದು ರೂ ಚಿಲ್ಲರೆಯಿಲ್ಲದೆ ಅದೇ ಭಿಕ್ಷುಕನ ಬಳಿ ಬಂದು ಚಿಲ್ಲರೆಗೆ ಕೈಯೊಡ್ಡಿದ.
ಒಬ್ಬ ಬೇಡಿ ಭಿಕ್ಷುಕ ಮತ್ತೊಬ್ಬ ನೀಡಿ ಭಿಕ್ಷುಕ...!

1 comment:

  1. ಈ ಕಥೆಗಳು ನಿಜಕ್ಕೂ ಚಿಂತನ ಯೋಗ್ಯ...

    ReplyDelete