ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Tuesday 22 May 2012

ಎದೆ ಹಾಲು ಮುಂತಾದ ಕಥೆಗಳು


ಎದೆ ಹಾಲು

'ಅವಳನ್ನೇ ಮದುವೆ ಆಗುವುದಾದರೆ ಅದು ನನ್ನ ಹೆಣದ ಮೇಲಾಗಲಿ, ನಿನ್ನೆ ಮೊನ್ನೆ ಬಂದವಳೇ ನಿನಗೆ ಹೆಚ್ಚಾಗಿ ಹೋದಳು, ಎದೆಹಾಲು ಕುಡಿಸಿದ ತಾಯಿ ನಿನಗೆ ನೆನಪಾಗಲಿಲ್ಲವೇ??' ಎಂದು ಅಮ್ಮ ಒಂದೇ ಸಮನೆ ಅತ್ತಳು.
ಅತ್ತ ಪ್ರೇಯಸಿಯನ್ನೂ ಮರೆಯಲಾಗದೆ, ಇತ್ತ ಹೆತ್ತವ್ವನನ್ನು ಕಳೆದುಕೊಳ್ಳಲಾಗದೆ ಆತ ವಿಲ ವಿಲ ಒದ್ದಾಡಿದ. ಜಿಗುಪ್ಸೆಗೊಂಡು ಕೊನೆಗೂ ಚೂರಿಯಿಂದ ತನ್ನನ್ನೇ ತಾನು ಇರಿದುಕೊಂಡ.

ಮಗನೇ ಎಂದು ಅಮ್ಮ ಚೀರುತ್ತಾ ಓಡೋಡಿ ಬಂದಳು.

'ಅವಳೇ ಕುಡಿಸಿದ ಹಾಲು ರಕ್ತವಾಗಿ ಹರಿಯುತ್ತಿತ್ತು'
--

ಕಳಂಕ

'ಹೊಲೆಯರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ, ಮಾರಮ್ಮನ ಹೆಸರಿಗೆ ಸುಮ್ಮನೆ ಕಳಂಕ ತರಬೇಡಿ' ಎಂದು ಊರಗೌಡ ಪಂಚಾಯಿತಿ ಕಟ್ಟೆಯಲ್ಲಿ ಕಟ್ಟಪ್ಪಣೆ ಮಾಡಿದ. ಎಲ್ಲರೂ ಒಪ್ಪಿಕೊಂಡರು.
ಆತನಿಗೆ ಸರಿಯಾಗಿ ಕಣ್ಣು ಕಾಣುವುದಿಲ್ಲ. ಸಂಜೆಯಾದಂತೆ ಹೆಂಡದಂಗಡಿಗೆಯನ್ನು ಸರಿಯಾಗಿ ಕಂಡುಹಿಡಿದುಕೊಂಡು ಮುಟ್ಟಿಬಿಡುತ್ತಿದ್ದ. ಕಾರಣ ಆ ಹೆಂಡದಂಗಡಿಗೆ 'ಊರ ಮಾರಮ್ಮ ಬಾರ್ ಅಂಡ್ ರೆಸ್ಟೋರೆಂಟ್' ಎಂಬ ಹೆಸರಿತ್ತು.
--

ಎರಡು ಮದುವೆ

ಅಲ್ಲೊಂದು ಮದುವೆ. ಎರಡು ಎಕರೆ ವಿಸ್ತಾರವಾದ ಮಂಟಪ ವಿದ್ಯುದ್ದೀಪಾಲಂಕಾರದಲ್ಲಿ ಮೊಳಗಿತ್ತು. ಎಲ್ಲೆಲ್ಲೂ ಸಂಗೀತಬ್ಬರ. ಇಡೀ ಮದುವೆ ಮಂಟಪವೇ ಆಗರ್ಭ ಶ್ರೀಮಂತರಿಂದ ತುಳುಕಿತ್ತು. ಭೂರಿಭೋಜನ. ಮದುವೆಗೆ ಬಂದವರಿಗೆಲ್ಲಾ ಬೆಲೆಬಾಳುವ ಉಡುಗೊರೆಗಳನ್ನು ನೀಡಿ ರಂಜಿಸಿದ್ದರು.

ಅದರ ನೆರೆಯಲ್ಲಿಯೇ ಒಂದು ದೇವಸ್ಥಾನ. ಅಲ್ಲೂ ಒಂದು ಬಡ ಮದುವೆ ನಡೆಯುತ್ತಿತ್ತು. ವೈಭವ, ಆಡಂಬರವಿಲ್ಲ, ಭೂರಿ ಭೋಜನವಿಲ್ಲ. ಅಲಂಕಾರ, ಅಂತಸ್ತಿಲ್ಲ.

ಮಹಾನ್ ಮಂಟಪದಲ್ಲಿ ನಡೆದ ಮದುವೆಗೆ ಹುಡುಗಿಯೇ ಇರಲಿಲ್ಲ, ಅವಳ ದೇಹ ಮಾತ್ರ ಇತ್ತು. ಮನಸ್ಸಿಲ್ಲದ ಮನಸ್ಸಿನಲ್ಲಿ, ಮೈಮೇಲೆ ಕೆ.ಜಿಗಟ್ಟಲೆ ಚಿನ್ನಹೊತ್ತು ಕುಳಿತಿದ್ದಳು. ದೇವಸ್ಥಾನದ ಜೋಡಿಗಳು ಒಬ್ಬರನ್ನೊಬ್ಬರು ಅಪ್ಪಿಕೊಂಡು ದೃವತಾರೆ ನೋಡುತ್ತಾ ಕಲ್ಯಾಣ ಮಂಟಪದ ವೈಭವವನ್ನು ಅಣಕಿಸುತ್ತಿದ್ದರು.
--

ಜಾತಿ...

ಯಾವುದೋ ಕ್ಷುಲ್ಲಕ ಕಾರಣಕ್ಕೆ ಅಲ್ಲೊಂದು ಕೋಮುಗಲಭೆ. ಚಾಕು ಚೂರಿಯಿಂದ ಒಬ್ಬರನ್ನೊಬ್ಬರು ಇರಿದುಕೊಂಡು ಸಾವಿರಾರು ಜನ ಸತ್ತರು. ಹೆಣದ ರಾಶಿಯಿಂದ ಬೀದಿ ತುಂಬಿಹೋಗಿತ್ತು. ಕೆಲವರು ವಿಭೂತಿ ಧರಿಸಿದ್ದರೆ, ಹಲವರು ನಾಮ ಬಳಿದುಕೊಂಡಿದ್ದರು, ಒಂದಷ್ಟು ಜನ ಜನಿವಾರವನ್ನೂ ಧರಿಸಿದ್ದರು. ಊರಿನ ಕಕ್ಕಸು ಮನೆ ತೊಳೆಯುವ ಮಾಚನೂ ಅಲ್ಲೆ ಹೆಣವಾಗಿ ಬಿದ್ದಿದ್ದ. ಜಾತಿ ಜಾತಿ ಎಂದುಕೊಂಡು ಮತ್ತೆ ಮತ್ತೆ ಮೊರೆಯುತ್ತಿದ್ದರು.

ಆಶ್ಚರ್ಯವೇನೆಂದರೆ 'ಅವರೆಲ್ಲರ ರಕ್ತದ ಬಣ್ಣ ಮಾತ್ರ ಒಂದೇ ಆಗಿತ್ತು'
--

ಮಕ್ಕಳು

ಆ ಊರಿನಲ್ಲಿ ಜಾತಿ ಜಾತಿ ಎಂದು ಮತ್ತೆ ಮತ್ತೆ ಗಲಭೆ ನಡೆಯುತ್ತಲೇ ಇತ್ತು. ಕೊನೆಗೆ ಎಲ್ಲರೂ ಸೇರಿ ಊರನ್ನು ಜಾತಿವಾರು ವಿಂಗಡಿಸಲು ತೀರ್ಮಾನಿಸಿದರು. ಪಂಚಾಯಿತಿ ಕಟ್ಟೆಯ ಪಕ್ಕದಲ್ಲಿ ಕುಳಿತು ಎಲ್ಲರೂ ಊರನ್ನು ಭಾಗಿಸುವ ನೆಪದಲ್ಲಿ ಗಲಾಟೆ ಎಬ್ಬಿಸುತ್ತಿದ್ದರು.

'ಇವರೆಲ್ಲರ ಮಕ್ಕಳು ಮಾತ್ರ ಪಕ್ಕದಲ್ಲೇ ಇದ್ದ ಮರಳಿನ ಗುಡ್ಡೆ ಮೇಲೆ ತಮ್ಮಿಚ್ಚೆಯಂತೆ ಆಟವಾಡುತ್ತಿದ್ದವು!'

No comments:

Post a Comment