ನೀನುದುರಿಸಿದ ನೋವ ಪಕಳೆಗೆ
ಭೂ ಎದೆ ಬೂದಿಯಾಗಿದೆ
ಮೇಲೆ ಹಾರಾಡಿದ ಹದ್ದುಗಳಿಗೆ
ನಮ್ಮಿಬ್ಬರ ಸಾವ ಮುನ್ಸೂಚನೆ
ಆ ಹುಣಸೆ ಮರಕ್ಕೆ ತೂಗಿರುವುದು
ಹಣ್ಣಲ್ಲ ಗೆಳತಿ ಆತ್ಮಗಳು
ಮಸಣದಿ ಭುಗಿಲೆದ್ದ ಬೆಂಕಿ ಕಿಡಿಯಲ್ಲಿ
ಜೋಡಿ ಹೃದಯಗಳ ಗೋಳು
ಕಾಲು ಕುಕ್ಕಲು ಕಾದಿರುವ
ಚೇಳಕೊಂಡಿಗೆ ದೇವರ ನಾಮ
ನಿನಗುಡಿಸಿದ್ದ ಜಾತಿಯಂಗಡಿಯ
ಹರಕು ಸೀರೆ ತುದಿಯ
ಧರ್ಮ ರಂಗವಲ್ಲಿಯೊಳಗೆ
ಚುಕ್ಕಿಗಳ ಢಿಕ್ಕಾಢಿಕ್ಕಿ
ದೇವರ ನಾಮ ಬಳಿದ
ಯಾರೋ
ಬಡಿದ ಜಾಗಟೆ ಶಬ್ದ
ತಟ್ಟಿದೆ ಕಿವಿಗೆ, ತಟ್ಟಲಿ ಬಿಡು
ಈ ಜಗ ಗೊಂಡಾರಣ್ಯದಲ್ಲಿ, ಜನ
ಬೆಳೆಸಿದ ಮುಳ್ಳು ಪೊದೆಯೊಳಗೆ
ಹೆಬ್ಬಾವಿನುಬ್ಬಸವಿದೆ
ಕರಿನಾಗರ ಬೆಳೆಸಿದ
ನೂರು ಮರಿಗಳಿವೆ
ಗೋಣು ಮುರಿದರೂ
ಪಾಪಾಸುಕಳ್ಳಿಯ
ಚಿಗುರಿ ನಿಗುರಿಸುವ ನೀರಿದೆ
ಬೆಳಕು ಪ್ರಪಂಚ ತೂಗಿತೆಂಬ
ಭ್ರಮೆಯೊಂದಿಗೆ
ಹುದುಗಿದ್ದೆವು ಬೀಜ ನಾವಂದು
ವಿಷತರುವಾಗಿದೆಯಿಂದು
ಮಾಂಸಕ್ಕಿಂತೆಲುಬೇ ರುಚಿ
ಗೋಡೆ ಕಟ್ಟಿ ಕಾಲೆತ್ತಿದ ನಾಯಿಗಳಿಗೆ
ನಿನ್ನ ಜಲಧಿ ನಯನ ಅರಳಿಸಿ
ನಗುಮುತ್ತೊಂದುರಿಸು ಕೊನೆಗೆ
ನೆನಪಿಸಿಕೊಂಡಳಲಿ ಬದುಕುಳಿದವರು
ವಿಹ್ವಲತೆಯ ಪದಗಳ ಮೆರವಣಿಗೆ. ಒಳ್ಳೆಯ ನೋವ ಕಾವ್ಯ.
ReplyDeleteಭಾವ ತುಂಬಿದ ಪದಗಳು ಚೆನ್ನಾಗಿದೆ.... ಶುಭವಾಗಿದೆ
ReplyDelete- ಮನೋರಂಜನ್