ಕಾಳನು ಹೆಕ್ಕಿ ಕುಕ್ಕಿ ಮೆಲ್ಲಗೆ ಮೆಲ್ಲಿ
ಪಟಪಟನೆ ಅದುರಿತು ರೆಕ್ಕೆ ಚೆಲ್ಲಿ
ಬಿಚ್ಚದೇ ಮುಚ್ಚಿದರೆ ಬೆವರು
ಹೊತ್ತು ಹಾರಾಡಿದರೆ ತುತ್ತು
ಎಲ್ಲಿದೆ ನೀರು ತನ್ನನ್ನು ಅದ್ದಲು
ಗಹ್ಯ ಲೋಕದಲ್ಲೊಮ್ಮೆ ಮೀಯಲು
ದೂರದಲ್ಲಿ ನೆಲ ಅಗೆದ ಸಿದ್ಧನಿಗೂ
ಅದೇ ಚಿಂತೆ
ಅಗೆದರೂ ಬಗೆದರೂ ಕಾಣದೊರತೆ
ಹ್ಯಾಪೆ ಮೊಗದಲ್ಲಿ ಬೀಡಿ ಕಚ್ಚಿ
ದಾಡಿ ಬಿಟ್ಟಿದ್ದಾನೆ
ಮುಖ ತೊಳೆಯನು
ಹಲ್ಬಿಟ್ಟರೆ ಹಲ್ಕಟ್ ವಾಸನೆ
ಅಲ್ಲಿ ಇಲ್ಲಿ ಗಲ್ಲಿ ಗೋರಿ
ಸಂಜೆಗೊಂದಷ್ಟು ಹೆಂಡ ಹೀರಿ
ಮುಂಜಾನೆ ದಿಬ್ಬ ಏರಿ
ಸೂರ್ಯನನ್ನು ನೋಡಿ ನಕ್ಕುಬಿಡುತ್ತಾನೆ
ಮಳೆಗಾಲದಲ್ಲಿ ಮೈ ಅದ್ದಲು
ರೆಕ್ಕೆ ಬಿಚ್ಚಲ್ಲ
ಸುಯ್ ಎನ್ನುವ ಗಾಳಿಗೊದರಿ ಮೈ
ಬೆನ್ನು ಕೆರೆಯುತ್ತದೆ ಕೊಕ್ಕಿನ ಕೈ
ಈಚಲು ಪೀಚಲು ಹತ್ತಿ
ಆಲ ಹಣ್ಣು ಮೇಯ್ದು
ಪಿಕ್ಕೆಯೊಂದಿಗೆ ಬೀಜವುದುರಿಸಿ
ಒಂದಂಕುರವಿಟ್ಟ ಜೀವ ಮೊಳೆಯುತ್ತದೆ
ಅವ ಸಿದ್ಧನೂ ಅಷ್ಟೆ, ಹೊಲ
ಉತ್ತುತ್ತಾನೆ ಅದೇನೋ ಬಿತ್ತುತ್ತಾನೆ
ಸಂಜೆ ಮಳೆಗೆ ನೆಂದು ನಿಂದು
ಏಳಕ್ಕೆ ಬಾಗಿಲು ಮುಚ್ಚಿ
ಹೆಂಡತಿ ತಬ್ಬಿ ಬಟ್ಟೆ ಒಣಗಿಸಿಬಿಡುತ್ತಾನೆ!
ಅವಳದು ಬಿರುಗಾಳಿ ಮೊಗ
ಸಣ್ಣ ದಿಣ್ಣೆಯ ಮೈದಾನದೆದೆ
ಉಗುರ ಸಂದುಗಳಲ್ಲಿ ತಲೆ ಹೇನು
ಹಲ್ಲಿನ ಗಿಂಡಿಯಲ್ಲಿ ಕಳೆದ ವಾರದ ಮೀನು
ಬಿಸಿಲಿನಲ್ಲೊಣಗಿದ ಮುದ್ದೆಯ ಕರಿ
ಆದರೂ ಅವಳೇ ಅವನಿಗೆ ವಿಶ್ವ ಸುಂದ್ರಿ
ನೆತ್ತಿ ಕಚ್ಚಿ ಬೆನ್ನ ಮೇಲೆ ಕುಳಿತು
ಸ್ಖಲಿಸಿಬಿಟ್ಟರೆ ಗಂಡು ಪಕ್ಕಿ
ಉದುರುತ್ತದೆ ನಾಲ್ಕು ತತ್ತಿ
ಹಾವು ಬರಬಹುದು ಮರ ಹತ್ತಿ
ಅದಕ್ಕೆ ಜೀವನೋಪಾಯ
ಹಕ್ಕಿಗಿಲ್ಲವಪಾಯ, ಬಯಸಿದ್ದಲ್ಲವದು
ಸಿದ್ಧನ ಮಕ್ಕಳು ಹಾಗೆ
ಊರ ನೂರು ದಾರಿಯಲ್ಲೆಲ್ಲೋ
ಕುಳಿತ್ತಿರುತ್ತವೆ
ದುಡಿದುಣ್ಣುತ್ತವೆ, ಹಡೆವ
ಕಾಲ ಬಂದಾಗ ಹಡೆಯುತ್ತವೆ
ರೀತಿ ರಿವಾಜುಗಳೊಡಮೂಡಲ್ಲ
ಯಂತ್ರ ಸಾಕು ತಂತ್ರ ಅವರಿಗೆ ಸಲ್ಲ
ಮನಸ್ಸಿಗೆ ಕಾಡದ ದೊಂದಿ
ಸಮತೆಯ ಹಾದಿಯಲ್ಲಿರುವ ಮಂದಿ
ಹರಿವ ನದಿ ತಟದಲ್ಲಿದ್ದರು
ಗೊಡವೆಗೆ ಹೋಗದೆ ದಾಟರು
ಮುರುಟದ ಮನಸ್ಸುಗಳವು
ಗಿಳಿಯಂತೆ, ಕಾಗೆ ಗೂಗೆ
ಬಕ ಪಕ್ಷಿಯಂತೆ, ನಮ್ಮ ಸಿದ್ಧನಂತೆ
ಬಗೆದು ಒಗೆಯದ ಕೌಪೀನದೊಳಗೆ
ಚಂದವಿರುತ್ತದೆ ಬದುಕು ನಡೆಸುವ ಬಗೆ
ನಾವು ನೀವೇ ಅದೇನೇನೋ
ಸಾಧಿಸಲು ಹೋಗಿ
ಜಗವನ್ನೇ ಮಸೆದು
ಮನಸ್ಸದು ಸವೆದು, ಹೌದು
ಸವೆದು ಸವೆದು ಸಾಯುತ್ತಿರುವುದು
ಮೋಹನಣ್ಣ ನಿಮ್ಮ ಶೈಲಿ ಮನಸ್ಸಿಗೆ ತುಂಬಾ ಹಿಡಿಸುತ್ತದೆ, ಮನಮುಟ್ಟುವ ಕವಿತೆ.. ಪಕ್ಷಿ ಮತ್ತು ಸಿದ್ಧನ ಜೀವನಗಳ ಸಾಮ್ಯತೆಯನ್ನು ಹೆಕ್ಕಿ ಉಪಮೆಗಳಲ್ಲಿ ಕೂಡಿಸಿ ಓದುಗರ ಮನಸ್ಸಿಗೆ ನಾವೆ ಕಟ್ಟಿ ತೇಲಿಬಿಡುವ ನಿಮ್ಮ ನಿರೂಪಣೆ ಮನಸ್ಸನ್ನು ಗೆಲ್ಲುತ್ತದೆ.. ಸರಳ ವಿಚಾರಗಳಲ್ಲಿನ ಅಗಾಧವಾದ ಭಾವರ್ಥಗಳನ್ನು ಬಿಡಿಸಿಡುತ್ತದೆ ಕವಿತೆ.. ಕವಿತೆಗೆ ಒಂದು ಮಾರ್ಮಿಕವಾದ ದನಿಯೇ ಇದೆ, ಅದು ಪದಗಳಲ್ಲಿ ಅಗೋಚರವಾದ ಬೇರೆಯ ವಿಚಾರಗಳನ್ನೇ ಬಿಟ್ಟುಕೊಡುತ್ತದೆ.. ತುಂಬಾ ಸೂಕ್ಷ್ಮ ಭಾವಾಭಿವ್ಯಕ್ತಿ, ಸರಳ ಮನಮುಟ್ಟುವ ಧಾಟಿಯಲ್ಲಿ ಕವಿತೆಯನ್ನು ಓದುಗನ ಮನಕ್ಕೆ ನುಗ್ಗಿಸಿದೆ..
ReplyDeleteರೀತಿ ರಿವಾಜುಗಳು ಒಡಮೂಡಲ್ಲ
ಯಂತ್ರ ಸಾಕು ತಂತ್ರ ಅವರಿಗೆ ಸಲ್ಲ
ಮನಸ್ಸಿಗೆ ಕಾಡದ ದೊಂದಿ
ಸಮತೆಯ ಹಾದಿಯಲ್ಲಿರುವ ಮಂದಿ
ಹರಿವ ನದಿ ತಟದಲ್ಲಿದ್ದರು
ಗೊಡವೆಗೆ ಹೋಗದೆ ದಾಟರು
ಮುರುಟದ ಮನಸ್ಸುಗಳುವು
ಗಿಳಿಯಂತೆ, ಕಾಗೆ ಗೂಗೆ
ಬಕ ಪಕ್ಷಿಯಂತೆ, ಸಿದ್ಧನಂತೆ
ಬಗೆದು ಒಗೆಯದ ಕೌಪೀನದೊಳಗೆ
ಚಂದವಿರುತ್ತದೆ ಬದುಕು ನಡೆಸುವ ಬಗೆ
ಈ ಸಾಲುಗಳಲ್ಲಿನ ಒಳಾರ್ಥಗಳನ್ನು ಕಂಡು ತುಂಬಾ ಆಶ್ಚರ್ಯವೆನಿಸಿತು.. ಮತ್ತು ಪದಗಳೊಡನೆ ನಿಮ್ಮ ಜೋಕಾಲಿ ಚೆಂದವೆನಿಸುತ್ತದೆ. ಸರಳ, ಸುಂದರ ಅದ್ಭುತ ಕವಿತೆ..:)))
ಸುಂದರ ಪ್ರತಿಮೆ.ಬೆಳೆದು ನಿಂತ ಪರಿ ಆನಂದ ತಂದಿತು. ಹಂತ ಹಂತವಾಗಿ ಬೆಳೆದ ಕಾವ್ಯದ ಪಕ್ವತೆಗೆ ಖುಷಿ ಪಡುತ್ತೇನೆ ಮೋಹನಣ್ಣ.
ReplyDeleteಪ್ರೀತಿಯ ಮಹೇಶ್,
ReplyDeleteಪಕ್ಷಿ ಮತ್ತು ಸಿದ್ಧ ಒಂದು ಉತ್ತಮ ಕವನ.
ಪಕ್ಷಿ ಮತ್ತು ಅನ್ವರ್ಥವಾಗಿ ಬರುವ ಸಿದ್ಧ ಎರಡೂ ಪಾತ್ರಗಳ ಒಟ್ಟಾರೆ ಕಲ್ಪನೆ ವಿಶಿಷ್ಟವಾಗಿದೆ.
ನನ್ನ ಬ್ಲಾಗಿಗೀ ಸ್ವಾಗತ ನಿಮಗೆ.
"ನಾನು ನೀವೆ ಅದೇನೋ
ReplyDeleteಕಿಸಿಯಲು ಹೋಗಿ
ಜಗವನ್ನೇ ಮಸೆದು
ಮನಸ್ಸದು ಸವೆದು
ಹೌದು ಸವೆದು ಸಾಯುತ್ತಿರುವುದು..."
ಮೌಲಿಕ ವಿಡಂಬನೆ, ತುಂಬಾ ತೀಕ್ಷ್ಣ ಮತ್ತು ಪರಿಣಾಮಕಾರಿ... ಮೊದಲ ಸಾಲುಗಳು ಎಳೆ ಎಳೆಯಾಗಿ ನಿಧಾನವಾಗಿ ಸಾಮ್ಯತೆ ಸಿದ್ದಿಸುತ್ತವೆ, ನಂತರ ಒಮ್ಮೆಲೇ ಎಲ್ಲ ಒಟ್ಟುಗೂಡಿಸಿ ವಸ್ತು ವಿಷಯ ಎತ್ತರವಾಗಿ ನಿಲ್ಲುತ್ತದೆ... ವಿಷಯಕ್ಕೆ ನ್ಯಾಯ ಸಿಕ್ಕಂತೆ ಭಾಸವಾಯಿತು...ಅಭಿನಂದನೆಗಳು...
ಸಮತೆಯ ಹಾದಿಯಲ್ಲಿರುವ ಮಂದಿ
ReplyDeleteಹರಿವ ನದಿ ತಟದಲ್ಲಿದ್ದರು
ಗೊಡವೆಗೆ ಹೋಗದೆ ದಾಟರು
...................................ದೂರದಲ್ಲಿ ನೆಲ ಅಗೆದ ಸಿದ್ಧನಿಗೂ
ಅದೇ ಚಿಂತೆ
ಅಗೆದರೂ ಬಗೆದರೂ ಕಾಣದೊರತೆ
................ಒಬ್ಬ ಸಮಾಜ ಚಿಂತಕನಿಂದ,ಆತನ ಅಂತರಾಳದಲ್ಲಿ ಮನೆ ಮಾಡಿಕೊಂಡಿರುವ ಚಿಂತಕನ ಲಹರಿಯಿಂದ ಪಡೆಮೂಲಾದ ಸುಂದರ ಚಿತ್ರಣವೇ ಈ ಕವನ.
ನಿಮ್ಮ ಕವನಗಳನ್ನು ಓದಿದಾಗಲೆಲ್ಲ ಚಿಂತಿತನಾಗುತ್ತೇನೆ.ಅರ್ಥೈಸಿಕೊಳ್ಳಲು ತಡಕಾಡುತ್ತೇನೆ.ಪಮ್ಮು ಹೇಳಿದ ಹಾಗೆ.