ನಮಸ್ಕಾರ... ಬನ್ನಿ.. ಏನೋ ಆ ಕ್ಷಣದಲ್ಲಿ ತೋಚಿದ್ದು ಗೀಚಿ ಒಂದಷ್ಟು ಗುಡ್ಡೆ ಹಾಕಿದ್ದೇನೆ. ಒಳಗೆ ಬಂದುಬಿಟ್ಟಿದ್ದೀರಿ, ಇನ್ನೇನೂ ಮಾಡುವುದು ಮತ್ತೆ, ಬನ್ನಿ ಭಾವಗೊಂಚಲಲ್ಲಿ ನೇತಾಡೋಣ....!

Friday 6 January 2012

ಕಣಿವೆಯ ಹಾದಿ


ಕಣಿವೆಯ ಹಾದಿಗೆ
ಒಡೆಯನ ಪಹರೆಯಿಲ್ಲ
ಹೆಜ್ಜೆ ಇಡಲು ಭಯ
ಅದೆಂತಹ ನೀರವತೆ
ಚಿಂತನೆಯಿರದೇಕತಾನತೆ
ಬಾಹ್ಯ ಸುಸ್ಪಷ್ಟ
ಅಂತರಾಳವಸ್ಪಷ್ಟ
ಬವಣೆ ತುಂಬಿದ ನೋಟ

ಅಮ್ಮ ಹೇಳುತ್ತಿದ್ದಳು
ಅಲ್ಲಿ ದೆವ್ವವಿದೆಯಂತೆ
ಹೌದೌದು ಒಮ್ಮೊಮ್ಮೆ
ಸ್ನಿಗ್ದ ಚೀರಾಟ
ಇದ್ದಕ್ಕಿದ್ದಂತೆ ಭಗ್ನ
ಗೋಳಾಟ
ಮಂಜಿನ ಹನಿಗಳ
ಹೀರುವ ಕಿರಣಗಳ
ನುಂಗದೇ ಸುಟ್ಟಿದೆ
ಅದರೊಡಲು
ಬಿರುಗಾಳಿ ಬೀಸಲು
ಪಕ್ಕದಲ್ಲೇ ಇರುವ
ಪಾಪಾಸುಕಳ್ಳಿಯ
ಗುಡಿಸಿಟ್ಟರೂ
ದಾರಿಗೆ ಬಿದ್ದಿರುತ್ತದೆ
ತಡೆಯಲಾಗುತ್ತಿಲ್ಲ
ಪಾರ್ಥೇನಿಯಂ ಬೀಜಾಂಕುರ
ಪೊಟರೆ ಸಂದುಗಳಿಂದ
ಹರಿದು ಸರಿದು
ಹೆಡೆ ಎತ್ತಿ ನಿಂತಿರುತ್ತದೆ ನಾಗರ
ಕಾಲಿಗೆ ತಾಕುವ ಹೆಬ್ಬಾವಿನ ಸರ

ಎರಡೂ ಇಕ್ಕೆಲಗಳಲ್ಲಿ
ದಾರಿಗುಂಟ ಸಾವಿರ ಮರ
ಎಲೆಯುದುರಿ ಬೋಳಾಗಿ
ನೆರಳು ನೀಡದ
ಅದರ ನೋವಮರ
ದಾರಿಯಂತ್ಯದಲ್ಲಿ
ಹೌದು ಅದೇ ಸ್ಮಶಾಣ
ಹೆಣ ಹೊತ್ತಷ್ಟೇ ಬರುವುದು ಜನ
ಮೇಲೆ ಎರಚಿದ
ಮಂಡಕ್ಕಿ ಆಯಲು
ನೂರು ಹುಳಗಳ ಕಾವಲು

ನೋಡಲಷ್ಟೇ ನೀರವತೆ
ಗಮ್ಯತೆ ತುಂಬಿದ ಸಭ್ಯತೆ
ಸಾವಿರ ಮಾರುದ್ದ ದಾರಿ
ಅಳುತ್ತಿದೆ ನೋವು ಸೋರಿ
ಕೆಂಡದ ಬಿಸಿ ಬಿಸಿ ಬಿಸಿಗೆ
ನೊಂದಿದೆ ಕೆಂಡಸಂಪಿಗೆ
ನಗು ನಗುತ್ತಲೇ
ಮುದುಡಿ ಕುಳಿತ ಮನಸ್ಸಿನಂತೆ

7 comments:

  1. ಒಂದು ನಿರವತೆಯನ್ನು ಮನದ ಗದ್ದಲವಾಗಿ ಪರಿವರ್ತಿಸುವ ಕೈ ಚಳಕ ಇಲ್ಲಿದೆ.

    ಮನಸೋತೆ ಗೆಳೆಯ.

    ನನ್ನ ಬ್ಲಾಗಿಗೂ ಸ್ವಾಗತ ನಿಮಗೆ.

    ReplyDelete
  2. Mahadevappa Madikeri7 January 2012 at 02:06

    ಅತ್ಯದ್ಭುತ ರಚನೆ. ಇದು ನಾನು ಕಂಡ ನಿಮ್ಮ ಎರಡನೆ ಕವಿತೆ. ಕವಿತೆಯ ಗತ್ತು ಗಮ್ಮತ್ತು ಇಲ್ಲಿದೆ. ಕಣಿವೆಯ ಹಾದಿಯ ನೋವು ಎದ್ದು ಕಾಣುತ್ತಿದೆ. ಶೀರ್ಷಿಕೆ ಬದಲಿಸಬೇಕಿತ್ತೇನೋ? ನಾನು ಶೀರ್ಷಿಕೆ ನೋಡಿದಾಕ್ಷಣ ಯಾವುದೋ ಪ್ರಕೃತಿಯನ್ನು ವರ್ಣಿಸುವ ಕವಿತೆಯೆಂದು ಕೊಂಡೆ.... :)

    ReplyDelete
  3. ಭಾವಗಳನ್ನು ಪದಗಳಲ್ಲಿ ಶೃಂಗಾರಗೊಳಿಸುವುದು ಸ್ವಲ್ಪ ಕ್ಲಿಷ್ಟಕರ. ಇಲ್ಲಿ ಸಮರ್ಥ ಪದಗಳ ಬಳಕೆ ಭಾವಕ್ಕೆ ಸಡ್ದು ಹೊಡೆದಂತೆ ಒಂದಕ್ಕೊಂದು ಸ್ಪರ್ಧಿಸುತ್ತಿವೆ. ಖುಷಿ ಆಯಿತು. ನವೀನ ಕಾವ್ಯ ಪಾಠ ಸಂಚಲನ ಗೋಚರಿಸಿತು. ಅಭಿನಂದನೆಗಳು.

    ReplyDelete
  4. ’ಕಣಿವೆಯ ಹಾದಿ’ ಈ ಶಿರ್ಷೀಕೆಯೇ ನನ್ನನ್ನು ಆಕರ್ಷಿಸಿತ್ತು. ಹಾಗಾಗಿ ಬೆಳಿಗ್ಗೆಯೇ ಈ ಕವನ ಓದಿದೆ. ಯಾಕೆಂದರೆ ನನ್ನ ಬ್ಲಾಗ್ ಹೆಸರು ’ಮೌನಕಣಿವೆ’. ಈ ಕವನ ಇಷ್ಟ ಆಯ್ತು.
    ನಿಮ್ಮ ಎಲ್ಲಾ ಕವನಗಳನ್ನು ಓದಿಲ್ಲ. ಕಣ್ಣಾಡಿಸಿದೆ. ಭರವಸೆಯ ಕವನಗಳು ಅನಿಸಿತು.ಉಳಿದವುಗಳನ್ನ ಮುಂದೆ ಓದಲಿಚ್ಚಿಸುತ್ತೇನೆ. ಒಳಿತಾಗಲಿ

    ReplyDelete
  5. haadiya maunavanna maatanaaDisantide.. Mohananna... Chennaagide..

    ReplyDelete
  6. ಅದ್ಭುತವಾದ ಕವಿತೆ ನಿಮ್ಮ ಸೂಕ್ಷ್ಮ ನಿರೂಪಣೆಗೆ ಸಿಕ್ಕಿ ಕವಿತೆಯ ಅಷ್ಟೂ ಭಾವಗಳನ್ನು ನೇರವಾಗಿ ಮನಸ್ಸಿಗೆ ನುಗ್ಗಿಸಿದೆ.. ಸ್ಮಶಾನದ ಭೀಕರತೆ ಮತ್ತು ಅದರಲ್ಲಿನ ಸೂಕ್ಷ್ಮತೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದೆ ಕವಿತೆ.. ಕವಿತೆಯ ಮೊದಲಲ್ಲಿ ಇದ್ಯಾವುದಿದು ಕಣಿವೆಯ ಹಾದಿ ಎಂಬ ಕುತೂಹಲ ಮೂಡಿತು ನಂತರದಲ್ಲಿ ಅದನ್ನು ನೀವು ವಿವರಿಸುವಾಗ ನನಗೆ ಅಸ್ಪಷ್ಟವಾಗಿ ಏನೇನೊ ಭಾವಗಳು ಮನಸ್ಸಿನಲ್ಲಿ ಮೂಡಿದವು ನಂತರದಲ್ಲಿ ಕವಿತೆ ಸ್ಮಶಾನದ ಪ್ರತಿಮೆಯನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತಿದ್ದಂತೆ ನಿಮ್ಮ ನಿರೂಪಣೆಯಲ್ಲಿನ ಸೂಕ್ಷ್ಮತೆ ಕಂಡು ಬೆರಗಾದೆ.. ಪದಪ್ರಯೋಗವಂತು ಅದ್ಭುತ ಮತ್ತು ಆ ಪದಗಳನ್ನು ಬಳಸಿಕೊಳ್ಳುವ ನಿಮ್ಮ ಸಮಯಪ್ರಜ್ಞೆ ಗಮನ ಸೆಳೆಯುತ್ತದೆ.. ನಿಮ್ಮ ಶೈಲಿಯೆ ಕವಿತೆಗೆ ಮೆರುಗು.. ಓದಿ ಖುಷಿಪಟ್ಟೆ ಮೋಹನಣ್ಣ, ಚೆಂದದ ಕವಿತೆ..

    ReplyDelete